ಪದ್ಯ ೩೪: ತಂಗುವ ಜಾಗವನ್ನು ಹೇಗೆ ಸಿದ್ಧಪಡಿಸಿದರು?

ಅರಸ ಕೇಳೈ ದ್ವೈತವನ ಬಂ
ಧುರ ನದೀತೀರದಲಿ ವನದಲಿ
ಸರಸಿಯಲಿ ದೀರ್ಘಿಕೆಗಳಲಿ ನದದಲಿ ತಟಾಕದಲಿ
ಬೆರೆಸಿ ಬಿಟ್ಟುದು ಕೂಡೆ ವಾಳೆಯ
ವರಮನೆಯ ಗುಡಿ ನೆಗಹಿದವು ವಿ
ಸ್ತರಿಸಿದವು ಮಂಡವಿಗೆ ಲಾಯದ ಭದ್ರಭವನಗಳು (ಅರಣ್ಯ ಪರ್ವ, ೧೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ದ್ವೈತವನದ ನದೀನದಗಳ ತೀರಗಳು, ಸರೋವರಗಳು ಕೊಳಗಳ ತೀರದಲ್ಲಿ ದುರ್ಯೋಧನನ ಪರಿವಾರ ಸೈನ್ಯಗಳು ಬೀಡು ಬಿಟ್ಟವು. ಗುಡಾರಗಳು, ಡೇರೆಗಳ ಮನೆಗಳನ್ನು ಭದ್ರವಾಗಿ ಕಟ್ಟಿದರು. ಅರಸನಿಗೆ ಒಂದು ಭವನವನ್ನು ಕಟ್ಟಿ ಅದರ ಮೇಲೆ ಧ್ವಜವನ್ನು ಹಾರಿಸಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಂಧುರ: ಸುಂದರವಾದ; ನದಿ: ಸರಸಿ; ತೀರ: ತಟ; ವನ: ಕಾಡು; ಸರಸಿ: ನೀರು; ದೀರ್ಘ: ಉದ್ದ; ನದ: ಗಂಡು ತೊರೆ; ತಟಾಕ: ಕೆರೆ, ಜಲಾಶಯ; ಬೆರೆಸು: ಕೂಡು, ಸೇರು; ಕೂಡೆ: ಜೊತೆ; ಪಾಳೆಯ: ಬೀಡು, ಶಿಬಿರ; ಅರಮನೆ: ರಾಜರ ಆಲಯ; ಗುಡಿ: ಕುಟೀರ, ಮನೆ; ನೆಗಹು: ಮೇಲೆತ್ತು; ವಿಸ್ತರಿಸು: ಹಬ್ಬು, ಹರಡು; ಮಂಡವಿಗೆ: ಡೇರೆ,ಮಂಟಪ; ಲಾಯ: ಅಶ್ವಶಾಲೆ; ಭದ್ರ: ಗಟ್ಟಿಯಾದ; ಭವನ: ಆಲಯ;

ಪದವಿಂಗಡಣೆ:
ಅರಸ +ಕೇಳೈ +ದ್ವೈತವನ +ಬಂ
ಧುರ +ನದೀತೀರದಲಿ +ವನದಲಿ
ಸರಸಿಯಲಿ +ದೀರ್ಘಿಕೆಗಳಲಿ +ನದದಲಿ +ತಟಾಕದಲಿ
ಬೆರೆಸಿ +ಬಿಟ್ಟುದು +ಕೂಡೆ +ವಾಳೆಯವ್
ಅರಮನೆಯ +ಗುಡಿ +ನೆಗಹಿದವು+ ವಿ
ಸ್ತರಿಸಿದವು +ಮಂಡವಿಗೆ +ಲಾಯದ +ಭದ್ರ+ಭವನಗಳು

ನಿಮ್ಮ ಟಿಪ್ಪಣಿ ಬರೆಯಿರಿ