ದ್ರೋಣಸುತ ಕುರುಪತಿಯ ಸಮರಕೆ
ಹೂಣಿಗನಲೇ ಬಲ್ಲೆವಿದರಲಿ
ಬಾಣವಿದ್ಯೆಯ ಬೀರಿ ಬಿಡಿಸುವರಿವರು ಸಂಜಯನ
ಕಾಣಲಹುದಂತಿರಲಿ ನಿಮಗೀ
ಕೇಣದಲಿ ಫಲವಿಲ್ಲ ಕೃಪ ತ
ನ್ನಾಣೆ ನೀ ಮರಳೆಂದು ಸಾತ್ಯಕಿ ಸುರಿದನಂಬುಗಳ (ಗದಾ ಪರ್ವ, ೨ ಸಂಧಿ, ೫ ಪದ್ಯ)
ತಾತ್ಪರ್ಯ:
ಸಾತ್ಯಕಿಯು ನುಡಿಯುತ್ತಾ, ಅಶ್ವತ್ಥಾಮ ನೀನು ಕೌರವನ ಪಕ್ಷದಲ್ಲಿ ಛಲದಿಂದ ಯುದ್ಧಮಾಡುವವನಲ್ಲವೇ? ನಿಮ್ಮ ಬಿಲ್ವಿದ್ಯೆಯನ್ನು ಮೆರೆದು ಸಂಜಯನನ್ನು ಬಿಡಿಸುವವರಲ್ಲವೇ? ಅದನ್ನು ನೋಡಿಕೊಳ್ಳೋಣ, ಕೋಪಮಾಡಿದರೆ ಅದು ಫಲಿಸದು, ಕೃಪ ನನ್ನಾಣೆ, ನೀನು ಹಿಂದಿರುಗು ಎಂದು ಬಾಣಗಳ ಮಳೆಗೆರೆದನು.
ಅರ್ಥ:
ಸುತ: ಮಗ; ಸಮರ: ಯುದ್ಧ; ಹೂಣಿಗ: ಬಿಲ್ಲುಗಾರ, ಸಾಹಸಿ; ಬಲ್ಲೆ: ತಿಳಿದಿರುವೆ; ಬಾಣ: ಸರಳ; ವಿದ್ಯೆ: ಜ್ಞಾನ; ಬೀರು: ಹರಡು; ಬಿಡಿಸು: ಕಳಚು, ಸಡಿಲಿಸು; ಕಾಣು: ತೋರು; ಕೇಣ: ಹೊಟ್ಟೆಕಿಚ್ಚು, ಮತ್ಸರ, ಕೋಪ; ಫಲ: ಪ್ರಯೋಜನ; ಆಣೆ: ಮಾತು, ಭಾಷೆ; ಮರಳು: ಹಿಂದಿರುಗು; ಸುರಿ: ವರ್ಷಿಸು; ಅಂಬು: ಬಾಣ;
ಪದವಿಂಗಡಣೆ:
ದ್ರೋಣಸುತ +ಕುರುಪತಿಯ +ಸಮರಕೆ
ಹೂಣಿಗನಲೇ +ಬಲ್ಲೆವ್+ಇದರಲಿ
ಬಾಣ+ವಿದ್ಯೆಯ +ಬೀರಿ +ಬಿಡಿಸುವರ್+ ಇವರು +ಸಂಜಯನ
ಕಾಣಲಹುದಂತಿರಲಿ+ ನಿಮಗೀ
ಕೇಣದಲಿ +ಫಲವಿಲ್ಲ +ಕೃಪ+ ತ
ನ್ನಾಣೆ +ನೀ +ಮರಳೆಂದು +ಸಾತ್ಯಕಿ+ ಸುರಿದನ್+ಅಂಬುಗಳ
ಅಚ್ಚರಿ:
(೧) ಅಶ್ವತ್ಥಾಮನನ್ನು ಹೂಣಿಗ ಎಂದು ಕರೆದಿರುವುದು
(೨) ಬಾಣ, ಅಂಬು – ಸಮಾನಾರ್ಥಕ ಪದ