ಈವುದಾ ಬೇಡಿದರೆ ಪಾರ್ಥಂ
ಗೀವುದೀಯಜ್ಞಾತ ವಾಸದೊ
ಳೀ ವಿಗಡ ಭೀಮಂಗೆ ಕೊಡದಿರಿಯೆನಲು ಖತಿಗೊಂಡು
ನೀವು ಕುಂತಿಯ ಮಕ್ಕಳಾದಿರಿ
ನಾವು ದುರ್ಯೋಧನನವರು ತ
ಪ್ಪಾವುದಿದಕೆಂದನಿಲಸುತನೌಡೊತ್ತಿ ಗರ್ಜಿಸಿದ (ವಿರಾಟ ಪರ್ವ, ೧ ಸಂಧಿ, ೧೪ ಪದ್ಯ)
ತಾತ್ಪರ್ಯ:
ನಾನೋ, ಅರ್ಜುನನೋ ಕೇಳಿದರೆ ಈ ಆಯುಧಗಳನ್ನು ನೀಡಿ, ಈ ದುಡುಕು ಬುದ್ಧಿಯ ಭೀಮನಿಗೆ ಕೊಡಬೇಡಿ ಎಂದು ಧರ್ಮಜನು ಬೇಡಿಕೊಳ್ಳಲು ಭೀಮನು ಹಲ್ಲುಕಡಿದು ತುಟಿಕಚ್ಚಿ, ಹೌದು ನೀವು ಕುಂತಿಯ ಮಕ್ಕಳು ನಾನಾದರೋ ದುರ್ಯೋಧನನ ಕಡೆಯವನು ನಿಜ, ನೀವು ಹೇಳುವುದರಲ್ಲಿ ತಪ್ಪೇನೂ ಇಲ್ಲ ಎಂದು ಗರ್ಜಿಸಿದ.
ಅರ್ಥ:
ಬೇಡು: ಕೇಳು; ಅಜ್ಞಾತ: ತಿಳಿಯದ; ವಿಗಡ: ಪರಾಕ್ರಮಿ; ಕೊಡು: ನೀಡು; ಖತಿ: ಕೋಪ; ಮಕ್ಕಳು: ಸುತರು; ತಪ್ಪು: ಸರಿಯಲ್ಲದ; ಅನಿಲಸುತ: ವಾಯುಪುತ್ರ; ಗರ್ಜಿಸು: ಜೋರಾಗಿ ಕೂಗು; ಔಡು: ಹಲ್ಲಿನಿಂದ ಕಚ್ಚು;
ಪದವಿಂಗಡಣೆ:
ಈವುದಾ +ಬೇಡಿದರೆ+ ಪಾರ್ಥಂಗ್
ಈವುದ್+ಈ+ಅಜ್ಞಾತ +ವಾಸದೊಳ್
ಈ+ ವಿಗಡ+ ಭೀಮಂಗೆ +ಕೊಡದಿರಿ+ಎನಲು +ಖತಿಗೊಂಡು
ನೀವು +ಕುಂತಿಯ +ಮಕ್ಕಳಾದಿರಿ
ನಾವು +ದುರ್ಯೋಧನನವರು+ ತ
ಪ್ಪಾವುದ್+ಇದಕೆಂದ್+ಅನಿಲಸುತನ್+ಔಡೊತ್ತಿ ಗರ್ಜಿಸಿದ
ಅಚ್ಚರಿ:
(೧) ಭೀಮನ ಕೋಪದ ವರ್ಣನೆ – ಅನಿಲಸುತನೌಡೊತ್ತಿ ಗರ್ಜಿಸಿದ