ತಾಯೆ ಬಲ್ಲಂದದಲಿ ಕಂದನ
ಕಾಯಿ ಮೇಣ್ ಕೊಲ್ಲೆನುತ ಕಮಲದ
ಳಾಯತಾಕ್ಷಿ ಕುಮಾರಕನ ಹಾಯ್ಕಿದಳು ಮಡುವಿನಲಿ
ರಾಯಕೇಳೈ ಸಕಲಲೋಕದ
ತಾಯಲಾ ಜಾಹ್ನವಿ ತರಂಗದಿ
ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ (ಆದಿ ಪರ್ವ, ೩ ಸಂಧಿ, ೨೨ ಪದ್ಯ)
ತಾತ್ಪರ್ಯ:
ಕುಂತಿಯು ಗಂಗಾದೇವಿಗೆ ಅಮ್ಮಾ, ನೀನಗೆ ತಿಳಿದ ಹಾಗೆ ಮಾಡು, ಈ ಮಗುವನ್ನು ಕಾಪಾಡು ಇಲ್ಲವೆ ಕೊಲ್ಲು ಎಂದು ಹೇಳಿ, ಗಂಗಾನದಿಯ ಮಡುವಿನಲ್ಲಿ ಆ ಮಗುವನ್ನು ಹಾಕಿದಳು. ರಾಜ ಜನಮೇಜಯ ಕೇಳು, ಸಕಲಲೋಕಕ್ಕೂ ತಾಯಿಯಾದ ಗಂಗೆಯು ಆ ಮಗುವು ಮುಳುಗದಂತೆ, ನೋಯದಂತೆ ನದಿಯ ತೀರಕ್ಕೆ ಕರೆತಂದು ಬಿಟ್ಟಳು.
ಅರ್ಥ:
ತಾಯಿ: ಮಾತೆ; ಬಲ್ಲೆ: ತಿಳಿ; ಕಂದ: ಮಗು; ಕಾಯಿ: ರಕ್ಷಿಸು; ಮೇಣ್; ಅಥವ; ಕೊಲ್ಲು: ಸಾಯಿಸು; ಕಮಲದಳಾಯತಾಕ್ಷಿ: ಕಮಲದಂತಹ ಕಣ್ಣುಳ್ಳ; ಕುಮಾರ: ಮಗ; ಹಾಯ್ಕು: ಇಡು, ಇರಿಸು; ಮಡು: ಕೊಳ, ಸರೋವರ ; ರಾಯ: ರಾಜ; ಕೇಳು: ಆಲಿಸು; ಸಕಲ: ಎಲ್ಲಾ; ಲೋಕ: ಜಗತ್ತು; ಜಾಹ್ನವಿ: ಗಂಗೆ; ತರಂಗ: ಅಲೆ; ನೋವು: ಪೆಟ್ಟು; ಮುಳುಗು: ತೋಯು, ನೀರಿನಲ್ಲಿ ಮೀಯು; ಚಾಚು: ಹರಡು; ತಡಿ: ದಡ;
ಪದವಿಂಗಡಣೆ:
ತಾಯೆ +ಬಲ್ಲಂದದಲಿ +ಕಂದನ
ಕಾಯಿ +ಮೇಣ್ +ಕೊಲ್ಲೆನುತ +ಕಮಲದ
ಳಾಯತಾಕ್ಷಿ+ ಕುಮಾರಕನ +ಹಾಯ್ಕಿದಳು +ಮಡುವಿನಲಿ
ರಾಯ+ಕೇಳೈ +ಸಕಲ+ಲೋಕದ
ತಾಯಲಾ +ಜಾಹ್ನವಿ+ ತರಂಗದಿ
ನೋಯಲೀಯದೆ +ಮುಳುಗಲೀಯದೆ +ಚಾಚಿದಳು +ತಡಿಗೆ
ಅಚ್ಚರಿ:
(೧) ಜಾಹ್ನವಿಯ ಕಾಳಜಿ – ಸಕಲಲೋಕದ ತಾಯಲಾ ಜಾಹ್ನವಿ ತರಂಗದಿ ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ