ಅವನಿಪತಿ ಕೇಳ್ ಪುಷ್ಯದಲಿ ಸಂ
ಭವಿಸಿದುದು ನಿರ್ಗಮನ ಬಳಿಕಾ
ಶ್ರವನನಕ್ಷತ್ರದಲಿ ಕಂಡನು ಕೃಷ್ಣ ಪಾಂಡವರ
ಅವರು ನೋಟಕರಾದರೀ ಕೌ
ರವ ವೃಕೋದರರಂಕ ಮಸೆದು
ತ್ಸವದಿ ಕಳನೇರಿದರು ಹಾಯಿಕಿ ಹಿಡಿದು ನಿಜಗದೆಯ (ಗದಾ ಪರ್ವ, ೬ ಸಂಧಿ, ೧೨ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಬಲರಾಮನು ಪುಷ್ಯನಕ್ಷತ್ರದಲ್ಲಿ ತೀರ್ಥಯಾತ್ರೆಗೆ ಹೊರಟನು. ಅವನು ಕೃಷ್ಣನನ್ನು ಪಾಂಡವರನ್ನು ನೋಡಿದ ದಿನ ಶ್ರವಣ ನಕ್ಷತ್ರವಿತ್ತು. ರಣರಮ್ಗದಲ್ಲಿದ್ದ ಎಲ್ಲರೂ ನೋಟಕರಾದರು. ಭೀಮ ದುರ್ಯೋಧನರು ತೋಳುತಟ್ಟಿ ತಮ್ಮ ಗದೆಗಲನ್ನು ಹಿಡಿದು ರಣರಂಗವನ್ನು ಪ್ರವೇಶಿಸಿದರು.
ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ಸಂಭವಿಸು: ಹುಟ್ಟು; ನಿರ್ಗಮನ: ಹೊರಗೆ ಹೊಗು; ಬಳಿಕ: ನಂತರ; ನಕ್ಷತ್ರ: ತಾರೆ; ಕಂಡು: ನೋಡು; ನೋಟಕ: ನೋಡುವವ; ವೃಕೋದರ: ಭೀಮ; ಮಸೆ: ಹರಿತವಾದುದು; ಉತ್ಸವ: ಸಂಭ್ರಮ; ಕಳ: ರಣರಂಗ; ಹಾಯಿಕು: ಹಾಕು; ಹಿಡಿ: ಗ್ರಹಿಸು; ಗದೆ: ಮುದ್ಗರ;
ಪದವಿಂಗಡಣೆ:
ಅವನಿಪತಿ+ ಕೇಳ್ +ಪುಷ್ಯದಲಿ +ಸಂ
ಭವಿಸಿದುದು +ನಿರ್ಗಮನ +ಬಳಿಕಾ
ಶ್ರವಣ+ ನಕ್ಷತ್ರದಲಿ +ಕಂಡನು +ಕೃಷ್ಣ+ ಪಾಂಡವರ
ಅವರು +ನೋಟಕರಾದರ್+ಈ+ ಕೌ
ರವ +ವೃಕೋದರರ್+ಅಂಕ +ಮಸೆದ್
ಉತ್ಸವದಿ +ಕಳನೇರಿದರು +ಹಾಯಿಕಿ +ಹಿಡಿದು +ನಿಜಗದೆಯ
ಅಚ್ಚರಿ:
(೧) ನಕ್ಷತ್ರಗಳ ಹೆಸರು – ಪುಷ್ಯ, ಶ್ರವಣ;