ಪದ್ಯ ೫೫: ರಾಕ್ಷಸಗಣವು ಯಾರನ್ನು ಹೊಗಳಿತು?

ತಾರಕನ ಜಂಭನ ನಿಕುಂಭನ
ತಾರಕಾಕ್ಷನ ಕಾಲನೇಮಿಯ
ವೀರ ಮಹಿಷಾಸುರನ ಬಾಣಾಸುರನ ರಾವಣನ
ತೋರಹತ್ತರ ಬಾಹುಬಲವನು
ಸಾರಿಯಾ ಕರ್ಣಂಗೆ ಮಿಕ್ಕಿನ
ಸಾರಹೃದಯರು ನಿನಗೆ ಸರಿಯಿಲ್ಲೆಂದುದಸುರಗಣ (ಕರ್ಣ ಪರ್ವ, ೨೪ ಸಂಧಿ, ೫೫ ಪದ್ಯ)

ತಾತ್ಪರ್ಯ:
ತಾರಕ, ಜಂಭ, ನಿಕುಂಭ, ತಾರಕಾಕ್ಷ, ಕಾಲನೇಮಿ, ಮಹಿಷಾಸುರ, ಬಾಣಾಸುರ, ರಾವಣ ಮೊದಲಾದ ವೀರರ ಬಾಹುಬಲವು ಕರ್ಣನ ಬಾಹುಬಲಕ್ಕೆ ಅನುಸಾರಿ. ಉಳಿದವರಾರೂ ನಿನಗೆ ಸರಿಯಿಲ್ಲ ಎಂದು ರಾಕ್ಷಸಗಣವು ಕರ್ಣನನ್ನು ಹೊಗಳಿತು.

ಅರ್ಥ:
ವೀರ: ಶೂರ; ಅಸುರ: ರಾಕ್ಷಸ; ತೋರು: ಕಾಣಿಸು, ಪ್ರದರ್ಶಿಸು; ಬಾಹುಬಲ: ಪರಾಕ್ರಮಿ; ಸಾರಿ: ಸರಿಸಮಾನ; ಮಿಕ್ಕ: ಉಳಿದ; ಸಾರ: ಶೌರ್ಯ, ಪರಾಕ್ರಮ, ಶ್ರೇಷ್ಠ; ಹೃದಯ: ಎದೆ; ಗಣ: ಗುಂಪು;

ಪದವಿಂಗಡಣೆ:
ತಾರಕನ +ಜಂಭನ +ನಿಕುಂಭನ
ತಾರಕಾಕ್ಷನ+ ಕಾಲನೇಮಿಯ
ವೀರ +ಮಹಿಷಾಸುರನ +ಬಾಣಾಸುರನ +ರಾವಣನ
ತೋರಹತ್ತರ +ಬಾಹುಬಲವನು
ಸಾರಿ+ಆ+ ಕರ್ಣಂಗೆ +ಮಿಕ್ಕಿನ
ಸಾರ+ಹೃದಯರು +ನಿನಗೆ+ ಸರಿಯಿಲ್ಲೆಂದುದ್+ಅಸುರಗಣ

ಅಚ್ಚರಿ:
(೧) ಅಸುರರ ಹೋಲಿಕೆ – ತಾರಕ, ಜಂಭ, ನಿಕುಂಭ,,ತಾರಕಾಕ್ಷ, ಕಾಲನೇಮಿಯ, ಮಹಿಷಾಸುರ, ಬಾಣಾಸುರ, ರಾವಣ