ಪದ್ಯ ೩೭: ಶಲ್ಯನ ದಾಳಿಯು ಹೇಗಿತ್ತು?

ದಳಪತಿಯ ದುವ್ವಾಳಿ ಪಾಂಡವ
ಬಲವ ಕೆದರಿತು ಕಲ್ಪಮೇಘದ
ಹೊಲಿಗೆ ಹರಿದವೊಲಾಯ್ತು ಮಾದ್ರೇಶ್ವರನ ಶರಜಾಲ
ಅಳುಕದಿರಿ ಬದ್ದರದ ಬಂಡಿಯ
ನಿಲಿಸಿ ಹರಿಗೆಯ ಪಾಠಕರು ಕೈ
ಕೊಳಲಿ ಮುಂದಣ ನೆಲನನೆನುತುಬ್ಬರಿಸಿತರಿಸೇನೆ (ದ್ರೋಣ ಪರ್ವ, ೨ ಸಂಧಿ ೩೭ ಪದ್ಯ)

ತಾತ್ಪರ್ಯ:
ಶಲ್ಯನ ದಾಳಿಯಿಂದ ಪಾಂಡವ ಸೇನೆ ಚದುರಿತು. ಕಲ್ಪಾಂತದ ಮೋಡದ ಹೊಲಿಗೆ ಹರಿದು ಬೀಳುವ ಮಳೆಯಂತೆ ಶಲ್ಯನ ಬಾಣಗಳು ಸುರಿದವು. ವೈರಿಸೇನೆಯು ಹೆದರ ಬೇಡಿ ಬದ್ದರದ ಬಂಡಿಗಳನ್ನು ನಡುವೆ ನಿಲ್ಲಿಸಿ, ಗುರಾಣಿಯನ್ನು ಹಿಡಿದವರು, ಪಾಠಕರು ದಳಪತಿಯ ಮುಂದೆ ನಿಲ್ಲಲಿ ಎಂದು ವೈರಿಸೇನೆ ಸಂಭ್ರಮಿಸಿತು.

ಅರ್ಥ:
ದಳಪತಿ: ಸೇನಾಧಿಪತಿ; ದುವ್ವಾಳಿ: ತೀವ್ರಗತಿ, ವೇಗವಾದ ನಡೆ; ಬಲ: ಸೈನ್ಯ; ಕೆದರು: ಹರಡು; ಕಲ್ಪ: ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಮೇಘ: ಮೋಡ; ಹೊಲಿಗೆ: ಸಂಬಂಧ, ಹೊಂದಾಣಿಕೆ, ಹೊಲಿಯುವಿಕೆ; ಹರಿ: ಚೆದರು; ಶರ: ಬಾಣ; ಜಾಲ: ಗುಂಪು; ಅಳುಕು: ಹೆದರು; ಬದ್ಧರ: ಆತ್ಮರಕ್ಷಣಾರ್ಥವಾಗಿ ಬಳಸುತ್ತಿದ್ದ ಒಂದು ಬಗೆಯ ಉಪಕರಣ; ಬಂಡಿ: ರಥ; ನಿಲಿಸು: ತಡೆ; ಹರಿಗೆ: ತಲೆಪೆರಿಗೆ; ಪಾಠಕ: ಹೊಗಳುಭಟ್ಟ; ಮುಂದಣ: ಮುಂಚೆ; ನೆಲ: ಭೂಮಿ; ಉಬ್ಬು: ಅತಿಶಯ; ಅರಿ: ವೈರಿ;

ಪದವಿಂಗಡಣೆ:
ದಳಪತಿಯ+ ದುವ್ವಾಳಿ +ಪಾಂಡವ
ಬಲವ +ಕೆದರಿತು +ಕಲ್ಪ+ಮೇಘದ
ಹೊಲಿಗೆ +ಹರಿದವೊಲಾಯ್ತು +ಮಾದ್ರೇಶ್ವರನ+ ಶರಜಾಲ
ಅಳುಕದಿರಿ +ಬದ್ದರದ +ಬಂಡಿಯ
ನಿಲಿಸಿ +ಹರಿಗೆಯ +ಪಾಠಕರು +ಕೈ
ಕೊಳಲಿ +ಮುಂದಣ +ನೆಲನನ್+ಎನುತ್+ಉಬ್ಬರಿಸಿತ್+ಅರಿಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪಾಂಡವ ಬಲವ ಕೆದರಿತು ಕಲ್ಪಮೇಘದ ಹೊಲಿಗೆ ಹರಿದವೊಲಾಯ್ತು

ಪದ್ಯ ೪: ಪಾಂಡವರು ಯುದ್ಧಕ್ಕೆ ಹೇಗೆ ತಯಾರಾದರು?

ಗಜಕೆ ಗುಳವನು ಬೀಸಿ ವಾಜಿ
ವ್ರಜವ ಹಲ್ಲಣಿಸಿದರು ಗಾಲಿಯ
ಗಜರು ಘೀಳಿಡೆ ನೊಗನ ಹೆಗಲಲಿ ಕುಣಿದವಶ್ವಚಯ
ಭುಜದ ಹೊಯ್ಲಿನ ಹರಿಗೆಗಳ ಗಜ
ಬಜದ ಬಿಲುಜೇವಡೆಯ ರವದ
ಕ್ಕಜದ ಕಾಲಾಳೊದಗಿತವನೀಪತಿಯ ಸನ್ನೆಯಲಿ (ಶಲ್ಯ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ಆನೆಗಳಿಗೆ ಕವಚವನ್ನು ಬೀಸಿ, ಕುದುರೆಗಳಿಗೆ ತಡಿಯನ್ನು ಹಾಕಿ, ರಥದ ಗಾಲಿಗಳು ಸದ್ದುಮಾಡಲು, ನೊಗವನ್ನು ಹೊತ್ತ ಕುದುರೆಗಳು ಕುಣಿದವು. ಭುಜವನ್ನು ತಟ್ಟಿ ಗುರಾಣಿಗಳ ಮರೆ ಹಿಡಿದು ಕೆಲಪದಾತಿಗಳು, ಬಿಲ್ಲನ್ನು ಜೀವಡೆಯುವ ಪದಾತಿ ಬಿಲ್ಲುಗಾರರು ಕೆಲವರು ದೊರೆಯ ಸನ್ನೆಯಂತೆ ಮುನ್ನುಗ್ಗಿದರು.

ಅರ್ಥ:
ಗಜ: ಆನೆ; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಬೀಸು: ಬೀಸುವಿಕೆ, ತೂಗುವಿಕೆ; ಹಲ್ಲಣ: ಪಲ್ಲಣ, ಜೀನು, ತಡಿ; ಗಾಲಿ: ಚಕ್ರ; ಘೀಳಿಡು: ಅರಚು; ನೊಗ: ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ಹೆಗಲು: ಭುಜ; ಕುಣಿ: ನರ್ತಿಸು; ಅಶ್ವ: ಕುದುರೆ; ಚಯ: ಗುಂಪು; ಭುಜ: ಬಾಹು; ಹೊಯ್ಲು: ಏಟು, ಹೊಡೆತ; ಹರಿಗೆ: ಚಿಲುಮೆ; ಗಜಬಜ: ಗೊಂದಲ; ಜೇವಡೆ: ಬಿಲ್ಲಿಗೆ ಹೆದೆಯೇರಿಸಿ ಮಾಡುವ ಧ್ವನಿ, ಧನುಷ್ಟಂಕಾರ; ಬಿಲು: ಬಿಲ್ಲು, ಚಾಪ; ರವ: ಶಬ್ದ; ಕಾಲಾಳು: ಸೈನಿಕ; ಒದಗು: ಹೊಂದು; ಅವನೀಪತಿ: ರಾಜ; ಸನ್ನೆಯ: ಗುರುತು;

ಪದವಿಂಗಡಣೆ:
ಗಜಕೆ +ಗುಳವನು +ಬೀಸಿ +ವಾಜಿ
ವ್ರಜವ+ ಹಲ್ಲಣಿಸಿದರು +ಗಾಲಿಯ
ಗಜರು +ಘೀಳಿಡೆ +ನೊಗನ +ಹೆಗಲಲಿ +ಕುಣಿದವ್+ಅಶ್ವ+ಚಯ
ಭುಜದ +ಹೊಯ್ಲಿನ +ಹರಿಗೆಗಳ +ಗಜ
ಬಜದ +ಬಿಲು+ಜೇವಡೆಯ +ರವದಕ್ಕ್
ಗಜದ ಕಾಲಾಳೊದಗಿತ್+ಅವನೀಪತಿಯ+ ಸನ್ನೆಯಲಿ

ಅಚ್ಚರಿ:
ಗಜ, ಭುಜ, ವ್ರಜ, ಗಜಬಜ – ಪ್ರಾಸ ಪದಗಳು

ಪದ್ಯ ೪: ಕೌರವ ಸೈನಿಕರು ಘಟೋತ್ಕಚನನ್ನು ಹೇಗೆ ಆಕ್ರಮಣ ಮಾಡಿದರು?

ಹೊಕ್ಕ ಸುಭಟರು ಮರಳದಿರಿ ಖಳ
ಸಿಕ್ಕಿದನು ಸಿಕ್ಕಿದನು ಚಲಿಸುವ
ಚುಕ್ಕಿಗರ ಹೊಯ್ ಬೀಳಗುತ್ತೆನುತರಸನುಬ್ಬರಿಸೆ
ಹೊಕ್ಕು ತಿವಿದರು ನೀಡಿ ಹರಿಗೆಯ
ನಿಕ್ಕಿ ನಿಂದರು ತಮತಮಗೆ ಮೇ
ಲಿಕ್ಕಿದರು ತೆರೆ ಮುರಿಯೆ ಬಳಿದೆರೆ ಮಸಗಿ ಕವಿವಂತೆ (ದ್ರೋಣ ಪರ್ವ, ೧೬ ಸಂಧಿ, ೪ ಪದ್ಯ)

ತಾತ್ಪರ್ಯ:
ದುರ್ಯೋಧನನು, ಮುಂದೆ ನುಗ್ಗಿದ ಯೋಧರು ಹಿಮ್ಮೆಟ್ಟಬೇಡಿರಿ ರಾಕ್ಷಸನು ಸಿಕ್ಕೇಬಿಟ್ಟ ಸಿಕ್ಕೇಬಿಟ್ಟ, ಹೆದರುವ ಚುಕ್ಕೆಗಳನ್ನು ನೀವೇ ಹೊಡೆದು ಕೆಡವಿರಿ, ಎಂದು ಗರ್ಜಿಸಲು, ಸೈನಿಕರು ಹೊಕ್ಕು ಘಟೋತ್ಕಚನನ್ನು ತಿವಿದರು. ಅವನ ಹೊಡೆತಗಳನ್ನು ಗುರಾಣಿಗಳಿಂದ ತಪ್ಪಿಸಿಕೊಂಡರು. ಒಂದು ತೆರೆಯ ಹಿಂದೆ ಮತ್ತೊಂದು ತರೆ ಮೇಲೆ ಬಂದಮ್ತೆ ಘಟೋತ್ಕಚನ ಮೇಲೆ ನುಗ್ಗಿದರು.

ಅರ್ಥ:
ಹೊಕ್ಕು: ಸೇರು; ಭಟ: ಸೈನಿಕ; ಮರಳು: ಹಿಂದಿರುಗು; ಇರಿ: ಸೀಳು; ಖಳ: ದುಷ್ಟ; ಸಿಕ್ಕು: ತೊಡಕು; ಚಲಿಸು: ನಡೆ; ಚುಕ್ಕಿ: ಬಿಂದು, ಚಿಹ್ನೆ; ಹೊಯ್: ಹೊಡೆ; ಬೀಳು: ಕುಗ್ಗು; ಅರಸ: ರಾಜ; ಉಬ್ಬರಿಸು: ಜೋರು ಮಾಡು; ತಿವಿ: ಸೀಳು; ಹರಿಗೆ: ಚಿಲುಮೆ, ತಲೆಪೆರಿಗೆ; ನಿಂದು: ನಿಲ್ಲು; ತೆರೆ: ತೆಗೆ, ಬಿಚ್ಚು; ಮುರಿ: ಸೀಳು; ಬಳಿ: ಸಾರಿಸು, ಒರೆಸು; ಮಸಗು: ಹರಡು; ಕೆರಳು; ತಿಕ್ಕು; ಕವಿ: ಆವರಿಸು;

ಪದವಿಂಗಡಣೆ:
ಹೊಕ್ಕ +ಸುಭಟರು +ಮರಳದಿರಿ +ಖಳ
ಸಿಕ್ಕಿದನು +ಸಿಕ್ಕಿದನು +ಚಲಿಸುವ
ಚುಕ್ಕಿಗರ +ಹೊಯ್ +ಬೀಳಗುತ್ತೆನುತ್+ಅರಸನ್+ಉಬ್ಬರಿಸೆ
ಹೊಕ್ಕು +ತಿವಿದರು +ನೀಡಿ +ಹರಿಗೆಯನ್
ಇಕ್ಕಿ +ನಿಂದರು +ತಮತಮಗೆ +ಮೇ
ಲಿಕ್ಕಿದರು +ತೆರೆ +ಮುರಿಯೆ +ಬಳಿದೆರೆ +ಮಸಗಿ +ಕವಿವಂತೆ

ಅಚ್ಚರಿ:
(೧) ಸಿಕ್ಕಿ, ಇಕ್ಕಿ, ಮೇಲಿಕ್ಕಿ, ಚುಕ್ಕಿ – ಪ್ರಾಸ ಪದಗಳು

ಪದ್ಯ ೨೧: ಗರ್ಭವ್ಯೂಹಕ್ಕೆ ಯಾರನ್ನು ನೇಮಿಸಿದನು?

ಕೆಲಬಲದ ಸಬಳಿಗರು ಸಬಳದ
ವಳಯದಲಿ ಹರಿಗೆಗಳು ಹರಿಗೆಗ
ಳೊಳಗೆ ಬಿಲ್ಲಾಳುಗಳ ಮರೆಯಲಿ ವಾಜಿ ಗಜರಥವ
ನಿಲಿಸಿ ಗರ್ಭವ್ಯೂಹವನು ಮಂ
ಡಳಿಸಿದನು ಸಂವೀರರನು ಸಿಂ
ಹಳರ ನಿಲಿಸಿದ ಹತ್ತು ಸಾವಿರ ಮಂಡಳೇಶ್ವರರ (ದ್ರೋಣ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅಕ್ಕಪಕ್ಕದಲ್ಲಿ ಈಟಿಯನ್ನು ಆಯುಧವನ್ನಾಗಿಸಿಕೊಂಡಿದ್ದ ಪದಾತಿಗಳು, ವೃತ್ತಾಕಾರದಲ್ಲಿದ್ದರು, ಅದರೊಳಗೆ ಕತ್ತಿಗುರಾಣಿಗಳನ್ನು ಹಿಡಿದವರು, ಗುರಾಣಿಗಳ ಹಿಂದೆ ಬಿಲ್ಲಾಳುಗಳು, ಅವರ ಹಿಂದೆ ಕುದುರೆ ಆನೆ ರಥಗಳು ಹೀಗೆ ಗರ್ಭವ್ಯೂಹವನ್ನು ರಚಿಸಿ ಅಲ್ಲಿ ಸಿಂಹಳ ಸಂವೀರ ದೇಶಗಳ ಹತ್ತು ಸಾವಿರ ಮಂಡಲಾಧಿಪತಿಗಳನ್ನು ನಿಲ್ಲಿಸಿದನು.

ಅರ್ಥ:
ಕೆಲಬಲ: ಅಕ್ಕಪಕ್ಕ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಸಬಳ: ಈಟಿ; ವಳಯ: ವರ್ತುಲ, ಪರಿಧಿ; ಹರಿಗೆ: ಚಿಲುಮೆ; ಬಿಲ್ಲಾಳು: ಬಿಲ್ಲುಗಾರ; ಮರೆ: ಅವಚು; ವಾಜಿ: ಕುದುರೆ; ಗಜ: ಆನೆ; ರಥ: ಬಂಡಿ; ನಿಲಿಸು: ತಡೆ; ವ್ಯೂಹ: ಗುಂಪು, ಸಮೂಹ; ಮಂಡಳ: ವರ್ತುಲಾಕಾರ; ವೀರ: ಶೂರ; ಸಾವಿರ: ಸಹಸ್ರ; ಮಂಡಳೇಶ್ವರ: ಸಾಮಂತ ರಾಜ;

ಪದವಿಂಗಡಣೆ:
ಕೆಲಬಲದ+ ಸಬಳಿಗರು+ ಸಬಳದ
ವಳಯದಲಿ+ ಹರಿಗೆಗಳು+ ಹರಿಗೆಗಳ್
ಒಳಗೆ +ಬಿಲ್ಲಾಳುಗಳ +ಮರೆಯಲಿ +ವಾಜಿ +ಗಜ+ರಥವ
ನಿಲಿಸಿ +ಗರ್ಭವ್ಯೂಹವನು +ಮಂ
ಡಳಿಸಿದನು +ಸಂವೀರರನು +ಸಿಂ
ಹಳರ+ ನಿಲಿಸಿದ +ಹತ್ತು +ಸಾವಿರ +ಮಂಡಳೇಶ್ವರರ

ಅಚ್ಚರಿ:
(೧) ಪದಗಳ ಬಳಕೆ – ಸಬಳಿಗರು ಸಬಳದ; ಹರಿಗೆಗಳು ಹರಿಗೆಗ; ಸಂವೀರರನು ಸಿಂಹಳರ

ಪದ್ಯ ೪೪: ಅರ್ಜುನನ ಮುಂದೆ ಯಾವ ಸೈನ್ಯವನ್ನು ನಿಲ್ಲಿಸಿದರು?

ಕೋಲ ಕೋಳಾಹಳಕೆ ಸೈರಿಸ
ದಾಳ ನಾಯಕವಾಡಿ ಹರಿಗೆಯ
ಹೇಳಿದರು ಚಾಚಿದರು ಬಲುಬದ್ಧರದ ಬಂಡಿಗಳ
ಹೂಳೆ ಬೀಸಿದ ಗುಳದ ಕರಿಗಳ
ಹೇಳಿದರು ಬಲ ಮುರಿದಡಾಚೆಗೆ
ಮೇಲೆ ನಾವಿಹೆವೆಂದು ನಿಂದರು ಗುರುಸುತಾದಿಗಳು (ಭೀಷ್ಮ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅರ್ಜುನನ ಹೊಡೆತವನ್ನು ತಡೆದುಕೊಳ್ಳಲಾರದೆ ರಕ್ಷಣೆಗಾಗಿ ಆನೆಯ ಬಂಡಿಗಳನ್ನು ಅರ್ಜುನನ ಮುಂದೆ ನಿಲ್ಲಿಸಿದರು. ಈ ಸೈನ್ಯವನ್ನು ಅರ್ಜುನನು ಸೋಲಿಸಿದರೆ ಅದರ ಹಿಂದೆ ನಾವಿರುತ್ತೇವೆ ಎಂದು ಕೌರವನಾಯಕರು ಹೇಳಿದರು.

ಅರ್ಥ:
ಕೋಲ: ಬಾಣ; ಕೋಲಾಹಲ: ಅವಾಂತರ; ಸೈರಿಸು: ತಾಳು, ಸಹಿಸು; ಆಳು: ಸೈನಿಕ; ನಾಯಕ: ಒಡೆಯ; ಹರಿಗೆ: ಚಿಲುಮೆ; ಹೇಳು: ತಿಳಿಸು; ಚಾಚು: ಹರಡು; ಬಲು: ಬಹಳ; ಬದ್ಧರ: ಆನೆ; ಬಂಡಿ: ರಥ; ಹೂಳು: ಹೂತು ಹಾಕು, ಆವರಿಸು, ಮುಳುಗು; ಬೀಸು: ತೂಗು; ಗುಳ:ಕುಂಟೆ, ಆನೆ ಕುದುರೆಗಳ ಪಕ್ಷರಕ್ಷೆ; ಕರಿ: ಆನೆ; ಬಲ: ಶಕ್ತಿ; ಮುರಿ: ಸೀಳು, ಕತ್ತರಿಸು; ಆಚೆ: ಹೊರಗೆ; ಇಹೆವು: ಇರುವೆವು; ನಿಂದರು: ನಿಲ್ಲು ಸುತ: ಮಗ; ಆದಿ: ಮುಂತಾದವರು;

ಪದವಿಂಗಡಣೆ:
ಕೋಲ+ ಕೋಳಾಹಳಕೆ+ ಸೈರಿಸದ್
ಆಳ +ನಾಯಕವಾಡಿ+ ಹರಿಗೆಯ
ಹೇಳಿದರು+ ಚಾಚಿದರು+ ಬಲು+ಬದ್ಧರದ +ಬಂಡಿಗಳ
ಹೂಳೆ +ಬೀಸಿದ+ ಗುಳದ+ ಕರಿಗಳ
ಹೇಳಿದರು +ಬಲ +ಮುರಿದಡ್+ಆಚೆಗೆ
ಮೇಲೆ +ನಾವಿಹೆವೆಂದು +ನಿಂದರು+ ಗುರುಸುತಾದಿಗಳು

ಅಚ್ಚರಿ:
(೧) ಕೋಲ ಕೋಳಾಹಳ – ಪದಗಳ ಜೋಡಣೆ

ಪದ್ಯ ೩೮: ತುಳುವರ ಪಡೆಯ ಆವೇಶ ಹೇಗಿತ್ತು?

ಪಡಿತಳವ ಬೀಸಿದರೆ ಕಾಲಿ
ಕ್ಕಡಿ ನಡುವ ತಾಗಿದರೆ ಮಂಡಲ
ವುಡಿದು ಬಿದ್ದುದು ನಿಲುಕಿನುಪ್ಪರ ಶಿರವ ಮನ್ನಿಸದು
ಮಡುವ ಮೀರುವ ಕಚ್ಚೆ ಮಂಡಿಯ
ಪಡಿದೊಡೆಯ ತಲೆಮರೆಯ ಹರಿಗೆಯ
ಕಡಿತಲೆಯ ಕಲಿ ತುಳುವಪಡೆ ಹೊಯ್ದಾಡಿತಿಳೆ ಹಿಳಿಯೆ (ಭೀಷ್ಮ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕೆಳಗೆ ಕತ್ತಿಯನ್ನು ಬೀಸಿದರೆ ಕಾಲುಗಳು ಕತ್ತರಿಸಿದವು, ನಡುವಿಗೆ ಹೊಡೆದರೆ ದೇಹವೇ ಇಬ್ಭಾಗವಾಗಿ ಬೀಲುತ್ತಿತ್ತು, ಮೇಲೆ ಹೊಡೆದರೆ ತಲೆ ಹಾರುತ್ತಿತ್ತು, ಹಿಮ್ಮಡಿ ಮಂಡಿ ತೊಡೆಗಳನ್ನು ತಿವಿದು, ತುಳುವರು ಪರಾಕ್ರಮದಿಂದ ಕಾದಿದರು. ಅವರ ರಭಸಕ್ಕೆ ಭೂಮಿಯು ಬಿರಿಯಿತು.

ಅರ್ಥ:
ಪಡಿತಳ: ಆಕ್ರಮಣ; ಬೀಸು: ತೂಗುವಿಕೆ; ಕಾಲು: ಪಾದ; ನಡು: ಮಧ್ಯಭಾಗ; ತಾಗು: ಮುಟ್ಟು; ಮಂಡಲ: ವರ್ತುಲಾಕಾರ, ದೇಹ; ಉಡಿ: ಮುರಿ; ಬಿದ್ದು: ಕುಸಿ; ನಿಲುಕು: ನೀಡುವಿಕೆ, ಬಿಡುವು; ಉಪ್ಪರ: ಎತ್ತರ, ಉನ್ನತಿ, ಅತಿಶಯ; ಶಿರ: ತಲೆ; ಮನ್ನಿಸು: ಗೌರವಿಸು; ಮಡವ: ಪಾದದ ಹಿಂಭಾಗ, ಹರಡು, ಹಿಮ್ಮಡಿ; ಮೀರು: ದಾಟು; ಕಚ್ಚು: ತಿವಿ; ಮಂಡಿ: ಮೊಳಕಾಲು, ಜಾನು; ಪಡಿ: ಸಮಾನ, ಎದುರಾದ; ತೊಡೆ: ಊರು; ಹರಿಗೆ: ಚಿಲುಮೆ; ಕಡಿತಲೆ: ಕತ್ತಿ, ಗುರಾಣಿ; ಕಲಿ: ಶೂರ; ಇಳೆ: ಭೂಮಿ; ಹಿಳಿ:ನಾಶವಾಗು;

ಪದವಿಂಗಡಣೆ:
ಪಡಿತಳವ +ಬೀಸಿದರೆ +ಕಾಲಿ
ಕ್ಕಡಿ +ನಡುವ ತಾಗಿದರೆ+ ಮಂಡಲವ್
ಉಡಿದು +ಬಿದ್ದುದು +ನಿಲುಕಿನ್+ಉಪ್ಪರ +ಶಿರವ+ ಮನ್ನಿಸದು
ಮಡುವ +ಮೀರುವ+ ಕಚ್ಚೆ+ ಮಂಡಿಯ
ಪಡಿ+ತೊಡೆಯ +ತಲೆಮರೆಯ+ ಹರಿಗೆಯ
ಕಡಿತಲೆಯ+ ಕಲಿ +ತುಳುವಪಡೆ+ ಹೊಯ್ದಾಡಿತ್+ಇಳೆ +ಹಿಳಿಯೆ

ಅಚ್ಚರಿ:
(೧) ತುಳುವಪಡೆಯ ಶೌರ್ಯ – ಮಡುವ ಮೀರುವ ಕಚ್ಚೆ ಮಂಡಿಯ ಪಡಿದೊಡೆಯ ತಲೆಮರೆಯ ಹರಿಗೆಯ
ಕಡಿತಲೆಯ ಕಲಿ ತುಳುವಪಡೆ ಹೊಯ್ದಾಡಿತಿಳೆ ಹಿಳಿಯೆ

ಪದ್ಯ ೩೧: ಶತ್ರುಗಳನ್ನು ಹೇಗೆ ಧರೆಗುರುಳಿಸಿದರು?

ಕಾಲು ಖಂಡಿಸಿ ಬೀಳೆ ಕರುಳಿನ
ಮಾಲೆಯೊಳು ತೊಡಕಿದುವು ಹಣಿದದ
ಬಾಳೆಯಂದದೊಳುಡಿಯೆ ತೊಡೆ ನಡು ಮುರಿಯೆ ಕಟಿ ಕೆದರೆ
ತೋಳ ಕೊರೆದರು ನೆಲಕೆ ತಲೆಯನು
ಬೀಳಿಕಿದರೆರಡಾಗಿ ತನುವನು
ಸೀಳುಹೋಯಿದರು ಬೈದು ತಾಗಿತು ಹರಿಗೆಯತಿಬಲರು (ಭೀಷ್ಮ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕಾಲುಗಳು ಕಡಿವಡೆದು, ಕರುಳಿನ ಮಾಲೆಯಲ್ಲಿ ಸಿಕ್ಕಿಕೊಂಡವು. ಹೊಡೆತದಿಂದ ತೊಡೆ, ನಡುಗಳು ಬಾಳೆಯ ಮರದಮ್ತೆ ಕೆಳಬಿದ್ದವು. ಕೈಗಳನ್ನು ಕತ್ತರಿಸಿ, ರುಂಡಗಳನ್ನು ಹಾರಿಸಿ ಕೆಡವಿದರು. ದೇಹಗಳನ್ನು ಸೀಳಾಗಿ ಕತ್ತರಿಸಿದರು. ಬೈದು ಶತ್ರುಗಳನ್ನು ಹೊಡೆದರು.

ಅರ್ಥ:
ಕಾಲು: ಪಾದ; ಖಂಡಿಸು: ತುಂಡರಿಸು; ಬೀಳು: ಜಾರು; ಕರುಳು: ಪಚನಾಂಗ; ಮಾಲೆ: ಹಾರ; ತೊಡಕು: ಸಿಕ್ಕು, ಗೋಜು; ಹಣಿ: ಬಾಗು, ಮಣಿ; ಬಾಳೆ: ಕದಳೀಫಲ; ಉಡಿ: ಸೊಂಟ; ತೊಡೆ; ಊರು; ಮುರಿ: ಸೀಳು; ಕಟಿ: ಸೊಂಟ, ನಿತಂಬ; ಕೆದರು: ಹರಡು; ತೋಳು: ಬಾಹು; ಕೊರೆ: ತುಂಡು; ನೆಲ: ಭೂಮಿ; ತಲೆ: ಶಿರ; ಬೀಳು: ಜಾರು; ತನು: ದೇಹ; ಸೀಳು: ಚೂರು, ತುಂಡು; ಬೈದು: ಜರೆದು; ತಾಗು: ಮುಟ್ಟು; ಹರಿಗೆ: ಗುರಾಣಿ; ಅತಿಬಲರು: ಪರಾಕ್ರಮಿಗಳು;

ಪದವಿಂಗಡಣೆ:
ಕಾಲು+ ಖಂಡಿಸಿ +ಬೀಳೆ +ಕರುಳಿನ
ಮಾಲೆಯೊಳು +ತೊಡಕಿದುವು +ಹಣಿದದ
ಬಾಳೆಯಂದದೊಳ್+ಉಡಿಯೆ +ತೊಡೆ +ನಡು +ಮುರಿಯೆ+ ಕಟಿ +ಕೆದರೆ
ತೋಳ +ಕೊರೆದರು+ ನೆಲಕೆ +ತಲೆಯನು
ಬೀಳಿಕಿದರ್+ಎರಡಾಗಿ +ತನುವನು
ಸೀಳು+ಹೋಯಿದರು +ಬೈದು +ತಾಗಿತು+ ಹರಿಗೆ+ಅತಿಬಲರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾಲು ಖಂಡಿಸಿ ಬೀಳೆ ಕರುಳಿನಮಾಲೆಯೊಳು ತೊಡಕಿದುವು ಹಣಿದದ
ಬಾಳೆಯಂದದೊಳು

ಪದ್ಯ ೫: ಎರಡೂ ಸೈನ್ಯದಲ್ಲಿ ಯಾವ ರೀತಿಯ ವಿನೋಡ ಕಂಡು ಬಂತು?

ಕುಣಿವ ಕುದುರೆಯ ಮದದ ಬಲುಭಾ
ರಣೆಯಲೊಲೆವಾನೆಗಳ ತುರಗವ
ಕೆಣಕಿ ಸರಳಿಸಿ ಹಿಡಿವ ತೇರಿನ ಸೂತರೋಜೆಗಳ
ಅಣೆವ ಹರಿಗೆಯನೊಬ್ಬನೊಬ್ಬರ
ನಣಸಿನಲಿ ತಿವಿದಗಿವ ಭಟರೊ
ಡ್ಡಣೆ ಸಘಾಡಿಸಿತೆರಡುಬಲದಲಿ ಭೂಪ ಕೇಳೆಂದ (ಭೀಷ್ಮ ಪರ್ವ, ೨ ಸಂಧಿ, ೫ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಎರಡು ಸೈನ್ಯದಲ್ಲಿ, ಕುಣಿಯುವ ಕುದುರೆಗಳು, ಆನೆಗಳ ಒಲೆದಾಟ, ಸಾರಥಿಗಳ ಸಿದ್ಧತೆ, ಗುರಾಣಿಗಳಿಂದ ಒಬ್ಬರನ್ನೊಬ್ಬರು ತಿವಿಯುವ ಕಾಲಾಳುಗಳ ವಿನೋದ ಎರಡೂ ಸೈನ್ಯದಲ್ಲಿ ಕಂಡು ಬಂತು.

ಅರ್ಥ:
ಕುಣಿ: ನರ್ತಿಸು; ಕುದುರೆ: ಅಶ್ವ; ಮದ: ಮತ್ತು, ಅಮಲು; ಬಲು: ಬಹಳ; ಭಾರಣೆ: ಮಹಿಮೆ, ಗೌರವ; ಒಲವು: ಪ್ರೀತಿ, ಸ್ನೇಹ; ಆನೆ: ಗಜ; ತುರಗ: ಅಶ್ವ, ಕುದುರೆ; ಕೆಣಕು: ರೇಗಿಸು, ಪ್ರಚೋದಿಸು; ಸರಳ: ಸುಲಭ, ಸರಾಗ; ಹಿಡಿ: ಬಂಧಿಸು; ತೇರು: ಬಂಡಿ; ಸೂತ: ರಥವನ್ನು ಓಡಿಸುವವ; ಓಜೆ: ಶ್ರೇಣಿ, ಸಾಲು; ಅಣೆ: ತಿವಿ, ಹೊಡೆ; ಹರಿಗೆ: ಚಿಲುಮೆ; ಅಣಸು: ಆಕ್ರಮಿಸು; ತಿವಿ: ಚುಚ್ಚು; ಅಗಿ: ಹೆದರು; ಭಟ: ಸೈನಿಕ; ಒಡ್ಡಣೆ: ಗುಂಪು; ಸಘಾಡ: ರಭಸ, ವೇಗ; ಬಲ: ಸೈನ್ಯ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕುಣಿವ +ಕುದುರೆಯ +ಮದದ +ಬಲು+ಭಾ
ರಣೆಯಲ್+ಒಲೆವ್+ಆನೆಗಳ +ತುರಗವ
ಕೆಣಕಿ+ ಸರಳಿಸಿ +ಹಿಡಿವ +ತೇರಿನ +ಸೂತರ್+ಓಜೆಗಳ
ಅಣೆವ +ಹರಿಗೆಯನ್+ಒಬ್ಬನೊಬ್ಬರನ್
ಅಣಸಿನಲಿ +ತಿವಿದ್+ಅಗಿವ +ಭಟರ್
ಒಡ್ಡಣೆ +ಸಘಾಡಿಸಿತ್+ಎರಡು+ಬಲದಲಿ +ಭೂಪ +ಕೇಳೆಂದ

ಅಚ್ಚರಿ:
(೧) ಸೈನ್ಯವನ್ನು ವಿವರಿಸುವ ಪರಿ – ಕುಣಿವ ಕುದುರೆ, ಒಲೆವ ಆನೆ, ಅಣೆವ ಹರಿಗೆ

ಪದ್ಯ ೧೪: ಕರ್ಣನ ಬಾಣಗಳನ್ನು ತಪ್ಪಿಸಲು ಯಾವ ಸಾಧನ ಉಪಯೋಗಿಸಿದರು?

ಕೋಲ ಕೋಳಾಹಳಕೆ ತೇರಿನ
ಗಾಲಿಗಳನೊಡ್ಡಿದರು ಹರಿಗೆಯ
ಹೇಳಿದರು ಹಮ್ಮುಗೆಯ ಕೊಯ್ದೊಡ್ಡಿದರು ರೆಂಚೆಗಳ
ಮೇಳೆಯವ ಮೋಹಿದರು ಕಂಬುಗೆ
ನೂಲು ಹರಿಗೆ ತನುತ್ರ ಸೀಸಕ
ಜಾಲ ಗುಳ ಹಕ್ಕರಿಕೆ ಹಲ್ಲಣ ಬಾಹುರಕ್ಷೆಗಳ (ಕರ್ಣ ಪರ್ವ, ೨೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕರ್ಣನ ಬಾಣಗಳು ಮಾಡಿದ ಆತಂಕಕ್ಕೆ ಸೈನ್ಯವು ಭಯಭೀತರಾದರು. ಬಾಣಗಳನ್ನು ತಡೆಯಲು ತೇರಿನ ಗಾಲಿಗಳನ್ನು ಮರೆಯೊಡ್ಡಿದರು. ಗುರಾಣಿಗಳನ್ನು ಮರೆಮಾಡಿದರು. ಅನೆಗಳಿಗೆ ಕಟ್ಟಿದ ಹಗ್ಗಗಳನ್ನು ಕೊಯ್ದು ಆನೆಗಳ ಕವಚಗಳನ್ನು ಇದಿರಾಗಿ ಹಿಡಿದರು. ರಥದ ಹಿಂಭಾಗಗಳನ್ನು ಬಿಚ್ಚಿ ಅಡ್ಡ ಹಿಡಿದರು. ಗುರಾಣಿ, ಕವಚ, ತಲೆಟೋಪಿ, ಆನೆಗಳ ರೆಂಚೆ, ಜೀನು ಭುಜರಕ್ಷೆಗಳನ್ನು ಒಡ್ಡಿದರು.

ಅರ್ಥ:
ಕೋಲ: ಬಾಣ; ಕೋಳಾಹಳ: ಅವಾಂತರ, ಗದ್ದಲ; ತೇರು: ರಥ; ಗಾಲಿ: ಚಕ್ರ; ಒಡ್ಡು: ತೋರು, ಎದುರು ಹಿಡಿ; ಹರಿಗೆ: ಗುರಾಣಿ; ಹಮ್ಮುಗೆ: ಹಗ್ಗ, ಪಾಶ; ಕೊಯ್ದು: ಸೀಳು, ಕತ್ತರಿಸು; ಓಡು: ಪಲಾಯನಮಾಡು; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ಮೋಹು: ತುಂಬಿಕೊಳ್ಳು; ಕಂಬು: ಆನೆ; ನೂಲು: ದಾರ, ಎಳೆ, ಸೂತ್ರ; ತನುತ್ರ:ಕವಚ; ಸೀಸಕ: ಶಿರಸ್ತ್ರಾಣ; ಗುಳ:ಆನೆ ಕುದುರೆಗಳ ಪಕ್ಷರಕ್ಷೆ; ಹಕ್ಕರಿಕೆ: ಕುದುರೆಯ ಜೀನು; ಹಲ್ಲಣ: ಜೀನು, ಕಾರ್ಯ; ಜೀನು: ಕುದುರೆಯ ಬೆನ್ನ ಮೇಲೆ ಕುಳಿತುಕೊಳ್ಳಲು ಹಾಕುವ ಚರ್ಮದ ಸಾಧನ; ಬಾಹು: ಭುಜ; ರಕ್ಷೆ: ಕವಚ;

ಪದವಿಂಗಡಣೆ:
ಕೋಲ +ಕೋಳಾಹಳಕೆ +ತೇರಿನ
ಗಾಲಿಗಳನ್+ಒಡ್ಡಿದರು +ಹರಿಗೆಯ
ಹೇಳಿದರು+ ಹಮ್ಮುಗೆಯ +ಕೊಯ್ದೊಡ್ಡಿದರು+ ರೆಂಚೆಗಳ
ಮೇಳೆಯವ +ಮೋಹಿದರು +ಕಂಬುಗೆ
ನೂಲು +ಹರಿಗೆ +ತನುತ್ರ +ಸೀಸಕ
ಜಾಲ +ಗುಳ +ಹಕ್ಕರಿಕೆ+ ಹಲ್ಲಣ +ಬಾಹುರಕ್ಷೆಗಳ

ಅಚ್ಚರಿ:
(೧) ಸಾಲು ಪದಗಳ ಬಳಕೆ – ಹರಿಗೆಯ ಹೇಳಿದರು ಹಮ್ಮುಗೆಯ