ಪದ್ಯ ೬೩: ಕೌರವನು ಯಾರನ್ನು ಸೇನಾಧಿಪತಿಯನ್ನಾಗಿ ಮಾಡಿದನು?

ವರ ಚಮೂಪತಿ ನೀನು ಬಳಿಕಿ
ಬ್ಬರು ಚಮೂವಿಸ್ತಾರವೆನೆ ವಿ
ಸ್ತರಿಸಿ ರಚಿಸುವುದೆಂದು ರಥಿಕತ್ರಯಕೆ ನೇಮಿಸಿದ
ಗುರುಜ ಕೃಪ ಕೃತವರ್ಮರೀ ಮೂ
ವರು ನರೇಂದ್ರನ ಬೀಳುಕೊಂಡರು
ಕರೆದು ಸೂತರ ಸನ್ನೆಯಲಿ ಬಂದೇರಿದರು ರಥವ (ಗದಾ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಕೌರವನು ನುಡಿಯುತ್ತಾ, ಅಶ್ವತ್ಥಾಮ, ನೀನು ಸೇನಾಧಿಪತಿ, ಇವರಿಬ್ಬರೂ ನಿನ್ನ ಸೇನೆ. ನೀವಿನ್ನು ಯುದ್ಧ ಮಾಡಿರಿ ಎಂದು ಅಪ್ಪಣೆ ಕೊಟ್ಟನು. ಅವರು ಮೂವರೂ ಕೌರವನನ್ನು ಬೀಳುಕೊಂಡು ಸೂತರು ತೋರಿಸಿದಂತೆ ರಥವನ್ನೇರಿದರು.

ಅರ್ಥ:
ವರ: ಶ್ರೇಷ್ಠ; ಚಮೂಪತಿ: ಸೇನಾಧಿಪತಿ; ಬಳಿಕ: ನಂತರ; ಚಮು: ಸೇನೆ; ವಿಸ್ತಾರ: ಹರಡು; ರಚಿಸು: ನಿರ್ಮಿಸು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ತ್ರಯ: ಮೂರು; ನೇಮಿಸು: ಅಪ್ಪಣೆ ಮಾಡು; ಗುರುಜ: ಗುರುವಿನ ಪುತ್ರ (ಅಶ್ವತ್ಥಾಮ); ನರೇಂದ್ರ: ರಾಜ; ಬೀಳುಕೊಂಡು: ತೆರಳು; ಕರೆದು: ಬರೆಮಾದು; ಸೂತ: ಸಾರಥಿ; ಸನ್ನೆ: ಗುರುತು; ಬಂದು: ಆಗಮಿಸು; ಏರು: ಮೇಲೆ ಹತ್ತು; ರಥ: ಬಂಡಿ;

ಪದವಿಂಗಡಣೆ:
ವರ +ಚಮೂಪತಿ+ ನೀನು +ಬಳಿಕ್
ಇಬ್ಬರು+ ಚಮೂ+ವಿಸ್ತಾರವ್+ಎನೆ +ವಿ
ಸ್ತರಿಸಿ+ ರಚಿಸುವುದೆಂದು +ರಥಿಕ+ತ್ರಯಕೆ+ ನೇಮಿಸಿದ
ಗುರುಜ +ಕೃಪ +ಕೃತವರ್ಮರ್+ಈ+ ಮೂ
ವರು +ನರೇಂದ್ರನ+ ಬೀಳುಕೊಂಡರು
ಕರೆದು +ಸೂತರ+ ಸನ್ನೆಯಲಿ +ಬಂದೇರಿದರು +ರಥವ

ಅಚ್ಚರಿ:
(೧) ಚಮೂಪತಿ, ಚಮೂವಿಸ್ತಾರ – ಪದಗಳ ಬಳಕೆ
(೨) ಇಬ್ಬರು, ಮೂವರು – ೨, ೫ ಸಾಲಿನ ಮೊದಲ ಪದ

ಪದ್ಯ ೨೯: ಯುದ್ಧವು ಹೇಗೆ ನಡೆಯಿತು?

ಸುರಿದುದಂಬಿನ ಸೋನೆ ರಥಿಕರ
ಕರಿಘಟೆಯ ಥಟ್ಟಿಂದ ಕಕ್ಕಡೆ
ಪರಶು ಶೂಲ ಮುಸುಂಡಿ ಸೆಲ್ಲೆಹ ಸಬಳ ಶಕ್ತಿಗಳು
ಅರಿಬಲಾಬ್ಧಿಯನೀಸಿದವು ತ
ತ್ತುರಗ ರಥವನು ಬೀಸಿದವು ಮದ
ಕರಿಗಳಿಕ್ಕಡಿಘಾಯಕೊದಗಿತು ರಾಯರಾವುತರು (ಗದಾ ಪರ್ವ, ೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ರಥಿಕರು ಬಿಟ್ಟ ಬಾಣಗಳ ಸೋನೆಮಳೆ ಸುರಿಯಿತು. ಆನೆಗಳ ಸೇನೆಯಿಂದ ಕಕ್ಕಡೆ, ಗಂಡುಗೊಡಲಿ, ಶೂಲ, ಮುಸುಂಡಿ, ಈಟಿ, ಭರ್ಜಿ, ಸಬಳ ಶಕ್ತಿಗಳು ಹೊರಟು ಪಾಂಡವರ ಸೇನೆಯನ್ನು ಘಾತಿಸಿದವು. ರಥಗಳ ಮದದಾನೆಗಳ ದಾಳಿಗಳಿಗೆ ಶತ್ರುಗಳು ಗಾಯಗೊಂಡರು.

ಅರ್ಥ:
ಸುರಿ: ಹರದು; ಅಂಬು: ಬಾಣ; ಸೋನೆ: ಮಳೆ; ರಥಿಕ: ರಥಿ; ಕರಿಘಟೆ: ಆನೆಯ ಗುಂಪು; ಥಟ್ಟು: ಗುಂಪು; ಕಕ್ಕಡೆ: ಗರಗಸ; ಪರಶು: ಕೊಡಲಿ, ಕುಠಾರ; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ, ತ್ರಿಶೂಲ; ಮುಸುಂಡಿ: ಮುಖಹೇಡಿ, ಮಕೇಡಿ, ಅಂಜುಬುರುಕ; ಸೆಲ್ಲೆಹ: ಈಟಿ, ಭರ್ಜಿ; ಸಬಳ: ಈಟಿ, ಭರ್ಜಿ; ಶಕ್ತಿ: ಬಲ; ಅರಿ: ವೈರಿ; ಅಬ್ಧಿ: ಸಾಗರ; ಈಸು: ಈಜು, ಬಾಳು; ತುರಗ: ಕುದುರೆ; ರಥ: ಬಂಡಿ; ಬೀಸು: ತೂಗುವಿಕೆ; ಮದ: ಅಮಲು, ಮತ್ತ; ಕರಿ: ಆನೆ; ಘಾಯ: ಪೆಟ್ಟು; ಒದಗು: ಲಭ್ಯ, ದೊರೆತುದು; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ;

ಪದವಿಂಗಡಣೆ:
ಸುರಿದುದ್+ಅಂಬಿನ +ಸೋನೆ +ರಥಿಕರ
ಕರಿ+ಘಟೆಯ +ಥಟ್ಟಿಂದ +ಕಕ್ಕಡೆ
ಪರಶು +ಶೂಲ+ ಮುಸುಂಡಿ +ಸೆಲ್ಲೆಹ +ಸಬಳ +ಶಕ್ತಿಗಳು
ಅರಿ+ಬಲ+ಅಬ್ಧಿಯನ್+ಈಸಿದವು +ತತ್
ತುರಗ +ರಥವನು +ಬೀಸಿದವು +ಮದ
ಕರಿಗಳ್+ಇಕ್ಕಡಿ+ಘಾಯಕ್+ಒದಗಿತು +ರಾಯ+ರಾವುತರು

ಅಚ್ಚರಿ:
(೧) ಕರಿ – ೨, ೬ ಸಾಲಿನ ಮೊದಲ ಪದ
(೨) ಕಕ್ಕಡೆ, ಪರಶು, ಶೂಲ, ಮುಸುಂಡಿ, ಸೆಲ್ಲೆಹ, ಸಬಳ – ಆಯುಧಗಳ ವಿವರ್
(೩) ರೂಪಕದ ಪ್ರಯೋಗ – ಸುರಿದುದಂಬಿನ ಸೋನೆ; ಅರಿಬಲಾಬ್ಧಿಯನೀಸಿದವು

ಪದ್ಯ ೨೯: ಪಾಂಡವರನ್ನು ಯುದ್ಧದಲ್ಲಿ ಹೇಗೆ ಸಿಲುಕಿಸಲಾಯಿತು?

ತೆಗೆದರರ್ಜುನನನು ಸುಧರ್ಮನ
ವಿಗಡ ರಥಿಕರು ಭೀಮಸೇನನ
ನುಗಿದನಿತ್ತಲು ನಿನ್ನ ಮಗನಾ ಸಾತ್ಯಕಿಯ ರಥವ
ಹೊಗರುಗಣೆಯಲಿ ಮುಸುಕಿದನು ಹೂ
ಣಿಗನಲೇ ಗುರುಸೂನು ನಕುಲನ
ತೆಗೆಸಿದನು ಕೂರಂಬಿನಲಿ ತೆರಳದೆ ಕೃಪಾಚಾರ್ಯ (ಶಲ್ಯ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸುಶರ್ಮನ ವೀರಭಟರು ಅರ್ಜುನನನ್ನು ಯುದ್ಧಕ್ಕೆಳೆದರು. ನಿನ್ನ ಮಗನು (ದುರ್ಯೋಧನ) ಭೀಮನನ್ನು ಇದಿರಿಸಿದನು. ಅಶ್ವತ್ಥಾಮನು ಬಾಣಗಳಿಂದ ಸಾತ್ಯಕಿಯ ರಥವನ್ನು ಮುಚ್ಚಿದನು. ಕೃಪಾಚಾರ್ಯನು ವೈರಿಯ ಬಾಣಗಳನ್ನು ಲೆಕ್ಕಿಸದೆ ನಕುಲನನ್ನು ಯುದ್ಧಕ್ಕೆಳೆದನು.

ಅರ್ಥ:
ತೆಗೆ: ಹೊರತರು; ವಿಗಡ: ಶೌರ್ಯ, ಪರಾಕ್ರಮ; ರಥಿಕ: ರಥಿ, ರಥದಲ್ಲಿ ಕುಳಿತು ಯುದ್ಧ ಮಾಡುವವನು; ಉಗಿ: ಹೊರಹಾಕು; ಮಗ: ಸುತ; ರಥ: ಬಂಡಿ; ಹೊಗರು: ಕಾಂತಿ, ಪ್ರಕಾಶ; ಕಣೆ: ಬಾಣ; ಮುಸುಕು: ಆವರಿಸು; ಹೂಣಿಗ: ಬಿಲ್ಲುಗಾರ, ಸಾಹಸಿ; ಸೂನು: ಮಗ; ತೆಗೆಸು: ಹೊರತರು; ಕೂರಂಬು: ಹರಿತವಾದ ಬಾಣ; ತೆರಳು: ಹೋಗು;

ಪದವಿಂಗಡಣೆ:
ತೆಗೆದರ್+ಅರ್ಜುನನನು+ ಸುಶರ್ಮನ
ವಿಗಡ +ರಥಿಕರು+ ಭೀಮಸೇನನನ್
ಉಗಿದನ್+ಇತ್ತಲು +ನಿನ್ನ +ಮಗನಾ +ಸಾತ್ಯಕಿಯ +ರಥವ
ಹೊಗರು+ಕಣೆಯಲಿ +ಮುಸುಕಿದನು +ಹೂ
ಣಿಗನಲೇ +ಗುರುಸೂನು +ನಕುಲನ
ತೆಗೆಸಿದನು +ಕೂರಂಬಿನಲಿ +ತೆರಳದೆ +ಕೃಪಾಚಾರ್ಯ

ಅಚ್ಚರಿ:
(೧) ತೆಗೆದು, ತೆಗೆಸು, ತೆರಳು – ಪದಗಳ ಬಳಕೆ
(೨) ಮಗ, ಸೂನು – ಸಮಾನಾರ್ಥಕ ಪದ

ಪದ್ಯ ೧೪: ಸೈನಿಕರ ನಡುವೆ ಯುದ್ಧವು ಹೇಗೆ ಮುಂದುವರೆಯಿತು?

ಕೇಣವಿಲ್ಲದೆ ಭಟರ ಹಾಣಾ
ಹಾಣಿ ಮಸಗಿತು ಖಣಿಖಟಿಲ ಹೊ
ಯ್ದಾಣೆಗಳ ಬಿರುಗಿಡಿಯ ಹಿರಿಯುಬ್ಬಣದ ಹೊಯ್ಲುಗಳ
ಹೂಣಿಕೆಯ ಸಬಳಿಗರೊಳಿಮ್ಮೈ
ಗಾಣಿಕೆಯ ಬಲುಸೂತರಥಿಕರ
ಜಾಣತಿಯ ಬಿಲ್ಲವರ ಧಾಳಾಧೂಳಿ ಬಲುಹಾಯ್ತು (ಶಲ್ಯ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭಟರೆಲ್ಲರೂ ಸಂಕೋಚವನ್ನು ಬಿಟ್ಟು ಶಕ್ತಿಮೀರಿ ಹಾಣಾಹಾಣಿ ಯುದ್ಧದಲ್ಲಿ ತೊಡಗಿದರು. ಆಯುಧಗಳು ತಾಕಿ ಖಣಿಖಟಿಲು ಸದ್ದು ಕೇಳಿ ಕಿಡಿಗಳುರುಳಿದವು. ಉಬ್ಬಣಗಳು ತಾಕಲಾಡಿದವು. ಭಲ್ಯ ಈಟಿಗಳಿಂದ ವೈರಿಗಳನ್ನು ಹಣಿದರು. ಬಿಲ್ಲಾಳುಗಳು, ಸೂತರು, ರಥಿಕರು ಸಮರೋದ್ಯೋಗದಲ್ಲಿ ನಿರತರಾದರು.

ಅರ್ಥ:
ಕೇಣ: ಹೊಟ್ಟೆಕಿಚ್ಚು; ಭಟ: ಸೈನಿಕ; ಹಾಣಾಹಾಣಿ: ಹಣೆ ಹಣೆಯ ಯುದ್ಧ; ಮಸಗು: ಹರಡು; ಕೆರಳು; ಖಣಿಖಟಿಲು: ಬಾಣದ ಶಬ್ದವನ್ನು ವಿವರಿಸುವ ಪದ; ಹೋಯ್ದ್: ಹೊಡೆ; ಬಿರು: ಬಿರುಸಾದುದು, ಗಟ್ಟಿಯಾದ;
ಕಿಡಿ: ಬೆಂಕಿ; ಹಿರಿ: ಹೆಚ್ಚು; ಉಬ್ಬಣ: ಚೂಪಾದ ಆಯುಧ; ಹೊಯ್ಲು: ಏಟು, ಹೊಡೆತ; ಹೂಣಿಕೆ: ಶಪಥ, ಪ್ರತಿಜ್ಞೆ; ಸಬಳ: ಈಟಿ, ಭರ್ಜಿ; ಸೂತ: ಸಾರಥಿ; ರಥಿಕ: ರಥದ ಮೇಲೆ ಕುಳಿತು ಯುದ್ಧ ಮಾಡುವವ; ಜಾಣತಿ: ಜಾನತನ; ಬಿಲ್ಲವರ: ಬಿಲ್ಲುಗಾರ; ಧಾಳಾಧೂಳಿ: ವಿಪ್ಲವ, ಚೆಲ್ಲಾಪಿಲ್ಲಿ; ಬಲುಹು: ಬಲ, ಶಕ್ತಿ;

ಪದವಿಂಗಡಣೆ:
ಕೇಣವಿಲ್ಲದೆ +ಭಟರ +ಹಾಣಾ
ಹಾಣಿ +ಮಸಗಿತು +ಖಣಿಖಟಿಲ+ ಹೊ
ಯ್ದಾಣೆಗಳ+ ಬಿರು+ಕಿಡಿಯ +ಹಿರಿ+ಉಬ್ಬಣದ+ ಹೊಯ್ಲುಗಳ
ಹೂಣಿಕೆಯ +ಸಬಳಿಗರೊಳ್+ಇಮ್ಮೈ
ಗಾಣಿಕೆಯ +ಬಲು+ಸೂತ+ರಥಿಕರ
ಜಾಣತಿಯ +ಬಿಲ್ಲವರ+ ಧಾಳಾಧೂಳಿ +ಬಲುಹಾಯ್ತು

ಅಚ್ಚರಿ:
(೧) ಹಾಣಾಹಾಣಿ, ಖಣಿಖಟಿಲ, ಧಾಳಾಧೂಳಿ – ಪದಗಳ ಬಳಕೆ

ಪದ್ಯ ೭೦: ಯಾರನ್ನು ಎದುರಿಸುವೆ ನೆಂದು ಘಟೋತ್ಕಚನು ಹೇಳಿದನು?

ಅಳಹಿರಿ ನಿಮಗಂಜುವೆನು ಕಾ
ಲಳ ಹೊಯ್ಯೆನು ಕುದುರೆಕಾರರು
ಮೇಲುವಾಯಲಿ ರಥಿಕರೊಡೆಹಾಯಿಸಲಿ ತೇರುಗಳ
ತೂಳಿಸಲಿ ಗಜದಳವನವರಿಗೆ
ಕೋಲ ತೊಡಚುವನಲ್ಲ ನೆರೆ ಹೀ
ಹಾಳಿಯುಳ್ಳರೆ ಬರಲಿ ಕರ್ಣ ದ್ರೋಣ ಕೃಪರೆನುತ (ದ್ರೋಣ ಪರ್ವ, ೧೫ ಸಂಧಿ, ೭೦ ಪದ್ಯ)

ತಾತ್ಪರ್ಯ:
ಘಟೋತ್ಕಚನು, ವೀರರಾದ ನಿಮಗೆ ನಾನು ಹೆದರುತ್ತೇನೆ. ಕಾಲಾಳುಗಳು ಮೇಲೆ ಬೀಳಲಿ, ನನ್ನ ಮೇಲೆ ರಥಗಳನ್ನು ಹಾಯಿಸಿರಿ, ಆನೆಗಳನ್ನು ನನ್ನ ಮೇಲೆ ಬಿಡಲಿ, ಅವರಾರನ್ನೂ ನನ್ನ ಬಾಣಗಳಿಂದ ಹೊಡೆಯುವುದಿಲ್ಲ, ಛಲ ಹುರುಡುಗಳಿದ್ದರೆ ಕರ್ಣ, ದ್ರೋಣ, ಕೃಪರು ನನ್ನೊಡನೆ ಯುದ್ಧಕ್ಕೆ ಬರಲಿ ಎಂದನು.

ಅರ್ಥ:
ಆಳು: ಸೇವಕ; ಹಿರಿ: ದೊಡ್ಡವ; ಅಂಜು: ಹೆದರು; ಕಾಲಾಳು: ಸೈನಿಕ; ಹೊಯ್ದು: ಹೊಡೆದು; ಕುದುರೆ: ಅಶ್ವ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ತೇರು: ಬಂಡಿ; ತೂಳು: ಹೊಡೆ; ಗಜ: ಆನೆ; ದಳ: ಗುಂಪು, ಸೈನ್ಯ; ಕೋಲ: ಬಾಣ; ತೊಡಚು: ಕಟ್ಟು, ಬಂಧಿಸು; ನೆರೆ: ಗುಂಪು; ಹೀಹಾಳಿ: ಗಳಿಕೆ, ಅವಹೇಳನ; ಬರಲಿ: ಆಗಮಿಸು;

ಪದವಿಂಗಡಣೆ:
ಅಳಹಿರಿ +ನಿಮಗ್+ಅಂಜುವೆನು +ಕಾ
ಲಳ ಹೊಯ್ಯೆನು ಕುದುರೆಕಾರರು
ಮೇಲುವಾಯಲಿ +ರಥಿಕರೊಡೆ+ಹಾಯಿಸಲಿ +ತೇರುಗಳ
ತೂಳಿಸಲಿ +ಗಜದಳವನ್+ಅವರಿಗೆ
ಕೋಲ +ತೊಡಚುವನಲ್ಲ +ನೆರೆ+ ಹೀ
ಹಾಳಿಯುಳ್ಳರೆ +ಬರಲಿ+ ಕರ್ಣ +ದ್ರೋಣ +ಕೃಪರೆನುತ

ಅಚ್ಚರಿ:
(೧) ಹೊಯ್ಯೆನು, ಹಾಯಿಸು, ಹೀಹಾಳಿ – ಹ ಕಾರದ ಪದಗಳು

ಪದ್ಯ ೫೮: ಕೌರವ ಸೈನಿಕರು ಏನೆಂದು ಕೂಗಿದರು?

ಅಕಟ ದೊರೆಯೋ ಸಿಕ್ಕಿದನು ಪಾ
ತಕರು ರಥಿಕರು ಶಿವ ಹಿಡಿಂಬಾ
ರ್ಭಕನಿಗೊಪ್ಪಿಸಿಕೊಟ್ಟು ಕೊಂದರು ದ್ರೋಣ ಕೃಪರೆನುತ
ಸಕಲ ಪರಿಚಾರಕರು ಮಂತ್ರಿ
ಪ್ರಕರವೊರಲಲು ಕೇಳಿ ಬದ್ಧ
ಭ್ರುಕುಟಿ ಭೀಷಣಮುಖರು ಮಸಗಿತು ದೈತ್ಯಬಲಜಲಧಿ (ದ್ರೋಣ ಪರ್ವ, ೧೫ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅಯ್ಯೋ ದೊರೆಯೇ, ಶತ್ರುವಿಗೆ ಸಿಕ್ಕಿದನು. ಮಹಾರಥರಾದ ದ್ರೋಣ ಕೃಪರೆಂಬ ಪಾಪಿಗಳು ದೊರೆಯನ್ನು ಹಿಡಿಂಬಿಯ ಮಗನಿಗೆ ಒಪ್ಪಿಸಿಬಿಟ್ಟು ಅವನನ್ನು ಕೊಂದರು, ಎಂದು ದೊರೆಯ ಪರಿಚಾರಕರು ಮಂತ್ರಿಗಳು ಒರಲಲು, ಆ ಕೂಗನ್ನು ಕೇಳಿ ಹುಬ್ಬುಗಂಟಿಟ್ಟ ಭೀಕರಮುಖದ ರಾಕ್ಷಸರು ಯುದ್ಧಕ್ಕೆ ಬಂದರು.

ಅರ್ಥ:
ಅಕಟ: ಅಯ್ಯೋ; ದೊರೆ: ರಾಜ; ಸಿಕ್ಕು: ಬಂಧನಕ್ಕೊಳಗಾಗು; ಪಾತಕ: ಪಾಪಿ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಶಿವ: ಶಂಕರ; ಅರ್ಭಕ: ಸಣ್ಣ ಹುಡುಗ; ಒಪ್ಪಿಸು: ಒಪ್ಪಿಗೆ, ಸಮ್ಮತಿ; ಕೊಂದು: ಸಾಯಿಸು; ಸಕಲ: ಎಲ್ಲಾ; ಪರಿಚಾರಕ: ಆಳು, ಸೇವಕ; ಪ್ರಕರ: ಗುಂಪು, ಸಮೂಹ; ಕೇಳು: ಆಲಿಸು; ಭ್ರುಕುಟಿ: ಹುಬ್ಬು; ಬದ್ಧ: ಬಂಧಿಸು, ಗಟ್ಟಿ; ಭೀಷಣ: ಭಯಂಕರವಾದ; ಮಸಗು: ಹರಡು; ಕೆರಳು; ದೈತ್ಯ: ರಾಕ್ಷಸ; ಬಲ: ಸೈನ್ಯ; ಜಲಧಿ: ಸಾಗರ;

ಪದವಿಂಗಡಣೆ:
ಅಕಟ +ದೊರೆಯೋ +ಸಿಕ್ಕಿದನು +ಪಾ
ತಕರು +ರಥಿಕರು +ಶಿವ +ಹಿಡಿಂಬ
ಅರ್ಭಕನಿಗ್+ಒಪ್ಪಿಸಿಕೊಟ್ಟು +ಕೊಂದರು +ದ್ರೋಣ +ಕೃಪರೆನುತ
ಸಕಲ+ ಪರಿಚಾರಕರು+ ಮಂತ್ರಿ
ಪ್ರಕರವ್+ಒರಲಲು +ಕೇಳಿ +ಬದ್ಧ
ಭ್ರುಕುಟಿ +ಭೀಷಣಮುಖರು +ಮಸಗಿತು +ದೈತ್ಯ+ಬಲ+ಜಲಧಿ

ಅಚ್ಚರಿ:
(೧) ಘಟೋತ್ಕಚನನ್ನು ಹಿಡಿಂಬಾರ್ಭಕ ಎಂದು ಕರೆದಿರುವುದು
(೨) ಬ ಕಾರದ ತ್ರಿವಳಿ ಪದ – ಬದ್ಧ ಭ್ರುಕುಟಿ ಭೀಷಣಮುಖರು

ಪದ್ಯ ೨೦: ದ್ರೋಣರು ಯಾರನ್ನು ಸನ್ಮಾನಿಸಿದರು?

ಕರೆಕರೆದು ರಥಿಕರಿಗೆ ಮಾವಂ
ತರಿಗೆ ಕಾಲಾಳಿಂಗೆ ರಾವು
ತ್ತರಿಗೆ ಕೊಡಿಸಿದನವರವರಿಗವರಂಗದಾಯುಧವ
ತರಿಸಿ ಸಾದು ಜವಾದಿಯನು ಕ
ರ್ಪುರದ ವೀಳೆಯವುಡೆಗೊರೆಗಳಲಿ
ಹಿರಿದು ಪತಿಕರಿಸಿದನು ಪರಿವಾರದವನು ಕಲಿ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ರಥಿಕರು, ಮಾವುತರು, ಕಾಲಾಳುಗಳು, ರಾವುತರನ್ನು ಕರೆಕರೆದು ಕೈದುಗಳನ್ನು ಕೊಡಿಸಿದನು. ಸಾದು, ಜವಾಗಿ, ಕರ್ಪೂರ, ವೀಳೆಯ, ಉಡುಗೊರೆಗಳನ್ನು ಕೊಟ್ಟು ದ್ರೋಣನು ಸೈನಿಕರನ್ನು ಸನ್ಮಾನಿಸಿದನು.

ಅರ್ಥ:
ಕರೆ: ಬರೆಮಾಡು; ರಥಿಕ: ರಥದಲ್ಲಿ ಕುಳಿತು ಯುದ್ಧಮಾಡುವವ; ಮಾವುತ: ಆನೆಯನ್ನು ಪಳಗಿಸುವ; ಕಾಲಾಳು: ಸೈನಿಕ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕೊಡಿಸು: ಪಡೆ; ಆಯುಧ: ಶಸ್ತ್ರ; ತರಿಸು: ಬರೆಮಾದು; ಸಾದು: ಸಿಂಧೂರ; ಜವಾಜಿ: ಸುವಾಸನ ದ್ರವ್ಯ; ಕರ್ಪುರ: ಸುಗಂಧ ದ್ರವ್ಯ; ವೀಳೆ: ತಾಂಬೂಲ; ಉಡುಗೊರೆ: ಕಾಣಿಕೆ, ಬಳುವಳಿ; ಹಿರಿದು: ಹೆಚ್ಚಿನ; ಪತಿಕರಿಸು: ಅನುಗ್ರಹಿಸು; ಪರಿವಾರ: ಸಂಬಂಧಿಕರು; ಕಲಿ: ಶೂರ;

ಪದವಿಂಗಡಣೆ:
ಕರೆಕರೆದು +ರಥಿಕರಿಗೆ +ಮಾವಂ
ತರಿಗೆ+ ಕಾಲಾಳಿಂಗೆ +ರಾವು
ತ್ತರಿಗೆ +ಕೊಡಿಸಿದನ್+ಅವರ್+ಅವರಿಗ್+ಅವರಂಗದ್+ಆಯುಧವ
ತರಿಸಿ +ಸಾದು +ಜವಾದಿಯನು +ಕ
ರ್ಪುರದ +ವೀಳೆಯವ್+ಉಡೆಗೊರೆಗಳಲಿ
ಹಿರಿದು +ಪತಿಕರಿಸಿದನು +ಪರಿವಾರದವನು +ಕಲಿ +ದ್ರೋಣ

ಅಚ್ಚರಿ:
(೧) ರಥಿಕ, ಮಾವುತ, ಕಾಲಾಳು, ರಾವುತ – ಸೈನ್ಯದವರನ್ನು ಕರೆಯಲು ಬಳಸುವ ಪದಗಳು
(೨) ಕೊಡಿಸಿದನವರವರಿಗವರಂಗದಾಯುಧವ – ಪದದ ರಚನೆ

ಪದ್ಯ ೩೨: ಭಗದತ್ತನು ಯಾರನ್ನು ಸೋಲಿಸಿದನು?

ಹತ್ತು ಶರದಲಿ ಧರ್ಮಜನನಿ
ಪ್ಪತ್ತರಿಂದಭಿಮನ್ಯುವನು ತೊಂ
ಬತ್ತು ಶರದಲಿ ನಕುಲ ಸಾತ್ಯಕಿ ದ್ರುಪದ ಕೈಕೆಯರ
ಕೆತ್ತಿದನು ಹದಿನೆಂಟು ಬಾಣದ
ಲತ್ತ ಭೀಮನ ನಂದನನನೈ
ವತ್ತು ಶರದಲಿ ಸಕಲ ರಥಿಕರನೆಚ್ಚು ಬೊಬ್ಬಿರಿದ (ದ್ರೋಣ ಪರ್ವ, ೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಧರ್ಮಜನನ್ನು ಹತ್ತು ಬಾಣಗಳಿಂದ, ಅಭಿಮನ್ಯುವನ್ನು ಇಪ್ಪತ್ತು ಬಾಣಗಳಿಂದ, ನಕುಲ ಸಾತ್ಯಕಿ, ದ್ರುಪದ, ಕೈಕೆಯರನ್ನು ತೊಂಬತ್ತು ಬಾಣಗಳಿಂದ, ಘಟೋತ್ಕಚನನ್ನು ಹದಿನೆಂಟು ಬಾಣಗಳಿಂದ ಹೊಡೆದು ಉಳಿದ ರಥಿಕರನ್ನು ಐವತ್ತು ಬಾಣಗಳಿಂದ ಮರ್ದಿಸಿ ಭಗದತ್ತನು ಗರ್ಜಿಸಿದನು.

ಅರ್ಥ:
ಶರ: ಬಾಣ; ಕೆತ್ತು: ಅದಿರು, ನಡುಗು; ಬಾಣ: ಶರ; ನಂದನ: ಮಗ; ಸಕಲ: ಎಲ್ಲಾ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಎಚ್ಚು: ಬಾಣ ಪ್ರಯೋಗ ಮಾಡು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಹತ್ತು +ಶರದಲಿ +ಧರ್ಮಜನನ್
ಇಪ್ಪತ್ತರಿಂದ್+ಅಭಿಮನ್ಯುವನು +ತೊಂ
ಬತ್ತು +ಶರದಲಿ +ನಕುಲ +ಸಾತ್ಯಕಿ +ದ್ರುಪದ +ಕೈಕೆಯರ
ಕೆತ್ತಿದನು +ಹದಿನೆಂಟು +ಬಾಣದಲ್
ಅತ್ತ +ಭೀಮನ+ ನಂದನನನ್
ಐವತ್ತು +ಶರದಲಿ +ಸಕಲ +ರಥಿಕರನ್+ಎಚ್ಚು +ಬೊಬ್ಬಿರಿದ

ಅಚ್ಚರಿ:
(೧) ಹತ್ತು, ಇಪ್ಪತ್ತು, ತೊಂಬತ್ತು, ಐವತ್ತು, ಹದಿನೆಂಟು – ಬಾಣಗಳ ಸಂಖ್ಯೆ
(೨) ಶರ, ಬಾಣ – ಸಮಾನಾರ್ಥಕ ಪದಗಳು

ಪದ್ಯ ೫೭: ದ್ರೋಣನನ್ನು ಯಾರು ಮುತ್ತಿದರು?

ಎಸಲು ಧೃಷ್ಟದ್ಯುಮ್ನ ದ್ರೋಣನ
ವಿಶಿಖ ಹತಿಯಲಿ ನೊಂದು ರಥದಲಿ
ಬಸವಳಿಯೆ ಬಳಿ ಸಲಿಸಿದರು ಪಾಂಚಾಲ ನಾಯಕರು
ಮುಸುಡ ಬಿಗುಹಿನ ಸೆಳೆದಡಾಯುಧ
ಹೊಸ ಪರಿಯ ಬಿರುದುಗಳ ಗಜರಥ
ವಿಸರ ಮಧ್ಯದಲೆಂಟು ಸಾವಿರ ರಥಿಕರೌಂಕಿದರು (ದ್ರೋಣ ಪರ್ವ, ೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ದ್ರೋಣನ ಬಾಣಗಳಿಂದ ನೊಮ್ದು ರಥದಲ್ಲಿ ಮೂರ್ಛಿತನಾಗಿ ಬಿದ್ದನು. ಆಗ ಎಂಟು ಸಾವಿರ ಪರಾಕ್ರಮದ ಬಿರುದುಗಳನ್ನು ಹೊತ್ತ ಪಾಂಚಾಲ ರಥಿಕರು ಮುಖವನ್ನು ಬಿಗಿದುಕೊಂಡು, ಕತ್ತಿಯನ್ನು ಹಿರಿದು ಚತುರಂಗ ಸೈನ್ಯದೊಡನೆ ದ್ರೋಣನನ್ನು ಮುತ್ತಿದರು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ವಿಶಿಖ: ಬಾಣ, ಅಂಬು; ಹತಿ: ಹೊಡೆತ; ನೊಂದು: ನೋವುಂಡು; ರಥ: ಬಂಡಿ; ಬಸವಳಿ: ಆಯಾಸಗೊಂಡು; ಬಳಿ: ಹತ್ತಿರ; ಸಲಿಸು: ಪೂರೈಸು, ಒಪ್ಪಿಸು; ನಾಯಕ: ಒಡೆಯ; ಮುಸುಡು: ಮುಖ; ಬಿಗು: ಗಟ್ಟಿ; ಸೆಳೆ: ಆಕರ್ಷಿಸು; ಆಯುಧ: ಶಸ್ತ್ರ; ಹೊಸ: ನವೀನ; ಪರಿ: ರೀತಿ; ಬಿರುದು: ಗೌರವಸೂಚಕ ಪದ; ಗಜ: ಆನೆ; ರಥ: ಬಂಡಿ; ವಿಸರ: ವಿಸ್ತಾರ, ವ್ಯಾಪ್ತಿ; ಮಧ್ಯ: ನಡುವೆ; ಸಾವಿರ: ಸಹಸ್ರ; ರಥಿಕ: ರಥದಲ್ಲಿ ಕುಳಿತು ಯುದ್ಧಮಾಡುವವ; ಔಂಕು: ಒತ್ತು, ಹಿಚುಕು;

ಪದವಿಂಗಡಣೆ:
ಎಸಲು +ಧೃಷ್ಟದ್ಯುಮ್ನ +ದ್ರೋಣನ
ವಿಶಿಖ+ ಹತಿಯಲಿ +ನೊಂದು +ರಥದಲಿ
ಬಸವಳಿಯೆ +ಬಳಿ +ಸಲಿಸಿದರು +ಪಾಂಚಾಲ +ನಾಯಕರು
ಮುಸುಡ +ಬಿಗುಹಿನ +ಸೆಳೆದಡ್+ಆಯುಧ
ಹೊಸ +ಪರಿಯ +ಬಿರುದುಗಳ +ಗಜ+ರಥ
ವಿಸರ+ ಮಧ್ಯದಲ್+ಎಂಟು +ಸಾವಿರ +ರಥಿಕರ್+ಔಂಕಿದರು

ಅಚ್ಚರಿ:
(೧)

ಪದ್ಯ ೨೩: ಭೀಷ್ಮನು ಎಲ್ಲಿ ರಕ್ತದ ಹೊಳೆಯನ್ನು ಹರಿಸಿದನು?

ಬಲವನದ ಹೊದರೆಲ್ಲಿ ಸೇನಾ
ಜಲನಿಧಿಯ ಸುಳಿವೆಲ್ಲಿ ಸುಭಟರ
ಕಳಕಳದ ಕಡುಹೆಲ್ಲಿ ಖರೆಯದ ರಥಿಕರವರೆಲ್ಲಿ
ಹೊಳೆದು ಮೊಳಗಿದನಲ್ಲಿ ಬಾಣದ
ಬಲೆಯ ಬೀಸಿದನಲ್ಲಿ ರಕುತದ
ಹೊಳೆಯ ಹರಿಸಿದನಲ್ಲಿ ಗಂಗಾಸೂನು ಖಾತಿಯಲಿ (ಭೀಷ್ಮ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲ್ಲಿ ಒತ್ತು ಕಟ್ಟಾಗಿ ಸೈನ್ಯ ನಿಂತಿತ್ತೋ, ಸೈನ್ಯ ಸಮುದ್ರದ ಸುಳಿವು ಎಲ್ಲಿ ಕಾಣಿಸಿತೋ, ಎಲ್ಲಿ ಅವರ ಸದ್ದು ಕೇಳಿತೋ, ಎಲ್ಲಿ ನಿಷ್ಠುರ ಸತ್ವ ಸಾಹಸದ ರಥಿಕರಿದ್ದರೋ ಅಲ್ಲಿಗೆ ಗರ್ಜಿಸುತ್ತಾ ಹೋಗಿ, ಬಾಣಗಳ ಬಲೆಯನ್ನು ಹರಡಿ ಭೀಷ್ಮನು ರಕ್ತದ ಹೊಳೆಯನ್ನು ಹರಿಸಿದನು.

ಅರ್ಥ:
ಬಲ: ಶಕ್ತಿ, ಸೈನ್ಯ; ವನ: ಕಾಡು; ಹೊದರು: ಗುಂಪು, ಸಮೂಹ; ಜಲನಿಧಿ: ಸಾಗರ; ಸುಳಿವು: ಗುರುತು; ಸುಭಟ: ಸೈನಿಕ, ಪರಾಕ್ರಮಿ; ಕಳಕಳ: ಗೊಂದಲ; ಕಡುಹು: ಸಾಹಸ, ಹುರುಪು, ಉತ್ಸಾಹ; ಖರೆ: ನಿಜ, ಸತ್ಯ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಹೊಳೆ: ಪ್ರಕಾಶ; ಮೊಳಗು: ಧ್ವನಿಮಾಡು; ಬಾಣ: ಅಂಬು; ಬಲೆ: ಜಾಲ, ಬಂಧನ; ಬೀಸು: ಸಂಚಾರ, ತೂಗು; ರಕುತ: ನೆತ್ತರು; ಹರಿಸು: ಹರಡು, ವಿಸ್ತಾರ; ಸೂನು: ಮಗ; ಖಾತಿ: ಕೋಪ, ಕ್ರೋಧ;

ಪದವಿಂಗಡಣೆ:
ಬಲ+ವನದ +ಹೊದರೆಲ್ಲಿ +ಸೇನಾ
ಜಲನಿಧಿಯ+ ಸುಳಿವೆಲ್ಲಿ+ ಸುಭಟರ
ಕಳಕಳದ +ಕಡುಹೆಲ್ಲಿ+ ಖರೆಯದ+ ರಥಿಕರ್+ಅವರೆಲ್ಲಿ
ಹೊಳೆದು+ ಮೊಳಗಿದನಲ್ಲಿ+ ಬಾಣದ
ಬಲೆಯ+ ಬೀಸಿದನಲ್ಲಿ +ರಕುತದ
ಹೊಳೆಯ +ಹರಿಸಿದನಲ್ಲಿ+ ಗಂಗಾಸೂನು +ಖಾತಿಯಲಿ

ಅಚ್ಚರಿ:
(೧) ಎಲ್ಲಿ ಅಲ್ಲಿ ಪದಗಳ ಬಳಕೆ
(೨) ಭೀಷ್ಮನ ಪರಾಕ್ರಮ – ಬಾಣದ ಬಲೆಯ ಬೀಸಿದನಲ್ಲಿ ರಕುತದ ಹೊಳೆಯ ಹರಿಸಿದನಲ್ಲಿ ಗಂಗಾಸೂನು ಖಾತಿಯಲಿ