ಉದಯವಾಗುವ ಮುನ್ನ ಕಳನೊಳು
ಹೊದರುಗಟ್ಟಿದರೀ ತ್ರಿಗರ್ತರು
ಕದನಕೆಮ್ಮೊಳಗಳವಿಗೊಡುವುದು ಬೇಗ ಬಹುದೆಂದು
ಮದವದರಿಭಟ ಭೈರವಂಗ
ಟ್ಟಿದರು ಭಟ್ಟರನವರು ಬಂದೊದ
ರಿದರು ಪಾರ್ಥನ ಮುಂದೆ ಸಮಸಪ್ತಕರ ಬಿರುದುಗಳ (ದ್ರೋಣ ಪರ್ವ, ೨ ಸಂಧಿ, ೧೫ ಪದ್ಯ)
ತಾತ್ಪರ್ಯ:
ಸೂರ್ಯೋದಯವಾಗುವ ಮೊದಲೇ ತ್ರಿಗರ್ತರು ಗುಂಪಾಗಿ ತಮ್ಮೊಡನೆ ಕಾಳಗಕ್ಕೆ ಬರಬೇಕೆಂದು ಮದೋನ್ಮತ್ತ ಶತ್ರುಭಟ ಭೈರವನಾದ ಅರ್ಜುನನಿಗೆ ದೂತರೊಡನೆ ಹೇಳಿಕಳುಹಿಸಿದರು. ಅವರು ಬಂದು ಅರ್ಜುನನ ಮುಂದೆ ಸಂಶಪ್ತಕರ ಬಿರುದುಗಳನ್ನು ಉದ್ಘೋಷಿಸಿದರು.
ಅರ್ಥ:
ಉದಯ: ಹುಟ್ಟು; ಮುನ್ನ: ಮೊದಲು; ಕಳ:ರಣರಂಗ; ಹೊದರು: ಗುಂಪು, ಸಮೂಹ; ಕಟ್ಟು: ಬಂಧಿಸು; ಕದನ: ಯುದ್ಧ; ಅಳವಿ: ಯುದ್ಧ; ಕೊಡು: ನೀಡು; ಬೇಗ: ಶೀಘ್ರ; ಮದ:ಅಹಂಕಾರ; ಅರಿ: ವೈರಿ; ಭಟ: ಸೈನಿಕ; ಭೈರವ: ಶಿವನ ರೂಪ; ಅಟ್ಟು: ಹಿಂಬಾಲಿಸು; ಭಟ್ಟ: ಪರಾಕ್ರಮಿ; ಬಂದು: ಆಗಮಿಸು; ಒದರು: ಹೇಳು; ಬಿರುದು: ಗೌರವಸೂಚಕ ಪದ;
ಪದವಿಂಗಡಣೆ:
ಉದಯವಾಗುವ +ಮುನ್ನ +ಕಳನೊಳು
ಹೊದರು+ಕಟ್ಟಿದರ್+ಈ+ ತ್ರಿಗರ್ತರು
ಕದನಕ್+ಎಮ್ಮೊಳಗ್+ಅಳವಿ+ಕೊಡುವುದು +ಬೇಗ +ಬಹುದೆಂದು
ಮದವದ್+ಅರಿಭಟ+ ಭೈರವಂಗ್
ಅಟ್ಟಿದರು +ಭಟ್ಟರನ್+ಅವರು +ಬಂದ್+ಒದ
ರಿದರು +ಪಾರ್ಥನ +ಮುಂದೆ+ ಸಮಸಪ್ತಕರ +ಬಿರುದುಗಳ
ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ಅರಿಭಟ ಭೈರವ