ನವವರೂಥ ತುರಂಗ ಸಾರಥಿ
ಸವಗ ಮೊಚ್ಚೆಯದಲ್ಲಿ ಬಹಳಾ
ಹವದೊಳಗೆ ಮುಂಕೊಂಡು ಭೀಮನ ಹಳಚಿದನು ಕರ್ಣ
ತವಕ ಮಿಗಲೆಚ್ಚಾಡಿ ಪುನರಪಿ
ಪವನಜನ ಘಾಯದಲಿ ಸೋಲಿದು
ಬವರಮುಖದಲಿ ಹಿಂಗಿದನು ಹದಿನೆಂಟು ಸೂಳಿನಲಿ (ದ್ರೋಣ ಪರ್ವ, ೧೩ ಸಂಧಿ, ೫೦ ಪದ್ಯ)
ತಾತ್ಪರ್ಯ:
ಹೊಸ ರಥ, ಕುದುರೆಗಳು, ಸಾರಥಿ, ಕವಚ, ಜೋಡುಗಳನ್ನು ಅಳವಡಿಸಿಕೊಂಡು, ಮೇಲೆಬಿದ್ದು ಭೀಮನೊಡನೆ ಕರ್ಣನು ಯುದ್ಧಮಾಡಿದನು. ಮಹಾ ತವಕದಿಂದ ಹೋರಾಡಿ ಭೀಮನಿಂದ ಗಾಯವಡೆದು ಹದಿನೆಂಟು ಬಾರಿ ಸೋತು ಹಿಮ್ಮೆಟ್ಟಿದನು.
ಅರ್ಥ:
ನವ: ಹೊಸ; ವರೂಥ: ತೇರು, ರಥ; ತುರಂಗ: ಕುದುರೆ; ಸಾರಥಿ: ಸೂತ; ಸವಗ: ಕವಚ; ಮೊಚ್ಚೆ: ಪಾದರಕ್ಷೆ; ಆಹವ: ಯುದ್ಧ; ಮುಂಕೊಂಡು: ಮೇಲೆಬಿದ್ದು, ಎದುರು ನೋಡು; ಹಳಚು: ತಾಗು, ಬಡಿ; ತವಕ: ಬಯಕೆ, ಆತುರ; ಮಿಗಲು: ಹೆಚ್ಚು; ಎಚ್ಚು: ಬಾಣ ಪ್ರಯೋಗ ಮಾಡು; ಪುನರಪಿ: ಮತ್ತೆ; ಪವನಜ: ಭೀಮ; ಘಾಯ: ಪೆಟ್ಟು; ಸೋಲು: ಪರಾಭವ; ಬವರ: ಕಾಳಗ, ಯುದ್ಧ; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ; ಸೂಳು: ಆವೃತ್ತಿ, ಬಾರಿ;
ಪದವಿಂಗಡಣೆ:
ನವ+ವರೂಥ +ತುರಂಗ +ಸಾರಥಿ
ಸವಗ +ಮೊಚ್ಚೆಯದಲ್ಲಿ +ಬಹಳ
ಆಹವದೊಳಗೆ +ಮುಂಕೊಂಡು +ಭೀಮನ +ಹಳಚಿದನು +ಕರ್ಣ
ತವಕ +ಮಿಗಲ್+ಎಚ್ಚಾಡಿ +ಪುನರಪಿ
ಪವನಜನ +ಘಾಯದಲಿ +ಸೋಲಿದು
ಬವರ+ಮುಖದಲಿ +ಹಿಂಗಿದನು +ಹದಿನೆಂಟು +ಸೂಳಿನಲಿ
ಅಚ್ಚರಿ:
(೧) ಕರ್ಣನು ಸಿದ್ಧಪಡಿಸಿದುದು – ವರೂಥ, ತುರಂಗ, ಸಾರಥಿ, ಸವಗ, ಮೊಚ್ಚೆ