ತಳಿತ ಸತ್ತಿಗೆಗಳ ಪತಾಕಾ
ವಳಿಯ ಪಡಪಿನ ಬಿರುದಿನುಬ್ಬಟೆ
ಗಾಳ ವಿಡಾಯಿಯ ಸಿಂಧ ಸೆಳೆ ಸೀಗುರಿಯ ಸುಳಿವುಗಳ
ಕಳಕಳಿಕೆ ಕಡುಹೇರಿ ತಳ ಪಟ
ದೊಳಗೆ ತಲೆದೋರಿದರು ಫಡಫಡ
ಫಲುಗುಣನ ಬರಹೇಳೆನುತ ದ್ರೋಣಾದಿ ನಾಯಕರು (ಭೀಷ್ಮ ಪರ್ವ, ೮ ಸಂಧಿ, ೨೦ ಪದ್ಯ)
ತಾತ್ಪರ್ಯ:
ರಥಗಳ ಮೇಲೆ ಪತಾಕೆಗಳು ಬಿರುದಾವಳಿಗಳು ಕಂಡವು. ಚಾಮರಗಳು ಬೀಸಿದವು. ಸದ್ದು ಹೆಚ್ಚಾಗಲು ದ್ರೋಣನೇ ಮೊದಲಾದ ನಾಯಕರು ರಣರಂಗಕ್ಕೆ ಬಂದು ಅರ್ಜುನನನ್ನು ಕರೆ ಎಂದು ಗರ್ಜಿಸಿದನು.
ಅರ್ಥ:
ತಳಿತ: ಚಿಗುರಿದ; ಸತ್ತಿಗೆ: ಕೊಡೆ, ಛತ್ರಿ; ಪತಾಕೆ: ಬಾವುಟ; ಆವಳಿ: ಸಾಲು; ಪಡಪು: ಪಡೆದುದು; ಬಿರುದು: ಗೌರವ ಸೂಚಕದ ಹೆಸರು; ಉಬ್ಬಟೆ: ಅತಿಶಯ, ಹಿರಿಮೆ; ವಿಡಾಯ: ತೋರಿಕೆ; ಆಧಿಕ್ಯ, ಶಕ್ತಿ; ಸಿಂಧ: ಒಂದು ಬಗೆ ಪತಾಕೆ, ಬಾವುಟ; ಸೆಳೆ: ಎಳೆತ, ಸೆಳೆತ; ಸೀಗುರಿ: ಚಾಮರ, ಚವರಿ; ಸುಳಿವು: ಗುರುತು, ಕುರುಹು; ಕಳಕಳಿ: ಉತ್ಸಾಹ; ಕಡುಹು: ಪರಾಕ್ರಮ; ತಳ: ನೆಲ, ಭೂಮಿ; ತಳಪಟ: ಅಂಗಾತವಾಗಿ ಬೀಳು; ಸೋಲು; ತಲೆ: ಶಿರ; ತೋರು: ಗೋಚರ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು, ಪದ; ಬರಹೇಳು: ಕರೆ; ನಾಯಕ: ಒಡೆಯ;
ಪದವಿಂಗಡಣೆ:
ತಳಿತ +ಸತ್ತಿಗೆಗಳ +ಪತಾಕಾ
ವಳಿಯ+ ಪಡಪಿನ +ಬಿರುದಿನ್+ಉಬ್ಬಟೆ
ಗಾಳ +ವಿಡಾಯಿಯ +ಸಿಂಧ +ಸೆಳೆ +ಸೀಗುರಿಯ +ಸುಳಿವುಗಳ
ಕಳಕಳಿಕೆ +ಕಡುಹೇರಿ+ ತಳಪಟ
ದೊಳಗೆ +ತಲೆದೋರಿದರು +ಫಡಫಡ
ಫಲುಗುಣನ +ಬರಹೇಳೆನುತ+ ದ್ರೋಣಾದಿ +ನಾಯಕರು
ಅಚ್ಚರಿ:
(೧) ಸ ಕಾರದ ಸಾಲು ಪದ – ಸಿಂಧ ಸೆಳೆ ಸೀಗುರಿಯ ಸುಳಿವುಗಳ
(೨) ಫ ಕಾರದ ಪದಗಳ ಬಳಕೆ – ಫಡಫಡ ಫಲುಗುಣನ