ಫಡಫಡರ್ಜುನ ಹೋಗು ಹೋಗಳ
ವಡದು ಸೈಂಧವನಳಿವು ಭಾಷೆಯ
ನಡಸಬಲ್ಲರೆ ಬೇಗ ಬೆಳಗಿಸು ಹವ್ಯವಾಹನನ
ಕಡಲ ಮಧ್ಯದ ಗಿರಿಗೆ ಸುರಪತಿ
ಕದುಗಿ ಮಾಡುವುದೇನೆನುತ ಕೈ
ಗಡಿಯ ಬಿಲ್ಲಾಳುಗಳು ಬಿಗಿದರು ಸರಳಲಂಬರವ (ದ್ರೋಣ ಪರ್ವ, ೧೪ ಸಂಧಿ, ೩೧ ಪದ್ಯ)
ತಾತ್ಪರ್ಯ:
ಕೌರವ ವೀರರು, ಅರ್ಜುನ, ಸೈಂಧವನನ್ನು ಕೊಲ್ಲಲಾಗುವುದಿಲ್ಲ. ಪ್ರತಿಜ್ಞೆಯನ್ನು ಪೂರೈಸಬೇಕೆಂದಿದ್ದರೆ, ಬೇಗ ಬೆಂಕಿಯನ್ನು ಹೊತ್ತಿಸು, ಸಮುದ್ರದಲ್ಲಿ ಮುಳುಗಿರುವ ಪರ್ವತದ ಮೇಲೆ ಇಮ್ದ್ರನು ಸಿಟ್ಟಾಗಿ ಏನು ಮಾಡಬಲ್ಲ? ಎಂದು ಹಂಗಿಸುತ್ತಾ ಆಕಾಶವನ್ನು ಬಾಣಗಳಿಂದ ತುಂಬಿದರು.
ಅರ್ಥ:
ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಅಳವಡಿಸು: ಸರಿಮಾಡು; ಅಳಿವು: ನಾಶ; ಭಾಷೆ: ನುಡಿ; ಅಡಸು: ಆಕ್ರಮಿಸು, ಮುತ್ತು; ಬೇಗ: ತ್ವರಿತ; ಬೆಳಗು: ಹೊಳೆ; ಹವ್ಯವಾಹನ: ಅಗ್ನಿ; ಕಡಲು: ಸಾಗರ; ಮಧ್ಯ: ನಡುವೆ; ಗಿರಿ: ಬೆಟ್ಟ; ಸುರಪತಿ: ಇಂದ್ರ; ಕಡುಗು: ಶಕ್ತಿಗುಂದು; ಕೈಗಡಿಯ: ಶೂರ, ಪರಾಕ್ರಮ; ಬಿಲ್ಲಾಳು: ಬಿಲ್ಲುಗಾರ; ಬಿಗಿ: ಭದ್ರವಾಗಿರುವುದು; ಸರಳು: ಬಾಣ; ಅಂಬರ: ಆಗಸ;
ಪದವಿಂಗಡಣೆ:
ಫಡಫಡ್+ಅರ್ಜುನ +ಹೋಗು +ಹೋಗ್
ಅಳವಡದು +ಸೈಂಧವನ್+ಅಳಿವು +ಭಾಷೆಯನ್
ಅಡಸಬಲ್ಲರೆ+ ಬೇಗ +ಬೆಳಗಿಸು +ಹವ್ಯವಾಹನನ
ಕಡಲ +ಮಧ್ಯದ +ಗಿರಿಗೆ +ಸುರಪತಿ
ಕದುಗಿ +ಮಾಡುವುದೇನ್+ಎನುತ +ಕೈ
ಗಡಿಯ +ಬಿಲ್ಲಾಳುಗಳು +ಬಿಗಿದರು+ ಸರಳಲ್+ಅಂಬರವ
ಅಚ್ಚರಿ:
(೧) ರೂಪಕದ ಪ್ರಯೋಗ – ಕಡಲ ಮಧ್ಯದ ಗಿರಿಗೆ ಸುರಪತಿ ಕದುಗಿ ಮಾಡುವುದೇನ್