ಇದಿರೊಳಾನುವುದರಿದು ಹಸುಳೆಯ
ಕದನ ಹಂಗಿಗರಾದೆವಾಳ್ದನ
ವದನಕಮಲಕೆ ನಮ್ಮ ಪೌರುಷವಿಂದು ಹಿಮವಾಯ್ತು
ಇದಿರೊಳಾನಿಹೆ ಶಲ್ಯನೆಡವಂ
ಕದಲಿ ಬಲದಲಿ ಕೃಪನಪರಭಾ
ಗದಲಿ ನೀ ಬಂದೆಸು ಕುಮಾರನ ಕರದ ಕಾರ್ಮುಕವ (ದ್ರೋಣ ಪರ್ವ, ೬ ಸಂಧಿ, ೨೮ ಪದ್ಯ)
ತಾತ್ಪರ್ಯ:
ದ್ರೋಣನು ಕರ್ಣನಿಗೆ ಹೇಳುತ್ತಾ, ಅಭಿಮನ್ಯುವನ್ನು ಮುಂದೆ ಎದುರಿಸಲಾಗುವುದಿಲ್ಲ. ಯುದ್ಧದಲ್ಲಿ ಅವನ ಹಂಗಿಗೊಳಗಾಗಿ ಇನ್ನೂ ಬದುಕಿದ್ದೇವೆ. ನಮ್ಮ ಪೌರುಷವು ನಮ್ಮೊಡೆಯನ ಮುಖಕಮಲಕ್ಕೆ ಹಿಮವಾಯಿತು. ನಾನು ಎದುರಿನಲ್ಲಿ ನಿಲ್ಲುತೇನೆ, ಶಲ್ಯನು ಅಭಿಮನ್ಯುವಿನ ಎಡಕ್ಕೆ ನಿಲ್ಲುತ್ತಾನೆ, ಪಶ್ಚಿಮ ಭಾಗದಲ್ಲಿ ಕೃಪನಿರುತ್ತಾನೆ, ನೀನು ಹಿಂದಿನಿಂದ ಬಂದು ಅಭಿಮನ್ಯುವಿನ ಕೈ ಮತ್ತು ಬಿಲ್ಲನ್ನು ಕತ್ತರಿಸು ಎಂದು ದ್ರೋಣನು ಹೇಳಿದನು.
ಅರ್ಥ:
ಇದಿರು: ಎದುರು; ಅರಿ: ತಿಳಿ; ಹಸುಳೆ: ಚಿಕ್ಕವ; ಕದನ: ಮಕ್ಕಳು; ಹಂಗು: ದಾಕ್ಷಿಣ್ಯ; ಆಳ್ದ: ಆಳುವ; ವದನ: ಮುಖ; ಕಮಲ: ತಾವರೆ; ಪೌರುಷ: ಪರಾಕ್ರಮ; ಹಿಮ: ಮಂಜು; ಆನು: ನಾನು; ಎಡ: ವಾಮಭಾಗ; ಅಪರಭಾಗ: ಹಿಂದೆ; ಎಸು: ಬಾಣಪ್ರಯೋಗ; ಕುಮಾರ: ಪುತ್ರ; ಕರ: ಕೈ; ಕಾರ್ಮುಕ: ಬಿಲ್ಲು;
ಪದವಿಂಗಡಣೆ:
ಇದಿರೊಳ್+ಆನುವುದ್+ಅರಿದು+ ಹಸುಳೆಯ
ಕದನ+ ಹಂಗಿಗರ್+ಆದೆವ್+ಆಳ್ದನ
ವದನಕಮಲಕೆ +ನಮ್ಮ +ಪೌರುಷವಿಂದು +ಹಿಮವಾಯ್ತು
ಇದಿರೊಳ್+ಆನಿಹೆ+ ಶಲ್ಯನ್+ಎಡವಂ
ಕದಲಿ +ಬಲದಲಿ +ಕೃಪನ್+ಅಪರಭಾ
ಗದಲಿ+ ನೀ +ಬಂದೆಸು +ಕುಮಾರನ +ಕರದ +ಕಾರ್ಮುಕವ
ಅಚ್ಚರಿ:
(೧) ರೂಪಕದ ಪ್ರಯೋಗ – ಆಳ್ದನ ವದನಕಮಲಕೆ ನಮ್ಮ ಪೌರುಷವಿಂದು ಹಿಮವಾಯ್ತು