ರಾಯನರಮನೆ ಮಂಡವಿಗೆ ಗುಡಿ
ಲಾಯ ಚವುಕಿಗೆ ನಿಖಿಳ ಭವನ ನಿ
ಕಾಯವನು ತೆಗೆದೊಟ್ಟಿದರು ಬಂಡಿಗಳ ಹಂತಿಯಲಿ
ರಾಯನನುಜರ ದ್ರೋಣ ಕೃಪ ರಾ
ಧೇಯ ಸೈಂಧವ ಶಕುನಿ ರಾಜಪ
ಸಾಯಿತರ ಗುಡಿಗೂಢಚಂಪಯವೇರಿದವು ರಥವ (ಗದಾ ಪರ್ವ, ೪ ಸಂಧಿ, ೧೭ ಪದ್ಯ)
ತಾತ್ಪರ್ಯ:
ದೊರೆಯ ಅರಮನೆ, ಮಂಟಪ, ಧ್ವಜ, ಲಾಯ, ಚೌಕಿ, ಮನೆಗಳನ್ನೆಲ್ಲಾ ತೆಗೆದು ಬಂಡಿಗಳ ಸಾಲಿನಲ್ಲಿ ಒಟ್ಟಿದರು. ದೊರೆಯ ತಮ್ಮಂದಿರು, ದ್ರೋಣ, ಕೃಪ, ಕರ್ಣ, ಸೈಂಧವ, ಶಕುನಿ, ರಾಜರ ಆಪ್ತರ ಗುಡಿ ಗುಡಾರಗಳನ್ನು ಗಾಡಿಗಳಲ್ಲಿ ಒಟ್ಟಿದರು.
ಅರ್ಥ:
ರಾಯ: ರಾಜ; ಅರಮನೆ: ರಾಜರ ಆಲಯ; ಮಂಡವಿಗೆ: ಮಂಟಪ; ಗುಡಿ: ಕುಟೀರ, ಮನೆ; ಲಾಯ: ಅಶ್ವಶಾಲೆ; ಚವುಕಿ: ಪಡಸಾಲೆ, ಚೌಕಿ; ನಿಖಿಳ: ಎಲ್ಲಾ; ಭವನ: ಆಲಯ; ನಿಕಾಯ: ಗುಂಪು; ತೆಗೆ: ಹೊರತರು; ಒಟ್ಟು: ಸೇರಿಸು; ಬಂಡಿ: ರಥ; ಹಂತಿ: ಪಂಕ್ತಿ, ಸಾಲು; ರಾಯ: ರಾಜ; ಅನುಜ: ತಮ್ಮ; ಪಸಾಯಿತ: ಆಪ್ತರು; ಚಂಪೆಯ: ಡೇರ; ಏರು: ಹತ್ತು;
ಪದವಿಂಗಡಣೆ:
ರಾಯನ್+ಅರಮನೆ +ಮಂಡವಿಗೆ +ಗುಡಿ
ಲಾಯ +ಚವುಕಿಗೆ+ ನಿಖಿಳ +ಭವನ +ನಿ
ಕಾಯವನು +ತೆಗೆದ್+ಒಟ್ಟಿದರು +ಬಂಡಿಗಳ +ಹಂತಿಯಲಿ
ರಾಯನ್+ಅನುಜರ +ದ್ರೋಣ +ಕೃಪ +ರಾ
ಧೇಯ +ಸೈಂಧವ +ಶಕುನಿ +ರಾಜ+ಪ
ಸಾಯಿತರ +ಗುಡಿ+ಗೂಢ+ಚಂಪಯವ್+ಏರಿದವು +ರಥವ
ಅಚ್ಚರಿ:
(೧) ಜಾಗಗಳನ್ನು ಹೇಳುವ ಪರಿ – ಅರಮನೆ, ಮಂಡವಿಗೆ, ಗುಡಿ, ಲಾಯ, ಚವುಕಿ, ಭವನ