ಪದ್ಯ ೪೫: ಭೀಷ್ಮನ ಬಿಲ್ಲನ್ನು ಯಾರು ಕತ್ತರಿಸಿದರು?

ಎರಡು ಶರದಲಿ ನರನು ಭೀಷ್ಮನ
ಕರದ ಕಾರ್ಮುಕ ದಂಡವನು ಕ
ತ್ತರಿಸಿದನು ಕೈಯೊಡನೆ ಕೊಂಡನು ಭೀಷ್ಮ ಹೊಸ ಧನುವ
ಸರಳ ಸೂಟಿಯ ತೋರಿಸಿದಡ
ಬ್ಬರಿಸಿ ಫಲುಗುಣನೈದು ಬಾಣದ
ಲರಿ ಭಟನ ಚಾಪವನು ಕಡಿ ಮೂರಾಗಿ ಖಂಡಿಸಿದ (ಭೀಷ್ಮ ಪರ್ವ, ೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅರ್ಜುನನು ಎರಡು ಬಾಣಗಳಿಂದ ಭೀಷ್ಮನ ಬಿಲ್ಲನ್ನು ಕತ್ತರಿಸಿದನು. ಭೀಷ್ಮನು ಅತಿ ವೇಗದಿಂದ ಹೊಸ ಬಿಲ್ಲನ್ನು ಹಿಡಿದು ಅರ್ಜುನನನ್ನು ಘಾತಿಸಿದನು. ಅರ್ಜುನನು ಭೀಷ್ಮನ ಬಿಲ್ಲನ್ನು ಮೂರು ತುಂಡುಗಳಾಗುವಂತೆ ಕತ್ತರಿಸಿದನು.

ಅರ್ಥ:
ಶರ: ಬಾಣ; ನರ: ಅರ್ಜುನ; ಕರ: ಹಸ್ತ; ಕಾರ್ಮುಕ: ಬಿಲ್ಲು; ದಂಡ: ಕೋಲು; ಕತ್ತರಿಸು: ಸೀಳು, ಚೂರು ಮಾಡು; ಕೊಂಡು: ಧರಿಸು; ಹೊಸ: ನವೀನ; ಧನು: ಬಿಲ್ಲು; ಸರಳ: ಬಾಣ; ಸೂಟಿ: ವೇಗ, ರಭಸ; ತೋರಿಸು: ಪ್ರದರ್ಶಿಸು; ಅಬ್ಬರಿಸು: ಗರ್ಜಿಸು; ಬಾಣ: ಸರಳು; ಅರಿ: ವೈರಿ; ಭಟ: ಶೂರ; ಚಾಪ: ಬಿಲ್ಲು; ಕಡಿ: ಕತ್ತರಿಸು; ಖಂಡಿಸು: ಕಡಿ, ಕತ್ತರಿಸು;

ಪದವಿಂಗಡಣೆ:
ಎರಡು+ ಶರದಲಿ +ನರನು +ಭೀಷ್ಮನ
ಕರದ +ಕಾರ್ಮುಕ +ದಂಡವನು +ಕ
ತ್ತರಿಸಿದನು +ಕೈಯೊಡನೆ +ಕೊಂಡನು +ಭೀಷ್ಮ +ಹೊಸ +ಧನುವ
ಸರಳ +ಸೂಟಿಯ +ತೋರಿಸಿದಡ್
ಅಬ್ಬರಿಸಿ +ಫಲುಗುಣನ್+ಐದು +ಬಾಣದಲ್
ಅರಿ +ಭಟನ +ಚಾಪವನು +ಕಡಿ +ಮೂರಾಗಿ +ಖಂಡಿಸಿದ

ಅಚ್ಚರಿ:
(೧) ಶರ, ಬಾಣ; ಚಾಪ, ಕಾರ್ಮುಕ, ಧನು – ಸಮಾನಾರ್ಥಕ ಪದಗಳು
(೨) ಕ ಕಾರದ ತ್ರಿವಳಿ ಪದ – ಕತ್ತರಿಸಿದನು ಕೈಯೊಡನೆ ಕೊಂಡನು

ನಿಮ್ಮ ಟಿಪ್ಪಣಿ ಬರೆಯಿರಿ