ದಳಪತಿಯ ದುವ್ವಾಳಿ ಪಾಂಡವ
ಬಲವ ಕೆದರಿತು ಕಲ್ಪಮೇಘದ
ಹೊಲಿಗೆ ಹರಿದವೊಲಾಯ್ತು ಮಾದ್ರೇಶ್ವರನ ಶರಜಾಲ
ಅಳುಕದಿರಿ ಬದ್ದರದ ಬಂಡಿಯ
ನಿಲಿಸಿ ಹರಿಗೆಯ ಪಾಠಕರು ಕೈ
ಕೊಳಲಿ ಮುಂದಣ ನೆಲನನೆನುತುಬ್ಬರಿಸಿತರಿಸೇನೆ (ದ್ರೋಣ ಪರ್ವ, ೨ ಸಂಧಿ ೩೭ ಪದ್ಯ)
ತಾತ್ಪರ್ಯ:
ಶಲ್ಯನ ದಾಳಿಯಿಂದ ಪಾಂಡವ ಸೇನೆ ಚದುರಿತು. ಕಲ್ಪಾಂತದ ಮೋಡದ ಹೊಲಿಗೆ ಹರಿದು ಬೀಳುವ ಮಳೆಯಂತೆ ಶಲ್ಯನ ಬಾಣಗಳು ಸುರಿದವು. ವೈರಿಸೇನೆಯು ಹೆದರ ಬೇಡಿ ಬದ್ದರದ ಬಂಡಿಗಳನ್ನು ನಡುವೆ ನಿಲ್ಲಿಸಿ, ಗುರಾಣಿಯನ್ನು ಹಿಡಿದವರು, ಪಾಠಕರು ದಳಪತಿಯ ಮುಂದೆ ನಿಲ್ಲಲಿ ಎಂದು ವೈರಿಸೇನೆ ಸಂಭ್ರಮಿಸಿತು.
ಅರ್ಥ:
ದಳಪತಿ: ಸೇನಾಧಿಪತಿ; ದುವ್ವಾಳಿ: ತೀವ್ರಗತಿ, ವೇಗವಾದ ನಡೆ; ಬಲ: ಸೈನ್ಯ; ಕೆದರು: ಹರಡು; ಕಲ್ಪ: ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಮೇಘ: ಮೋಡ; ಹೊಲಿಗೆ: ಸಂಬಂಧ, ಹೊಂದಾಣಿಕೆ, ಹೊಲಿಯುವಿಕೆ; ಹರಿ: ಚೆದರು; ಶರ: ಬಾಣ; ಜಾಲ: ಗುಂಪು; ಅಳುಕು: ಹೆದರು; ಬದ್ಧರ: ಆತ್ಮರಕ್ಷಣಾರ್ಥವಾಗಿ ಬಳಸುತ್ತಿದ್ದ ಒಂದು ಬಗೆಯ ಉಪಕರಣ; ಬಂಡಿ: ರಥ; ನಿಲಿಸು: ತಡೆ; ಹರಿಗೆ: ತಲೆಪೆರಿಗೆ; ಪಾಠಕ: ಹೊಗಳುಭಟ್ಟ; ಮುಂದಣ: ಮುಂಚೆ; ನೆಲ: ಭೂಮಿ; ಉಬ್ಬು: ಅತಿಶಯ; ಅರಿ: ವೈರಿ;
ಪದವಿಂಗಡಣೆ:
ದಳಪತಿಯ+ ದುವ್ವಾಳಿ +ಪಾಂಡವ
ಬಲವ +ಕೆದರಿತು +ಕಲ್ಪ+ಮೇಘದ
ಹೊಲಿಗೆ +ಹರಿದವೊಲಾಯ್ತು +ಮಾದ್ರೇಶ್ವರನ+ ಶರಜಾಲ
ಅಳುಕದಿರಿ +ಬದ್ದರದ +ಬಂಡಿಯ
ನಿಲಿಸಿ +ಹರಿಗೆಯ +ಪಾಠಕರು +ಕೈ
ಕೊಳಲಿ +ಮುಂದಣ +ನೆಲನನ್+ಎನುತ್+ಉಬ್ಬರಿಸಿತ್+ಅರಿಸೇನೆ
ಅಚ್ಚರಿ:
(೧) ಉಪಮಾನದ ಪ್ರಯೋಗ – ಪಾಂಡವ ಬಲವ ಕೆದರಿತು ಕಲ್ಪಮೇಘದ ಹೊಲಿಗೆ ಹರಿದವೊಲಾಯ್ತು