ಆತನೆಡವಂಕದಲಿ ಹನುಮನ
ಕೇತನದ ಗರುವಾಯಿಯಲಿ ನವ
ಶಾತಕುಂಭವರೂಥದಲಿ ನೆರೆ ತೀವಿದಸ್ತ್ರದಲಿ
ನೂತನಾಶ್ವನಿಕಾಯ ಖುರಪುಟ
ಧೂತಧೂಳೀಪಟಲವಿಹಿತ ನಿ
ಶಾತಘನ ಜಯಯುವತಿವಿಟನರ್ಜುನನ ನೋಡೆಂದ (ಭೀಷ್ಮ ಪರ್ವ, ೨ ಸಂಧಿ, ೧೮ ಪದ್ಯ)
ತಾತ್ಪರ್ಯ:
ಧರ್ಮಜನ ಎಡಭಾಗದಲ್ಲಿ ಹನುಮನ ಧ್ವಜವನ್ನು ಕಟ್ಟಿರುವ, ಬಂಗಾರದ ರಥದಲ್ಲಿ ಶಸ್ತ್ರ ಸನ್ನಾಹದಿಂದಿರುವವನು ಅರ್ಜುನ. ಅವನ ರಥಕ್ಕೆ ದಿವ್ಯಾಶ್ವಗಳ ಖುರಪುಟದಿಂದೆದ್ದ ಧೂಳು ಆವರಿಸಿದೆ, ಮಹಾ ಜಯಯುವತಿಯನ್ನು ಕಾಮಿಸುವವನಾದ ಅರ್ಜುನನನ್ನು ನೋಡು ಎಂದು ಭೀಷ್ಮರು ಹೇಳಿದರು.
ಅರ್ಥ:
ಎಡ: ವಾಮಭಾಗ; ಅಂಕ: ಸ್ಥಳ; ಕೇತನ: ಬಾವುಟ; ಗರುವಾಯಿ: ಠೀವಿ; ನವ: ಹೊಸ; ಶಾತಕುಂಭ: ಚಿನ್ನ, ಹೊನ್ನು; ವರೂಥ: ತೇರು, ರಥ; ನೆರೆ: ಗುಂಪು; ತೀವು: ತುಂಬು; ಅಸ್ತ್ರ: ಶಸ್ತ್ರ, ಆಯುಧ; ನೂತನ: ಹೊಸ; ಅಶ್ವ: ಕುದುರೆ; ನಿಕಾಯ: ಗುಂಪು; ಖುರಪುಟ: ಗೊರಸು; ಧೂತ: ನಿವಾರಣೆ; ಧೂಳೀಪಟಲ: ಧೂಳಿನ ಸಮೂಹ; ವಿಹಿತ: ಹೊಂದಿಸಿದ; ನಿಶಾತಘನ: ತೀವ್ರವಾದ ಮೋಡ; ಜಯ: ಗೆಲುವು; ಯುವತಿ: ಹೆಣ್ಣು; ವಿಟ: ಕಾಮುಕ;
ಪದವಿಂಗಡಣೆ:
ಆತನ್+ಎಡವ್+ಅಂಕದಲಿ +ಹನುಮನ
ಕೇತನದ +ಗರುವಾಯಿಯಲಿ +ನವ
ಶಾತಕುಂಭ+ವರೂಥದಲಿ +ನೆರೆ +ತೀವಿದ್+ಅಸ್ತ್ರದಲಿ
ನೂತನ+ಅಶ್ವ+ನಿಕಾಯ +ಖುರಪುಟ
ಧೂತ+ಧೂಳೀಪಟಲ+ವಿಹಿತ +ನಿ
ಶಾತಘನ +ಜಯ+ಯುವತಿ+ವಿಟನ್+ಅರ್ಜುನನ +ನೋಡೆಂದ
ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ನಿಶಾತಘನ ಜಯಯುವತಿವಿಟ
(೨) ಅರ್ಜುನನ ಗುರುತನ್ನು ತೋರುವ ಪರಿ – ಹನುಮನ ಕೇತನದ ಗರುವಾಯಿಯಲಿ ನವ
ಶಾತಕುಂಭವರೂಥದಲಿ ನೆರೆ ತೀವಿದಸ್ತ್ರದಲಿ