ಸೈರಿಸಿದರೇ ಪಾಂಡುಸುತರಂ
ಭೋರುಹಾಕ್ಷಿ ರಜಸ್ವಲೆಯ ಸುಲಿ
ಸೀರೆಯಲಿ ತತ್ಪೂರ್ವಕೃತ ಜತುಗೇಹದಾಹದಲಿ
ವೈರಬಂಧದ ವಿವಿಧ ವಿಷಮ ವಿ
ಕಾರದಲಿ ವಿರ್ಗ್ರಹಮುಖವ ವಿ
ಸ್ತಾರಿಸಿದರೇ ಪಾಂಡುಸುತರುತ್ತಮರೆ ಹೇಳೆಂದ (ಗದಾ ಪರ್ವ, ೧೧ ಸಂಧಿ, ೪ ಪದ್ಯ)
ತಾತ್ಪರ್ಯ:
ಅದನ್ನ್ ಪಾಂಡವರು ಸೈರಿಸಿದರೇ? ರಜಸ್ವದ ಅಲೆಯಾದ ದ್ರೌಪದಿಯ ಸೀರೆಯನ್ನು ಸುಲಿದಾಗ ಅದಕ್ಕೂ ಮೊದಲು ಅರಗಿನ ಮನೆಯನ್ನು ಸುಟ್ಟಾಗ, ವೈರವನ್ನು ವಿವಿಧ ರೀತಿಗಳಲ್ಲಿ ವ್ಯಕ್ತಪಡಿಸಿದಾಗ ಅವರು ಸೈರಿಸಲಿಲ್ಲವೇ? ಯುದ್ಧಕ್ಕೆ ಬಂದರೇ? ಪಾಂಡವರು ಉತ್ತಮರೇ? ಹೇಳು ಎಂದು ವ್ಯಾಸರು ಕೇಳಿದರು.
ಅರ್ಥ:
ಸೈರಿಸು: ತಾಳು, ಸಹಿಸು; ಸುತ: ಮಕ್ಕಳು; ಅಂಬೋರುಹ: ಕಮಲ; ಅಕ್ಷಿ: ಕಣ್ಣು; ರಜ: ಮೂರು ಗುಣಗಳಲ್ಲಿ ಒಂದು; ಅಲೆ: ತೆರೆ; ಸುಲಿ: ತೆಗೆ, ಕಳಚು; ಸೀರೆ: ಬಟ್ಟೆ; ಪೂರ್ವ: ಹಿಂದಿನ; ಕೃತ: ಕೆಲಸ; ಜತು: ಅರಗು, ಲಾಕ್ಷ; ಗೇಹ: ಮನೆ; ದಾಹ: ಉರಿ, ಕಿಚ್ಚು; ವೈರ: ಶತ್ರು; ಬಂಧ: ಕಟ್ಟು, ಬಂಧನ; ವಿವಿಧ: ಹಲವರು; ವಿಷಮ: ಸಮವಾಗಿಲ್ಲದಿರುವುದು, ಕಷ್ಟ ಪರಿಸ್ಥಿತಿ; ವಿಕಾರ: ಮಾರ್ಪಾಟು; ವಿಗ್ರಹ: ರೂಪ; ಯುದ್ಧ; ಮುಖ: ಆನನ; ವಿಸ್ತಾರಿಸು: ಹರಡು; ಸುತ: ಮಗ; ಉತ್ತಮ: ಶ್ರೇಷ್ಠ; ಹೇಳು: ತಿಳಿಸು;
ಪದವಿಂಗಡಣೆ:
ಸೈರಿಸಿದರೇ+ ಪಾಂಡುಸುತರ್
ಅಂಭೋರುಹಾಕ್ಷಿ+ ರಜಸ್ವಲೆಯ+ ಸುಲಿ
ಸೀರೆಯಲಿ +ತತ್ಪೂರ್ವ+ಕೃತ +ಜತುಗೇಹ+ದಾಹದಲಿ
ವೈರಬಂಧದ +ವಿವಿಧ +ವಿಷಮ +ವಿ
ಕಾರದಲಿ +ವಿಗ್ರಹ+ಮುಖವ+ ವಿ
ಸ್ತಾರಿಸಿದರೇ+ ಪಾಂಡುಸುತರ್+ಉತ್ತಮರೆ +ಹೇಳೆಂದ
ಅಚ್ಚರಿ:
(೧) ದ್ರೌಪದಿಯನ್ನು ಅಂಭೋರುಹಾಕ್ಷಿ ಎಂದು ಕರೆದಿರುವುದು
(೨) ವ ಕಾರದ ಸಾಲು ಪದ – ವೈರಬಂಧದ ವಿವಿಧ ವಿಷಮ ವಿಕಾರದಲಿ ವಿರ್ಗ್ರಹಮುಖವ ವಿಸ್ತಾರಿಸಿದರೇ