ಘಾಯವಡೆದನು ದ್ರುಪದಸುತ ಪೂ
ರಾಯದೇರಿನಲೋಡಿದರು ಮಾ
ದ್ರೇಯರುಬ್ಬಟೆ ಮುರಿದು ಬೆಬ್ಬಳೆವೋದನವನೀಶ
ರಾಯದಳ ದೆಸೆಗೆಟ್ಟು ದೊಗ್ಗಿನ
ನಾಯಕರು ನುಗ್ಗಾಯ್ತು ಯಾದವ
ರಾಯ ಕಂಡನು ರಥವನಡಹಾಯ್ಸಿದನು ಫಲುಗುಣನ (ಶಲ್ಯ ಪರ್ವ, ೨ ಸಂಧಿ, ೩೯ ಪದ್ಯ)
ತಾತ್ಪರ್ಯ:
ಧೃಷ್ಟದ್ಯುಮ್ನನು ಗಾಯಗೊಂಡನು, ಗಾಯಗಳು ಅತಿಶಯವಾಗಲು ನಕುಲ ಸಹದೇವರ ಶೌರ್ಯ ಮುರಿದು ಓಡಿಹೋದರು. ಪೆಟ್ಟುತಿಂದ ಧರ್ಮಜನು ಕಳವಳಿಸಿದನು. ಸೈನ್ಯ ದಿಕ್ಕುಗಾಣದೆ ಎಲ್ಲ ಕಡೆ ಚದುರಿ ಹೋಯಿತು. ಒಟ್ಟಾಗಿ ಬಂದ ವೀರರು ಮಡಿದರು. ಶ್ರೀಕೃಷ್ಣನು ಇದನ್ನು ನೋಡಿ ಅರ್ಜುನನ ರಥವನ್ನು ಶಲ್ಯನಿಗೆ ಅಡ್ಡವಾಗಿ ತಂದನು.
ಅರ್ಥ:
ಘಾಯ: ಪೆಟ್ಟು; ಸುತ: ಮಗ; ಪೂರಾಯ: ಪರಿಪೂರ್ಣ; ಓಡು: ಧಾವಿಸು; ಮಾದ್ರೇಯ: ಮಾದ್ರಿಯ ಮಕ್ಕಳು; ಉಬ್ಬಟೆ: ಅತಿಶಯ; ಮುರಿ: ಸೀಳು; ಬೆಬ್ಬಳಿ: ಕಳವಳ; ಅವನೀಶ: ರಾಜ; ರಾಯ: ರಾಜ; ದಳ: ಸೈನ್ಯ; ದೆಸೆ: ದಿಕ್ಕು; ದೆಸೆಗೆಟ್ಟು: ದಿಕ್ಕು ಕಾಣದೆ; ಒಗ್ಗು: ಗುಂಪು, ಸಮೂಹ; ನಾಯಕ: ಒಡೆಯ; ನುಗ್ಗು: ತಳ್ಳು; ಯಾದವರಾಯ: ಕೃಷ್ಣ; ಕಂಡು: ನೋಡು; ರಥ: ಬಂಡಿ; ಅಡಹಾಯ್ಸಿ: ಮಧ್ಯ ಕರೆತಂದು;
ಪದವಿಂಗಡಣೆ:
ಘಾಯವಡೆದನು +ದ್ರುಪದ+ಸುತ +ಪೂ
ರಾಯದ್+ಏರಿನಲ್+ಓಡಿದರು +ಮಾ
ದ್ರೇಯರ್+ಉಬ್ಬಟೆ +ಮುರಿದು +ಬೆಬ್ಬಳೆವೋದನ್+ಅವನೀಶ
ರಾಯದಳ +ದೆಸೆಗೆಟ್ಟುದ್ + ಒಗ್ಗಿನ
ನಾಯಕರು +ನುಗ್ಗಾಯ್ತು+ ಯಾದವ
ರಾಯ +ಕಂಡನು+ ರಥವನ್+ಅಡಹಾಯ್ಸಿದನು +ಫಲುಗುಣನ
ಅಚ್ಚರಿ:
(೧) ಘಾಯ, ಪೂರಾಯ, ರಾಯ, ಯಾದವರಾಯ, ಮಾದ್ರೇಯ – ಪ್ರಾಸ ಪದಗಳು
(೨) ಕೃಷ್ಣನನ್ನು ಯಾದವರಾಯ; ನಕುಲ ಸಹದೇವರನ್ನು ಮಾದ್ರೇಯ ಎಂದು ಕರೆದಿರುವುದು