ಪದ್ಯ ೨೭: ಧರ್ಮಜನು ತನ್ನ ಮಾತಿಗೆ ಯಾರನ್ನು ಸಾಕ್ಷಿ ಮಾಡಿದನು?

ಎನಲು ತಂದಿರಿಸಿದರು ಫಲವನು
ವನಜನಾಭನ ಹೇಳಿಕೆಯಲಾ
ಕ್ಷಣಕೆ ಕುಂತೀತನುಜ ಹೇಳನೆ ಕೈಗಳನು ಮುಗಿದು
ಇನ ಶಶಿಗಳಿಂದ್ರಾನಲಾಂತಕ
ದನುಜ ವರುಣ ಸಮೀರ ಹರಸಖ
ಮನುಮಥಾರಿಯೆ ನೀವು ಚಿತ್ತವಿಸೆನುತಲಿಂತೆಂದ (ಅರಣ್ಯ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಅಪ್ಪಣೆಯಂತೆ ಹಣ್ಣನ್ನು ಸರಿಯಾದ ಜಾಗದಲ್ಲಿ ತಂದಿಟ್ಟರು. ಶ್ರೀಕೃಷ್ಣನು ಧರ್ಮಜನಿಗೆ ನಿನ್ನ ಮನಸ್ಸಿನ ಸತ್ಯವನ್ನು ಹೇಳೆನಲು, ಆ ಕ್ಷಣದಲ್ಲಿಯೇ, ಧರ್ಮಜನು ಕೈಗಳನ್ನು ಮುಗಿದು, ರವಿ, ಚಂದ್ರ, ಇಂದ್ರ, ಅಗ್ನಿ, ಯಮ, ನಿರಋತಿ, ವರುಣ, ವಾಯು, ಕುಬೇರ, ಶಿವ ನೀವೇ ಸಾಕ್ಷಿಯಾಗಿ ಹೇಳುತ್ತಿದ್ದೇನೆ ಎಂದು ತನ್ನ ಮಾತನ್ನು ಪ್ರಾರಂಭಿಸಿದನು.

ಅರ್ಥ:
ಎನಲು: ಹೀಗೆ ಹೇಳಲು; ಇರಿಸು: ಇಡು; ಫಲ: ಹಣ್ಣು; ವನಜನಾಭ: ಕಮಲವನ್ನು ನಾಭಿಯಲ್ಲಿ ಧರಿಸಿದವ (ವಿಷ್ಣು); ಹೇಳು: ತಿಳಿಸು; ಕ್ಷಣ: ಸಮಯ; ತನುಜ: ಮಗ; ಕೈ: ಹಸ್ತ; ಮುಗಿದು: ನಮಸ್ಕರಿಸು; ಇನ: ರವಿ; ಶಶಿ: ಚಂದ್ರ; ಅನಲ: ಬೆಂಕಿ; ಅಂತಕ: ಯಮ; ದನುಜ: ರಾಕ್ಷಸ; ಸಮೀರ: ವಾಯು; ಹರ: ಶಿವ; ಸಖ: ಮಿತ್ರ; ಹರಸಖ: ಕುಬೇರ; ಮನುಮಥ: ಕಾಮ; ಅರಿ: ವೈರಿ; ಮನುಮಥಾರಿ: ಶಿವ; ಅಂತಕದನುಜ: ನಿರಋತಿ;

ಪದವಿಂಗಡಣೆ:
ಎನಲು+ ತಂದ್+ಇರಿಸಿದರು +ಫಲವನು
ವನಜನಾಭನ +ಹೇಳಿಕೆಯಲ್+ಆ
ಕ್ಷಣಕೆ+ ಕುಂತೀತನುಜ +ಹೇಳನೆ +ಕೈಗಳನು +ಮುಗಿದು
ಇನ +ಶಶಿಗಳ್+ಇಂದ್ರ+ಅನಲ್+ಅಂತಕ
ದನುಜ +ವರುಣ +ಸಮೀರ +ಹರಸಖ
ಮನುಮಥಾರಿಯೆ +ನೀವು +ಚಿತ್ತವಿಸೆನುತಲ್+ಇಂತೆಂದ

ಅಚ್ಚರಿ:
(೧) ಶಿವನನ್ನು ಮನುಮಥಾರಿ, ಕುಬೇರನನ್ನು ಹರಸಖ ಎಂದು ಕರೆದಿರುವುದು
(೨) ವನಜ, ತನುಜ, ದನುಜ – ಪ್ರಾಸ ಪದಗಳ ಬಳಕೆ