ಎನಲು ಹೃದಯಾಂಬುಜದ ಪೀಠದ
ವನಜನಾಭ ಧ್ಯಾನಸುಧೆಯಲಿ
ನನೆದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ
ತನುಪುಳಕ ತಲೆದೋರೆ ರೋಮಾಂ
ಚನದ ಬಿಗುಹಡಗಿತ್ತು ಕಂಗಳ
ನನೆಗಳರಳಿದವಾಯ್ತು ಭೀಷ್ಮಂಗಿತ್ತಣವಧಾನ (ದ್ರೋಣ ಪರ್ವ, ೧ ಸಂಧಿ, ೨೨ ಪದ್ಯ)
ತಾತ್ಪರ್ಯ:
ಭೀಷ್ಮನು ಹೃದಯಕಮಲ ಪೀಠದಲ್ಲಿ ನೆಲೆಗೊಳಿಸಿದ ಶ್ರೀಕೃಷ್ಣನ ಧ್ಯಾನಾಮೃತದಲ್ಲಿ ನೆನೆದು ಸಂತೋಷದಿಂದ ರೋಮಾಂಚನಗೊಂಡಿದ್ದನು. ಕರ್ಣನು ತನ್ನ ಪಾದಗಲನ್ನು ಹಣೆಗೊತ್ತಿದೊಡನೆ ಆ ರೋಮಾಂಚನವು ನಿವಾರಣೆಯಾಯಿತು, ಕಣ್ಣುಗಳು ತೆರೆದವು, ಅವನ ಮನಸ್ಸು ಹೊರಪ್ರಪಂಚಕ್ಕೆ ಬಂದಿತು.
ಅರ್ಥ:
ಹೃದಯ: ಎದೆ; ಅಂಬುಜ: ತಾವರೆ; ಪೀಠ: ಆಸನ; ವನಜನಾಭ: ಕೃಷ್ಣ, ವಿಷ್ಣು, ನಾಭಿಯಲ್ಲಿ ಕಮಲವನ್ನು ಹೊಂದಿದವ; ಧ್ಯಾನ: ಚಿಂತನೆ, ಮನನ; ಸುಧೆ: ಅಮೃತ; ನನೆ: ತೋಯು, ಒದ್ದೆಯಾಗು; ಹೊಂಗು: ಉಕ್ಕು, ಹೊರ ಹೊಮ್ಮು; ಕರಣ: ಜ್ಞಾನೇಂದ್ರಿಯ, ಕಿವಿ; ಹೊರೆ: ಭಾರ; ಏರು: ಹೆಚ್ಚಾಗು; ನಿಮಿಷ: ಕ್ಷಣ, ಕಾಲದ ಪ್ರಮಾಣ; ತನು: ದೇಹ; ಪುಳಕ: ಮೈನವಿರೇಳುವಿಕೆ; ತಲೆ: ಶಿರ; ತೋರು: ಗೋಚರಿಸು; ರೋಮಾಂಚನ: ಆಶ್ಚರ್ಯ; ಬಿಗುಹು: ಬಿಗಿ; ಅಡಗು: ಮರೆಯಾಗು; ಕಂಗಳು: ಕಣ್ಣು; ನನೆ: ಒದ್ದೆಯಾಗು; ಅರಳು: ವಿಕಸನವಾಗು; ಅವಧಾನ: ಏಕಚಿತ್ತತೆ, ಸ್ಮರಣೆ;
ಪದವಿಂಗಡಣೆ:
ಎನಲು +ಹೃದಯ+ಅಂಬುಜದ +ಪೀಠದ
ವನಜನಾಭ+ ಧ್ಯಾನ+ಸುಧೆಯಲಿ
ನನೆದು+ ಹೊಂಗಿದ +ಕರಣ +ಹೊರೆ+ಏರಿತ್ತು +ನಿಮಿಷದಲಿ
ತನುಪುಳಕ +ತಲೆದೋರೆ +ರೋಮಾಂ
ಚನದ +ಬಿಗುಹ್+ಅಡಗಿತ್ತು +ಕಂಗಳ
ನನೆಗಳ್+ಅರಳಿದವಾಯ್ತು +ಭೀಷ್ಮಂಗ್+ಇತ್ತಣ್+ಅವಧಾನ
ಅಚ್ಚರಿ:
(೧) ಧ್ಯಾನ ಮಗ್ನನಾಗಿದ್ದ ಎಂದು ಹೇಳುವ ಪರಿ – ಹೃದಯಾಂಬುಜದ ಪೀಠದ ವನಜನಾಭ ಧ್ಯಾನಸುಧೆಯಲಿ
ನನೆದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ
(೨) ವನಜ, ಅಂಜುಬ – ಸಮಾನಾರ್ಥಕ ಪದ