ಅರಸು ಮಕ್ಕಳು ಮತ್ಸ್ಯ ಪಾಂಚಾ
ಲರಲಿ ಕೈಕೆಯ ಚೈದ್ಯ ಯಾದವ
ತುರುಕ ಬರ್ಬರ ಗೌಳ ಮಾಗಧ ಪಾರಿಯಾತ್ರರಲಿ
ಉರುಳಿತೊಂದೇ ಲಕ್ಷವುಳಿದೀ
ಕರಿ ವರೂಥ ಪದಾತಿ ತುರಗವ
ನರಸ ಲೆಕ್ಕಿಸಲಾರು ಬಲ್ಲರು ವೈರಿ ಸೇನೆಯಲಿ (ದ್ರೋಣ ಪರ್ವ, ೧೭ ಸಂಧಿ, ೪೩ ಪದ್ಯ)
ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರ ಕೇಳು, ರಾಜನ ಮಕ್ಕಳು, ಮತ್ಸ್ಯ, ಪಾಂಚಾಲ, ಕೈಕೆಯ, ಚೈದ್ಯ, ಯಾದವ, ತುರುಕ, ಬರ್ಬರ, ಗೌಳ, ಮಾಗಧ, ಪಾರಿಯಾತ್ರ ರಾಜರೆಲ್ಲರು ಸೋಲನಪ್ಪಿದರು. ಒಂದು ಲಕ್ಷದಷ್ಟು ಸೈನ್ಯವು ನಾಶವಾಯಿತು, ಉಳಿದ ಚತುರಂಗ ಸೈನ್ಯದ ಆನೆ, ಕುದುರೆ, ರಥ, ಕಾಲಾಳುಗಳು ಎಷ್ಟು ನಾಶವಾಯಿತೆಂದು ವೈರಿ ಸೈನ್ಯದಲ್ಲಿ ಯಾರು ತಾನೆ ಬಲ್ಲರು ಎಂದು ಸಂಜಯನು ವಿವರಿಸಿದನು.
ಅರ್ಥ:
ಅರಸು: ರಾಜ; ಮಕ್ಕಳು: ಸುತರು; ಉರುಳು: ಬೀಳು; ಉಳಿದ: ಮಿಕ್ಕ; ಕರಿ: ಆನೆ; ವರೂಥ: ತೇರು, ರಥ; ಪದಾತಿ: ಸೈನಿಕ; ತುರಗ: ಅಶ್ವ; ಅರಸ: ರಾಜ; ಲೆಕ್ಕಿಸು: ಗಮನಿಸು; ಬಲ್ಲರು: ತಿಳಿದವ; ವೈರಿ: ಶತ್ರು; ಸೇನೆ: ಸೈನ್ಯ;
ಪದವಿಂಗಡಣೆ:
ಅರಸು +ಮಕ್ಕಳು +ಮತ್ಸ್ಯ +ಪಾಂಚಾ
ಲರಲಿ +ಕೈಕೆಯ +ಚೈದ್ಯ +ಯಾದವ
ತುರುಕ+ ಬರ್ಬರ +ಗೌಳ +ಮಾಗಧ +ಪಾರಿಯಾತ್ರರಲಿ
ಉರುಳಿತೊಂದೇ +ಲಕ್ಷವುಳಿದ್
ಈ+ ಕರಿ +ವರೂಥ +ಪದಾತಿ +ತುರಗವನ್
ಅರಸ +ಲೆಕ್ಕಿಸಲಾರು +ಬಲ್ಲರು +ವೈರಿ +ಸೇನೆಯಲಿ
ಅಚ್ಚರಿ:
(೧) ರಾಜಮನೆತನಗಳ ಹೆಸರು – ಮತ್ಸ್ಯ, ಪಾಂಚಾಲ, ಕೈಕೆಯ, ಚೈದ್ಯ, ಯಾದವ, ತುರುಕ, ಬರ್ಬರ, ಗೌಳ ಮಾಗಧ, ಪಾರಿಯಾತ್ರ