ಅವರು ಮರ್ತ್ಯರು ನಮ್ಮದಕಟಾ
ದಿವಿಜರೀ ವಿಧಿಯಾದುದೇ ಕವಿ
ಕವಿಯೆನುತ ಬೇಹವರಿಗಿತ್ತನು ರಣಕೆ ವೀಳೆಯವ
ಗವಿಯ ಗರುವರು ಗಾಢಿಸಿತು ಮಾ
ನವರ ಮುರುಕಕೆ ಮುರಿದುದೀ ಸುರ
ನಿವಹ ಸುಡಲಾಹವವನೆನುತೈದಿದರು ಸೂಟಿಯಲಿ (ಅರಣ್ಯ ಪರ್ವ, ೧೯ ಸಂಧಿ, ೪೦ ಪದ್ಯ)
ತಾತ್ಪರ್ಯ:
ಅವರು ಮನುಷ್ಯರು, ನಾವು ದೇವತೆಗಳು, ಅಯ್ಯೋ ನಮಗೆ ಈ ದುರ್ಗತಿ ಬಂದಿತೇ! ಎಂದುಕೊಂಡು ತನ್ನ ಆಪ್ತರಿಗೆ ಹೋಗಿ ಶತ್ರುಗಳನ್ನು ಮುತ್ತಿರಿ, ಎಂದು ಚಿತ್ರಸೇನನು ಯುದ್ಧಕ್ಕೆ ವೀಳೆಯವನ್ನು ಕೊಟ್ಟನು. ಚಿತ್ರಸೇನನ ಕಡೆಯವರು, ಈ ಮನುಷ್ಯರ ಉಪಟಳ ಹೆಚ್ಚಿತು, ಮನುಷ್ಯರ ಬಲಕ್ಕೆ ದೇವತೆಗಳು ಸೋಲುವುದೇ? ಇದೆಂತಹ ದುರ್ವಿಧಿ! ಈ ಯುದ್ಧವನ್ನು ಸುಡಲಿ ಎಮ್ದು ವೇಗದಿಂದ ಯುದ್ಧಕ್ಕೆ ಹೊರಟರು.
ಅರ್ಥ:
ಮರ್ತ್ಯರು: ಮನುಷ್ಯ; ಅಕಟ: ಅಯ್ಯೋ; ದಿವಿಜ: ದೇವತೆ; ವಿಧಿ: ನಿಯಮ, ಬ್ರಹ್ಮ; ಕವಿ: ಆವರಿಸು; ಬೇಹು:ಗೂಢಚರ್ಯೆ; ರಣ: ಯುದ್ಧ; ವೀಳೆ: ಆಮಂತ್ರಣ; ಗವಿ: ಆಶ್ರಯಸ್ಥಾನ; ಗರುವ: ಶ್ರೇಷ್ಠ, ಶೂರ; ಗಾಢಿಸು: ತುಂಬು; ಮಾನವ: ಮನುಷ್ಯ; ಮುರುಕ: ಸೊಕ್ಕು, ಗರ್ವ; ಮುರಿ: ಸೀಳು; ಸುರ: ದೇವತೆ; ನಿವಹ: ಗುಂಪು; ಸುಡು: ದಹಿಸು; ಆಹವ: ಯುದ್ಧ; ಐದು: ಬಂದು ಸೇರು; ಸೂಟಿ: ವೇಗ, ರಭಸ;
ಪದವಿಂಗಡಣೆ:
ಅವರು +ಮರ್ತ್ಯರು +ನಮ್ಮದ್+ಅಕಟಾ
ದಿವಿಜರೀ+ ವಿಧಿಯಾದುದೇ +ಕವಿ
ಕವಿ+ಎನುತ +ಬೇಹವರಿಗಿತ್ತನು+ ರಣಕೆ +ವೀಳೆಯವ
ಗವಿಯ +ಗರುವರು +ಗಾಢಿಸಿತು+ ಮಾ
ನವರ+ ಮುರುಕಕೆ +ಮುರಿದುದೀ +ಸುರ
ನಿವಹ+ ಸುಡಲ್+ಆಹವವನ್+ಎನುತ್+ಐದಿದರು +ಸೂಟಿಯಲಿ
ಅಚ್ಚರಿ:
(೧) ತ್ರಿವಳಿ ಪದಗಳು – ಗವಿಯ ಗರುವರು ಗಾಢಿಸಿತು; ಮಾನವರ ಮುರುಕಕೆ ಮುರಿದುದೀ; ಸುರ
ನಿವಹ ಸುಡಲಾಹವವನೆನುತೈದಿದರು ಸೂಟಿಯಲಿ