ಪದ್ಯ ೨೫: ಶಂತನು ಕಾಡಿನಲ್ಲಿ ಯಾರನ್ನು ಕಂಡನು?

ಪರಿಮಳದ ಬಳಿವಿಡಿದು ಬಂದೀ
ತರುಣಿಯನು ಕಂಡಾರು ನೀನೆಂ
ದರಸ ಬೆಸಗೊಳುತೆಸುವ ಕಾಮನ ಶರಕೆ ಮೈಯೊಡ್ಡಿ
ಅರಮನೆಗೆ ನಡೆಯೆನಲು ತಂದೆಯ
ಪರಮವಚನವಲಂಘ್ಯವೆನೆ ಕಾ
ತರಿಸಿ ಭಗ್ನಮನೋರಥನು ಮರಳಿದನು ಮಂದಿರಕೆ (ಆದಿ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಂತನು ಬೇಟೆಯಾಡುತ್ತಿರುವಾಗ ಯೋಜನಗಮ್ಧಿಯ ಪದ್ಮಪುಷ್ಪದ ಸುವಾಸನೆಯು ಗಾಳಿಯಲ್ಲಿ ಬಂದಿತು. ಅವನು ಆ ದಾರಿಯನ್ನು ಹಿಡಿದು ಹೋಗಿ ಅವಳನ್ನು ಕಂಡು, ಮದನಶರಗಳಿಂದ ಗಾಯಗೊಂಡು ಅವಳಿಗೆ ನೀನು ಯಾರು? ಅರಮನೆಗೆ ಹೋಗೋಣ ಬಾ ಎಂದನು. ಅವಳು ನನ್ನ ತಂದೆಯ ಮಾತನ್ನು ದಾಟಲಾಗುವುದಿಲ್ಲ ಎಂದಳು. ಮನಸ್ಸು ಮುರಿದ ಶಂತನು ಕಾತರದಿಂದ ತನ್ನರಮನೆಗೆ ಹಿಂದಿರುಗಿದನು.

ಅರ್ಥ:
ಪರಿಮಳ: ಸುಗಂಧ; ಬಳಿ: ಹತ್ತಿರ; ಬಂದು: ಆಗಮಿಸು; ತರುಣಿ: ಹೆಣ್ಣು; ಕಂಡು: ನೋಡು; ಅರಸ: ರಾಜ; ಬೆಸಸು: ಹೇಳು; ಎಸು: ಬಾಣ ಪ್ರಯೋಗ; ಕಾಮ: ಮನ್ಮಥ; ಶರ: ಬಾಣ; ಮೈಯೊಡ್ಡು: ದೇಹವನ್ನು ತೋರು; ಅರಮನೆ: ರಾಜರ ಆಲಯ; ನಡೆ: ಚಲಿಸು; ತಂದೆ: ಪಿತ; ಪರಮ: ಶ್ರೇಷ್ಠ; ವಚನ: ಮಾತು; ಅಲಂಘ್ಯ: ದಾಟಲಸಾಧ್ಯವಾದ; ಕಾತರ: ಕಳವಳ; ಭಗ್ನ: ನಾಶ; ಮನೋರಥ: ಆಸೆ, ಬಯಕೆ; ಮರಳು: ಹಿಂದಿರುಗು; ಮಂದಿರ: ಆಲಯ, ಮನೆ;

ಪದವಿಂಗಡಣೆ:
ಪರಿಮಳದ +ಬಳಿವಿಡಿದು +ಬಂದ್ +ಈ
ತರುಣಿಯನು +ಕಂಡ್+ಆರು +ನೀನ್
ಎಂದ್+ಅರಸ +ಬೆಸಗೊಳುತ್+ಎಸುವ +ಕಾಮನ +ಶರಕೆ +ಮೈಯೊಡ್ಡಿ
ಅರಮನೆಗೆ +ನಡೆ+ಎನಲು +ತಂದೆಯ
ಪರಮ+ವಚನವ್+ಅಲಂಘ್ಯವ್+ಎನೆ +ಕಾ
ತರಿಸಿ +ಭಗ್ನ+ಮನೋರಥನು+ ಮರಳಿದನು +ಮಂದಿರಕೆ

ಅಚ್ಚರಿ:
(೧) ಮೋಹಗೊಂಡನು ಎಂದು ಹೇಳುವ ಪರಿ – ಎಸುವ ಕಾಮನ ಶರಕೆ ಮೈಯೊಡ್ಡಿ

ಪದ್ಯ ೯: ಯಾರು ಯಾರ ಮನೆಯನ್ನು ಸೇರಿದರು?

ಆ ಸುಯೋಧನನರಮನೆಯನವ
ನೀಶ ಹೊಕ್ಕನು ಪವನಸುತ ದು
ಶ್ಯಾಸನನ ಸದನವನು ಪಾರ್ಥಗೆ ಕರ್ಣಭವನದಲಿ
ವಾಸವಾದುದು ಯಮಳರಿಗೆ ದು
ಶ್ಯಾಸನಾನುಜರರಮನೆಗಳುಳಿ
ದೈಸುಮನೆ ಭಂಡಾರವಾದುದು ಭೂಪ ಕೇಳೆಂದ (ಗದಾ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನು ಸುಯೋಧನನ ಅರಮನೆಯನ್ನು ಹೊಕ್ಕನು, ಭೀಮನು ದುಶ್ಯಾಸನನ ಮನೆಯನ್ನೂ, ಅರ್ಜುನನು ಕರ್ಣನ ಭವನವನ್ನು, ನಕುಲಸಹದೇವರು ದುಶ್ಯಾಸನನಿಗಿಂದ ಚಿಕ್ಕವರಾದ ಕೌರವರ ಮನೆಗಳನ್ನು ಹೊಕ್ಕರು. ಉಳಿದೆಲ್ಲ ಅರಮನೆಗಳೂ ಭಂಡಾರ ಭವನಗಳಾದವು.

ಅರ್ಥ:
ಅರಮನೆ: ರಾಜರ ಆಲಯ; ಅವನೀಶ: ರಾಜ; ಹೊಕ್ಕು: ಸೇರು; ಪವನಸುತ: ಭೀಮ; ಪವನ: ಗಾಳಿ, ವಾಯು; ಸುತ: ಮಗ; ಸದನ: ಆಲಯ; ಭವನ: ಆಲಯ; ವಾಸ: ಜೀವಿಸು; ಯಮಳ: ಜೋಡಿ ಮಕ್ಕಳು, ಅವಳಿ; ಅನುಜ: ತಮ್ಮ; ಉಳಿದ: ಮಿಕ್ಕ; ಐಸು: ಎಲ್ಲ; ಭಂಡಾರ: ಬೊಕ್ಕಸ, ಖಜಾನೆ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆ+ ಸುಯೋಧನನ್+ಅರಮನೆಯನ್+ಅವ
ನೀಶ +ಹೊಕ್ಕನು+ ಪವನಸುತ +ದು
ಶ್ಯಾಸನನ+ ಸದನವನು +ಪಾರ್ಥಗೆ +ಕರ್ಣ+ಭವನದಲಿ
ವಾಸವಾದುದು +ಯಮಳರಿಗೆ +ದು
ಶ್ಯಾಸನ+ಅನುಜರ್+ಅರಮನೆಗಳ್+ಉಳಿದ್
ಐಸು+ಮನೆ +ಭಂಡಾರವಾದುದು +ಭೂಪ +ಕೇಳೆಂದ

ಅಚ್ಚರಿ:
(೧) ಸದನ, ಮನೆ, ಅರಮನೆ, ಭವನ – ಸಾಮ್ಯಾರ್ಥ ಪದ
(೨) ಒಂದೇ ಪದವಾಗಿ ರಚನೆ: ಸುಯೋಧನನರಮನೆಯನವನೀಶ, ದುಶ್ಯಾಸನಾನುಜರರಮನೆಗಳುಳಿದೈಸುಮನೆ

ಪದ್ಯ ೧೭: ಯಾವ ಆಲಯಗಳಿಂದ ಗಾಡಿಗಳನ್ನು ತುಂಬಿದರು?

ರಾಯನರಮನೆ ಮಂಡವಿಗೆ ಗುಡಿ
ಲಾಯ ಚವುಕಿಗೆ ನಿಖಿಳ ಭವನ ನಿ
ಕಾಯವನು ತೆಗೆದೊಟ್ಟಿದರು ಬಂಡಿಗಳ ಹಂತಿಯಲಿ
ರಾಯನನುಜರ ದ್ರೋಣ ಕೃಪ ರಾ
ಧೇಯ ಸೈಂಧವ ಶಕುನಿ ರಾಜಪ
ಸಾಯಿತರ ಗುಡಿಗೂಢಚಂಪಯವೇರಿದವು ರಥವ (ಗದಾ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ದೊರೆಯ ಅರಮನೆ, ಮಂಟಪ, ಧ್ವಜ, ಲಾಯ, ಚೌಕಿ, ಮನೆಗಳನ್ನೆಲ್ಲಾ ತೆಗೆದು ಬಂಡಿಗಳ ಸಾಲಿನಲ್ಲಿ ಒಟ್ಟಿದರು. ದೊರೆಯ ತಮ್ಮಂದಿರು, ದ್ರೋಣ, ಕೃಪ, ಕರ್ಣ, ಸೈಂಧವ, ಶಕುನಿ, ರಾಜರ ಆಪ್ತರ ಗುಡಿ ಗುಡಾರಗಳನ್ನು ಗಾಡಿಗಳಲ್ಲಿ ಒಟ್ಟಿದರು.

ಅರ್ಥ:
ರಾಯ: ರಾಜ; ಅರಮನೆ: ರಾಜರ ಆಲಯ; ಮಂಡವಿಗೆ: ಮಂಟಪ; ಗುಡಿ: ಕುಟೀರ, ಮನೆ; ಲಾಯ: ಅಶ್ವಶಾಲೆ; ಚವುಕಿ: ಪಡಸಾಲೆ, ಚೌಕಿ; ನಿಖಿಳ: ಎಲ್ಲಾ; ಭವನ: ಆಲಯ; ನಿಕಾಯ: ಗುಂಪು; ತೆಗೆ: ಹೊರತರು; ಒಟ್ಟು: ಸೇರಿಸು; ಬಂಡಿ: ರಥ; ಹಂತಿ: ಪಂಕ್ತಿ, ಸಾಲು; ರಾಯ: ರಾಜ; ಅನುಜ: ತಮ್ಮ; ಪಸಾಯಿತ: ಆಪ್ತರು; ಚಂಪೆಯ: ಡೇರ; ಏರು: ಹತ್ತು;

ಪದವಿಂಗಡಣೆ:
ರಾಯನ್+ಅರಮನೆ +ಮಂಡವಿಗೆ +ಗುಡಿ
ಲಾಯ +ಚವುಕಿಗೆ+ ನಿಖಿಳ +ಭವನ +ನಿ
ಕಾಯವನು +ತೆಗೆದ್+ಒಟ್ಟಿದರು +ಬಂಡಿಗಳ +ಹಂತಿಯಲಿ
ರಾಯನ್+ಅನುಜರ +ದ್ರೋಣ +ಕೃಪ +ರಾ
ಧೇಯ +ಸೈಂಧವ +ಶಕುನಿ +ರಾಜ+ಪ
ಸಾಯಿತರ +ಗುಡಿ+ಗೂಢ+ಚಂಪಯವ್+ಏರಿದವು +ರಥವ

ಅಚ್ಚರಿ:
(೧) ಜಾಗಗಳನ್ನು ಹೇಳುವ ಪರಿ – ಅರಮನೆ, ಮಂಡವಿಗೆ, ಗುಡಿ, ಲಾಯ, ಚವುಕಿ, ಭವನ

ಪದ್ಯ ೧೧: ಹಸ್ತಿನಾಪುರದ ವಾಣಿಜ್ಯ ವೀಥಿಯ ಸ್ಥಿತಿ ಹೇಗಿತ್ತು?

ಕೂಡೆ ಗಜಬಜವಾಯ್ತು ಪಾಳೆಯ
ವೋಡಿತಲ್ಲಿಯದಲ್ಲಿ ಜನವ
ಲ್ಲಾಡಿದುದು ಕ್ರಯವಿಕ್ರಯದ ವಾಣಿಜ್ಯವೀಥಿಯಲಿ
ಹೂಡಿದವು ಬಂಡಿಗಳು ಹರಿದೆಡೆ
ಯಾಡಿದವು ಕೊಲ್ಲಾರಿಗಳು ರಥ
ಗೂಡಿದವು ಬದ್ದರದ ದಂಡಿಗೆ ಬಂದವರಮನೆಗೆ (ಗದಾ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಆ ಕ್ಷಣದಲ್ಲೇ ಗಲಭೆ ಆರಂಭವಾಯಿತು. ಕೆಲ ಜನರು ಓಡಿ ಹೋದರು. ಅಂಗಡಿ ಬೀದಿಯಲ್ಲಿ ಜನ ಅಲುಗಾಡಿದರು. ಬಂಡಿಗಳನ್ನು ಹೂಡಿದರು. ಕಮಾನು ಬಂಡಿಗಳು ಓಡಾಡಿದವು. ರಥಗಳೊಡನೆ ಬದ್ದರದ ಪಲ್ಲಕ್ಕಿಗಳು ಅರಮನೆಗೆ ಬಂದವು.

ಅರ್ಥ:
ಕೂಡು: ಜೊತೆ; ಗಜಬಜ: ಗೊಂದಲ; ಪಾಳೆಯ: ಬಿಡಾರ; ಓಡು: ಧಾವಿಸು; ಜನ: ನರರ ಗುಂಪು; ಅಲ್ಲಾಡು: ತೂಗಾಡು; ಕ್ರಯ: ಬೆಲೆ, ಕಿಮ್ಮತ್ತು; ವಿಕ್ರಯ: ಮಾರಾಟ, ಬಿಕರಿ; ವೀಥಿ: ದಾರಿ, ಮಾರ್ಗ; ವಾಣಿಜ್ಯ: ವ್ಯಾಪಾರ; ಹೂಡು: ಅಣಿಗೊಳಿಸು; ಬಂಡಿ: ರಥ; ಹರಿ: ಕಡಿ, ಕತ್ತರಿಸು; ಎಡೆಯಾಡು: ಅತ್ತಿತ್ತ ಸುತ್ತಾಡು; ಕೊಲ್ಲಾರಿ: ಮುಖಂಡ, ಪ್ರಮುಖ; ರಥ: ಬಂಡಿ; ಬದ್ದರ: ಮಂಗಳಕರವಾದುದು; ದಂಡಿ: ಘನತೆ, ಹಿರಿಮೆ, ಶಕ್ತಿ; ಅರಮನೆ: ರಾಜರ ಆಲಯ; ಬಂದು: ಆಗಮಿಸು;

ಪದವಿಂಗಡಣೆ:
ಕೂಡೆ +ಗಜಬಜವಾಯ್ತು +ಪಾಳೆಯವ್
ಓಡಿತ್+ಅಲ್ಲಿಯದಲ್ಲಿ +ಜನವ್
ಅಲ್ಲಾಡಿದುದು +ಕ್ರಯ+ವಿಕ್ರಯದ +ವಾಣಿಜ್ಯ+ವೀಥಿಯಲಿ
ಹೂಡಿದವು +ಬಂಡಿಗಳು+ ಹರಿದೆಡೆ
ಆಡಿದವು +ಕೊಲ್ಲಾರಿಗಳು +ರಥ
ಕೂಡಿದವು +ಬದ್ದರದ +ದಂಡಿಗೆ +ಬಂದವ್+ಅರಮನೆಗೆ

ಅಚ್ಚರಿ:
(೧) ಗಜಬಜ, ಕ್ರಯವಿಕ್ರಯ – ಪದಗಳ ಬಳಕೆ
(೨) ಹೂಡಿ, ಆಡಿ, ಓಡಿ, ಅಲ್ಲಾಡಿ, ಕೂಡಿ – ಪ್ರಾಸ ಪದಗಳು

ಪದ್ಯ ೧೦: ಅಂತಃಪುರದಲ್ಲಿ ಯಾವ ಭೀತಿ ಹಬ್ಬಿತು?

ಅರಮನೆಗೆ ಬಂದಖಿಳ ಸಚಿವರ
ಕರಸಿದನು ಸರಹಸ್ಯವನು ವಿ
ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ
ಅರಸಿಯರಿದಳು ಭಾನುಮತಿ ಮಿ
ಕ್ಕರಸಿಯರಿಗರುಹಿಸಿದಳಂತಃ
ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ (ಗದಾ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಾಳೆಯದ ಅರಮನೆಗೆ ಸಂಜಯನು ಬಂದು, ಮಂತ್ರಿಗಳನ್ನು ಅಕ್ರೆಸಿ, ಕೌರವನ ಸರ್ವವೂ ಇಲ್ಲದಂತಾಗಿದೆ. ಅರಸನು ಓಡಿಹೋಗಿದ್ದಾನೆ ಎಂಬ ಗುಟ್ಟನ್ನು ಅವರಿಗೆ ತಿಳಿಸಿದನು. ಭಾನುಮತಿಗೆ ಇದು ತಿಳಿಯಿತು, ಅವಳು ಉಳಿದ ರಾಣಿಯರಿಗೆ ತಿಳಿಸಿದಳು. ಅಂತಃಪುರದಲ್ಲಿ ಯುದ್ಧದಲ್ಲಿ ಸೋಲಾದ ಭೀತಿ ಹಬ್ಬಿತು.

ಅರ್ಥ:
ಅರಮನೆ: ರಾಜರ ಆಲಯ; ಬಂದು: ಆಗಮಿಸು; ಅಖಿಳ: ಎಲ್ಲಾ; ಸಚಿವ: ಮಂತ್ರಿ; ಕರಸು: ಬರೆಮಾಡು; ರಹಸ್ಯ: ಗುಟ್ಟು; ವಿಸ್ತರಿಸು: ವಿಸ್ತಾರವಾಗಿ ತಿಳಿಸು; ಸರ್ವ: ಎಲ್ಲವೂ; ಅಪಹಾರ: ಕಿತ್ತುಕೊಳ್ಳುವುದು; ನೃಪ: ರಾಜ; ಪಲಾಯನ: ಓಡಿಹೋಗು; ಅರಸಿ: ರಾಣಿ; ಅರಿ: ತಿಳಿ; ಮಿಕ್ಕ: ಉಳಿದ; ಅರುಹು: ತಿಳಿಸು; ಅಂತಃಪುರ: ರಾಣಿಯರ ವಾಸಸ್ಥಾನ; ಹರೆದು: ವ್ಯಾಪಿಸು; ರಣ: ಯುದ್ಧ; ಭೀತಿ: ಭಯ;

ಪದವಿಂಗಡಣೆ:
ಅರಮನೆಗೆ +ಬಂದ್+ಅಖಿಳ +ಸಚಿವರ
ಕರಸಿದನು +ಸರಹಸ್ಯವನು +ವಿ
ಸ್ತರಿಸಿದನು +ಸರ್ವ+ಅಪಹಾರವ +ನೃಪ+ಪಲಾಯನವ
ಅರಸಿ+ಅರಿದಳು +ಭಾನುಮತಿ +ಮಿ
ಕ್ಕರಸಿಯರಿಗ್+ಅರುಹಿಸಿದಳ್+ಅಂತಃ
ಪುರದೊಳ್+ಅಲ್ಲಿಂದಲ್ಲಿ +ಹರೆದುದು +ಕೂಡೆ +ರಣಭೀತಿ

ಅಚ್ಚರಿ:
(೧) ಅರಸಿ, ಮಿಕ್ಕರಸಿ, ಕರಸಿ, ವಿಸ್ತರಿಸಿ – ಪ್ರಾಸ ಪದ

ಪದ್ಯ ೫೬: ಯಾರ ಜೊತೆ ಸೆಣಸಿದರೆ ಪ್ರಯೋಜನವಾಗದು?

ಆವ ಶರದಲಿ ಕೊರತೆ ನಿನ್ನವ
ರಾವ ಬಲದಲಿ ಕುಂದು ಭುವನದೊ
ಳಾವನೈ ಸಮಜೋಳಿ ನಿನ್ನರಮನೆಯ ಸುಭಟರಿಗೆ
ಆವನಿದ್ದೇನಹುದು ಜಗದಧಿ
ದೈವದಲಿ ಸೆಣಸಿದಿರಿ ಪಾಂಡವ
ಜೀವಿಯೆಂದರಿದರಿದು ಗದುಗಿನ ವೀರನಾರಾಯಣ (ದ್ರೋಣ ಪರ್ವ, ೧೯ ಸಂಧಿ, ೫೬ ಪದ್ಯ)

ತಾತ್ಪರ್ಯ:
ನಿನ್ನ ಅರಮನೆಯ ವೀರರಿಗೆ ಯಾವ ಅಸ್ತ್ರವಿಲ್ಲ? ಬಲದಲ್ಲಿ ಅವರಿಗೆ ನ್ಯೂನ್ಯತೆಗಳಿವೆಯೇ? ಅವರಿಗೆ ಸರಿಸಮನಾದವರು ಲೋಕದಲ್ಲಿ ಯಾರಿದ್ದಾರೆ? ಯಾರು ಇದ್ದರೇನು, ಜಗತ್ತಿನ ಅಧಿದೈವದ ವಿರುದ್ಧ ಸಮ್ರಕ್ಕಿಳಿದಿರಿ, ಅದೂ ಶ್ರೀಕೃಷ್ಣನು ಪಾಂಡವ ಜೀವಿ ಎಂದರಿತೂ ನೀವು ಪಾಂಡವರಲ್ಲಿ ಯುದ್ಧಮಾಡಿದಿರಿ ಎಂದು ಸಂಜಯನು ಹೇಳಿದನು.

ಅರ್ಥ:
ಶರ: ಬಾಣ; ಕೊರತೆ: ನ್ಯೂನ್ಯತೆ; ಬಲ: ಸೈನ್ಯ; ಕುಂದು: ತೊಂದರೆ; ಭುವನ: ಜಗತ್ತು, ಪ್ರಪಂಚ; ಸಮಜೋಳಿ: ಸರಿಸಮನಾದ; ಅರಮನೆ: ರಾಜರ ಆಲಯ; ಸುಭಟ: ಪರಾಕ್ರಮಿ; ಜಗ: ಪ್ರಪಂಚ; ಅಧಿದೈವ: ಭಗವಂತ; ಸೆಣಸು: ಹೋರಾದು; ಅರಿ: ತಿಳಿ;

ಪದವಿಂಗಡಣೆ:
ಆವ +ಶರದಲಿ +ಕೊರತೆ +ನಿನ್ನವರ್
ಆವ +ಬಲದಲಿ+ ಕುಂದು +ಭುವನದೊಳ್
ಆವನೈ +ಸಮಜೋಳಿ +ನಿನ್ನ್+ಅರಮನೆಯ +ಸುಭಟರಿಗೆ
ಆವನಿದ್ದೇನಹುದು +ಜಗದ್+ಅಧಿ
ದೈವದಲಿ +ಸೆಣಸಿದಿರಿ +ಪಾಂಡವ
ಜೀವಿ+ಎಂದ್+ಅರಿದರಿದು+ ಗದುಗಿನ +ವೀರನಾರಾಯಣ

ಅಚ್ಚರಿ:
(೧) ಆವ – ೧-೪ ಸಾಲಿನ ಮೊದಲ ಪದ
(೨) ಕೊರತೆ, ಕುಂದು – ಸಮಾನಾರ್ಥಕ ಪದ

ಪದ್ಯ ೪೮: ಕೌರವ ಸೈನ್ಯದ ಗಲಭೆಯನ್ನು ಯಾರು ನಿಲ್ಲಿಸಿದರು?

ಹರಿದು ಬೇಹಿನ ಚರರು ಪಾಂಡವ
ರರಮನೆಯ ಹೊಕ್ಕರಿದು ಮರಳಿದು
ಬರುತ ಕಟಕದ ಗಜಬಜವನಲ್ಲಲ್ಲಿ ಮಾಣಿಸುತ
ನೆರವಿ ನಗೆಗೆಡೆಯಾಗೆ ಮುಸುಕಿನ
ಮುರುವಿನಲಿ ಪಾಳಯವ ಹೊಕ್ಕರು
ಗರುವ ಮನ್ನೆಯ ಮಂಡಳೀಕರು ಕೇಳ್ದರೀ ಹದನ (ದ್ರೋಣ ಪರ್ವ, ೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಗೂಢಚಾರರು ಪಾಂಡವರ ಅರಮನೆಗೆ ಹೋಗಿ ವಿಷಯವನ್ನು ತಿಳಿದು, ಹಿಂದಿರುಗುತ್ತಾ ದಾರಿಯಲ್ಲಿ ಕೌರವ ಸೈನ್ಯದ ಗಲಭೆಯನ್ನು ನಿಲ್ಲಿಸಿದರು. ನೋಡಿದವರು ಅಪಹಾಸ್ಯ ಮಾಡಿ ನಗಲು, ಸೈನಿಕರು ತಮ್ಮ ಬೀಡುಗಳಿಗೆ ಹಿಂದಿರುಗಿದರು. ಸಾಮಂತರಾಜರು ಮನ್ನೆಯರೂ ಈ ಸಂಗತಿಯನ್ನು ಕೇಳಿದರು.

ಅರ್ಥ:
ಹರಿ: ಸೀಳೂ; ಬೇಹು: ಗೂಢಾಚಾರ; ಅರಮನೆ: ರಾಜರ ಆಲಯ; ಹೊಕ್ಕು: ಸೇರು; ಮರಳು: ಹಿಂದಿರುಗು; ಬರುತ: ಆಗಮಿಸು; ಕಟಕ: ಸೈನ್ಯ; ಗಜಬಜ: ಗೊಂದಲ; ಮಾಣಿಸು: ನಿಲ್ಲುವಂತೆ ಮಾಡು; ನೆರವಿ: ಗುಂಪು, ಸಮೂಹ; ನಗೆ: ಹಾಸ್ಯ; ಮುಸುಕು: ಆವರಿಸು; ಮುರುವು: ತಿರುವು, ಬಾಗಿರುವಿಕೆ; ಪಾಳಯ: ಬಿಡಾರ; ಹೊಕ್ಕು: ಸೇರು; ಗರುವ: ಹಿರಿಯ, ಶ್ರೇಷ್ಠ; ಮನ್ನೆಯ: ಮೆಚ್ಚಿನ, ಗೌರವಕ್ಕೆ ಪಾತ್ರನಾದ; ಮಂಡಳೀಕ: ಸಾಮಂತ ರಾಜ; ಕೇಳು: ಆಲಿಸು; ಹದ: ಸ್ಥಿತಿ, ರೀತಿ;

ಪದವಿಂಗಡಣೆ:
ಹರಿದು+ ಬೇಹಿನ +ಚರರು +ಪಾಂಡವರ್
ಅರಮನೆಯ +ಹೊಕ್ಕರಿದು +ಮರಳಿದು
ಬರುತ+ ಕಟಕದ +ಗಜಬಜವನ್+ಅಲ್ಲಲ್ಲಿ +ಮಾಣಿಸುತ
ನೆರವಿ +ನಗೆಗೆಡೆಯಾಗೆ +ಮುಸುಕಿನ
ಮುರುವಿನಲಿ+ಪಾಳಯವ +ಹೊಕ್ಕರು
ಗರುವ +ಮನ್ನೆಯ +ಮಂಡಳೀಕರು +ಕೇಳ್ದರೀ +ಹದನ

ಅಚ್ಚರಿ:
(೧) ಕೌರವ ಸೈನ್ಯರು ಬಿಡಾರಕ್ಕೆ ಹೋದ ಪರಿ – ನೆರವಿ ನಗೆಗೆಡೆಯಾಗೆ ಮುಸುಕಿನ ಮುರುವಿನಲಿ ಪಾಳಯವ ಹೊಕ್ಕರು

ಪದ್ಯ ೧೩: ಅರ್ಜುನನು ಧರ್ಮಜನ ಓಲಗವನ್ನು ಹೇಗೆ ಹೊಕ್ಕನು?

ಹರಿ ರಥವನಿಳಿದಂತೆ ಪಾರ್ಥನ
ಭರದ ಕೋಪವ ಕಂಡು ನಿಜಮಂ
ದಿರಕೆ ಮೆಲ್ಲನೆ ಜುಣುಗಿದನು ಯಾದವರ ಗಡಣದಲಿ
ವರ ಧನುವ ಶಸ್ತ್ರಾಸ್ತ್ರ ಕವಚವ
ನಿರಿಸಿ ಕೈಗೊಡುವವರ ಕನಲು
ತ್ತರಮನೆಯ ಹೊಕ್ಕನು ಯುಧಿಷ್ಠಿರರಾಯನೋಲಗವ (ದ್ರೋಣ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅರ್ಜುನನ ಅತಿಶಯ ಕೋಪವನ್ನು ಕಂಡು ಶ್ರೀಕೃಷ್ಣನು ರಥವನ್ನಿಳಿದು ಯಾದವಒಡನೆ ಜಾರಿಹೋಗಿ ತನ್ನ ಬೀಡನ್ನು ಸೇರಿಕೊಂಡನು. ಧನುಸ್ಸು, ಶಸ್ತ್ರಾಸ್ತ್ರಗಳು, ಕವಚ ಇವನ್ನು ಒಂದು ಕಡೆಯಿಟ್ಟು, ಕೈಕೊಟ್ಟವರ ಮೇಲೆ ಕೋಪಿಸಿ ಅರ್ಜುನನು ಯುಧಿಷ್ಠಿರನ ಓಲಗವನ್ನು ಹೊಕ್ಕನು.

ಅರ್ಥ:
ಹರಿ: ಕೃಷ್ಣ; ರಥ: ಬಂಡಿ; ಭರ: ವೇಗ; ಕೋಪ: ಸಿಟ್ಟು; ಕಂಡು: ನೋಡಿ; ಮಂದಿರ: ಆಲಯ; ಜುಣುಗು: ನುಣುಚಿಕೊಳ್ಳುವಿಕೆ; ಗಡಣ: ಕೂಡಿಸುವಿಕೆ; ವರ: ಶ್ರೇಷ್ಠ; ಧನು: ಬಿಲ್ಲು; ಶಸ್ತ್ರ: ಆಯುಧ; ಕವಚ: ಹೊದಿಕೆ, ಉಕ್ಕಿನ ಅಂಗಿ; ಕನಲು: ಸಿಟ್ಟಿಗೇಳು; ಅರಮನೆ: ರಾಜರ ಆಲಯ; ಹೊಕ್ಕು: ಸೇರು; ರಾಯ: ರಾಜ; ಓಲಗ: ದರ್ಬಾರು;

ಪದವಿಂಗಡಣೆ:
ಹರಿ +ರಥವನ್+ಇಳಿದಂತೆ +ಪಾರ್ಥನ
ಭರದ +ಕೋಪವ +ಕಂಡು +ನಿಜಮಂ
ದಿರಕೆ+ ಮೆಲ್ಲನೆ +ಜುಣುಗಿದನು +ಯಾದವರ +ಗಡಣದಲಿ
ವರ +ಧನುವ +ಶಸ್ತ್ರಾಸ್ತ್ರ +ಕವಚವನ್
ಇರಿಸಿ +ಕೈಗೊಡುವವರ +ಕನಲುತ್
ಅರಮನೆಯ +ಹೊಕ್ಕನು +ಯುಧಿಷ್ಠಿರ+ರಾಯನ್+ಓಲಗವ

ಅಚ್ಚರಿ:
(೧) ಕೃಷ್ಣನು ಅರ್ಜುನನ ಕೋಪಕ್ಕೆ ಹೆದರಿದ? ಪಾರ್ಥನ ಭರದ ಕೋಪವ ಕಂಡು ನಿಜಮಂ
ದಿರಕೆ ಮೆಲ್ಲನೆ ಜುಣುಗಿದನು ಯಾದವರ ಗಡಣದಲಿ

ಪದ್ಯ ೪೫: ಕೌರವನಾಯಕರ ನಡತೆಗೆ ಅರ್ಜುನನು ಏನೆಂದು ಯೋಚಿಸಿದನು?

ಹರಿಬದಾಹವವೆಂಬರಾವೆಡೆ
ಹರೆದರೇ ರಣಗೇಡಿಗಳು ನುಡಿ
ಯುರಿಯ ಹೊರುವುದು ಘಾಯವತಿಶೀತಳ ಮಹಾದೇವ
ಅರಮನೆಯ ಕಾಲಾಳು ಕರಿ ರಥ
ತುರಗವಳಿದರೆ ತಮಗೆ ನಷ್ಟಿಯೆ
ಗರುವನೈ ಗುರುತನುಜನೆನುತೈದಿದನು ಕಲಿ ಪಾರ್ಥ (ಭೀಷ್ಮ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸೇಡನ್ನು ತೀರಿಸಿಕೊಳ್ಳುವ ಯುದ್ಧವೆಂದು ಬಂದವರು ಹಿಂದಕ್ಕೆ ಸರಿದು ಬಿಟ್ಟರೇ! ಈ ಯುದ್ದಗೇಡಿಗಳ ಮಾತು ಉರಿಯನ್ನುಗುಳುತ್ತದೆ. ಅವರ ಹೊಡೆತ ತಣ್ಣಗಿರುತ್ತದೆ, ಸೈನ್ಯ ಚತುರಂಗ ಸತ್ತರೆ ತನಗೇನು ನಷ್ಟವೆಂದು ಅಶ್ವತ್ಥಾಮನು ಸುಮ್ಮನಾದನೇ ಎಂದು ಅರ್ಜುನನು ಮುಂದುವರೆದನು.

ಅರ್ಥ:
ಹರಿಬ: ಕೆಲಸ, ಕಾರ್ಯ; ಆಹವ: ಯುದ್ಧ; ಹರಿ: ಸರಿ, ನಿವಾರಿಸು; ರಣ: ರಣರಂಗ; ಹೇಡಿ: ಹೆದರುಪುಕ್ಕ, ಅಂಜು; ನುಡಿ: ಮಾತು; ಉರಿ: ಜ್ವಾಲೆ; ಘಾಯ: ಪೆಟ್ಟು; ಶೀತಳ: ತಣ್ಣಗಿರುವ; ಅರಮನೆ: ರಾಜರ ಆಲಯ; ಕಾಲಾಳು: ಸೈನಿಕ; ಕರಿ: ಆನೆ; ರಥ: ಬಂಡಿ; ತುರಗ: ಅಶ್ವ; ಅಳಿ: ನಾಶ; ನಷ್ಟ: ಹಾನಿ, ಕೆಡುಕು; ಗರುವ: ಹಿರಿಯ, ಶ್ರೇಷ್ಠ; ಗುರು: ಆಚಾರ್ಯ; ತನುಜ: ಮಗ; ಐದು: ಬಂದು ಸೇರು; ಕಲಿ: ಶೂರ;

ಪದವಿಂಗಡಣೆ:
ಹರಿಬದ್+ಆಹವವ್+ಎಂಬರ್+ಆವೆಡೆ
ಹರೆದರೇ +ರಣಗೇಡಿಗಳು+ ನುಡಿ
ಯುರಿಯ +ಹೊರುವುದು +ಘಾಯವ್+ಅತಿಶೀತಳ +ಮಹಾದೇವ
ಅರಮನೆಯ +ಕಾಲಾಳು +ಕರಿ +ರಥ
ತುರಗವ್+ಅಳಿದರೆ +ತಮಗೆ +ನಷ್ಟಿಯೆ
ಗರುವನೈ +ಗುರುತನುಜನೆನುತ್+ಐದಿದನು +ಕಲಿ +ಪಾರ್ಥ

ಅಚ್ಚರಿ:
(೧) ರಣಹೇಡಿಗಳ ಗುಣ – ರಣಗೇಡಿಗಳು ನುಡಿಯುರಿಯ ಹೊರುವುದು ಘಾಯವತಿಶೀತಳ ಮಹಾದೇವ

ಪದ್ಯ ೨೯: ವೀರರು ಯಾರ ಅರಮನೆಯನ್ನು ಸೇರಿದರು?

ಕರೆಕರೆದು ಮೂದಲಿಸಿ ಕಡುಹಿನ
ದುರುಳರುಬ್ಬಿನ ಮೇಲೆ ಹೊಕ್ಕ
ಬ್ಬರಿಸಿ ಹೊಯಿದರು ಕಾದಿಕೊಂಡರು ಕಾಲನರಮನೆಯ
ಕರುಳುಗಿಯೆ ತಲೆ ಸಿಡಿಯೆ ನಿಟ್ಟೆಲು
ಮರಿಯೆ ಮೂಳೆಗಳುದಿರೆ ಶೋಣಿತ
ಸುರಿಯೆ ಕಾಳಿಜ ಕೆದರೆ ತುಂಡಿಸಿ ಖಂಡ ಬೆಂಡೇಳೆ (ಭೀಷ್ಮ ಪರ್ವ, ೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಎದುರಾಳಿಗಳನ್ನು ಮೂದಲಿಸಿ ಕರೆದು, ಗರ್ಜಿಸಿ ಅವರನ್ನು ಹೊಯ್ದರು, ಕತ್ತಿಗಳ ವೀರರು ಯುದ್ಧಮಾಡಿ ಯಮನ ಅರಮನೆಯನ್ನು ಪಡೆದರು. ಅವರ ಕರುಳುಗಳು ಹೊರಬಂದವು, ತಲೆಗಳು ಸಿಡಿದವು, ಎಲುಬುಗಳು ಮುರಿದು ಕೆಳಕ್ಕುದುರಿದವು. ರಕ್ತ ನೆಣಗಳು ಸುರಿದವು, ತುಂಡಾದ ಮಾಂಸ ಬೆಂಡೆದ್ದವು.

ಅರ್ಥ:
ಕರೆ: ಬರೆಮಾಡು; ಮೂದಲಿಸು: ಹಂಗಿಸು; ಕಡುಹು: ಪರಾಕ್ರಮ; ದುರುಳ: ದುಷ್ಟ; ಹೊಕ್ಕು: ಸೇರು; ಉಬ್ಬರಿಸು: ಅತಿಶಯ, ಹೆಚ್ಚಳ; ಹೊಯ್ದು: ಹೊಡೆ; ಕಾದು: ಹೋರಾಡು; ಕಾಲ: ಯಮ; ಅರಮನೆ: ರಾಜರ ಆಲಯ; ಕರುಳು: ಪಚನಾಂಗ; ಉಗಿ: ಹೊರಹಾಕು; ತಲೆ: ಶಿರ; ಸಿಡಿ: ಹೋಳಾಗು; ನಿಟ್ಟೆಲುಬು: ನೇರವಾದ ಮೂಳೆ; ಮೂಳೆ: ಎಲುಬು; ಉದಿರು: ಕೆಳಗೆ ಬೀಳು; ಶೋಣಿತ: ರಕ್ತ; ಸುರಿ: ಹೊರಹೊಮ್ಮು; ಕಾಳಿಜ: ಪಿತ್ತಾಶಯ; ಕೆದರು: ಹರಡು; ತುಂಡಿಸು: ಚೂರುಮಾಡು; ಬೆಂಡು: ತಿರುಳಿಲ್ಲದುದು, ಪೊಳ್ಳು;

ಪದವಿಂಗಡಣೆ:
ಕರೆಕರೆದು +ಮೂದಲಿಸಿ +ಕಡುಹಿನ
ದುರುಳರ್+ಉಬ್ಬಿನ +ಮೇಲೆ +ಹೊಕ್ಕ್
ಅಬ್ಬರಿಸಿ +ಹೊಯಿದರು +ಕಾದಿಕೊಂಡರು+ ಕಾಲನ್+ಅರಮನೆಯ
ಕರುಳ್+ಉಗಿಯೆ+ತಲೆ +ಸಿಡಿಯೆ +ನಿಟ್ಟೆಲು
ಮರಿಯೆ +ಮೂಳೆಗಳ್+ಉದಿರೆ +ಶೋಣಿತ
ಸುರಿಯೆ +ಕಾಳಿಜ +ಕೆದರೆ +ತುಂಡಿಸಿ +ಖಂಡ +ಬೆಂಡೇಳೆ

ಅಚ್ಚರಿ:
(೧) ಸಿಡಿಯೆ, ಮರಿಯೆ, ಉದಿರೆ, ಸುರಿಯೆ, ದೆಕರೆ – ಎ ಕಾರಾಂತ್ಯ ಪ್ರಾಸ ಪದಗಳು
(೨) ಸತ್ತರು ಎಂದು ಹೇಳಲು – ಹೊಯಿದರು ಕಾದಿಕೊಂಡರು ಕಾಲನರಮನೆಯ