ಪದ್ಯ ೩೭: ದುರ್ಯೋಧನನು ಯಾರಿಗೆ ಗೋವುಗಳನ್ನು ನೀಡಿದನು?

ತರಿಸಿ ಹೋರಿಯ ಗವಿಯ ಗೂಳಿಯ
ಬರಿಸಿದನು ಕೆಲಕೆಲವ ಕೃಷಿಕರಿ
ಗಿರಿಸಿದನು ಗೋಲಕ್ಷವಿತ್ತನು ವಿಪ್ರಸಂಕುಲಕೆ
ಕರೆಸಿಕೊಟ್ಟನು ಭಟ್ಟರಿಗೆ ಮ
ಲ್ಲರಿಗೆ ವಿಟರಿಗೆ ನಟ ವಿಧಾವಂ
ತರಿಗೆ ಬಹುವಿಧ ಬಹಳ ವಮ್ದಿಗೆ ಮಾಗಧವ್ರಜಕೆ (ಅರಣ್ಯ ಪರ್ವ, ೧೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಹೋರಿಗಳನ್ನೂ ಹಸುಗಳನ್ನೂ ತರಿಸಿ, ಕೆಲಸವನ್ನು ಕೃಷಿಕರಿಗೆ ನೀಡಿದನು. ಬ್ರಾಹ್ಮಣರಿಗೆ ಲಕ್ಷ ಗೋವುಗಳನ್ನು ಕೊಟ್ಟನು. ಭಟ್ಟರು, ವಂದಿಮಾಗಧರು ಮಲ್ಲರು, ವಿಟರು, ನಟರು, ಆನೆ ಕುದುರೆಗಳ ಆರೈಕೆಗಾರರುಗಳನ್ನು ಕರೆಸಿ ಗೋವುಗಳನ್ನು ನೀಡಿದನು.

ಅರ್ಥ:
ತರಿಸು: ಹೊಂದಿಸು; ಹೋರಿ: ಗೂಳಿ; ಗವಿ: ನೆಲೆ, ಆಶ್ರಯಸ್ಥಾನ; ಗೂಳಿ: ಎತ್ತು, ವೃಷಭ; ಬರಿಸು: ಬರೆಮಾಡು; ಕೆಲ: ಕೊಂಚ, ಸ್ವಲ್ಪ; ಕೆಲವ: ಕೆಲಸ; ಕೃಷಿಕ: ರೈತ; ಗೋ: ಗೋವು; ವಿತ್ತು: ನೀಡು; ವಿಪ್ರ: ಬ್ರಾಹ್ಮಣ; ಸಂಕುಲ: ಗುಂಪು; ಕರೆಸಿ: ಬರೆಮಾಡು; ಭಟ್ಟ: ವಿದ್ವಾಂಸ, ಪಂಡಿತ; ಮಲ್ಲ: ಜಟ್ಟಿ; ವಿಟ:ಜಾರ, ಕಾಮುಕ; ನಟ: ನಟನೆ ಮಾಡುವವ; ವಿಧಾವಂತ: ಆನೆ ಕುದುರೆಗಳನ್ನು ಆರೈಕೆ ಮಾಡುವವ; ಬಹುವಿಧ: ಹಲವಾರು; ಬಹಳ: ತುಂಬ; ವಂದಿಮಾಗಧ: ಹೊಗಳುಭಟ್ಟ; ವ್ರಜ: ಗುಂಪು;

ಪದವಿಂಗಡಣೆ:
ತರಿಸಿ +ಹೋರಿಯ +ಗವಿಯ +ಗೂಳಿಯ
ಬರಿಸಿದನು +ಕೆಲಕೆಲವ +ಕೃಷಿಕರಿಗ್
ಇರಿಸಿದನು +ಗೋಲಕ್ಷವಿತ್ತನು+ ವಿಪ್ರ+ಸಂಕುಲಕೆ
ಕರೆಸಿಕೊಟ್ಟನು +ಭಟ್ಟರಿಗೆ+ ಮ
ಲ್ಲರಿಗೆ+ ವಿಟರಿಗೆ+ ನಟ +ವಿಧಾವಂ
ತರಿಗೆ+ ಬಹುವಿಧ +ಬಹಳ+ ವಂದಿಗೆ +ಮಾಗಧ+ವ್ರಜಕೆ

ಅಚ್ಚರಿ:
(೧) ತರಿಸಿ, ಕರೆಸಿ, ಬರಿಸಿ, ಇರಿಸಿ – ಪ್ರಾಸ ಪದಗಳು
(೨) ಹಲವು ರೀತಿಯ ಜನರು – ಭಟ್ಟ, ಮಲ್ಲ, ವಿಟ, ನಟ, ವಿಧಾವಂತ, ವಂದಿ, ಮಾಗಧ

ನಿಮ್ಮ ಟಿಪ್ಪಣಿ ಬರೆಯಿರಿ