ಪದ್ಯ ೩೯: ಸತ್ತ ಸೈನಿಕರ ಸ್ಥಿತಿ ಹೇಗಿತ್ತು?

ಹರಿಗೆ ಖಂಡಿಸಿ ಜೋಡು ಸೀಸಕ
ಜರಿದು ಬಲುದೋಳುಡಿದು ಗೋಣರೆ
ಹರಿದು ನಿಟ್ಟಿಲು ಮುರಿದು ತೊಡೆಯರೆಗಡಿದು ತಲೆಯೊಡೆದು
ನರ ಹರಿದು ಕರುಳೊಕ್ಕು ನೆಣನು
ಬ್ಬರಿಸಿ ಕಾಳಿಜ ಕಾಯ್ದು ನೆತ್ತರು
ಸುರಿದು ಹರಿದೊಗಲಿನಲಿ ಹೊರಳಿತು ವೈರಿ ಪಾಯದಳ (ವಿರಾಟ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಗುರಾಣಿ ಕತ್ತರಿಸಿ ಬಿದ್ದು, ಕವಚ ಶಿರಸ್ತ್ರಾಣಗಳು ಕಡಿದು, ತೋಳು ಕತ್ತರಿಸಿ, ಕತ್ತು ಅರ್ಧ ಕತ್ತರಿಸಿ, ಎಲುಬುಗಳು ಮುರಿದು, ತೊಡೆಗಳು ಅರೆಕತ್ತರಿಸಿ, ನರಗಳು ಹರಿದು, ಕರುಳು ಪಿತ್ತಕೋಶ ಗುಲ್ಮಗಳು ಹೊರ ಬಂದು, ಚರ್ಮಹರಿದು, ರಕ್ತಸುರಿದು ಕಾಲಾಳುಗಳು ಬಿದ್ದರು.

ಅರ್ಥ:
ಹರಿ: ಕಡಿ, ಕತ್ತರಿಸು; ಖಂಡಿಸು: ಕಡಿ, ಕತ್ತರಿಸು; ಜೋಡು: ಜೊತೆ, ಜೋಡಿ; ಸೀಸಕ: ಶಿರಸ್ತ್ರಾಣ; ಜರಿ: ಬೀಳು; ತೋಳು: ಭುಜ; ಗೋಣು: ಕುತ್ತಿಗೆ, ಗಳ; ನಿಟಿಲ: ಭಾಳ, ಹಣೆ; ಮುರಿ: ಸೀಳು; ತೊಡೆ: ಊರು; ಕಡಿ: ಕತ್ತರಿಸು; ತಲೆ: ಶಿರ; ಒಡೆ: ಸೀಳು; ನರ: ಅವಯವಗಳಿಂದ ಸಂವೇದನೆಗಳನ್ನೂ, ಮೆದುಳಿನಿಂದ ಅವಯವಗಳಿಗೆ ಸೂಚನೆಗಳನ್ನು ಒಯ್ಯುವ – ತಂತು, ಶಕ್ತಿ; ಕರುಳು: ಪಚನಾಂಗ; ನೆಣ: ಕೊಬ್ಬು, ಮೇದಸ್ಸು; ಉಬ್ಬರ: ಅತಿಶಯ; ಕಾಳಿಜ: ಪಿತ್ತಾಶಯ; ಕಾಯ್ದು:ಬಿಸಿಯಾದ; ನೆತ್ತರು: ರಕ್ತ; ಸುರಿ: ಹೊರಹೊಮ್ಮು; ಹರಿ: ಪ್ರವಹಿಸು; ತೊಗಲು: ಚರ್ಮ, ತ್ವಕ್ಕು; ಹೊರಳು: ಜಾರು; ಪಾಯದಳ: ಸೈನಿಕ; ಉಡಿ: ಸೊಂಟ;

ಪದವಿಂಗಡಣೆ:
ಹರಿಗೆ +ಖಂಡಿಸಿ +ಜೋಡು +ಸೀಸಕ
ಜರಿದು +ಬಲು+ತೋಳ್+ಉಡಿದು+ ಗೋಣರೆ
ಹರಿದು +ನಿಟ್ಟಿಲು +ಮುರಿದು +ತೊಡೆ+ಅರೆಕಡಿದು+ ತಲೆ+ಒಡೆದು
ನರ +ಹರಿದು +ಕರುಳೊಕ್ಕು +ನೆಣನ್
ಉಬ್ಬರಿಸಿ +ಕಾಳಿಜ +ಕಾಯ್ದು +ನೆತ್ತರು
ಸುರಿದು+ ಹರಿ+ತೊಗಲಿನಲಿ+ ಹೊರಳಿತು +ವೈರಿ +ಪಾಯದಳ

ಅಚ್ಚರಿ:
(೧) ಹರಿ, ಜರಿ, ಸುರಿ, ಮುರಿ – ಪ್ರಾಸ ಪದಗಳು