ನೋಡಿ ನರನುದ್ದಂಡತನವನು
ತೋಡುತೈದನೆ ತುರಗ ಲೀಲೆಗೆ
ಖೇಡಕುಳಿಯನು ಶೌರ್ಯಗರ್ವಿತನೈ ಶಿವಾ ಎನುತ
ಕೂಡೆ ಮಸಗಿತು ರಿಪುಚತುರ್ಬಲ
ಜೋಡು ಮಾಡಿತು ಕಡಹದಮರರು
ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ (ದ್ರೋಣ ಪರ್ವ, ೧೦ ಸಂಧಿ, ೨೯ ಪದ್ಯ)
ತಾತ್ಪರ್ಯ:
ಅರ್ಜುನನ ದರ್ಪ ಅಹಂಕಾರಗಳನ್ನಿಷ್ಟು ನೋಡಿ, ಕುದುರೆಗಳಿಗಾಗಿ ಗುಳಿಯನ್ನು ತೋಡುತ್ತಿದ್ದಾನೆ. ಶೌರ್ಯದ ಗರ್ವ ಎಷ್ಟಿದ್ದೀತು, ಶಿವ ಶಿವಾ ಎನ್ನುತ್ತಾ ಕೌರವ ಸೈನ್ಯವು ಒಟ್ಟಾಗಿ, ದೇವತೆಗಳು ಕಡೆಯುತ್ತಿದ್ದ ಮಂದರ ಗಿರಿಯನ್ನು ಅಲೆಗಳು ಮುತ್ತಿದಂತೆ ಅರ್ಜುನನನ್ನು ಮುತ್ತಿತು.
ಅರ್ಥ:
ನೋಡು: ವೀಕ್ಷಿಸು; ನರ: ಅರ್ಜುನ; ಉದ್ದಂಡ: ದರ್ಪ, ಗರ್ವ; ತೋಡು: ಅಗೆದಿರುವ ಸ್ಥಳ, ಹಳ್ಳ; ಐದು: ಬಂದು ಸೇರು; ತುರಗ: ಅಶ್ವ; ಲೀಲೆ: ಆನಂದ, ಸಂತೋಷ; ಖೇಡ: ಹಳ್ಳಿ, ಗ್ರಾಮ; ಕುಳಿ: ಗುಂಡಿ, ಗುಣಿ, ಹಳ್ಳ; ಶೌರ್ಯ: ಪರಾಕ್ರಮ; ಗರ್ವ: ಅಹಂಕಾರ; ಮಸಗು: ಹರಡು; ಕೆರಳು; ತಿಕ್ಕು; ರಿಪು: ವೈರಿ; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಜೋಡು: ಜೊತೆ; ಅಮರ: ದೇವತೆ; ಹೂಡು: ರಚಿಸು, ನಿರ್ಮಿಸು; ಅದ್ರಿ: ಬೆಟ್ಟ; ಅಂಬುಧಿ: ಸಾಗರ; ತೆರೆ: ತೆಗೆ, ಬಿಚ್ಚು; ಕವಿ: ಆವರಿಸು;
ಪದವಿಂಗಡಣೆ:
ನೋಡಿ +ನರನ್+ಉದ್ದಂಡತನವನು
ತೋಡುತ್+ಐದನೆ+ ತುರಗ +ಲೀಲೆಗೆ
ಖೇಡ+ಕುಳಿಯನು +ಶೌರ್ಯಗರ್ವಿತನೈ+ ಶಿವಾ +ಎನುತ
ಕೂಡೆ+ ಮಸಗಿತು +ರಿಪು+ಚತುರ್ಬಲ
ಜೋಡು +ಮಾಡಿತು +ಕಡಹದ್+ಅಮರರು
ಹೂಡಿದ್+ಅದ್ರಿಯನ್+ಅಂಬುಧಿಯ +ತೆರೆಮಾಲೆ +ಕವಿದಂತೆ
ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಹದಮರರು ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ