ಪದ್ಯ ೩೧: ಕೌರವರು ಅರ್ಜುನನನ್ನು ಹೇಗೆ ಹಂಗಿಸಿದರು?

ಫಡಫಡರ್ಜುನ ಹೋಗು ಹೋಗಳ
ವಡದು ಸೈಂಧವನಳಿವು ಭಾಷೆಯ
ನಡಸಬಲ್ಲರೆ ಬೇಗ ಬೆಳಗಿಸು ಹವ್ಯವಾಹನನ
ಕಡಲ ಮಧ್ಯದ ಗಿರಿಗೆ ಸುರಪತಿ
ಕದುಗಿ ಮಾಡುವುದೇನೆನುತ ಕೈ
ಗಡಿಯ ಬಿಲ್ಲಾಳುಗಳು ಬಿಗಿದರು ಸರಳಲಂಬರವ (ದ್ರೋಣ ಪರ್ವ, ೧೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೌರವ ವೀರರು, ಅರ್ಜುನ, ಸೈಂಧವನನ್ನು ಕೊಲ್ಲಲಾಗುವುದಿಲ್ಲ. ಪ್ರತಿಜ್ಞೆಯನ್ನು ಪೂರೈಸಬೇಕೆಂದಿದ್ದರೆ, ಬೇಗ ಬೆಂಕಿಯನ್ನು ಹೊತ್ತಿಸು, ಸಮುದ್ರದಲ್ಲಿ ಮುಳುಗಿರುವ ಪರ್ವತದ ಮೇಲೆ ಇಮ್ದ್ರನು ಸಿಟ್ಟಾಗಿ ಏನು ಮಾಡಬಲ್ಲ? ಎಂದು ಹಂಗಿಸುತ್ತಾ ಆಕಾಶವನ್ನು ಬಾಣಗಳಿಂದ ತುಂಬಿದರು.

ಅರ್ಥ:
ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಅಳವಡಿಸು: ಸರಿಮಾಡು; ಅಳಿವು: ನಾಶ; ಭಾಷೆ: ನುಡಿ; ಅಡಸು: ಆಕ್ರಮಿಸು, ಮುತ್ತು; ಬೇಗ: ತ್ವರಿತ; ಬೆಳಗು: ಹೊಳೆ; ಹವ್ಯವಾಹನ: ಅಗ್ನಿ; ಕಡಲು: ಸಾಗರ; ಮಧ್ಯ: ನಡುವೆ; ಗಿರಿ: ಬೆಟ್ಟ; ಸುರಪತಿ: ಇಂದ್ರ; ಕಡುಗು: ಶಕ್ತಿಗುಂದು; ಕೈಗಡಿಯ: ಶೂರ, ಪರಾಕ್ರಮ; ಬಿಲ್ಲಾಳು: ಬಿಲ್ಲುಗಾರ; ಬಿಗಿ: ಭದ್ರವಾಗಿರುವುದು; ಸರಳು: ಬಾಣ; ಅಂಬರ: ಆಗಸ;

ಪದವಿಂಗಡಣೆ:
ಫಡಫಡ್+ಅರ್ಜುನ +ಹೋಗು +ಹೋಗ್
ಅಳವಡದು +ಸೈಂಧವನ್+ಅಳಿವು +ಭಾಷೆಯನ್
ಅಡಸಬಲ್ಲರೆ+ ಬೇಗ +ಬೆಳಗಿಸು +ಹವ್ಯವಾಹನನ
ಕಡಲ +ಮಧ್ಯದ +ಗಿರಿಗೆ +ಸುರಪತಿ
ಕದುಗಿ +ಮಾಡುವುದೇನ್+ಎನುತ +ಕೈ
ಗಡಿಯ +ಬಿಲ್ಲಾಳುಗಳು +ಬಿಗಿದರು+ ಸರಳಲ್+ಅಂಬರವ

ಅಚ್ಚರಿ:
(೧) ರೂಪಕದ ಪ್ರಯೋಗ – ಕಡಲ ಮಧ್ಯದ ಗಿರಿಗೆ ಸುರಪತಿ ಕದುಗಿ ಮಾಡುವುದೇನ್

ಪದ್ಯ ೨೧: ಗರ್ಭವ್ಯೂಹಕ್ಕೆ ಯಾರನ್ನು ನೇಮಿಸಿದನು?

ಕೆಲಬಲದ ಸಬಳಿಗರು ಸಬಳದ
ವಳಯದಲಿ ಹರಿಗೆಗಳು ಹರಿಗೆಗ
ಳೊಳಗೆ ಬಿಲ್ಲಾಳುಗಳ ಮರೆಯಲಿ ವಾಜಿ ಗಜರಥವ
ನಿಲಿಸಿ ಗರ್ಭವ್ಯೂಹವನು ಮಂ
ಡಳಿಸಿದನು ಸಂವೀರರನು ಸಿಂ
ಹಳರ ನಿಲಿಸಿದ ಹತ್ತು ಸಾವಿರ ಮಂಡಳೇಶ್ವರರ (ದ್ರೋಣ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅಕ್ಕಪಕ್ಕದಲ್ಲಿ ಈಟಿಯನ್ನು ಆಯುಧವನ್ನಾಗಿಸಿಕೊಂಡಿದ್ದ ಪದಾತಿಗಳು, ವೃತ್ತಾಕಾರದಲ್ಲಿದ್ದರು, ಅದರೊಳಗೆ ಕತ್ತಿಗುರಾಣಿಗಳನ್ನು ಹಿಡಿದವರು, ಗುರಾಣಿಗಳ ಹಿಂದೆ ಬಿಲ್ಲಾಳುಗಳು, ಅವರ ಹಿಂದೆ ಕುದುರೆ ಆನೆ ರಥಗಳು ಹೀಗೆ ಗರ್ಭವ್ಯೂಹವನ್ನು ರಚಿಸಿ ಅಲ್ಲಿ ಸಿಂಹಳ ಸಂವೀರ ದೇಶಗಳ ಹತ್ತು ಸಾವಿರ ಮಂಡಲಾಧಿಪತಿಗಳನ್ನು ನಿಲ್ಲಿಸಿದನು.

ಅರ್ಥ:
ಕೆಲಬಲ: ಅಕ್ಕಪಕ್ಕ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಸಬಳ: ಈಟಿ; ವಳಯ: ವರ್ತುಲ, ಪರಿಧಿ; ಹರಿಗೆ: ಚಿಲುಮೆ; ಬಿಲ್ಲಾಳು: ಬಿಲ್ಲುಗಾರ; ಮರೆ: ಅವಚು; ವಾಜಿ: ಕುದುರೆ; ಗಜ: ಆನೆ; ರಥ: ಬಂಡಿ; ನಿಲಿಸು: ತಡೆ; ವ್ಯೂಹ: ಗುಂಪು, ಸಮೂಹ; ಮಂಡಳ: ವರ್ತುಲಾಕಾರ; ವೀರ: ಶೂರ; ಸಾವಿರ: ಸಹಸ್ರ; ಮಂಡಳೇಶ್ವರ: ಸಾಮಂತ ರಾಜ;

ಪದವಿಂಗಡಣೆ:
ಕೆಲಬಲದ+ ಸಬಳಿಗರು+ ಸಬಳದ
ವಳಯದಲಿ+ ಹರಿಗೆಗಳು+ ಹರಿಗೆಗಳ್
ಒಳಗೆ +ಬಿಲ್ಲಾಳುಗಳ +ಮರೆಯಲಿ +ವಾಜಿ +ಗಜ+ರಥವ
ನಿಲಿಸಿ +ಗರ್ಭವ್ಯೂಹವನು +ಮಂ
ಡಳಿಸಿದನು +ಸಂವೀರರನು +ಸಿಂ
ಹಳರ+ ನಿಲಿಸಿದ +ಹತ್ತು +ಸಾವಿರ +ಮಂಡಳೇಶ್ವರರ

ಅಚ್ಚರಿ:
(೧) ಪದಗಳ ಬಳಕೆ – ಸಬಳಿಗರು ಸಬಳದ; ಹರಿಗೆಗಳು ಹರಿಗೆಗ; ಸಂವೀರರನು ಸಿಂಹಳರ

ಪದ್ಯ ೨೪: ಭೀಮನ ಪರಾಕ್ರಮದ ಪ್ರದರ್ಶನ ಹೇಗೆ ತೋರಿತು?

ಮುಂದೆ ಸಬಳಿಗರೆಡ ಬಲದಲೋ
ರಂದದಲಿ ಬಿಲ್ಲಾಳು ದೊರೆಗಳ
ಮುಂದೆ ಹರಿಗೆಗಳೆರಡು ಬಾಹೆಯಲಾನೆ ಕುದುರೆಗಳು
ಸಂದಣಿಸಿದುದು ಮತ್ತೆ ಬೀಳುವ
ಮಂದಿಗದು ನೆರವಾಯ್ತು ನೆಗ್ಗಿದ
ನೊಂದು ಹಲಗೆಯಲೇರಿದವರನು ಭೂಪ ಕೇಳೆಂದ (ಕರ್ಣ ಪರ್ವ, ೧೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಸಬಳವನ್ನು ಹಿಡಿದ ಭಟರು ಮುಂದೆ, ಅವರ ಹಿಮ್ದೆ ಬಿಲ್ಲಾಳುಗಳು, ದೊರೆಗಳ ಮುಂದೆ ಗುರಾಣಿಗಳನ್ನು ತಲೆಗೆ ಹಿಡಿದ ಕಾಲಾಳುಗಳು, ಎರಡೂ ಪಕ್ಕದಲ್ಲಿದ್ದ ಆನೆ ಕುದುರೆಗಳು ಮತ್ತೆ ಸಿದ್ಧವಾಗಿ ಬಂದವು. ಮೊದಲು ಸತ್ತು ಬಿದ್ದವರೊಡನೆ ಒಂದೇ ಹೊಡೆತಕ್ಕೆ ಮತ್ತೆ ಬಂದವರನ್ನು ಸೇರಿಸಿದನು ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಮುಂದೆ: ಎದುರು; ಸಬಳ: ಈಟಿ, ಭರ್ಜಿ; ಬಲ: ಸೈನ್ಯ; ಬಿಲ್ಲಾಳು: ಬಿಲ್ಲುವಿದ್ಯಾಚತುರ; ದೊರೆ: ರಾಜ, ಒಡೆಯ; ಹರಿಗೆ: ಗುರಾಣಿ; ಬಾಹೆ: ಪಕ್ಕ, ಪಾರ್ಶ್ವ; ಆನೆ: ಗಜ; ಕುದುರೆ: ಅಶ್ವ; ಸಂದಣಿ: ಗುಂಪು, ಸಮೂಹ; ಬೀಳು: ಕೆಳಕ್ಕೆ ಜಾರು; ಮಂದಿ: ಜನ; ನೆರವು: ಸಹಾಯ; ನೆಗ್ಗು: ಕುಗ್ಗು, ಕುಸಿ; ಹಲಗೆ:ಒಂದು ಬಗೆಯ ಗುರಾಣಿ; ಏರು: ಮೇಲೆ ಹತ್ತು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುಂದೆ +ಸಬಳಿಗರ್+ಎಡ+ ಬಲದಲೋ
ರಂದದಲಿ+ ಬಿಲ್ಲಾಳು +ದೊರೆಗಳ
ಮುಂದೆ +ಹರಿಗೆಗಳ್+ಎರಡು +ಬಾಹೆಯಲ್+ಆನೆ +ಕುದುರೆಗಳು
ಸಂದಣಿಸಿದುದು +ಮತ್ತೆ +ಬೀಳುವ
ಮಂದಿಗದು +ನೆರವಾಯ್ತು +ನೆಗ್ಗಿದ
ನೊಂದು +ಹಲಗೆಯಲ್+ಏರಿದವರನು +ಭೂಪ +ಕೇಳೆಂದ