ವೀರರೆಂದೆನಿಸುವರು ತೊಡೆಹದ
ಶೌರಿಯದ ಸಿರಿವಂತರರಸುಕು
ಮಾರಕರು ನಿನ್ನವರು ಕೋಮಲಧೈರ್ಯರಾಹವಕೆ
ಮಾರಿ ಮುಖದವ ಕಠಿಣಮನ ನಿ
ಸ್ಸಾರ ಹೃದಯನು ಭೀಮನವನೊಳು
ಹೋರಿದವರೇನಹರು ಕೇಳೈ ನಿನ್ನವರ ವಿಧಿಯ (ದ್ರೋಣ ಪರ್ವ, ೧೩ ಸಂಧಿ, ೪೬ ಪದ್ಯ)
ತಾತ್ಪರ್ಯ:
ನಿನ್ನ ಮಕ್ಕಳನ್ನು ವೀರರೆಂದು ಕರೆಯುತ್ತಾರೆ ಅಷ್ಟೆ ಅವರ ಶೌರ್ಯ ಸಿರಿ (ಐಶ್ವರ್ಯದ) ಮೇಲೆ ಲೇಪಿಸಿದುದು. ಯುದ್ಧದಲ್ಲಿ ಧೈರ್ಯವಿದ್ದವರಲ್ಲ, ಭೀಮನಾದರೋ ಮಾರಿಯ ಮುಖದವನು. ಅವನ ಮನಸ್ಸು ಕಠಿಣ, ನಿಸ್ಸಾರ ಹೃದಯದವನು. ಅಂಥವನೊಡನೆ ಹೋರಾಡಿದವರು ಏನಾಗುತ್ತಾರೆ ನೀನೆ ಹೇಳು ಧೃತರಾಷ್ಟ್ರ, ಹೇಳುವೆ ಕೇಳು ನಿನ್ನ ಮಕ್ಕಳ ವಿಧಿಯನ್ನು ಎಂದು ಸಂಜಯನು ಮುಂದುವರೆಸಿದನು.
ಅರ್ಥ:
ವೀರ: ಶೂರ; ತೊಡೆ: ಬಳಿ, ಸವರು; ಶೌರ್ಯ: ಪರಾಕ್ರಮ; ಸಿರಿ: ಐಶ್ವರ್ಯ; ಅರಸು: ರಾಜ; ಕುಮಾರ: ಪುತ್ರ; ಕೋಮಲ: ಮೃದು; ಧೈರ್ಯ: ಪರಾಕ್ರಮ; ಆಹವ: ಯುದ್ಧ; ಮಾರಿ: ಕ್ಷುದ್ರ ದೇವತೆ, ಮೃತ್ಯು; ಮುಖ: ಆನನ; ಕಠಿಣ: ಗಟ್ಟಿ, ಬಿರುಸು; ಮನ: ಮನಸ್ಸು; ನಿಸ್ಸಾರ: ಸತ್ತ್ವವಿಲ್ಲದ; ಹೃದಯ: ಎದೆ; ಹೋರಿ: ಕೋಣ; ಕೇಳು: ಆಲಿಸು; ವಿಧಿ: ಆಜ್ಞೆ, ಆದೇಶ;
ಪದವಿಂಗಡಣೆ:
ವೀರರೆಂದೆನಿಸುವರು+ ತೊಡೆಹದ
ಶೌರಿಯದ +ಸಿರಿವಂತರ್+ಅರಸು+ಕು
ಮಾರಕರು +ನಿನ್ನವರು +ಕೋಮಲ+ಧೈರ್ಯರ್+ಆಹವಕೆ
ಮಾರಿ +ಮುಖದವ +ಕಠಿಣ+ಮನ +ನಿ
ಸ್ಸಾರ +ಹೃದಯನು +ಭೀಮನವನೊಳು
ಹೋರಿದವರ್+ಏನಹರು +ಕೇಳೈ +ನಿನ್ನವರ+ ವಿಧಿಯ
ಅಚ್ಚರಿ:
(೧) ಕೌರವರ ಸ್ಥಿತಿ – ಅರಸು ಕುಮಾರಕರು ನಿನ್ನವರು ಕೋಮಲ
(೨) ಭೀಮನ ಶೌರ್ಯ – ಆಹವಕೆ ಮಾರಿ ಮುಖದವ ಕಠಿಣಮನ ನಿಸ್ಸಾರ ಹೃದಯನು ಭೀಮ