ವರುಣನಿತ್ತುಪದೇಶ ಬರಿದಿ
ದ್ದರನು ಹೊಯ್ದರೆ ತನ್ನ ಕೊಲುವುದು
ನಿರುತವೆನಲದ ಮರೆದು ಹೊಯ್ದನು ಹರಿಯ ಮಸ್ತಕವ
ಕೆರಳಿ ಗದೆ ಮುರಹರನ ಮುಟ್ಟದೆ
ಮರಳಿ ತನ್ನನೆ ಕೊಂದುದೇನ
ಚ್ಚರಿಯೊ ದೈವದ್ರೋಹಿಗೆತ್ತಣ ಲೇಸುಬಹುದೆಂದ (ದ್ರೋಣ ಪರ್ವ, ೧೦ ಸಂಧಿ, ೧೪ ಪದ್ಯ)
ತಾತ್ಪರ್ಯ:
ವರುಣನು ಶ್ರುತಾಯುಧನಿಗೆ ಆ ಗದೆಯನ್ನು ಕೊಟ್ಟು ಇದನ್ನು ಯುದ್ಧಮಾಡದಿರುವವರ ಮೇಲೆ ಪ್ರಯೋಗಿಸಬೇಡ ಎಂದು ಎಚ್ಚರಿಸಿದ್ದನು. ಹಾಗೇನಾದರೂ ನೀನು ಪ್ರಯೋಗಿಸಿದರೆ ಅದು ನಿನ್ನನ್ನೇ ಕೊಲ್ಲುತ್ತದೆ ಎಂದು ಹೇಳಿದ್ದನು. ಶ್ರುತಾಯುಧನು ಇದನ್ನು ಮರೆತು ಶ್ರೀಕೃಷ್ಣನ ಮೇಲೆ ಆ ಗದೆಯನ್ನು ಹೊಯ್ಯಲು, ಆ ಗದೆಯು ಕೋಪಗೊಂಡು ಶ್ರೀಕೃಷ್ಣನನ್ನು ಮುಟ್ಟದೆ ಶ್ರುತಾಯುಧನನ್ನೇ ಕೊಂದಿತು, ಏನಾಶ್ಚರ್ಯ ದೈವ ದ್ರೋಹಿಗೆ ಎಲ್ಲಿ ಒಳಿತಾದೀತು.
ಅರ್ಥ:
ವರುಣ: ನೀರಿನ ಅಧಿದೇವತೆ; ಉಪದೇಶ: ಬೋಧಿಸುವುದು; ಬರಿ: ಕೇವಲ; ಹೊಯ್ದು: ಹೊಡೆ; ಕೊಲು: ಸಾಯಿಸು; ನಿರುತ: ದಿಟ, ಸತ್ಯ; ಮರೆ: ಜ್ಞಾಪಕವಿಲ್ಲದ ಸ್ಥಿತಿ; ಹರಿ: ವಿಷ್ಣು; ಮಸ್ತಕ: ತಲೆ; ಕೆರಳು: ಕೋಪಗೊಳ್ಳು; ಗದೆ: ಮುದ್ಗರ; ಮುರಹರ: ಕೃಷ್ಣ; ಮುಟ್ಟು: ತಾಗು; ಮರಳಿ: ಮತ್ತೆ, ಹಿಂದಿರುಗು; ಕೊಂದು: ಸಾಯಿಸು; ಅಚ್ಚರಿ: ಆಶ್ಚರ್ಯ; ದೈವ: ಭಗವಂತ; ದ್ರೋಹ: ಮೋಸ; ಲೇಸು: ಒಳಿತು;
ಪದವಿಂಗಡಣೆ:
ವರುಣನಿತ್+ಉಪದೇಶ +ಬರಿದಿ
ದ್ದರನು+ ಹೊಯ್ದರೆ +ತನ್ನ +ಕೊಲುವುದು
ನಿರುತವ್+ಎನಲ್+ಅದ +ಮರೆದು +ಹೊಯ್ದನು +ಹರಿಯ+ ಮಸ್ತಕವ
ಕೆರಳಿ +ಗದೆ +ಮುರಹರನ +ಮುಟ್ಟದೆ
ಮರಳಿ +ತನ್ನನೆ +ಕೊಂದುದ್+ಏನ್
ಅಚ್ಚರಿಯೊ +ದೈವ+ದ್ರೋಹಿಗ್+ಎತ್ತಣ+ ಲೇಸುಬಹುದೆಂದ
ಅಚ್ಚರಿ:
(೧) ಹರಿ, ಮುರಹರ – ಕೃಷ್ಣನನ್ನು ಕರೆದ ಪರಿ
(೨) ಹಿತನುಡಿ – ದೈವದ್ರೋಹಿಗೆತ್ತಣ ಲೇಸುಬಹುದೆಂದ