ಕೆಡಹಿ ದುರ್ಯೋಧನನ ತಮ್ಮನ
ನಡಗುದರಿ ಮಾಡಿದನುಳೂಕನ
ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ
ತುಡುಕಿದನು ಸಹದೇವನಂಬಿನ
ಗಡಣದಲಿ ಸೌಬಲನ ಸೇನೆಯ
ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ (ಗದಾ ಪರ್ವ, ೨ ಸಂಧಿ, ೨೫ ಪದ್ಯ)
ತಾತ್ಪರ್ಯ:
ಭೀಮನು ದುರ್ಯೋಧನನ ತಮ್ಮ ಸುದರ್ಶನನ ಮಾಂಸಖಂಡಗಳನ್ನು ತರಿದು ಕೊಂದನು. ನಕುಲನು ಇಪ್ಪತ್ತೈದು ಬಾಣಗಳಿಂದ ಉಲೂಕನನ್ನು ಸಂಹರಿಸಿದನು. ಸಹದೇವನು ಬಾಣಗಳ ಮೊಳಗಿನಿಂದ ಶಕುನಿಯ ಸೈನ್ಯವನ್ನು ಚಚ್ಚಿ ಸಂಹರಿಸಿದನು.
ಅರ್ಥ:
ಕೆಡಹು: ಬೀಳಿಸು; ತಮ್ಮ: ಸಹೋದರ; ಅಡಗು: ಮಾಂಸ; ಉದರು: ಹರಡು; ಉಳೂಕ: ಗೂಬೆ; ಕಡಿ: ಸೀಲು; ಬಿಸುಟು: ಹೊರಹಾಕು; ಬಾಣ: ಅಂಬು, ಶರ; ತುಡುಕು: ಹೋರಾಡು, ಸೆಣಸು; ಅಂಬು: ಬಾಣ; ಗಡಣ: ಗುಂಪು; ಸೌಬಲ: ಶಕುನಿ; ಸೇನೆ: ಸೈನ್ಯ; ಕಡಲ: ಸಾಗರ; ಮೊಗೆ: ತುಂಬಿಕೊಳ್ಳು, ಬಾಚು; ಮೋದು: ಪೆಟ್ಟು, ಹೊಡೆತ; ಶರಜಾಲ: ಬಾಣಗಳ ಗುಂಪು; ಝಂಕಿಸು: ಆರ್ಭಟಿಸು;
ಪದವಿಂಗಡಣೆ:
ಕೆಡಹಿ+ ದುರ್ಯೋಧನನ +ತಮ್ಮನನ್
ಅಡಗ್+ಉದರಿ +ಮಾಡಿದನ್+ಉಳೂಕನ
ಕಡಿದು +ಬಿಸುಟನು +ನಕುಲನ್+ಇಪ್ಪತ್ತೈದು +ಬಾಣದಲಿ
ತುಡುಕಿದನು +ಸಹದೇವನ್+ಅಂಬಿನ
ಗಡಣದಲಿ +ಸೌಬಲನ +ಸೇನೆಯ
ಕಡಲ +ಮೊಗೆದನು +ಮೋದಿದನು +ಶರಜಾಲ +ಝಂಕೃತಿಯ
ಅಚ್ಚರಿ:
(೧) ರೌದ್ರತೆಯ ವರ್ಣನೆ – ಕೆಡಹಿ ದುರ್ಯೋಧನನ ತಮ್ಮನನಡಗುದರಿ ಮಾಡಿದನು