ಪದ್ಯ ೫೫: ರಾಕ್ಷಸಗಣವು ಯಾರನ್ನು ಹೊಗಳಿತು?

ತಾರಕನ ಜಂಭನ ನಿಕುಂಭನ
ತಾರಕಾಕ್ಷನ ಕಾಲನೇಮಿಯ
ವೀರ ಮಹಿಷಾಸುರನ ಬಾಣಾಸುರನ ರಾವಣನ
ತೋರಹತ್ತರ ಬಾಹುಬಲವನು
ಸಾರಿಯಾ ಕರ್ಣಂಗೆ ಮಿಕ್ಕಿನ
ಸಾರಹೃದಯರು ನಿನಗೆ ಸರಿಯಿಲ್ಲೆಂದುದಸುರಗಣ (ಕರ್ಣ ಪರ್ವ, ೨೪ ಸಂಧಿ, ೫೫ ಪದ್ಯ)

ತಾತ್ಪರ್ಯ:
ತಾರಕ, ಜಂಭ, ನಿಕುಂಭ, ತಾರಕಾಕ್ಷ, ಕಾಲನೇಮಿ, ಮಹಿಷಾಸುರ, ಬಾಣಾಸುರ, ರಾವಣ ಮೊದಲಾದ ವೀರರ ಬಾಹುಬಲವು ಕರ್ಣನ ಬಾಹುಬಲಕ್ಕೆ ಅನುಸಾರಿ. ಉಳಿದವರಾರೂ ನಿನಗೆ ಸರಿಯಿಲ್ಲ ಎಂದು ರಾಕ್ಷಸಗಣವು ಕರ್ಣನನ್ನು ಹೊಗಳಿತು.

ಅರ್ಥ:
ವೀರ: ಶೂರ; ಅಸುರ: ರಾಕ್ಷಸ; ತೋರು: ಕಾಣಿಸು, ಪ್ರದರ್ಶಿಸು; ಬಾಹುಬಲ: ಪರಾಕ್ರಮಿ; ಸಾರಿ: ಸರಿಸಮಾನ; ಮಿಕ್ಕ: ಉಳಿದ; ಸಾರ: ಶೌರ್ಯ, ಪರಾಕ್ರಮ, ಶ್ರೇಷ್ಠ; ಹೃದಯ: ಎದೆ; ಗಣ: ಗುಂಪು;

ಪದವಿಂಗಡಣೆ:
ತಾರಕನ +ಜಂಭನ +ನಿಕುಂಭನ
ತಾರಕಾಕ್ಷನ+ ಕಾಲನೇಮಿಯ
ವೀರ +ಮಹಿಷಾಸುರನ +ಬಾಣಾಸುರನ +ರಾವಣನ
ತೋರಹತ್ತರ +ಬಾಹುಬಲವನು
ಸಾರಿ+ಆ+ ಕರ್ಣಂಗೆ +ಮಿಕ್ಕಿನ
ಸಾರ+ಹೃದಯರು +ನಿನಗೆ+ ಸರಿಯಿಲ್ಲೆಂದುದ್+ಅಸುರಗಣ

ಅಚ್ಚರಿ:
(೧) ಅಸುರರ ಹೋಲಿಕೆ – ತಾರಕ, ಜಂಭ, ನಿಕುಂಭ,,ತಾರಕಾಕ್ಷ, ಕಾಲನೇಮಿಯ, ಮಹಿಷಾಸುರ, ಬಾಣಾಸುರ, ರಾವಣ

ಪದ್ಯ ೧೩೫ : ಪಾಂಡವರ ಜೊತೆ ಯುದ್ಧವೇಕೆ ಒಳಿತಲ್ಲ?

ಹರಿಹಯನು ಗುಹ ರಾಮ ಬಾಣಾ
ಸುರನು ದಶಶಿರ ಭೀಮಸೇನಾ
ದ್ಯರು ಕಣಾ ಗಿರಿಜಾಧಿನಾಥನ ಡಿಂಗರಿಗರಿವರು
ಸರಸವೇ ಮೃತ್ಯುಂಜಯನ ಕೂ
ಡರಸ ನಿನ್ನಳವರಿಯದೇ ಹರಿ
ಸುರರೊಡನೆ ಹಗೆಗೊಂಬನೇ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೩೫ ಪದ್ಯ)

ತಾತ್ಪರ್ಯ:
ಇಂದ್ರ, ಷಣ್ಮುಖ, ರಾಮ, ಬಾಣಾಸುರ, ರಾವಣ, ಭೀಮ ಮುಂತಾದವರು ಶಿವನ ಪರಮ ಭಕ್ತರು. ಇಂತಹವರೊಡನೆ ಯುದ್ಧಮಾಡುವುದು ಒಳಿತೆ? ಶಿವನ ಎದುರು ಯುದ್ಧಮಾಡುವುದು ವಿನೋದವೇ? ವಿಷ್ಣುವು ದೇವತೆಗಳ ಶತ್ರುತ್ವವನ್ನು ಕೈಗೊಳ್ಳುವನೇ ಎಂದು ವಿದುರ ಕೇಳಿದ. ದೈವೀ ಪ್ರವೃತ್ತಿಯುಳ್ಳ ಪಾಂಡವರೊಡನೆ ಅಸುರೀ ಪ್ರವೃತ್ತಿಯುಳ್ಳ ಕೌರವರು ಯುದ್ಧಮಾಡುವುದು ಸಮಂಜಸವಲ್ಲ. ಭಗವಂತ ದೇವತೆಗಳ ರಕ್ಷಣೆ ಮಾಡುತ್ತಾನೆ ಎಂದು ತಿಳಿಸುವ ಪದ್ಯ.

ಅರ್ಥ:
ಹರಿಹಯ: ಇಂದ್ರ; ಗುಹ: ಷಣ್ಮುಖ; ರಾಮ: ದಶರತಾತ್ಮಜ; ದಶಶಿರ: ರಾವಣ; ಕಣಾ: ನೋಡಾ; ಗಿರಿಜಾಧಿನಾಥ: ಈಶ್ವರ; ಡಿಂಗರಿಗ:ಭಕ್ತ; ಸರಸ:ಚೆಲ್ಲಾಟ, ವಿನೋದ; ಮೃತ್ಯುಂಜಯ: ಶಿವ, ಶಂಕರ; ಕೂಡು: ಜೊತೆ; ಅಳವು:ಶಕ್ತಿ; ಅರಿ: ತಿಳಿ; ಹರಿ: ವಿಷ್ಣು; ಸುರ: ದೇವತೆ; ಹಗೆ: ದ್ವೇಷ;

ಪದವಿಂಗಡಣೆ:
ಹರಿಹಯನು+ ಗುಹ +ರಾಮ +ಬಾಣಾ
ಸುರನು +ದಶಶಿರ+ ಭೀಮಸೇನಾ
ದ್ಯರು +ಕಣಾ +ಗಿರಿಜಾಧಿನಾಥನ+ ಡಿಂಗರಿಗರ್+ಇವರು
ಸರಸವೇ +ಮೃತ್ಯುಂಜಯನ +ಕೂಡ್
ಅರಸ +ನಿನ್ನ್+ಅಳವ್+ಅರಿಯದೇ +ಹರಿ
ಸುರರೊಡನೆ +ಹಗೆಗೊಂಬನೇ+ ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಶಿವನ ಭಕ್ತರ ಹೆಸರುಗಳು: ಹರಿಹಯ, ಗುಹ, ರಾಮ, ಬಾಣಾಸುರ, ರಾವಣ, ಭೀಮ
(೨) ಗಿರಿಜಾಧಿನಾಥ, ಮೃತ್ಯುಂಜಯ – ಶಿವನ ಸಮನಾರ್ಥಕ ಪದ
(೩) ಸುರ – ೨, ೬ ಸಾಲಿನ ಮೊದಲ ಪದವಾಗಿರುವುದು