ಪದ್ಯ ೬೭: ಭೀಮನು ಯಾರನ್ನು ಹುಡುಕುತ್ತಾ ಹೋದನು?

ಬಿಡದಲಾ ಕುರುಸೈನ್ಯ ಹಕ್ಕಲು
ಗಡಿಯ ಭಟರೊಗ್ಗಾಯ್ತಲಾ ದೊರೆ
ಮಡಿದನೋ ಬಳಲಿದನೊ ಮಿಗೆ ಪೂರಾಯಘಾಯದಲಿ
ಪಡೆಯ ಜಂಜಡ ನಿಲಲಿ ಕೌರವ
ರೊಡೆಯನಾವೆಡೆ ನೋಡು ನೋಡೆಂ
ದೊಡನೊಡನೆ ಪವಮಾನಸುತನರಸಿದನು ಕುರುಪತಿಯ (ಗದಾ ಪರ್ವ, ೧ ಸಂಧಿ, ೬೭ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ನಮ್ಮ ಮೇಲೆ ಬರುವುದನ್ನು ಬಿಡಲಿಲ್ಲ, ಕೊಯ್ಲಾದ ಮೇಲೆ ಹೊಲದಲ್ಲಿ ಅಲ್ಲಿ ಇಲ್ಲಿ ಬಿದ್ದ ತೆನೆಗಳಂತಿರುವ ಯೋಧರು ಒಟ್ಟಾದರು. ಅವರಿರಲಿ, ಕೌರವನು ಸತ್ತನೋ, ಗಾಯಗೊಂಡು ಬಳಲಿರುವನೋ ಎಲ್ಲಿಗೆ ಹೋದ ಎಲ್ಲಿದ್ದಾನೆ ಎಂದು ಭೀಮನು ದುರ್ಯೋಧನನನ್ನು ಹುಡುಕುತ್ತಾ ಹೋದನು.

ಅರ್ಥ:
ಬಿಡು: ತೊರೆ; ಹಕ್ಕಲು: ಬತ್ತ, ರಾಗಿ, ಜೋಳ ಮುಂತಾದುವನ್ನು ಕುಯ್ಯುವಾಗ ಭೂಮಿಗೆ ಬಿದ್ದ ತೆನೆ; ಗಡಿ: ಎಲ್ಲೆ; ಭಟ: ಸೈನ್ಯ; ಒಗ್ಗು: ಒಟ್ಟುಗೂಡು; ದೊರೆ: ರಾಜ; ಮಡಿ: ಸತ್ತ; ಬಳಲು: ಆಯಾಸ; ಮಿಗೆ: ಹೆಚ್ಚು; ಪೂರಾಯ: ಪರಿಪೂರ್ಣ; ಘಾಯ: ಪೆಟ್ಟು; ಪಡೆ: ಸೈನ್ಯ; ಜಂಜಡ: ತೊಂದರೆ, ಕ್ಲೇಶ; ನಿಲಲು: ನಿಲ್ಲು; ಒಡೆಯ: ನಾಯಕ; ನೋಡು: ವೀಕ್ಷಿಸು; ಒಡನೊಡನೆ: ಒಮ್ಮೆಲೆ; ಪವಮಾನಸುತ: ವಾಯುಪುತ್ರ (ಭೀಮ); ಅರಸು: ಹುಡುಕು;

ಪದವಿಂಗಡಣೆ:
ಬಿಡದಲಾ +ಕುರುಸೈನ್ಯ +ಹಕ್ಕಲು
ಗಡಿಯ +ಭಟರ್+ಒಗ್ಗಾಯ್ತಲಾ +ದೊರೆ
ಮಡಿದನೋ +ಬಳಲಿದನೊ+ ಮಿಗೆ +ಪೂರಾಯ+ಘಾಯದಲಿ
ಪಡೆಯ +ಜಂಜಡ +ನಿಲಲಿ +ಕೌರವರ್
ಒಡೆಯನಾವೆಡೆ +ನೋಡು +ನೋಡೆಂದ್
ಒಡನೊಡನೆ +ಪವಮಾನಸುತನ್+ಅರಸಿದನು +ಕುರುಪತಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಕ್ಕಲು ಗಡಿಯ ಭಟರೊಗ್ಗಾಯ್ತಲಾ

ಪದ್ಯ ೨೮: ಶಲ್ಯನು ಪಾಂಡವ ಸೇನೆಗೆ ಯಾರನ್ನು ಕರೆತರಲು ಹೇಳಿದನು?

ತಡೆದು ನಿಂದನು ಪರಬಲವ ನಿ
ಮ್ಮೊಡೆಯನಾವೆಡೆ ಸೇನೆ ಕದನವ
ಕೊಡಲಿ ಕೊಂಬವನಲ್ಲ ಕೈದುವ ಸೆಳೆಯೆನುಳಿದರಿಗೆ
ಪೊಡವಿಗೊಡೆಯನು ಕೌರವೇಶ್ವರ
ನೊಡನೆ ಸಲ್ಲದು ಗಡ ಶರಾಸನ
ವಿಡಿಯ ಹೇಳಾ ಧರ್ಮಜನನೆಂದುರುಬಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶಲ್ಯನು ಪಾಂಡವ ಸೇನೆಯನ್ನು ತಡೆದು ನಿಲ್ಲಿಸಿ, ನಿಮ್ಮ ದೊರೆಯೆಲ್ಲಿ? ಅವನು ಯುದ್ಧಕ್ಕೆ ಬರಲಿ, ನೀವು ಯುದ್ಧ ಮಾಡಬಹುದು, ನಾನು ಅದನ್ನು ಸ್ವೀಕರಿಸುವುದಿಲ್ಲ. ಕೌರವನೊಡನೆ ಯುದ್ಧಮಾಡುವುದು ಧರ್ಮಜನಿಗೆ ಸಲ್ಲದು, ಧನುಸ್ಸನ್ನು ಹಿಡಿದು ನನ್ನೊಡನೆ ಯುದ್ಧಕ್ಕೆ ಬರಲಿ ಎಂದು ಘೋಷಿಸಿದನು.

ಅರ್ಥ:
ತಡೆ: ನಿಲ್ಲಿಸು; ನಿಂದು: ನಿಲ್ಲು; ಪರಬಲ: ವೈರಿಸೈನ್ಯ; ಒಡೆಯ: ನಾಯಕ; ಆವೆಡೆ: ಯಾವ ಕಡೆ; ಸೇನೆ: ಸೈನ್ಯ; ಕದನ: ಯುದ್ಧ; ಕೊಂಬು: ಸ್ವೀಕರಿಸು; ಕೈದು: ಆಯುಧ; ಸೆಳೆ: ಆಕರ್ಷಿಸು; ಉಳಿದ: ಮಿಕ್ಕ; ಪೊಡವಿ: ಭೂಮಿ; ಸಲ್ಲದು: ಸರಿಯಾದುದಲ್ಲ; ಗಡ: ಅಲ್ಲವೆ; ಶರಾಸನ: ಬಿಲ್ಲು; ಆಸನ: ಕೂರುವ ಸ್ಥಳ; ಶರ: ಬಾಣ; ವಿಡಿದು: ಹಿಡಿದು, ಗ್ರಹಿಸು; ಉರುಬು: ಅತಿಶಯವಾದ ವೇಗ;

ಪದವಿಂಗಡಣೆ:
ತಡೆದು +ನಿಂದನು +ಪರಬಲವ +ನಿಮ್ಮ್
ಒಡೆಯನ್+ಆವೆಡೆ+ ಸೇನೆ +ಕದನವ
ಕೊಡಲಿ +ಕೊಂಬವನಲ್ಲ+ ಕೈದುವ +ಸೆಳೆಯೆನ್+ಉಳಿದರಿಗೆ
ಪೊಡವಿಗ್+ಒಡೆಯನು +ಕೌರವೇಶ್ವರ
ನೊಡನೆ +ಸಲ್ಲದು +ಗಡ +ಶರಾಸನ+
ವಿಡಿಯ +ಹೇಳಾ +ಧರ್ಮಜನನೆಂದ್+ಉರುಬಿದನು +ಶಲ್ಯ

ಅಚ್ಚರಿ:
(೧) ಬಿಲ್ಲು ಎಂದು ಹೇಳಲು ಶರಾಸನ ಪದದ ಬಳಕೆ
(೨) ಕ ಕಾರದ ಸಾಲು ಪದ – ಕದನವ ಕೊಡಲಿ ಕೊಂಬವನಲ್ಲ ಕೈದುವ

ಪದ್ಯ ೨೦: ಅಮರಗಣವು ಏಕೆ ತಲ್ಲಣಗೊಂಡಿತು?

ಒಡೆಯರಿಲ್ಲಾ ಜಗಕೆ ಲೋಗರ
ಸುಡುವರೊಪ್ಪಿಸಿ ಕೊಡುವರೇ ನಾ
ನೊಡೆಯ ಫಡ ತಾನೊಡೆಯರೆಂಬರು ಮೂವರೀ ಜಗಕೆ
ನುಡಿಯರೀ ಹೊತ್ತಿನಲಿ ನಮಗಿ
ನ್ನೊಡೆಯರಾರಿನ್ನಾರ ಬಸುರೊಳ
ಗಡಗುವೆವು ಶಿವ ಶಿವ ಎನುತ ತಲ್ಲಣಿಸಿತಮರಗಣ (ದ್ರೋಣ ಪರ್ವ, ೧೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ದೇವತಾಗಣವು, ಈ ಲೋಕಕ್ಕೆ ಒಡೆಯರೇ ಇಲ್ಲವೇ? ಲೋಕವನ್ನು ಸುಟ್ಟುಹಾಕುವವರ ಕೈಗೆ ಅದನ್ನೊಪ್ಪಿಸಬಹುದೇ? ಬ್ರಹ್ಮ ವಿಷ್ಣು ಮಹೇಶ್ವರರು ಲೋಕಕ್ಕೆ ನಾನು ಒಡೆಯ ತಾನು ಒಡೆಯ ಎಂದು ಹೇಳಿಕೊಳ್ಳುವರಲ್ಲಾ, ಈ ಹೊತ್ತಿನಲ್ಲಿ ಮಾತಾಡದೆ ಏಕೆ ಸುಮ್ಮನಿದ್ದಾರೆ? ಶಿವ ಶಿವ ನಾವೀಗ ಯಾರ ಹೊಟ್ಟೆಯಲ್ಲಿ ಅಡಗೋಣ ಎಂದು ತಲ್ಲಣಿಸಿತು.

ಅರ್ಥ:
ಒಡೆಯ: ನಾಯಕ; ಜಗ: ಪ್ರಪಂಚ; ಲೋಗ: ಮನುಷ್ಯ; ಸುಡು: ದಹಿಸು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಜಗ: ಪ್ರಪಂಚ; ನುಡಿ: ಮಾತು; ಹೊತ್ತು: ಸಮಯ; ಬಸುರು: ಹೊಟ್ಟೆ; ಅಡಗು: ಅವಿತುಕೊಳ್ಳು; ತಲ್ಲಣ: ಅಂಜಿಕೆ, ಭಯ; ಅಮರ: ದೇವತೆ; ಗಣ: ಗುಂಪು;

ಪದವಿಂಗಡಣೆ:
ಒಡೆಯರಿಲ್ಲಾ +ಜಗಕೆ +ಲೋಗರ
ಸುಡುವರ್+ಒಪ್ಪಿಸಿ +ಕೊಡುವರೇ+ ನಾನ್
ಒಡೆಯ +ಫಡ +ತಾನ್+ಒಡೆಯರೆಂಬರು+ ಮೂವರೀ +ಜಗಕೆ
ನುಡಿಯರೀ +ಹೊತ್ತಿನಲಿ+ ನಮಗಿನ್
ಒಡೆಯರಾರ್+ಇನ್ನಾರ+ ಬಸುರೊಳಗ್
ಅಡಗುವೆವು +ಶಿವ +ಶಿವ +ಎನುತ +ತಲ್ಲಣಿಸಿತ್+ಅಮರಗಣ

ಅಚ್ಚರಿ:
(೧) ಒಡೆಯ – ೧, ೩, ೫ ಸಾಲಿನ ಮೊದಲ ಪದ

ಪದ್ಯ ೬: ಅಶ್ವತ್ಥಾಮನು ಏನೆಂದು ಚಿಂತಿಸಿದನು?

ಏನಿದಚ್ಚರಿ ಕೌರವೇಂದ್ರನ
ಸೇನೆ ತಲೆಕೆಳಗಾಗುತಿದೆ ರಿಪು
ಸೇನೆ ಬೊಬ್ಬಿರಿದಾರುತಿದೆ ಮಡಿದಾತನಾವನನೊ
ಸೇನೆಗೊಡೆಯನು ಬೊಪ್ಪನಿದು ತಾ
ನೇನು ರಥವೇ ಬರಿದು ಬರುತಿದೆ
ಹಾನಿ ಜನಕಂಗಾಯ್ತೊ ಶಿವ ಶಿವ ಎಂದನಾ ದ್ರೌಣಿ (ದ್ರೋಣ ಪರ್ವ, ೧೯ ಸಂಧಿ, ೬ ಪದ್ಯ)

ತಾತ್ಪರ್ಯ:
ಶಿವ ಶಿವಾ ಏನಿದಾಶ್ಚರ್ಯ, ಕೌರವ ಸೈನ್ಯವು ಬುಡಬ್ಮೇಲಾಗಿದೆ, ಪಾಂಡವ ಸೇನೆಯು ಜೋರಾಗಿ ಗರ್ಜಿಸುತ್ತಿದೆ. ಯಾರು ಯುದ್ಧದಲ್ಲಿ ಮಡಿದರೋ ಏನೋ, ನನ್ನ ತಂದೆಯೇ ಸೇನಾಧಿಪತಿ, ಅವನ ರಥ ಬರಿದಾಗಿ ಬರುತ್ತಿದೆ, ತಂದೆಗೆ ಹಾನಿಯಾಯಿತೇ ಎಂದು ಅಶ್ವತ್ಥಾಮನು ಚಿಂತಿಸಿದನು.

ಅರ್ಥ:
ಅಚ್ಚರಿ: ಆಶ್ಚರ್ಯ; ಸೇನೆ: ಸೈನ್ಯ; ತಲೆಕೆಳಗೆ: ಉಲ್ಟ, ಏರುಪೇರು; ರಿಪು: ವೈರಿ; ಬೊಬ್ಬಿರಿ: ಗರ್ಜಿಸು; ಮಡಿ: ಸಾವು; ಒಡೆಯ: ನಾಯಕ; ಬೊಪ್ಪ: ತಂದೆ; ರಥ: ಬಂಡಿ; ಬರಿ: ಕಾಲಿ; ಬರುತಿದೆ: ಆಗಮಿಸು; ಹಾನಿ: ನಷ್ಟ; ಜನಕ: ತಂದೆ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಏನಿದಚ್ಚರಿ +ಕೌರವೇಂದ್ರನ
ಸೇನೆ +ತಲೆಕೆಳಗಾಗುತಿದೆ +ರಿಪು
ಸೇನೆ +ಬೊಬ್ಬಿರಿದಾರುತಿದೆ +ಮಡಿದಾತನ್+ಆವನನೊ
ಸೇನೆಗ್+ಒಡೆಯನು +ಬೊಪ್ಪನಿದು +ತಾ
ನೇನು +ರಥವೇ +ಬರಿದು +ಬರುತಿದೆ
ಹಾನಿ+ ಜನಕಂಗಾಯ್ತೊ +ಶಿವ+ ಶಿವ +ಎಂದನಾ +ದ್ರೌಣಿ

ಅಚ್ಚರಿ:
(೧) ಬೊಪ್ಪ, ಜನಕ – ಸಮಾನಾರ್ಥಕ ಪದ

ಪದ್ಯ ೨೧: ಆರು ರಥಿಕರು ಯಾರ ಹಂಗಿಗರಾದರು?

ವಿರಥನಾದನು ಕರ್ಣನಂಬಿಗೆ
ತಿರುಹಿ ಬಿಲ್ಲನು ತೊಟ್ಟನಾ ಗುರು
ಗುರುತನೂಜನು ತನ್ನ ಸೂತನ ಶಿರವ ಹರಿಯೆಚ್ಚ
ಸುರಗಿಯನು ಬಿಸುಟೊರೆಯ ತಿರುಹಿದ
ನರಸನನುಜನು ಕೃಪನ ಶಲ್ಯನು
ಕೊರಳಲಸುಗಳ ಹಿಡಿದು ಹಂಗಿಗರಾದರೊಡೆಯರಿಗೆ (ದ್ರೋಣ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕರ್ಣನು ರಥವಿಲ್ಲದಂತಾದನು, ದ್ರೋಣನು ಬಿಲ್ಲನ್ನು ತಿರುಮುರುಗು ಹಿಡಿದು ಬಾಣವನ್ನು ಹಿಡಿದು ಬಾಣವನ್ನು ಹೂಡಿದನು. ಅಶ್ವತ್ಥಾಮನು ತನ್ನ ಸಾರಥಿಯ ಕತ್ತನ್ನೇ ಬಾಣದಿಂದ ಕತ್ತರಿಸಿದನು. ದುಶ್ಯಾಸನು ಸುರಗಿಯನ್ನೆಸೆದು ಅದರ ಒರೆಯನ್ನೇ ಹಿಡಿದನು. ಕೃಪ ಶಲ್ಯರ ಪ್ರಾಣಗಳು ಕುತ್ತಿಗೆಗೆ ಬಂದು ಅಭಿಮನ್ಯುವಿನ ಹಂಗಿಗೊಳಗಾದರು.

ಅರ್ಥ:
ವಿರಥ: ರಥವಿಲ್ಲದ ಸ್ಥಿತಿ; ಅಂಬು: ಬಾಣ; ತಿರುಹು: ತಿರುಗಿಸು; ಬಿಲ್ಲು: ಚಾಪ; ತೊಟ್ಟು: ಧರಿಸು; ಗುರು: ಆಚಾರ್ಯ; ತನೂಜ: ಮಗ; ಸೂತ: ರಥಿ; ಶಿರ: ತಲೆ; ಹರಿ: ಚೆಲ್ಲು; ಎಚ್ಚು: ಬಾಣ ಪ್ರಯೋಗ ಮಾಡು; ಸುರಗಿ: ಸಣ್ಣ ಕತ್ತಿ, ಚೂರಿ; ಬಿಸುಟು: ಹೊರಹಾಕು; ಒರೆ: ಸವರು, ಉಜ್ಜು; ಅರಸ: ರಾಜ; ಅನುಜ: ತಮ್ಮ; ಕೊರಳು: ಕಂಠ; ಅಸು: ಪ್ರಾಣ; ಹಿಡಿ: ಗ್ರಹಿಸು; ಹಂಗು: ದಾಕ್ಷಿಣ್ಯ; ಒಡೆಯ: ನಾಯಕ;

ಪದವಿಂಗಡಣೆ:
ವಿರಥನಾದನು +ಕರ್ಣನ್+ಅಂಬಿಗೆ
ತಿರುಹಿ +ಬಿಲ್ಲನು +ತೊಟ್ಟನ್+ಆ+ ಗುರು
ಗುರುತನೂಜನು+ ತನ್ನ +ಸೂತನ +ಶಿರವ+ ಹರಿ+ಎಚ್ಚ
ಸುರಗಿಯನು +ಬಿಸುಟ್+ಒರೆಯ +ತಿರುಹಿದನ್
ಅರಸನ್+ಅನುಜನು+ ಕೃಪನ +ಶಲ್ಯನು
ಕೊರಳಲ್+ಅಸುಗಳ +ಹಿಡಿದು +ಹಂಗಿಗರ್+ಆದರ್+ಒಡೆಯರಿಗೆ

ಅಚ್ಚರಿ:
(೧) ಎಲ್ಲರ ದೈನ್ಯದ ಸ್ಥಿತಿಯನ್ನು ವರ್ಣಿಸುವ ಪದ್ಯ – ತಿರುಹಿ ಬಿಲ್ಲನು ತೊಟ್ಟನಾ ಗುರು

ಪದ್ಯ ೨೪: ಪಾಂಡವ ಸೈನ್ಯದವರು ಏನು ಮಾತಾಡಿದರು?

ಕಡುಹು ಹಿರಿದೋ ಕಾಲರುದ್ರನ
ಪಡೆಯಲಾಡುವನೀತನೋ ಮೈ
ಗೊಡದಿರೋ ಬಲಹೊರಳಿಯೊಡೆಯಲಿ ಹೋಗಿ ದೆಸೆದೆಸೆಗೆ
ತಡೆಯಲರಿದೋ ತಡವು ಮಾಡದಿ
ರೊಡಲ ಬದುಕಿಸಿಕೊಳ್ಳಿ ನೋಡುವೆ
ವೊಡೆಯರನು ಬಳಿಕೆನುತ ಮುರಿದುದು ಪಾಂಡುಸುತಸೇನೆ (ಭೀಷ್ಮ ಪರ್ವ, ೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪಾಂಡವರ ಸೈನ್ಯದ ಯೋಧರು ಭೀಷ್ಮನ ರಭಸವು ಬಹಳ ಹೆಚ್ಚಾಗಿದೆ, ಇವನು ಕಾಲರುದ್ರನ ಸೈನ್ಯದ ವೀರನೇ ಇರಬೇಕು, ಇವನ ಹೊಡೆತಕ್ಕೆ ನಿಮ್ಮ ದೇಹವನ್ನು ಅರ್ಪಿಸಿಕೊಳ್ಳಬೇಡಿ, ಸೈನ್ಯವು ವ್ಯೂಹವನ್ನು ಬಿಟ್ಟು ದಿಕ್ಕಾಪಾಲಾಗಿ ಓಡಲಿ, ಭೀಷ್ಮನನ್ನು ತಡೆಯಲು ಆಗುವುದಿಲ್ಲ, ತಡ ಮಾಡದೆ ಓಡಿ ಹೋಗಿ, ಈಗ ಬದುಕಿಕೊಳ್ಳೋಣ, ಆಮೇಲೆ ನಮ್ಮ ಒಡೆಯರಿಗೆ ಒಂದು ಸಬೂಬು ಹೇಳಿದರಾಯಿತು ಎಂದು ಪಾಂಡವರ ಸೈನ್ಯದವರು ಮಾತಾಡಿದರು.

ಅರ್ಥ:
ಕಡುಹು: ಸಾಹಸ, ಹುರುಪು, ಉತ್ಸಾಹ; ಹಿರಿದು: ಹೆಚ್ಚಿನದು; ಕಾಲರುದ್ರ: ಪ್ರಳಯಕಾಲದ ಶಿವನ ರೂಪ; ಪಡೆ: ಸೈನ್ಯ; ಮೈಗೊಡು: ಶರೀರವನ್ನು ನೀಡು; ಬಲ: ಸೈನ್ಯ; ಹೊರಳು: ಉರುಳಾಡು, ಉರುಳು; ಒಡೆ: ಸೀಳು; ದೆಸೆ: ದಿಕ್ಕು; ತಡೆ: ನಿಲ್ಲು; ಅರಿ: ತಿಳಿ; ತಡವು: ಕೆಣಕು; ತಡೆ; ಮಾಡು: ಈಡೇರಿಸು; ಒಡಲು: ದೇಹ; ಬದುಕು: ಜೀವಿಸು; ನೋಡು: ವೀಕ್ಷಿಸು; ಒಡೆಯ: ರಾಜ; ಬಳಿಕ: ನಂತರ; ಮುರಿ: ಸೀಳು; ಸುತ: ಮಕ್ಕಳು; ಸೇನೆ: ಸೈನ್ಯ;

ಪದವಿಂಗಡಣೆ:
ಕಡುಹು+ ಹಿರಿದೋ +ಕಾಲರುದ್ರನ
ಪಡೆಯಲ್+ಆಡುವನ್+ಈತನೋ +ಮೈ
ಗೊಡದಿರೋ+ ಬಲ+ಹೊರಳಿ+ಒಡೆಯಲಿ +ಹೋಗಿ +ದೆಸೆದೆಸೆಗೆ
ತಡೆಯಲ್+ಅರಿದೋ +ತಡವು +ಮಾಡದಿರ್
ಒಡಲ +ಬದುಕಿಸಿಕೊಳ್ಳಿ +ನೋಡುವೆ
ಒಡೆಯರನು +ಬಳಿಕ+ಎನುತ +ಮುರಿದುದು +ಪಾಂಡುಸುತ+ಸೇನೆ

ಅಚ್ಚರಿ:
(೧) ಜೀವ ಉಳಿಸಿಕೊಳ್ಳಿ ಎಂದು ಹೇಳುವ ಪರಿ – ಒಡಲ ಬದುಕಿಸಿಕೊಳ್ಳಿ ನೋಡುವೆ ಒಡೆಯರನು ಬಳಿಕ
(೨) ಭೀಷ್ಮನ ರೌದ್ರವನ್ನು ವಿವರಿಸುವ ಪರಿ – ಕಡುಹು ಹಿರಿದೋ ಕಾಲರುದ್ರನಪಡೆಯಲಾಡುವನೀತನೋ

ಪದ್ಯ ೩೨: ದ್ರೋಣನನ್ನು ಧರ್ಮಜನು ಏನು ಕೇಳಿದನು?

ಎವಗೆ ದೈವವು ನೀನು ಗುರು ನೀ
ನೆವಗೆ ತಾತನು ನೀನು ಮಹದಾ
ಹವದೊಳಗೆ ಪತಿಕರಿಸಿ ರಕ್ಷಿಸಲೊಡೆಯ ನೀನೆಮಗೆ
ಅವನಿಯಭಿಲಾಷೆಯಲಿ ತೆತ್ತುದು
ಬವರವೆಮಗಿನ್ನೇನು ಗತಿ ಕೌ
ರವ ಜಯೋಪಾಯಕ್ಕೆ ಹದನೇನೆಂದು ನೃಪ ನುಡಿದ (ಭೀಷ್ಮ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಧರ್ಮಜನು ಆಚಾರ್ಯ ದ್ರೋಣರಿಗೆ ವಂದಿಸಿ, ನೀವೇ ನಮಗೆ ದೈವಸ್ವರೂಪರು, ನಮಗೆ ಆಚಾರ್ಯರು, ತಂದೆಯೂ ಸಹ ನೀವೆ, ಈ ಯುದ್ಧದಲ್ಲಿ ನಮ್ಮನ್ನು ರಕ್ಷಿಸ್ವುಅ ಒಡೆಯನೂ ನೀನೆ, ಭೂಮಿಯ ಮೇಲಿನ ಆಶೆಯಿಂದ ಈ ಯುದ್ಧವು ಘಟಿಸಿದೆ, ಕೌರವನನ್ನು ಜಯಿಸುವ ಬಗೆಯೇನು, ಎಂದು ದ್ರೋಣನನ್ನು ಕೇಳಿದನು.

ಅರ್ಥ:
ದೈವ: ಭಗವಂತ; ಗುರು: ಆಚಾರ್ಯ; ತಾತ: ತಂದೆ; ಆಹವ: ಯುದ್ಧ; ಪತಿಕರಿಸು: ಅನುಗ್ರಹಿಸು; ರಕ್ಷಿಸು: ಕಾಪಾಡು; ಒಡೆಯ: ದೊರೆ; ಅವನಿ: ಭೂಮಿ; ಅಭಿಲಾಷೆ: ಇಚ್ಛೆ; ತೆತ್ತು: ಒಡ್ದು; ಬವರ: ಯುದ್ಧ; ಗತಿ: ಅವಸ್ಥೆ; ಜಯ: ಗೆಲುವು; ಹದ: ಸ್ಥಿತಿ; ನೃಪ: ರಾಜ; ನುಡಿ: ಮಾತಾಡು;

ಪದವಿಂಗಡಣೆ:
ಎವಗೆ +ದೈವವು +ನೀನು +ಗುರು+ ನೀನ್
ಎವಗೆ +ತಾತನು +ನೀನು +ಮಹದ್
ಆಹವದೊಳಗೆ+ ಪತಿಕರಿಸಿ+ ರಕ್ಷಿಸಲ್+ಒಡೆಯ +ನೀನೆಮಗೆ
ಅವನಿ+ಅಭಿಲಾಷೆಯಲಿ +ತೆತ್ತುದು
ಬವರವ್+ಎಮಗಿನ್ನೇನು +ಗತಿ+ ಕೌ
ರವ+ ಜಯೋಪಾಯಕ್ಕೆ +ಹದನೇನೆಂದು +ನೃಪ +ನುಡಿದ

ಅಚ್ಚರಿ:
(೧) ಆಹವ, ಬವರ – ಸಮನಾರ್ಥಕ ಪದಗಳು

ಪದ್ಯ ೧೧: ಉತ್ತರನು ಸಾರಥಿಯನ್ನು ಹೇಗೆ ಬಯ್ದನು?

ನುಡಿಯ ಕೇಳದೆ ಮೂಮ್ದೆ ನಾಲ್ಕೆಂ
ಟಡಿಯನರ್ಜುನ ರಥವ ನಡೆಸಲು
ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯ ನರ ತೆಗೆದು
ಹಿಡಿ ಹಯವನಿರಿಗಾರ ಸಾರಥಿ
ನುಡಿವವರು ನಾವ್ ಹಗೆಗಳೇ ನಿ
ನ್ನೊಡೆಯರಲ್ಲಾ ಸ್ವಾಮಿ ದುರುಹಿತೆ ಲೇಸು ಲೇಸೆಂದ (ವಿರಾಟ ಪರ್ವ, ೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರನ ಮಾತನ್ನು ಮೀರಿ ನಾಲ್ಕೆಂಟು ಅಡಿ ದೂರ ರಥವನ್ನು ನಡೆಸುವುದರೊಳಗೆ, ಉತ್ತರನ ಕೈನರಗಳು ಸಡಲಿ ಬಿಲ್ಲು ಬಾಣಗಳು ಕೆಳಗೆ ಬಿದ್ದವು. ಎಲೋ ದ್ರೋಹಿಯಾದ ಸಾರಥಿ, ಕುದುರೆಗಳನ್ನು ನಿಲ್ಲಿಸು, ಹೀಗೆ ಹೇಳುವ ನಾನು ನಿನ್ನ ಒಡೆಯ, ಶತ್ರುವಲ್ಲ, ಸ್ವಾಮಿದ್ರೋಹಿಯೇ ನಿನ್ನ ಕಾರ್ಯ ಬಲು ಚೆನ್ನಾಗಿದೆ ಎಂದು ಉತ್ತರನು ಹೇಳಿದನು.

ಅರ್ಥ:
ನುಡಿ: ಮಾತು; ಕೇಳು: ಆಲಿಸು; ಮುಂದೆ: ಎದುರು; ಅಡಿ:ಹನ್ನೆರಡು ಅಂಗುಲದ ಉದ್ದಳತೆ; ರಥ: ಬಂಡಿ; ನಡೆಸು: ಚಲಿಸು; ಹಿಡಿ ಬಂಧಿಸು; ಬಿಲ್ಲು: ಚಾಪ; ಅಂಬು: ಬಾಣ; ಬಿದ್ದು: ಕೆಳಗೆ ಬೀಳು; ಕೈ: ಹಸ್ತ; ನರ: ಅರ್ಜುನ; ತೆಗೆ: ಹೊರತರು; ಹಿಡಿ: ಗ್ರಹಿಸು; ಹಯ: ಕುದುರೆ; ಸಾರಥಿ: ಸೂತ; ಹಗೆ: ಶತ್ರು; ಒಡೆಯ: ನಾಯಕ; ದುರಹಿತ: ದ್ರೋಹ, ವಿಶ್ವಾಸಘಾತ; ಲೇಸು: ಒಳಿತು;

ಪದವಿಂಗಡಣೆ:
ನುಡಿಯ +ಕೇಳದೆ +ಮುಂದೆ+ ನಾಲ್ಕೆಂಟ್
ಅಡಿಯನ್+ಅರ್ಜುನ +ರಥವ +ನಡೆಸಲು
ಹಿಡಿದ +ಬಿಲ್ಲ್+ಅಂಬುಗಳು +ಬಿದ್ದವು +ಕೈಯ +ನರ +ತೆಗೆದು
ಹಿಡಿ +ಹಯವನ್+ಇರಿಗಾರ+ ಸಾರಥಿ
ನುಡಿವವರು +ನಾವ್ +ಹಗೆಗಳೇ+ ನಿನ್ನ್
ಒಡೆಯರಲ್ಲಾ +ಸ್ವಾಮಿ +ದುರುಹಿತೆ ಲೇಸು ಲೇಸೆಂದ

ಅಚ್ಚರಿ:
(೧) ಉತ್ತರನ ಹೆದರಿಕೆಯನ್ನು ಚಿತ್ರಿಸುವ ಪರಿ – ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯ ನರ ತೆಗೆದು
(೨) ನುಡಿ, ಅಡಿ, ಹಿಡಿ – ಪ್ರಾಸ ಪದಗಳು

ಪದ್ಯ ೧೮: ಕಂಸನನ್ನು ಯಾರು ಕೊಂದರು?

ಆದರಿವನನು ತುತಿಸುವೊಡೆ ಮೇ
ಲಾದ ಕಷ್ಟವನೇನ ಹೇಳುವೆ
ನೀ ದುರಾತ್ಮಕ ಸಾಕಿದೊಡೆಯನನಿರಿದ ಸಬಳವಲೇ
ಸೋದರಿಯಲಾ ಕೃಷ್ಣನವ್ವೆ ವಿ
ವಾದವೇ ಸಾಕಿದನಲಾ ಕೈ
ಗಾದನೇ ಕಂಸಂಗೆ ಮುನಿವುದಿದಾವ ಘನವೆಂದ (ಸಭಾ ಪರ್ವ, ೧೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಈ ಕೃಷ್ಣನನ್ನು ಹೊಗಳೋಣವೆಂದರೆ ಆಗ ಬರುವ ತೊಂದರೆಗಳನ್ನು ಏನೆಂದು ಹೇಳಲಿ, ಈ ದುಷ್ಟನು ಇವನನ್ನು ಸಾಕಿದ ಒಡೆಯನನ್ನು ಕೊಂದ ಈಟಿಯಂತಹವನು. ಕಂಸನು ಕೃಷ್ಣನ ಅಮ್ಮ ದೇವಕಿಯ ಅಣ್ಣನಲ್ಲವೇ? ಅವಳನ್ನು ಸಾಕಿದವ, ತಾಯಿಯನ್ನು ಸಾಕಿದವನೆಂದಾದರೂ ಸೋದರಮಾವ ಕಂಸನನ್ನು ಇವನು ಉಳಿಸಿದನೇ?

ಅರ್ಥ:
ತುತಿ: ಹೊಗಳಿಕೆ, ಸ್ತುತಿ; ಮೇಲಾದ: ಹಿಂದೆ ಹೇಳಿದ; ಕಷ್ಟ: ಬೇನೆ, ನೋವು, ತೊಂದರೆ; ಹೇಳು: ತಿಳಿಸು; ದುರಾತ್ಮ: ಕೆಟ್ಟವ; ಸಾಕು: ಸಲಹು; ಒಡೆಯ: ದೊರೆ; ಅರಿ: ತಿವಿ, ಸೀಳು; ಸಬಳ:ಈಟಿ, ಭರ್ಜಿ; ಸೋದರಿ: ತಂಗಿ; ಅವ್ವೆ: ತಾಯಿ; ವಿವಾದ: ವಾಗ್ದಾನ, ಚರ್ಚೆ, ಕಲಹ; ಸಾಕು: ಸಲಹು; ಮುನಿ: ಕೋಪ; ಘನ: ಶ್ರೇಷ್ಠ; ಕೈಗಾಯ್: ರಕ್ಷಿಸು;

ಪದವಿಂಗಡಣೆ:
ಆದರ್+ಇವನನು+ ತುತಿಸುವೊಡೆ +ಮೇ
ಲಾದ +ಕಷ್ಟವನ್+ಏನ +ಹೇಳುವೆನ್
ಈ +ದುರಾತ್ಮಕ +ಸಾಕಿದ್+ಒಡೆಯನನ್+ಇರಿದ+ ಸಬಳವಲೇ
ಸೋದರಿಯಲಾ+ ಕೃಷ್ಣನ್+ಅವ್ವೆ+ ವಿ
ವಾದವೇ +ಸಾಕಿದನಲಾ+ ಕೈ
ಗಾದನೇ +ಕಂಸಂಗೆ +ಮುನಿವುದ್+ಇದಾವ +ಘನವೆಂದ

ಅಚ್ಚರಿ:
(೧) ಕೃಷ್ಣನನ್ನು ಈಟಿಗೆ ಹೋಲಿಸುವ ಪರಿ – ದುರಾತ್ಮಕ ಸಾಕಿದೊಡೆಯನನಿರಿದ ಸಬಳವಲೇ

ಪದ್ಯ ೨೪: ದುರ್ಯೋಧನನು ಶಲ್ಯನ ಕೋಪವನ್ನು ಹೇಗೆ ಶಮನ ಮಾಡಲು ಪ್ರಯತ್ನಿಸಿದನು?

ಒಡನೆ ನಿಂದನು ಸೆರಗ ಹಿಡಿದವ
ಗಡಿಸಲೇಕಿನ್ನೆನುತ ಗುಣದಲಿ
ನುಡಿದು ಕುಳ್ಳಿರಿಸಿದನು ಸಂತೈಸಿದನು ವಿನಯದಲಿ
ನುಡಿಗೆ ಕೋಪಿಸಲೇಕೆ ಮನವೊಡ
ಬಡುವುದೇ ಕೈಕೊಂಬುದಲ್ಲದ
ಡೊಡೆಯರುಂಟೇ ನಿಮಗೆ ಎಂದನು ಕೌರವರ ರಾಯ (ಕರ್ಣ ಪರ್ವ, ೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶಲ್ಯನ ಕ್ರೋಧದ ಮಾತುಗಳನ್ನು ಕೇಳಿ ದುರ್ಯೋಧನನು ನಿಂತನು, ತನ್ನ ಉತ್ತರೀಯವನ್ನು ಹಿಡಿದು ಹೀಗೇಕೆ ವಿರೋಧಿಸುವಿರಿ ಎಂದು ವಿನಯದಿಂದ ಕೇಳಿ ಸಂತೈಸಿದನು. ನಾನಾಡಿದ ಮಾತಿನಿಂದ ನೀವೇಕೆ ಕೋಪಗೊಳ್ಳುವಿರಿ, ನಿಮ್ಮ ಮನಸ್ಸಿಗೆ ಇದು ಉಚಿತವೆನಿಸಿದರೆ ಒಪ್ಪಿಕೊಳ್ಳಿ ಇಲ್ಲವಾದರೆ ನಿಮಗೆ ಆಜ್ಞೆಕೊಡುವವರು ಯಾರಿದ್ದಾರೆ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಒಡನೆ: ತಕ್ಷಣ; ನಿಂದನು: ನಿಲ್ಲು; ಸೆರಗ: ಉತ್ತರೀಯ; ಹಿಡಿದು: ಗ್ರಹಿಸು, ಕೈಕೊಳ್ಳು; ಗಡಸು: ಗಟ್ಟಿ, ಒರಟು; ಅವಗಡಿಸು: ವಿರೋಧಿಸು; ಗುಣ: ನಡತೆ, ಸ್ವಭಾವ; ನುಡಿ: ಮಾತು; ಕುಳ್ಳಿರಿಸು: ಕೂತುಕೋ, ಆಸೀನನಾಗು; ಸಂತೈಸು: ಸಮಾಧಾನ ಪಡಿಸು; ವಿನಯ: ಒಳ್ಳೆಯತನ, ಸೌಜನ್ಯ; ಕೋಪ: ಸಿಟ್ಟು, ಕ್ರೋಧ; ಮನ: ಮನಸ್ಸು; ಒಡಬಡು: ಹೊಂದು; ಕೈಕೊಂಬು: ಒಪ್ಪಿಕೋ, ಮಾಡು; ಒಡೆಯ: ನಾಯಕ; ರಾಯ: ರಾಜ;

ಪದವಿಂಗಡಣೆ:
ಒಡನೆ +ನಿಂದನು +ಸೆರಗ +ಹಿಡಿದ್+ಅವ
ಗಡಿಸಲೇಕಿನ್+ಎನುತ +ಗುಣದಲಿ
ನುಡಿದು +ಕುಳ್ಳಿರಿಸಿದನು+ ಸಂತೈಸಿದನು+ ವಿನಯದಲಿ
ನುಡಿಗೆ+ ಕೋಪಿಸಲೇಕೆ+ ಮನವ್+ಒಡ
ಬಡುವುದೇ +ಕೈಕೊಂಬುದ್+ಅಲ್ಲದಡ್
ಒಡೆಯರುಂಟೇ +ನಿಮಗೆ+ ಎಂದನು +ಕೌರವರ+ ರಾಯ

ಅಚ್ಚರಿ:
(೧) ಒಡನೆ, ಒಡೆಯ – ೧, ೬ ಸಾಲಿನ ಮೊದಲ ಪದ
(೨) ನಿಲ್ಲುವ ಪರಿ – ಒಡನೆ ನಿಂದನು ಸೆರಗ ಹಿಡಿದ್
(೩) ಸಂತೈಸುವ ಬಗೆ – ಮನವೊಡಬಡುವುದೇ ಕೈಕೊಂಬುದಲ್ಲದಡೊಡೆಯರುಂಟೇ ನಿಮಗೆ
(೪) ಒಡೆಯ, ರಾಯ – ಸಮನಾರ್ಥಕ ಪದ, ೬ನೇ ಸಾಲಿನ ಮೊದಲ ಮತ್ತು ಕೊನೆ ಪದ