ಧರ್ಮವೆಲ್ಲಿಹುದಲ್ಲಿ ಜಯ ಸ
ತ್ಕರ್ಮವೆಲ್ಲಿಹುದಲ್ಲಿ ಸಿರಿ ಸ
ದ್ಧರ್ಮಸಂರಕ್ಷಕರು ಹರಿ ಧೂರ್ಜಟಿ ಪಿತಾಮಹರು
ಧರ್ಮದೂರನು ನಿನ್ನವನು ಸ
ತ್ಕರ್ಮಬಾಹಿರನಾತ್ಮರಚಿತ ವಿ
ಕರ್ಮದೋಷದಲಳಿದನಿನ್ನೇನೆಂದನಾ ಮುನಿಪ (ಗದಾ ಪರ್ವ, ೧೧ ಸಂಧಿ, ೭ ಪದ್ಯ)
ತಾತ್ಪರ್ಯ:
ವ್ಯಾಸ ಮುನಿಗಳು ತಮ್ಮ ಮಾತುಗಳನ್ನು ಮುಂದುವರೆಸುತ್ತಾ, ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿರುತ್ತದೆ. ಎಲ್ಲಿ ಸತ್ಕರ್ಮವಿದೆಯೋ ಅಲ್ಲಿ ಸಂಪತ್ತಿರುತ್ತದೆ. ಆ ಧರ್ಮದ ಸಂರಕ್ಷರು ಹರಿಹರಬ್ರಹ್ಮರು. ನಿನ್ನ ಮಗನು ಧರ್ಮದೂರ, ಸತ್ಕರ್ಮಬಾಹಿರ, ತಾನು ಮಾಡಿದ ವಿಕಾರ ಕರ್ಮದ ದೋಷದಿಂದ ಹತನಾದನು. ಇನ್ನೇನು ಹೇಳಲಿ ಎಂದು ವ್ಯಾಸರು ನುಡಿದರು.
ಅರ್ಥ:
ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಜಯ: ಗೆಲುವು; ಸತ್ಕರ್ಮ: ಒಳ್ಳೆಯ ಕೆಲಸ; ಸಿರಿ: ಐಶ್ವರ್ಯ; ಸಂರಕ್ಷಕ: ರಕ್ಷಣೆ ಮಾಡುವವ; ಪಿತಾಮಹ: ತಾತ, ಬ್ರಹ್ಮ; ಧೂರ್ಜಟಿ: ಶಿವ; ದೂರ: ಬಹಳ ಅಂತರ, ಹತ್ತಿರವಲ್ಲದುದು; ಬಾಹಿರ: ಹೊರಗಿನವ; ವಿಕರ್ಮ: ಕೆಟ್ಟ ಕೆಲಸ; ದೋಷ: ತಪ್ಪು; ಅಳಿ: ನಾಶ; ಮುನಿ: ಋಷಿ;
ಪದವಿಂಗಡಣೆ:
ಧರ್ಮವೆಲ್ಲಿಹುದಲ್ಲಿ +ಜಯ +ಸ
ತ್ಕರ್ಮವೆಲ್ಲಿಹುದಲ್ಲಿ+ ಸಿರಿ +ಸ
ದ್ಧರ್ಮ+ಸಂರಕ್ಷಕರು +ಹರಿ +ಧೂರ್ಜಟಿ +ಪಿತಾಮಹರು
ಧರ್ಮದೂರನು +ನಿನ್ನವನು +ಸ
ತ್ಕರ್ಮ+ಬಾಹಿರನ್+ಆತ್ಮರಚಿತ+ ವಿ
ಕರ್ಮ+ದೋಷದಲ್+ಅಳಿದನ್+ಇನ್ನೇನೆಂದನಾ +ಮುನಿಪ
ಅಚ್ಚರಿ:
(೧) ಹಿತ ನುಡಿ – ಧರ್ಮವೆಲ್ಲಿಹುದಲ್ಲಿ ಜಯ, ಸತ್ಕರ್ಮವೆಲ್ಲಿಹುದಲ್ಲಿ ಸಿರಿ
(೨) ಕೌರವನ ನಡತೆಯನ್ನು ಹೇಳುವ ಪರಿ – ಧರ್ಮದೂರನು ನಿನ್ನವನು
(೩) ಧರ್ಮ, ಸದ್ಧರ್ಮ, ಸತ್ಕರ್ಮ, ವಿಕರ್ಮ – ಪ್ರಾಸ ಪದಗಳು
(೪) ಧರ್ಮ, ಸತ್ಕರ್ಮ – ೧, ೪ ಸಾಲಿನ ಮೊದಲ ಮತ್ತು ಕೊನೆ ಪದ