ಪದ್ಯ ೩೮: ಭೀಮನ ಆಕ್ರಮಣ ಹೇಗಿತ್ತು?

ನೆತ್ತಿಯಗತೆಯೊಳೂರಿದಂಕುಶ
ವೆತ್ತಿದಡೆ ತಲೆಗೊಡಹಿದವು ಬೆರ
ಳೊತ್ತು ಗಿವಿಗಳ ಡಾವರಿಪಡಾವರದ ಡಬ್ಬುಕದ
ವಾರೆಯ ಬಗೆಯದಾನೆಗ
ಕುತ್ತುಳಿತ್ತ ಮುರಿದವು ಸಿಂಹನಾದಕೆ
ಮತ್ತಗಜ ಮೊಗದಿರುಹಿದವು ದಳವುಳಿಸಿದನು ಭೀಮ (ಗದಾ ಪರ್ವ, ೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಸಿಂಹನಾದವನ್ನು ಹೊರಹೊಮ್ಮುತ್ತಾ ರಭಸದಿಂದ ಬರಲು, ಜೋದರು ನೆತ್ತಿಗಿರಿದ ಅಂಕುಶವನ್ನೆತ್ತಿದೊಡನೆ ತಲೆಕೊಡವಿ ನಿಂತುಬಿಟ್ಟವು. ಬೆರಳಿಂದ ಕಿವಿಗಳನ್ನೊತ್ತಿದ ಹಾರೆಗೆ ಬೆದರಳೆ ಇಲ್ಲ. ಆನೆಗಳು ಹಿಮ್ಮೆಟ್ಟಿದವು.

ಅರ್ಥ:
ನೆತ್ತಿ: ಶಿರ; ಅಗತೆ: ತೋಡು; ಊರು: ಭದ್ರವಾಗಿ ನಿಲಿಸು; ಅಂಕುಶ: ಹಿಡಿತ, ಹತೋಟಿ; ತಲೆ: ಶಿರ; ಕೊಡು: ನೀಡು; ಬೆರಳು: ಅಂಗುಲಿ; ಒತ್ತು: ಚುಚ್ಚು, ತಿವಿ; ಕಿವಿ: ಕರ್ಣ; ಡಾವರಿಸು: ನೋಯಿಸು; ಡಬ್ಬುಕ: ಡಬ್ ಡಬ್ ಸಪ್ಪಳ; ಡಾವರ: ಕ್ಷೋಭೆ; ಬಗೆ: ಎಣಿಸು; ಆನೆ: ಗಜ; ಕುತ್ತು: ತಿವಿ; ಮುರಿ: ಸೀಳು; ಸಿಂಹನಾದ: ಗರ್ಜನೆ; ಮತ್ತಗಜ: ಅಮಲಿನಿಂದ ಕೂಡಿದ ಆನೆ; ಮೊಗ: ಮುಖ, ಮೋರೆ; ದಳ: ಸೈನ್ಯ; ಉಳಿಸು: ರಕ್ಷಿಸು;

ಪದವಿಂಗಡಣೆ:
ನೆತ್ತಿ+ಅಗತೆಯೊಳ್+ಊರಿದ್+ಅಂಕುಶವ್
ಎತ್ತಿದಡೆ +ತಲೆ+ಕೊಡಹಿದವು +ಬೆರಳ್
ಒತ್ತು + ಕಿವಿಗಳ +ಡಾವರಿಪ + ಡಾವರದ +ಡಬ್ಬುಕದ
ವಾರೆಯ +ಬಗೆಯದ್+ಆನೆಗ
ಕುತ್ತುಳ್+ಇತ್ತ +ಮುರಿದವು +ಸಿಂಹನಾದಕೆ
ಮತ್ತಗಜ+ ಮೊಗದ್+ಇರುಹಿದವು + ದಳವುಳಿಸಿದನು +ಭೀಮ

ಅಚ್ಚರಿ:
(೧) ಡ ಕಾರದ ಪದಗಳು – ಡಾವರಿಪ ಡಾವರದ ಡಬ್ಬುಕದ
(೨) ಭೀಮನ ಗರ್ಜನೆಯ ಶಕ್ತಿ – ಮುರಿದವು ಸಿಂಹನಾದಕೆ ಮತ್ತಗಜ ಮೊಗದಿರುಹಿದವು

ಪದ್ಯ ೫೩: ಭೀಮನು ಧರ್ಮಜನನ್ನು ರಕ್ಷಿಸಲು ಹೇಗೆ ಬಂದನು?

ಎಲೆಲೆ ಭೂಪತಿ ಸಿಕ್ಕಿದನು ಗಜ
ಬಲದ ಭಾರಣೆ ಬಲುಹೆನುತ ಬಲ
ಕಳವಳಿಸೆ ಕೇಳಿದನಲೈ ಕಲಿಭೀಮನಾಚೆಯಲಿ
ಪ್ರಳಯದಿವಸದ ಶಿಖಿಯ ಡಾವರ
ದೊಳಗೆ ಶ್ರವಮಾಡಿದನೆನಲು ಮಿಗೆ
ಮೊಳಗಿ ಮಂಡಿಯನಿಕ್ಕಿ ಮಲೆತನು ಸಿಂಹನಾದದಲಿ (ಗದಾ ಪರ್ವ, ೧ ಸಂಧಿ, ೫೩ ಪದ್ಯ)

ತಾತ್ಪರ್ಯ:
ಪಾಂಡವ ಸೇನೆಯು, ಆನೆಯ ಸೈನ್ಯ ಬಹಳ ಬಲಶಾಲಿಯಾಗಿದೆ. ದೊರೆಯು ಅದಕ್ಕೆ ಸಿಕ್ಕಿಬಿಟ್ಟ ಎಮ್ದು ಗೊಂದಲ ಪಡಲು, ಆಚೆಯಿದ್ದ ವೀರ ಭೀಮನು ಅದನ್ನು ಕೇಳಿದನು. ಪ್ರಳಯ ಕಾಲದ ಅಗ್ನಿಯ ಡಾವರದಲ್ಲಿ ಸಾಧನೆ ಮಾಡಿದವನೋ ಎಂಬಂತೆ ಗರ್ಜಿಸಿ, ಮಂಡಿಯನ್ನಿಟ್ಟು ಸಿಂಹನಾದವನ್ನು ಮಾಡಿ ಗಜಸೈನ್ಯಕ್ಕೆ ಇದಿರಾದನು.

ಅರ್ಥ:
ಭೂಪತಿ: ರಾಜ; ಸಿಕ್ಕು: ಬಂಧನಕ್ಕೊಳಗಾಗು, ಸೆರೆಯಾಗು; ಗಜ: ಆನೆ; ಬಲ: ಸೈನ್ಯ, ಶಕ್ತಿ; ಭಾರಣೆ: ಮಹಿಮೆ, ಗೌರವ; ಬಲುಹು: ಬಲ, ಶಕ್ತಿ; ಕಳವಳ: ಗೊಂದಲ; ಕೇಳು: ಆಲಿಸು; ಕಲಿ: ಶೂರ; ಆಚೆ: ಹೊರಗೆ; ಪ್ರಳಯ: ಅಂತ್ಯಕಾಲ; ದಿವಸ: ದಿನ; ಶಿಖಿ: ಅಗ್ನಿ; ಡಾವರ: ತೀವ್ರತೆ, ರಭಸ; ಶ್ರವ: ಶಬ್ದ, ಧ್ವನಿ ಮಾಡು; ಮಿಗೆ: ಅಧಿಕ; ಮೊಳಗು: ಧ್ವನಿ, ಸದ್ದು; ಮಂಡಿ: ಮೊಳಕಾಲು; ಮಲೆ: ಗರ್ವಿಸು; ಸಿಂಹ: ಕೇಸರಿ; ನಾದ: ಶಬ್ದ;

ಪದವಿಂಗಡಣೆ:
ಎಲೆಲೆ +ಭೂಪತಿ +ಸಿಕ್ಕಿದನು +ಗಜ
ಬಲದ +ಭಾರಣೆ +ಬಲುಹೆನುತ+ ಬಲ
ಕಳವಳಿಸೆ +ಕೇಳಿದನಲೈ +ಕಲಿಭೀಮನ್+ಆಚೆಯಲಿ
ಪ್ರಳಯ+ದಿವಸದ+ ಶಿಖಿಯ +ಡಾವರ
ದೊಳಗೆ +ಶ್ರವಮಾಡಿದನೆನಲು +ಮಿಗೆ
ಮೊಳಗಿ+ ಮಂಡಿಯನಿಕ್ಕಿ +ಮಲೆತನು +ಸಿಂಹನಾದದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪ್ರಳಯದಿವಸದ ಶಿಖಿಯ ಡಾವರ ದೊಳಗೆ ಶ್ರವಮಾಡಿದನೆನಲು
(೨) ಮ ಕಾರದ ಸಾಲು ಪದ – ಮಿಗೆ ಮೊಳಗಿ ಮಂಡಿಯನಿಕ್ಕಿ ಮಲೆತನು
(೩) ಬ ಕಾರದ ಸಾಲು ಪದ – ಬಲದ ಭಾರಣೆ ಬಲುಹೆನುತ ಬಲ
(೪) ಕ ಕಾರದ ಸಾಲು ಪದ – ಕಳವಳಿಸೆ ಕೇಳಿದನಲೈ ಕಲಿಭೀಮನಾಚೆಯಲಿ

ಪದ್ಯ ೪೮: ಭೀಮನು ಯಾರನ್ನು ಯಮನ ಕೈಗೆ ನೀಡಿದನು?

ದ್ರುಮ ವಿಕರ್ಣ ಸುಷೇಣ ಚಾರು
ಕ್ರಮ ವಿವಿತ್ಸುಕ ವಜ್ರಬಾಹುಕ
ದಮನ ದೀರ್ಘೋದರ ಮಹೋದರ ಕುಂಡದಾರುಕನ
ಯಮನ ಕೈಯೆಡೆಗೊಟ್ಟು ಘನವಿ
ಕ್ರಮದ ಸಿರಿ ಹೊದರೇಳೆ ಜಯವಿ
ಕ್ರಮದೊಳಬ್ಬರಿಸಿದನು ನಿಷ್ಠುರ ಸಿಂಹನಾದದಲಿ (ದ್ರೋಣ ಪರ್ವ, ೧೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ದ್ರುಮ, ವಿಕರ್ಣ, ಸುಷೇಣ, ಚಾರುಕ್ರಮ, ವಿವಿತ್ಸುಕ, ವಜ್ರಬಾಹುಕ, ದಮನ, ದೀರ್ಘೋದರ, ಮಹೋದರ, ಕುಂಡದಾರುಕರನ್ನು ಯಮನ ಕೈಗೆ ಕೊಟ್ಟು, ವಿಕ್ರಮದ ಸಿರಿ ದಟ್ಟವಾಗಲು, ಭೀಮನು ನಿಷ್ಠುರ ಸಿಂಹನಾದದಿಂದ ಅಬ್ಬರಿಸಿದನು.

ಅರ್ಥ:
ಯಮ: ಜವ; ಘನ: ಶ್ರೇಷ್ಠ; ವಿಕ್ರಮ: ಗತಿ, ಗಮನ; ಸಿರಿ: ಐಶ್ವರ್ಯ; ಹೊದರು: ಅತಿಥಿ; ಗುಂಪು; ಜಯ: ಗೆಲುವು; ಅಬ್ಬರಿಸು: ಗರ್ಜಿಸು; ನಿಷ್ಠುರ: ಕಠೋರ; ಸಿಂಹ: ಕೇಸರಿ; ನಾದ: ಶಬ್ದ;

ಪದವಿಂಗಡಣೆ:
ದ್ರುಮ +ವಿಕರ್ಣ +ಸುಷೇಣ +ಚಾರು
ಕ್ರಮ +ವಿವಿತ್ಸುಕ +ವಜ್ರಬಾಹುಕ
ದಮನ +ದೀರ್ಘೋದರ +ಮಹೋದರ +ಕುಂಡದಾರುಕನ
ಯಮನ +ಕೈಯೆಡೆಗೊಟ್ಟು +ಘನ+ವಿ
ಕ್ರಮದ +ಸಿರಿ +ಹೊದರೇಳೆ+ ಜಯ+ವಿ
ಕ್ರಮದೊಳ್+ಅಬ್ಬರಿಸಿದನು +ನಿಷ್ಠುರ +ಸಿಂಹನಾದದಲಿ

ಅಚ್ಚರಿ:
(೧) ಘನವಿಕ್ರಮ, ಜಯವಿಕ್ರಮ – ಪದಗಳ ಬಳಕೆ

ಪದ್ಯ ೧೭: ಕೃಷ್ಣನು ಪಾರ್ಥನಿಗೆ ಯಾರ ಆಗಮನದ ಬಗ್ಗೆ ಹೇಳಿದ?

ನಿಜವರೂಥದಲಂದು ಕೌರವ
ವಿಜಯ ಮಾರುತಿ ಹೊಕ್ಕು ರಿಪು ಭೂ
ಭುಜರನರೆಯಟ್ಟಿದನು ಬಹಳಿತ ಸಿಂಹನಾದದಲಿ
ತ್ರಿಜಗ ತಲ್ಲಣಿಸಿದುದು ವರ ವಾ
ರಿಜವಿಲೋಚನ ಕೇಳಿದನು ಪವ
ನಜನ ಪಡಿಬಲ ಬಂದುದೆಮದರುಹಿದನು ಪಾರ್ಥಂಗೆ (ದ್ರೋಣ ಪರ್ವ, ೧೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕೌರವರನ್ನು ಗೆದ್ದ ಭೀಮನು ತನ್ನ ರಥದಲ್ಲಿ ಕುಳಿತು ಸಿಂಹನಾದ ಮಾಡುತ್ತಾ ಶತ್ರುರಾಜರನ್ನರೆಯಟ್ಟಿದನು. ಮೂರು ಲೋಕಗಳೂ ಅವನ ಆರ್ಭಟಕ್ಕೆ ತಲ್ಲಣಿಸಿದವು. ಭೀಮನ ಕೂಗನ್ನು ಶ್ರೀಕೃಷ್ಣನು ಕೇಳಿ, ಭೀಮನ ಸಹಾಯ ಬಂದಿತು ಎಂದು ಅರ್ಜುನನಿಗೆ ಹೇಳಿದನು.

ಅರ್ಥ:
ನಿಜ: ತನ್ನ; ವರೂಥ:ತೇರು, ರಥ; ವಿಜಯ: ಗೆಲುವು; ಮಾರುತಿ: ಹನುಮ; ಹೊಕ್ಕು: ಸೇರು; ರಿಪು: ವೈರಿ; ಭೂಭುಜ: ಅರಸು; ಅಟ್ಟು: ಹಿಂಬಾಲಿಸು; ಬಹಳ: ತುಂಬ; ಸಿಂಹನಾದ: ಗರ್ಜನೆ; ತ್ರಿಜಗ: ಮೂರು ಪ್ರಪಂಚ; ತಲ್ಲಣ: ಅಂಜಿಕೆ, ಭಯ; ವರ: ಶ್ರೇಷ್ಠ; ವಾರಿಜ: ಕಮಲ ವಿಲೋಚನ: ಕಣ್ಣು; ಕೇಳು: ಆಲಿಸು; ಪವನಜ: ವಾಯುಪುತ್ರ (ಭೀಮ); ಪಡಿಬಲ: ಅಗತ್ಯಕ್ಕೆ ಸಹಾಯಕವಾಗಿ ಬರುವ ದೊಡ್ಡಪಡೆ; ಬಂದುದು: ಆಗಮಿಸು; ಅರುಹು: ಹೇಳು, ತಿಳಿಸು;

ಪದವಿಂಗಡಣೆ:
ನಿಜ+ವರೂಥದಲ್+ಅಂದು +ಕೌರವ
ವಿಜಯ +ಮಾರುತಿ +ಹೊಕ್ಕು +ರಿಪು +ಭೂ
ಭುಜರನ್+ಅರೆ+ಅಟ್ಟಿದನು +ಬಹಳಿತ +ಸಿಂಹನಾದದಲಿ
ತ್ರಿಜಗ +ತಲ್ಲಣಿಸಿದುದು +ವರ +ವಾ
ರಿಜ+ವಿಲೋಚನ +ಕೇಳಿದನು +ಪವ
ನಜನ +ಪಡಿಬಲ +ಬಂದುದೆಮದ್+ಅರುಹಿದನು +ಪಾರ್ಥಂಗೆ

ಅಚ್ಚರಿ:
(೧) ಕೃಷ್ಣನನ್ನು ವರ ವಾರಿಜ ವಿಲೋಚನ ಎಂದು ಕರೆದಿರುವುದು

ಪದ್ಯ ೬೩: ಭೀಮಸೇನನನ್ನು ಯಾರು ತಡೆದರು?

ಗದೆಯ ತಿರುಹುತ ಸಿಂಹನಾದದ
ಲೊದರಿ ಮಗನಾವೆಡೆಯೆನುತ ನೂ
ಕಿದನು ರಥವನು ತನ್ನ ಸೇನೆಗೆ ಸೀಗುರಿಯ ಬೀಸಿ
ಅದಟನೈತರೆ ಹೋಗಲೀಯದೆ
ಮೊದಲ ಬಾಗಿಲ ಕಟ್ಟಿಕೊಂಡ
ಗ್ಗದ ಜಯದ್ರಥ ಭೀಮನೊಳು ಬಲುಗಾಳೆಗವ ಹಿಡಿದ (ದ್ರೋಣ ಪರ್ವ, ೫ ಸಂಧಿ, ೬೩ ಪದ್ಯ)

ತಾತ್ಪರ್ಯ:
ಭೀಮನು ಗದೆಯನ್ನು ತಿರುಹಿಕೊಂಡು ಗರ್ಜಿಸುತ್ತಾ ಯುದ್ಧಕ್ಕೆ ಮುನ್ನುಗ್ಗಿ, ಚಾಮರದಿಂದ ಸನ್ನೆಮಾಡುತ್ತಾ ಅಭಿಮನ್ಯುವೆಲ್ಲಿ ಎಂದು ಕೂಗುತ್ತಾ ರಥವನ್ನು ಹರಸಿ ಪದ್ಮವ್ಯೂಹದ ಬಾಗಿಲಿಗೆ ಬಂದನು. ಮೊದಲ ಬಾಗಿಲಿನಲ್ಲಿದ್ದ ಜಯದ್ರಥನು ಭೀಮನನ್ನೆದುರಿಸಿ ಕಾಳಗಕ್ಕೆ ನಿಂತನು.

ಅರ್ಥ:
ಗದೆ: ಮುದ್ಗರ; ತಿರುಹು: ತಿರುಗಿಸು; ಸಿಂಹನಾದ: ಗರ್ಜನೆ; ಒದರು: ಹೊರಹಾಕು; ಮಗ: ಪುತ್ರ; ಆವೆಡೆ: ಯಾವ ಪಕ್ಕ, ಭಾಗ; ನೂಕು: ತಳ್ಳು; ರಥ: ಬಂಡಿ; ಸೇನೆ: ಸೈನ್ಯ; ಸೀಗುರಿ: ಚಾಮರ; ಬೀಸು: ತೂಗುವಿಕೆ, ಓಟ; ಅದಟ: ಶೂರ, ಪರಾಕ್ರಮಿ; ಐತರು: ಬಂದು ಸೇರು; ಹೋಗಲು: ತೆರಳು; ಮೊದಲು: ಮುಂಚೆ; ಬಾಗಿಲು: ಕದ; ಕಟ್ಟು: ಬಂಧಿಸು; ಅಗ್ಗ: ಶ್ರೇಷ್ಠ; ಬಲು: ಜೋರಾದ, ದೊಡ್ಡ; ಕಾಳೆಗ: ಯುದ್ಧ; ಹಿಡಿ: ಗ್ರಹಿಸು;

ಪದವಿಂಗಡಣೆ:
ಗದೆಯ+ ತಿರುಹುತ + ಸಿಂಹನಾದದಲ್
ಒದರಿ +ಮಗನ್+ಆವೆಡೆ+ಎನುತ +ನೂ
ಕಿದನು +ರಥವನು +ತನ್ನ +ಸೇನೆಗೆ +ಸೀಗುರಿಯ +ಬೀಸಿ
ಅದಟನ್+ಐತರೆ +ಹೋಗಲ್+ಈಯದೆ
ಮೊದಲ +ಬಾಗಿಲ +ಕಟ್ಟಿಕೊಂಡ್
ಅಗ್ಗದ +ಜಯದ್ರಥ +ಭೀಮನೊಳು +ಬಲು+ಕಾಳೆಗವ +ಹಿಡಿದ

ಅಚ್ಚರಿ:
(೧) ಭೀಮನು ಬಂದ ರೀತಿ – ಗದೆಯ ತಿರುಹುತ ಸಿಂಹನಾದದಲೊದರಿ ಮಗನಾವೆಡೆಯೆನುತ ನೂ
ಕಿದನು ರಥವನು ತನ್ನ ಸೇನೆಗೆ ಸೀಗುರಿಯ ಬೀಸಿ

ಪದ್ಯ ೬೧: ಅಭಿಮನ್ಯುವಿನ ಬಾಣಗಳು ಶತ್ರುಸೈನ್ಯವನ್ನು ಹೇಗೆ ನಾಶಮಾಡಿದವು?

ಭಟ ಛಡಾಳಿಸಿದನು ಘೃತಾಹುತಿ
ಘಟಿಸಿದಗ್ನಿಯವೋಲು ರಣ ಚೌ
ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹನಾದದಲಿ
ನಿಟಿಲನೇತ್ರನ ಕೋಪಶಿಖಿ ಲಟ
ಕಟಿಸುವಂತಿರೆ ಹೆಚ್ಚಿದರಿಬಲ
ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ (ದ್ರೋಣ ಪರ್ವ, ೫ ಸಂಧಿ, ೬೧ ಪದ್ಯ)

ತಾತ್ಪರ್ಯ:
ತುಪ್ಪದ ಆಹುತಿಯಿಮ್ದ ಹೆಚ್ಚುವ ಹೋಮಾಗ್ನಿಯಂತೆ ಅಭಿಮನ್ಯುವಿನ ಪರಾಕ್ರಮ ವರ್ಧಿಸಿತು. ಶಿವನ ಹಣೆಯ ನೇತ್ರದ ಅಗ್ನಿ ಛಟಛಟಿಸುವಂತೆ, ಶತ್ರು ಸೈನ್ಯವೆಂಬ ಕಾಡನ್ನು ಅಭಿಮನ್ಯುವಿನ ಬಾಣಗಳು ನಾಶಮಾಡಿದವು.

ಅರ್ಥ:
ಭಟ: ಸೈನಿಕ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಘೃತ: ತುಪ್ಪ, ಆಜ್ಯ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಘಟಿಸು: ಸಂಭವಿಸು; ಅಗ್ನಿ: ಬೆಂಕಿ; ರಣ: ಯುದ್ಧ; ಚೌಪಟ: ನಾಲ್ಕು ಪಟ್ಟು; ಚತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಹೊಕ್ಕು: ಸೇರು; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ; ನಿಟಿಲ: ಹಣೆ, ಫಾಲ; ನೇತ್ರ: ಕಣ್ಣು; ಕೋಪ: ಕ್ರೋಧ; ಶಿಖಿ: ಬೆಂಕಿ; ಲಟಕಟ: ಉದ್ರೇಕಗೊಳ್ಳು; ಹೆಚ್ಚು: ಅಧಿಕ; ಅಟವಿ: ಕಾಡು; ಸವರಿಸು: ನಾಶಮಾದು; ಕುಮಾರ: ಮಗ; ಶರ: ಬಾಣ; ಜಾಲ: ಸಮೂಹ;

ಪದವಿಂಗಡಣೆ:
ಭಟ +ಛಡಾಳಿಸಿದನು +ಘೃತ+ಆಹುತಿ
ಘಟಿಸಿದ್+ಅಗ್ನಿಯವೋಲು +ರಣ +ಚೌ
ಪಟ +ಚತುರ್ಬಲದೊಳಗೆ +ಹೊಕ್ಕನು +ಸಿಂಹನಾದದಲಿ
ನಿಟಿಲನೇತ್ರನ +ಕೋಪ+ಶಿಖಿ +ಲಟ
ಕಟಿಸುವಂತಿರೆ+ ಹೆಚ್ಚಿದ್+ಅರಿ+ಬಲದ್
ಅಟವಿಯನು +ಸವರಿದುದು +ಪಾರ್ಥಕುಮಾರ +ಶರಜಾಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಟ ಛಡಾಳಿಸಿದನು ಘೃತಾಹುತಿ ಘಟಿಸಿದಗ್ನಿಯವೋಲು; ನಿಟಿಲನೇತ್ರನ ಕೋಪಶಿಖಿ ಲಟಕಟಿಸುವಂತಿರೆ

ಪದ್ಯ ೩೬: ಭೀಮ ಸುಪ್ರತೀಕ ಗಜದ ಮಧ್ಯೆ ಹೇಗೆ ಯುದ್ಧ ನಡೆಯಿತು?

ಹೊಯ್ದು ಹಿಂಗದ ಮುನ್ನ ಭೀಮನ
ಕೈದುಡುಕಿದರೆ ಮುರಿದು ಹಿಂದಕೆ
ಹಾಯ್ದಡೊಡೆಮುರಿಯಿತ್ತು ಕುಸಿದರೆ ಕಾಲೊಳೊಡೆಯವುಚಿ
ಮೈದೆಗೆದರಿಟ್ಟಣಿಸಿ ಪೂತ್ಕೃತಿ
ಗೈದು ಸುಭಟನ ಸಿಂಹನಾದಕೆ
ಮುಯ್ದೆಗೆದು ಕರಿ ಕಾದುತಿರ್ದುದು ಭೀಮಸೇನನಲಿ (ದ್ರೋಣ ಪರ್ವ, ೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ಭೀಮನು ಸುಪ್ರತೀಕ ಗಜವನ್ನು ಹೊಡೆದು ಹಿಂದಕ್ಕೆ ಹೋಗುವ ಮೊದಲು ಅದು ಅವನ ಕೈ ತುಡುಕಿತು. ಭೀಮನು ಹಿಮ್ದಕ್ಕೆ ಹೋದರೆ ಜೊತೆಗೇ ನುತ್ತಿತು. ಭೀಮನು ಕುಸಿದರೆ ಅದು ಕಾಲಲ್ಲಿ ಮೆಟ್ಟಿತು, ಹಿಂದಕ್ಕೆ ಸರಿದರೆ ಅಟ್ಟಿ ಬಂತು, ಭೀಮನು ಸಿಂಹನಾದ ಮಾಡಿದರೆ ಅದೂ ಪೂತ್ಕೃತಿ ಮಾಡಿತು.

ಅರ್ಥ:
ಹೊಯ್ದು: ಹೊಡೆ; ಹಿಂಗು: ಕಡಿಮೆಯಾಗು; ಮುನ್ನ: ಮೊದಲು; ಕೈ: ಹಸ್ತ; ತುಡುಕು: ಬೇಗನೆ ಹಿಡಿ, ಹೋರಾಡು, ಸೆಣಸು; ಮುರಿ: ಸೀಳು; ಹಿಂದೆ: ಹಿಂಭಾಗ; ಒಡೆ: ಸೀಳು, ಬಿರಿ; ಸೀಳು: ಮುರಿ; ಕುಸಿ: ಬೀಳು; ಕಾಲು: ಪಾದ; ಅವುಚು: ಹಿಸುಕು; ಮೈ: ತನು, ದೇಹ; ತೆಗೆ: ಈಚೆಗೆ ತರು; ಅಟ್ಟಣಿಸು: ಹಿಂಬಾಲಿಸು; ಪೂತು: ಭಲೇ, ಭೇಷ್; ಸುಭಟ: ಪರಾಕ್ರಮಿ; ಸಿಂಹ: ಕೇಸರಿ; ನಾದ: ಶಬ್ದ; ಸಿಂಹನಾದ: ಗರ್ಜನೆ; ಮುಯ್: ಭುಜ; ಕರಿ: ಆನೆ; ಕಾದು: ಹೋರಾದು;

ಪದವಿಂಗಡಣೆ:
ಹೊಯ್ದು +ಹಿಂಗದ +ಮುನ್ನ +ಭೀಮನ
ಕೈ+ತುಡುಕಿದರೆ +ಮುರಿದು +ಹಿಂದಕೆ
ಹಾಯ್ದಡ್+ಒಡೆ+ಮುರಿಯಿತ್ತು +ಕುಸಿದರೆ+ ಕಾಲೊಳ್+ಒಡೆ+ಅವುಚಿ
ಮೈ+ತೆಗೆದರ್+ಅಟ್ಟಣಿಸಿ +ಪೂತ್ಕೃತಿ
ಗೈದು +ಸುಭಟನ+ ಸಿಂಹನಾದಕೆ
ಮುಯ್ದೆಗೆದು+ ಕರಿ+ ಕಾದುತಿರ್ದುದು +ಭೀಮಸೇನನಲಿ

ಅಚ್ಚರಿ:
(೧) ಸಿಂಹನಾದ, ಪೂತ್ಕೃತಿ – ಪದಗಳ ಬಳಕೆ
(೨) ತುಡುಕು, ಕುಸಿ, ಅವುಚಿ, ಅಟ್ಟಣಿಸಿ, ಹೊಯ್ದು – ಹೋರಾಟವನ್ನು ತಿಳಿಸುವ ಪದಗಳು

ಪದ್ಯ ೩೪: ಭೀಮನ ಬಾಹುಬಲ ಎಂತಹುದು?

ಭುಜದ ಸಾಹಸ ಹತ್ತು ಸಾವಿರ
ಗಜದ ಘಾಡಿಕೆ ಸಿಂಹನಾದದ
ವಿಜಯ ವಿಗ್ರಹ ವೀರ ಹಳಚಿದನಮಮ ಮದಕರಿಯ
ತ್ರಿಜಗ ತಲೆಕೆಳಗಾಗೆ ದಿವಿಜ
ವ್ರಜ ಭಯಂಗೊಳೆ ಮಿಕ್ಕು ಸುರಪನ
ಗಜದ ಹೊಯ್ಕೈಯ್ಯಾನೆ ಹೆಣಗಿತು ಭೀಮಸೇನನಲಿ (ದ್ರೋಣ ಪರ್ವ, ೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹತ್ತು ಸಾವಿರ ಆನೆಗಳ ಬಲಕ್ಕೆ ಸಮವಾದ ತೋಳ್ಬಲವುಳ್ಳ ಭೀಮನು ಸಿಂಹನಾದಮಾಡುತ್ತಾ ಆನೆಯೊಂದಿಗೆ ಕಾದಿದನು. ಇಂದ್ರನ ಐರಾವತಕ್ಕೆ ಸರಿಮಿಗಿಲಾದ ಸುಪ್ರತೀಕವು ಭೀಮನೊಡನೆ ಹೋರಾಡಿತು.

ಅರ್ಥ:
ಭುಜ: ಬಾಹು; ಸಾಹಸ: ಪರಾಕ್ರಮ; ಸಾವಿರ: ಸಹಸ್ರ; ಗಜ: ಆನೆ; ಘಾಡಿಸು: ವ್ಯಾಪಿಸು; ಸಿಂಹನಾದ: ಗರ್ಜನೆ; ನಾದ: ಶಬ್ದ; ಸಿಂಹ: ಕೇಸರಿ; ವಿಜಯ: ಗೆಲುವು; ವಿಗ್ರಹ: ಯುದ್ಧ; ಹಳಚು: ತಾಗು, ಬಡಿ; ಅಮಮ: ಅಬ್ಬಬ್ಬ; ಮದ: ಅಮಲು, ಮತ್ತು; ಕರಿ: ಆನೆ; ತ್ರಿಜಗ: ಮೂರು ಲೋಕ; ತಲೆ: ಶಿರ; ದಿವಿಜ: ದೈವ; ವ್ರಜ: ಗುಂಪು; ಭಯ: ಅಂಜಿಕೆ; ಮಿಕ್ಕು: ಉಳಿದ; ಸುರಪ: ಇಂದ್ರ; ಗಜ: ಆನೆ; ಸುರಪನಗಜ: ಐರಾವತ; ಹೊಯ್: ಹೊಡೆ; ಹೆಣಗು: ಹೋರಾಡು; ಹೊಯ್ಕೈ: ಸಮಾನ;

ಪದವಿಂಗಡಣೆ:
ಭುಜದ+ ಸಾಹಸ +ಹತ್ತು +ಸಾವಿರ
ಗಜದ +ಘಾಡಿಕೆ +ಸಿಂಹನಾದದ
ವಿಜಯ +ವಿಗ್ರಹ +ವೀರ +ಹಳಚಿದನ್+ಅಮಮ +ಮದಕರಿಯ
ತ್ರಿಜಗ+ ತಲೆಕೆಳಗಾಗೆ+ ದಿವಿಜ
ವ್ರಜ +ಭಯಂಗೊಳೆ +ಮಿಕ್ಕು +ಸುರಪನ
ಗಜದ +ಹೊಯ್ಕೈ+ ಆನೆ +ಹೆಣಗಿತು +ಭೀಮಸೇನನಲಿ

ಅಚ್ಚರಿ:
(೧) ಭೀಮನ ಶಕ್ತಿ – ಭುಜದ ಸಾಹಸ ಹತ್ತು ಸಾವಿರ ಗಜದ ಘಾಡಿಕೆ
(೨) ಭುಜದ, ಗಜದ – ಪ್ರಾಸ ಪದ

ಪದ್ಯ ೩೩: ಭೀಮನು ಸುಪ್ರತೀಕವನ್ನು ಹೇಗೆ ಕೆರಳಿಸಿದನು?

ಬಿನುಗುಗಳ ತೆಗೆ ಭೀಮಸೇನನ
ಮೊನೆಗೆ ಬಿಡು ಬಿಡು ಗಜವನೆಮ್ದು
ಬ್ಬಿನಲಿ ತಿರುಹಿದನಾನೆಯನು ಪವನಜನ ಸಮ್ಮುಖಕೆ
ಧನುವ ಬಿಸುಟನು ಗದೆಯ ತುಡುಕಿದ
ನನುವರದೊಳಡ್ಡೈಸಿ ದಂತಿಯ
ಕನಲಿಸಿದನೊಳಹೊಕ್ಕು ಹೊಯ್ದನು ಸಿಂಹನಾದದಲಿ (ದ್ರೋಣ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಜೊಳ್ಳುಗಳ ಸುದ್ದಿಬೇಡ, ಭೀಮನ ಸಮ್ಮುಖಕ್ಕೆ ಆನೆಯನ್ನು ಬಿಡು ಎಂದು ಮಾವುತನಿಗೆ ಭಗದತ್ತನು ಹೇಳಿ, ಭೀಮನೆದುರಿಗೆ ಬಂದು ನಿಂತನು. ಭೀಮನು ಬಿಲ್ಲನ್ನು ಎಸೆದು ಗದೆಯನ್ನು ಹಿಡಿದು, ಸುಪ್ರತೀಕವನ್ನು ತಡೆದು ಒಳಹೊಕ್ಕು ಸಿಂಹಗರ್ಜನೆಯನ್ನು ಮಾಡಿ ಅದನ್ನು ಕೆರಳಿಸಿದನು.

ಅರ್ಥ:
ಬಿನುಗು: ಅಲ್ಪವ್ಯಕ್ತಿ; ತೆಗೆ: ಹೊರತರು; ಮೊನೆ: ತುದಿ, ಕೊನೆ; ಬಿಡು: ತ್ಯಜಿಸು; ಗಜ: ಆನೆ; ಉಬ್ಬು: ಹೆಚ್ಚು; ತಿರುಹು: ತಿರುಗಿಸು; ಆನೆ: ಗಜ; ಪವನಜ: ಭಿಮ; ಸಮ್ಮುಖ: ಎದುರು; ಧನು: ಬಿಲ್ಲು, ಧನುಸ್ಸು; ಬಿಸುಟು: ಹೊರಹಾಕು; ಗದೆ: ಮುದ್ಗರ; ತುಡುಕು: ಹೋರಾಡು, ಸೆಣಸು; ಅನುವರ: ಯುದ್ಧ; ಅಡ್ಡೈಸು: ಅಡ್ಡಬಂದು; ದಂತಿ: ಆನೆ; ಕನಲು: ಸಿಟ್ಟಿಗೇಳು; ಹೊಕ್ಕು: ಸೇರು; ಹೊಯ್ದ: ಹೊಡೆ; ಸಿಂಹ: ಕೇಸರಿ; ನಾದ: ಶಬ್ದ;

ಪದವಿಂಗಡಣೆ:
ಬಿನುಗುಗಳ +ತೆಗೆ +ಭೀಮಸೇನನ
ಮೊನೆಗೆ +ಬಿಡು +ಬಿಡು +ಗಜವನೆಂದ್
ಉಬ್ಬಿನಲಿ +ತಿರುಹಿದನ್+ಆನೆಯನು +ಪವನಜನ +ಸಮ್ಮುಖಕೆ
ಧನುವ +ಬಿಸುಟನು +ಗದೆಯ +ತುಡುಕಿದನ್
ಅನುವರದೊಳ್+ಅಡ್ಡೈಸಿ +ದಂತಿಯ
ಕನಲಿಸಿದನ್+ಒಳಹೊಕ್ಕು +ಹೊಯ್ದನು +ಸಿಂಹ+ನಾದದಲಿ

ಅಚ್ಚರಿ:
(೧) ಭೀಮನು ಸುಪ್ರತೀಕವನ್ನು ಎದುರಿಸಿದ ಪರಿ – ಅನುವರದೊಳಡ್ಡೈಸಿ ದಂತಿಯ ಕನಲಿಸಿದನೊಳಹೊಕ್ಕು ಹೊಯ್ದನು ಸಿಂಹನಾದದಲಿ

ಪದ್ಯ ೩೪: ಅರ್ಜುನನು ಹೇಗೆ ಯುದ್ಧಕ್ಕನುವಾದನು?

ರಣಕೆ ತವಕಿಸಿ ಬಳಿಕ ತಾಗುವ
ಕಣಿಯ ದಾಳಿಗೆ ತಳ್ಳುವಾರುವ
ಗುಣವಿದೆಂತುಟೊ ಭಂಡರಿವದಿರ ಹೋಗಹೇಳೆನುತ
ಕೆಣಕಿದನು ಬಿಲುದಿರುವನುರು ಮಾ
ರ್ಗಣದ ಹೊದೆಗಳ ಕೆದರಿ ಸಮರಾಂ
ಗಣಕೆ ಸಮ್ಮುಖನಾದನರ್ಜುನ ಸಿಂಹನಾದದಲಿ (ಭೀಷ್ಮ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಯುದ್ಧಕ್ಕೆ ತವಕದಿಂದ ಬಂದು, ಬಾಣಗಳ ಹೊಡೆತಕ್ಕೆ ಹೆದರಿ ಓಡಿಹೋಗುವುದು ಇದೆಂತಹ ಕುದುರೆಯಂತಹ ಗುಣ! ಈ ಭಂಡರು ಹೋಗಲಿ ಕಳಿಸಿ ಬಿಡು ಎನ್ನುತ್ತಾ ಅರ್ಜುನನು ತನ್ನ ಗಾಂಡೀವ ಬಿಲ್ಲಿನ ಹೆದೆಯನ್ನು ನುಡಿಸಿ, ಸಿಂಹಗರ್ಜನೆ ಮಾಡಿ ಬಾಣಗಳನ್ನು ಹಿಡಿದು ಯುದ್ಧಕ್ಕನುವಾದನು.

ಅರ್ಥ:
ರಣ: ರಣರಂಗ; ತವಕ: ಬಯಕೆ, ಆತುರ; ಬಳಿಕ: ನಂತರ; ತಾಗು: ಎದುರಿಸು, ಮೇಲೆ ಬೀಳು; ಕಣಿ: ನೋಟ, ನೆಲೆ; ದಾಳಿ: ಆಕ್ರಮಣ; ತಳ್ಳು: ನೂಕು; ವಾರುವ: ಕುದುರೆ; ಗುಣ: ನಡತೆ; ಭಂಡ: ನಾಚಿಕೆ ಇಲ್ಲದವನು; ಇವದಿರು: ಇಷ್ಟು ಜನ; ಹೋಗು: ತೆರಳು, ಗಮಿಸು; ಹೇಳು: ತಿಳಿಸು; ಕೆಣಕು: ರೇಗಿಸು; ಬಿಲು: ಬಿಲ್ಲು; ಉರು: ಹೆಚ್ಚು; ಮಾರ್ಗಣ: ಬಾಣ, ಅಂಬು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಕೆದರು: ಹರಡು; ಸಮರಾಂಗಣ: ಯುದ್ಧರಂಗ, ರಣರಣ್ಗ; ಸಮ್ಮುಖ: ಎದುರು; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ;

ಪದವಿಂಗಡಣೆ:
ರಣಕೆ +ತವಕಿಸಿ +ಬಳಿಕ +ತಾಗುವ
ಕಣಿಯ +ದಾಳಿಗೆ +ತಳ್ಳು+ವಾರುವ
ಗುಣವ್+ಇದೆಂತುಟೊ +ಭಂಡರ್+ಇವದಿರ +ಹೋಗ+ಹೇಳೆನುತ
ಕೆಣಕಿದನು +ಬಿಲುದಿರುವನ್+ಉರು +ಮಾ
ರ್ಗಣದ +ಹೊದೆಗಳ +ಕೆದರಿ +ಸಮರಾಂ
ಗಣಕೆ +ಸಮ್ಮುಖನಾದನ್+ಅರ್ಜುನ +ಸಿಂಹನಾದದಲಿ

ಅಚ್ಚರಿ:
(೧) ಸೈನಿಕರ ಗುಣವನ್ನು ಹೋಲಿಸುವ ಪರಿ – ರಣಕೆ ತವಕಿಸಿ ಬಳಿಕ ತಾಗುವ ಕಣಿಯ ದಾಳಿಗೆ ತಳ್ಳುವಾರುವ
ಗುಣವಿದೆಂತುಟೊ