ಸೆಳೆದುಕೊಂಡನು ಮಿತ್ತುವಿನ ಗಂ
ಟಲಲಿ ಮಾರ್ಕಂಡೇಯನನು ರಣ
ದೊಳಗೆ ಭಗದತ್ತಾಂಕುಶದಿ ನಾರಾಯಣಾಸ್ತ್ರದಲಿ
ಉಳುಹಿದನು ಪಾರ್ಥನನು ಗುರುಸುತ
ಕಳುಪಿದೀ ಕುಶಿಕಾಸ್ತ್ರದಲಿ ಶಶಿ
ಕುಲದ ರಾಜಾಂಕುರವ ಕರುಣಿಸಿ ಕಾಯ್ದನಸುರಾರಿ (ಗದಾ ಪರ್ವ, ೧೦ ಸಂಧಿ, ೨೪ ಪದ್ಯ)
ತಾತ್ಪರ್ಯ:
ಮೃತ್ಯುವಿನ ಗಂಟಲಿನಿಂದ ಮಾರ್ಕಂಡೇಯನನ್ನು ಸೆಳೆದುಕೊಂಡನಲ್ಲವೇ? ಯುದ್ಧದಲ್ಲಿ ಭಗದತ್ತನ ಶಕ್ತಿ ಮತ್ತು ನಾರಾಯಣಾಸ್ತ್ರಗಳ ಕಂಟಕದಿಂದ ಅರ್ಜುನನನ್ನು ಉಳಿಸಿದನಲ್ಲವೇ? ಅಂತಹ ಮಹಾಮಹಿಮ ಶ್ರೀಕೃಷ್ಣನು ಚಂದ್ರವಂಶದ ಕುಡಿಯನ್ನು (ಅಭಿಮನ್ಯುವಿನ ಮಗ) ರಕ್ಷಿಸಿದನು.
ಅರ್ಥ:
ಸೆಳೆ: ಆಕರ್ಷಿಸು, ಎಳೆ; ಮಿತ್ತು: ಮೃತ್ಯು; ಗಂಟಲು: ಕೊರಳು, ಕಂಠ; ರಣ: ಯುದ್ಧ; ಅಂಕುಶ: ಒಂದು ಆಯುಧ, ಹಿಡಿತ, ಹತೋಟಿ; ಅಸ್ತ್ರ: ಶಸ್ತ್ರ; ಉಳುಹು: ರಕ್ಷಿಸು, ಜೀವಿಸು; ಕಳುಪಿದ: ಕಳಿಸಿದ; ಕುಶಿಕ: ಗುಳ, ವಿಶ್ವಾಮಿತ್ರನ ತಂದೆಯ ಹೆಸರು; ಶಶಿ: ಚಂದ್ರ; ಕುಲ: ವಂಶ; ರಾಜ: ನೃಪ; ಅಂಕುರ: ಚಿಗುರು; ಕರುಣಿಸು: ದಯಪಾಲಿಸು; ಕಾಯ್ದು: ರಕ್ಷಿಸು; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);
ಪದವಿಂಗಡಣೆ:
ಸೆಳೆದುಕೊಂಡನು +ಮಿತ್ತುವಿನ +ಗಂ
ಟಲಲಿ +ಮಾರ್ಕಂಡೇಯನನು +ರಣ
ದೊಳಗೆ +ಭಗದತ್ತ+ಅಂಕುಶದಿ+ ನಾರಾಯಣಾಸ್ತ್ರದಲಿ
ಉಳುಹಿದನು +ಪಾರ್ಥನನು +ಗುರುಸುತ
ಕಳುಪಿದ್+ಈ +ಕುಶಿಕಾಸ್ತ್ರದಲಿ +ಶಶಿ
ಕುಲದ +ರಾಜಾಂಕುರವ+ ಕರುಣಿಸಿ +ಕಾಯ್ದನ್+ಅಸುರಾರಿ
ಅಚ್ಚರಿ:
(೧) ಕೃಷ್ಣನ ಹಿರಿಮೆ – ಸೆಳೆದುಕೊಂಡನು ಮಿತ್ತುವಿನ ಗಂಟಲಲಿ ಮಾರ್ಕಂಡೇಯನನು
(೨) ಅಭಿಮನ್ಯುವಿನ ಮಗ ಎಂದು ಹೇಳುವ ಪರಿ – ಶಶಿಕುಲದ ರಾಜಾಂಕುರವ