ಒಗ್ಗೊಡೆಯದೌಕಿದ ಮಹೀಶರು
ಮುಗ್ಗಿದರು ಮುನ್ನಾಳ ಮೇಳದ
ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರೊಡಲುಗಳ
ನುಗ್ಗುನುಸಿಯಾಯ್ತತಿರಥರು ಗಜ
ಮೊಗ್ಗರದ ಮೊನೆ ಮುರಿದು ಕಾಲನ
ಸಗ್ಗಳೆಯ ಸೆಳೆದಂತೆ ಸುರಿದವು ರಕ್ತಧಾರೆಗಳು (ವಿರಾಟ ಪರ್ವ, ೮ ಸಂಧಿ, ೪೨ ಪದ್ಯ)
ತಾತ್ಪರ್ಯ:
ಒಟ್ಟಾಗಿ ಬಂದ ರಾಜರು ಮುರಿದು ಬಿದ್ದರು. ಯೋಧರ ಗುಂಪಿನಲ್ಲಿ ಬಂದ ಹೆಸರಾಂತ ವೀರರು ದೇಹವನ್ನು ಬಿಟ್ಟು ಹೋದರು. ಅತಿರಥರು ಚೂರು ಚೂರಾದರು, ಆನೆಯ ಹಿಂಡುಗಳು ಪೆಟ್ಟು ತಿಂದು ಯಮನ ಪಾತ್ರೆಯನ್ನು ತುಂಬಿಸುವಂತೆ ರಕ್ತಧಾರೆಯನ್ನು ಸುರಿಸಿದವು.
ಅರ್ಥ:
ಒಗ್ಗೊಡೆ: ಜೊತೆ, ಒಗ್ಗಟ್ಟು; ಔಕು: ಅದುಮು, ಒತ್ತು; ಮಹೀಶ: ರಾಜ; ಮುಗ್ಗು: ಬಾಗು, ಮಣಿ; ಮುನ್ನಾಳು: ಹೆಸರಾಂತ ಪರಾಕ್ರಮಿ; ಮೇಳ: ಗುಂಪು; ಮುಂಕೊಂಡು: ಮುಂದೆ ಬಂದ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಬಿರಿ: ಸೀಳು; ಬಿಸುಟು: ಹೊರಹಾಕು; ಒಡಲು: ದೇಹ; ನುಗ್ಗು: ತಳ್ಳು; ನುಗ್ಗುನುಸಿ: ನುಚ್ಚುನೂರು; ಅತಿರಥ: ಮಹಾ ಪರಾಕ್ರಮಿ; ಗಜ: ಆನೆ; ಮೊಗ್ಗರ: ಗುಂಪು, ಸಮೂಹ, ಸೈನ್ಯ; ಮೊನೆ: ಯುದ್ಧ, ಮುಂಭಾಗ; ಮುರಿ: ಸೀಳು; ಕಾಲ: ಯಮನ; ಸಗ್ಗಳೆ: ಚೊಂಬು; ಸೆಳೆ: ಆಕರ್ಷಿಸು,ಎಳೆತ, ಸೆಳೆತ; ಸುರಿ: ಹರಿ; ರಕ್ತ: ನೆತ್ತರು; ಧಾರೆ: ವರ್ಷ, ಪ್ರವಾಹ;
ಪದವಿಂಗಡಣೆ:
ಒಗ್ಗೊಡೆಯದ್+ಔಕಿದ+ ಮಹೀಶರು
ಮುಗ್ಗಿದರು+ ಮುನ್ನಾಳ +ಮೇಳದವ್
ಒಗ್ಗಿನಲಿ +ಮುಂಕೊಂಡು +ಬಿರುದರು+ ಬಿಸುಟರ್+ಒಡಲುಗಳ
ನುಗ್ಗುನುಸಿಯಾಯ್ತ್+ಅತಿರಥರು +ಗಜ
ಮೊಗ್ಗರದ +ಮೊನೆ +ಮುರಿದು +ಕಾಲನ
ಸಗ್ಗಳೆಯ+ ಸೆಳೆದಂತೆ+ ಸುರಿದವು+ ರಕ್ತಧಾರೆಗಳು
ಅಚ್ಚರಿ:
(೧) ಮ ಕಾರದ ಸಾಲು ಪದ – ಮಹೀಶರು ಮುಗ್ಗಿದರು ಮುನ್ನಾಳ ಮೇಳದವೊಗ್ಗಿನಲಿ ಮುಂಕೊಂಡು
(೨) ಸ ಕಾರದ ತ್ರಿವಳಿ ಪದ – ಸಗ್ಗಳೆಯ ಸೆಳೆದಂತೆ ಸುರಿದವು