ತಾರಕನ ಕೈಟಭನ ಮಹಿಷನ
ವೀರ ಜಂಭನ ಕಾಲನೇಮಿಯ
ತಾರಕಾಕ್ಷನ ಕುಂಭಕರ್ಣನ ಮುರ ಗುಹಾಸುರನ
ಆರುಭಟೆ ರಣದುಬ್ಬಟೆಯ ಜ
ಜ್ಝಾರತನವಿವನೊಬ್ಬನಲಿ ಕೈ
ವಾರವೇ ನೆರೆ ಕಾಣಲಾಯ್ತೆಂದುದು ಸುರಸ್ತೋಮ (ದ್ರೋಣ ಪರ್ವ, ೧೬ ಸಂಧಿ, ೩೭ ಪದ್ಯ)
ತಾತ್ಪರ್ಯ:
ತಾರಕ, ಕೈಟಭ, ಮಹಿಷ, ಜಂಭ, ಕಾಲನೇಮಿ, ತಾರಕಾಕ್ಷ, ಕುಂಭಕರ್ಣ, ಮುರ, ಗುಹಾಸುರರ ಆರ್ಭಟವು ಇವನೊಬ್ಬನಲ್ಲೀ ಸೇರಿಕೊಂಡಿವೆ. ಇಲ್ಲಿಯೇ ಕಾಣುವಂತಾಯಿತು ಎಂದು ದೇವತೆಗಳು ಹೊಗಳಿದರು.
ಅರ್ಥ:
ವೀರ: ಪರಾಕ್ರಮಿ; ಆರುಭಟೆ: ಗರ್ಜನೆ; ರಣ: ಯುದ್ಧ; ಉಬ್ಬಟೆ: ಅಧಿಕ; ಜಜ್ಝಾರ: ಪರಾಕ್ರಮಿ, ಶೂರ; ಕೈವಾರ: ಕೊಂಡಾಟ; ನೆರೆ: ಗುಂಪು; ಕಾಣು: ತೋರು; ಸುರ: ದೇವತೆ; ಸ್ತೋಮ: ಗುಂಪು;
ಪದವಿಂಗಡಣೆ:
ತಾರಕನ +ಕೈಟಭನ +ಮಹಿಷನ
ವೀರ +ಜಂಭನ +ಕಾಲನೇಮಿಯ
ತಾರಕಾಕ್ಷನ+ ಕುಂಭಕರ್ಣನ +ಮುರ +ಗುಹಾಸುರನ
ಆರುಭಟೆ +ರಣದುಬ್ಬಟೆಯ+ ಜ
ಜ್ಝಾರತನವ್+ಇವನೊಬ್ಬನಲಿ +ಕೈ
ವಾರವೇ +ನೆರೆ +ಕಾಣಲಾಯ್ತೆಂದುದು +ಸುರಸ್ತೋಮ
ಅಚ್ಚರಿ:
(೧) ರಾಕ್ಷಸರ ಹೆಸರು – ತಾರಕ, ಕೈಟಭ, ಮಹಿಷ, ಜಂಭ, ಕಾಲನೇಮಿ, ತಾರಕಾಕ್ಷ, ಕುಂಭಕರ್ಣ, ಮುರ, ಗುಹಾಸುರ