ಆವ ಶರವಿದ್ದೇಗುವುದು ಮೈ
ಗಾವನಸುರಾಂತಕನಲೈ ತಾ
ನಾವ ವಹಿಲದೊಳುರಿಯೊಳೆಡೆಹಾಯ್ದನಿಲಜನ ತೆಗೆದ
ನಾವರಿಯೆವಾ ಪವನಜನ ಶ
ಸ್ತ್ರಾವಳಿಯನಾ ಫಲುಗುಣನ ಗಾಂ
ಡೀವವನು ಹರಿ ಸೆಳೆದುಕೊಂಡನು ಬಿಸುಟನವನಿಯಲಿ (ದ್ರೋಣ ಪರ್ವ, ೧೯ ಸಂಧಿ, ೪೯ ಪದ್ಯ)
ತಾತ್ಪರ್ಯ:
ಕಾಪಾಡುವ ಶ್ರೀಕೃಷ್ಣನಿರುವಾಗ ಯಾವ ಅಸ್ತ್ರವಿದ್ದು ಏನು ಮಾಡೀತು? ಕೃಷ್ಣನು ಯಾವ ವೇಗದಿಂದ ಆ ಉರಿಯೊಳಗೆ ನುಗ್ಗಿ ಭೀಮನಿಗೆ ಬಂದ ಅಪಾಯವನ್ನು ನಿವಾರಿಸಿದನೋ ಅರಿಯೆ. ಭೀಮನ ಶಸ್ತ್ರಗಳನ್ನೂ ಅರ್ಜುನನು ಹಿಡಿದ ಗಾಂಡೀವವನ್ನು ಕಸಿದುಕೊಂಡು ಭೂಮಿಯ ಮೇಲೆ ಹಾಕಿದನು.
ಅರ್ಥ:
ಶರ: ಬಾಣ; ಏಗು: ಸಾಗಿಸು, ನಿಭಾಯಿಸು; ಕಾವು: ಬಿಸಿ, ಉಷ್ಣತೆ; ಅಸುರಾಂತಕ: ಕೃಷ್ಣ; ವಹಿಲ: ಬೇಗ, ತ್ವರೆ; ಉರಿ: ಬೆಂಕಿ; ಎಡೆಹಾಯ್ದು: ಅಡ್ಡ ಹೋಗಿ; ಅನಿಲಜ: ಭೀಮ; ತೆಗೆ: ಹೊರತರು; ಅರಿ: ತಿಳಿ; ಪವನಜ: ಭೀಮ; ಶಸ್ತ್ರ: ಆಯುಧ; ಆವಳಿ: ಗುಂಪು; ಸೆಳೆ: ಎಳೆದು; ಬಿಸುಟು: ಬಿಸಾಡು; ಅವನಿ: ಭೂಮಿ;
ಪದವಿಂಗಡಣೆ:
ಆವ+ ಶರವಿದ್+ಏಗುವುದು +ಮೈ+
ಕಾವನ್+ಅಸುರಾಂತಕನ್+ಅಲೈ +ತಾನ್
ಆವ +ವಹಿಲದೊಳ್+ಉರಿಯೊಳ್+ಎಡೆಹಾಯ್ದನ್+ಅನಿಲಜನ +ತೆಗೆದ
ನಾವರಿಯೆವ್+ಆ +ಪವನಜನ +ಶ
ಸ್ತ್ರಾವಳಿಯನ್+ಆ+ ಫಲುಗುಣನ +ಗಾಂ
ಡೀವವನು +ಹರಿ +ಸೆಳೆದುಕೊಂಡನು +ಬಿಸುಟನ್+ಅವನಿಯಲಿ
ಅಚ್ಚರಿ:
(೧) ಅನಿಲಜ, ಪವನಜ – ಭೀಮನನ್ನು ಕರೆದ ಪರಿ
(೨) ಹರಿ, ಅಸುರಾಂತಕ – ಕೃಷ್ಣನನ್ನು ಕರೆದ ಪರಿ