ಅಳುಕಿ ಮುತ್ತಿಗೆದೆಗೆದು ಸಾಲ್ವನ
ದಳ ಮುರಿದು ನಿಜಪುರಕೆ ಹಾಯ್ದುದು
ಗೆಲುವು ಸಾತ್ಯಕಿ ರಾಮಕಾಮಾದಿಗಳ ವಶವಾಯ್ತು
ಬಳಿಕ ನಿಮ್ಮಯ ರಾಜಸೂಯಕೆ
ಕಳಶವಿಟ್ಟು ಮದೀಯ ನಗರಿಯ
ಕಳವಳವ ಸಂತೈಸಿ ನಡೆದೆವು ಸಾಲ್ವ ಪಟ್ಟಣಕೆ (ಅರಣ್ಯ ಪರ್ವ, ೨ ಸಂಧಿ, ೨೫ ಪದ್ಯ)
ತಾತ್ಪರ್ಯ:
ಸಾಲ್ವನು ಬಲರಾಮಾದಿಗಳ ಯುದ್ಧಕ್ಕೆ ಹೆದರಿದನು, ಅವನ ಸೈನ್ಯವು ಭಂಗಗೊಂಡಿತು, ಅವನು ಮತ್ತೆ ತನ್ನ ಊರಿಗೆ ಹಿಂದಿರುಗಿದನು. ಇತ್ತ ನಾನು ರಾಜಸೂಯ ಯಾಗವನ್ನು ಸಮಾಪ್ತಿಗೊಂಡ ಮೇಲೆ ದ್ವಾರಕೆಗೆ ಹಿಂದಿರುಗಿ ಸಾಲ್ವನ ಮುತ್ತಿಗೆಯ ವಿಷಯವನ್ನು ತಿಳಿದು, ಇದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕೆಂದು ನಿಶ್ಚಯಿಸಿ ಸಾಲ್ವನಗರವನ್ನು ಮುತ್ತಿದೆನು ಎಂದು ಶ್ರೀಕೃಷ್ಣನು ಹೇಳಿದನು.
ಅರ್ಥ:
ಅಳುಕು: ಹೆದರು; ಮುತ್ತಿಗೆ: ಆವರಿಸುವಿಕೆ; ದಳ: ಸೈನ್ಯ; ಮುರಿ: ಸೀಳು; ನಿಜಪುರ: ತನ್ನಯ ಊರು; ಹಾಯ್ದು: ಹೊರಡು; ಗೆಲುವು: ಜಯ; ವಶ: ಅಧೀನ; ಬಳಿಕ: ನಂತರ; ಕಳಶ: ಶ್ರೇಷ್ಠ; ಮದೀಯ: ನಮ್ಮ; ನಗರ: ಊರು; ಕಳವಳ: ಗೊಂದಲ; ಸಂತೈಸು: ಸಮಾಧಾನ ಪಡಿಸು; ಪಟ್ಟಣ: ನಗರ;
ಪದವಿಂಗಡಣೆ:
ಅಳುಕಿ +ಮುತ್ತಿಗೆದ್+ಎಗೆದು +ಸಾಲ್ವನ
ದಳ +ಮುರಿದು +ನಿಜಪುರಕೆ+ ಹಾಯ್ದುದು
ಗೆಲುವು +ಸಾತ್ಯಕಿ +ರಾಮಕಾಮಾದಿಗಳ+ ವಶವಾಯ್ತು
ಬಳಿಕ+ ನಿಮ್ಮಯ +ರಾಜಸೂಯಕೆ
ಕಳಶವಿಟ್ಟು +ಮದೀಯ +ನಗರಿಯ
ಕಳವಳವ +ಸಂತೈಸಿ +ನಡೆದೆವು +ಸಾಲ್ವ +ಪಟ್ಟಣಕೆ
ಅಚ್ಚರಿ:
(೧) ಕಳಶವಿಟ್ಟು, ಕಳವಳ – ಕಳ ಪದದ ಬಳಕೆ