ಪದ್ಯ ೫೨: ಯಮನು ಮಗನಿಗೆ ಏನು ಹೇಳಿದನು?

ಯಮನ ಬಳಿಕೊಲಿದೀ ಪ್ರಸಂಗದ
ಕ್ರಮವ ಕೃತ್ಯೆಯ ಹದನನೆಲ್ಲಾ
ಯಮತನೂಜಂಗರುಹಿ ತದ್ವೃತ್ತಾಂತ ಸಂಗತಿಯ
ಕಮಲನಾಭನ ಕರುಣದಳತೆಯ
ಕ್ರಮವನರುಹುತೆ ಬಳಿಕ ಮುಂದಣ
ವಿಮಲದಜ್ಞಾತಕ್ಕೆ ನೇಮಿಸಿ ಹರಹಿದನು ಮಗನ (ಅರಣ್ಯ ಪರ್ವ, ೨೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಯಮನು ಈ ಪ್ರಸಂಗದ ವಿವರಗಳನ್ನೂ, ಕೃತ್ಯೆಯ ವೃತ್ತಾಮ್ತವನ್ನೂ ಧರ್ಮಜನಿಗೆ ವಿವರವಾಗಿ ತಿಳಿಸಿದನು. ಶ್ರೀಕೃಷ್ಣನ ಕರುಣೆಯಿಂದ ಪಾಂಡವರು ಪಾರಾದ ಕ್ರಮವನ್ನು ವಿವರಿಸಿದನು. ಬಳಿಕ ಅಜ್ಞಾತವಾಸಕ್ಕೆ ಹೊರಡಲು ಅಪ್ಪಣೆಯನ್ನು ನೀಡಿದನು.

ಅರ್ಥ:
ಬಳಿಕ: ನಂತರ; ಒಲಿ: ಪ್ರೀತಿ; ಪ್ರಸಂಗ: ಮಾತುಕತೆ; ಸಂದರ್ಭ; ಕ್ರಮ: ರೀತಿ; ಹದ: ಸ್ಥಿತಿ; ತನುಜ: ಮಗ; ಅರುಹು: ಹೇಳು; ವೃತ್ತಾಂತ: ಘಟನೆ; ಸಂಗತಿ: ಸಹವಾಸ, ಒಡನಾಟ; ಕಮಲನಾಭ: ವಿಷ್ಣು; ಕರುಣ: ದಯೆ; ಕ್ರಮ: ಅಡಿ, ಪಾದ; ಬಳಿಕ: ನಂತರ; ಮುಂದಣ: ಮುಂದಿನ; ವಿಮಲ: ನಿರ್ಮಲ; ಅಜ್ಞಾತ: ಯಾರಿಗೂ ಗೊತ್ತಾಗದ ಹಾಗೆ ಇರುವ ಸ್ಥಿತಿ; ನೇಮಿಸು: ಮನಸ್ಸನ್ನು ನಿಯಂತ್ರಿಸು; ಹರಹು: ಪ್ರಸರ, ಹರಡು; ಮಗ: ಪುತ್ರ;

ಪದವಿಂಗಡಣೆ:
ಯಮನ +ಬಳಿಕ+ಒಲಿದ್+ಈ+ ಪ್ರಸಂಗದ
ಕ್ರಮವ +ಕೃತ್ಯೆಯ +ಹದನನೆಲ್ಲಾ
ಯಮ+ತನೂಜಂಗ್+ಅರುಹಿ+ ತದ್ವೃತ್ತಾಂತ +ಸಂಗತಿಯ
ಕಮಲನಾಭನ+ ಕರುಣದಳತೆಯ
ಕ್ರಮವನ್+ಅರುಹುತೆ +ಬಳಿಕ+ ಮುಂದಣ
ವಿಮಲದ್+ಅಜ್ಞಾತಕ್ಕೆ +ನೇಮಿಸಿ +ಹರಹಿದನು +ಮಗನ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಮಲನಾಭನ ಕರುಣದಳತೆಯ ಕ್ರಮವನರುಹುತೆ