ಏನ ತಿಳುಹುವೆ ನೀನು ಶಾಸ್ತ್ರದೊ
ಳೇನ ನಡೆದರು ನಿನ್ನವರು ಯಮ
ಸೂಉ ನುಡಿಯನೆ ಸಮಯವನು ಶಾಸ್ರೌಘಸಂಗತಿಯ
ಹೀನಗತಿ ಪಡಿತಳದ ಹೊಯ್ಲು
ತ್ತಾನ ಘಾಯದಲೊದಗಬೇಕೆಂ
ಬೀ ನಿಬಂಧನವಾರಲಳಿದುದು ಕೃಷ್ಣ ಹೇಳೆಂದ (ಗದಾ ಪರ್ವ, ೮ ಸಂಧಿ, ೩೦ ಪದ್ಯ)
ತಾತ್ಪರ್ಯ:
ಕೃಷ್ಣನ ಮಾತಿಗೆ ಉತ್ತರಿಸುತ್ತಾ, ಏನು ಹೇಳುತ್ತಿರುವೆ ಕೃಷ್ಣ, ಶಾಸ್ತ್ರಕ್ಕೆ ಅನುಸಾರವಾಗಿ ನಿನ್ನವರು ನಡೆದರೋ? ಧರ್ಮಜನು ಶಾಸ್ತ್ರ ವಿಚಾರವನ್ನು ಹೇಳಿರಲಿಲ್ಲವೆ? ನಾಭಿಯ ಕೆಳಗೆ ಗದೆಯಿಂದ ಹೊಡೆಯಬಾರದೆಂಬ ನಿಬಂಧವನ್ನು ಮೀರಿದವರಾರು ಎಂದು ಪ್ರಶ್ನಿಸಿದನು.
ಅರ್ಥ:
ತಿಳುಹು: ತಿಳಿಸು, ಹೇಳು; ಶಾಸ್ತ್ರ: ಸಾಂಪ್ರದಾಯಿಕವಾದ ಆಚರಣೆ, ಪದ್ಧತಿ; ನಡೆ: ಚಲಿಸು, ಆಚರಿಸು; ಸೂನು: ಮಗ; ನುಡಿ: ಮಾತಾಡು; ಸಮಯ: ಕಾಲ; ಔಘ: ಗುಂಪು, ಸಮೂಹ; ಸಂಗತಿ: ಜೊತೆ, ಸಂಗಡ; ಹೀನ: ಕೆಟ್ಟದ್ದು, ಕಳಪೆ; ಪಡಿತಳ: ಮುನ್ನುಗ್ಗುವಿಕೆ, ಆಕ್ರಮಣ; ಹೊಯ್ಲು: ಏಟು, ಹೊಡೆತ; ಘಾಯ: ಪೆಟ್ಟು; ಒದಗು: ಲಭ್ಯ, ದೊರೆತುದು; ನಿಬಂಧ: ಕರಾರು, ಕಟ್ಟಳೆ; ಅಳಿ: ನಾಶ; ಹೇಳು: ತಿಳಿಸು;
ಪದವಿಂಗಡಣೆ:
ಏನ +ತಿಳುಹುವೆ +ನೀನು +ಶಾಸ್ತ್ರದೊಳ್
ಏನ +ನಡೆದರು +ನಿನ್ನವರು +ಯಮ
ಸೂನು +ನುಡಿಯನೆ +ಸಮಯವನು +ಶಾಸ್ರೌಘ+ಸಂಗತಿಯ
ಹೀನಗತಿ +ಪಡಿತಳದ +ಹೊಯ್ಲು
ತ್ತಾನ+ ಘಾಯದಲ್+ಒದಗಬೇಕೆಂಬ್
ಈ +ನಿಬಂಧನವ್+ಆರಲ್+ಅಳಿದುದು +ಕೃಷ್ಣ+ ಹೇಳೆಂದ
ಅಚ್ಚರಿ:
(೧) ಏನ – ೧, ೨ ಸಾಲಿನ ಮೊದಲ ಪದ