ಅಹುದು ನಿಮ್ಮ ಯುಧಿಷ್ಠಿರನು ಗುಣಿ
ಯಹನು ಭೀಮಾರ್ಜುನರು ಬಲ್ಲಿದ
ರಹರು ಕೃಷ್ಣನ ಕೂರ್ಮೆಯಲ್ಲಿ ಕಪರ್ದಿಯೊಲವಿನಲಿ
ಕುಹಕಿಯೆನ್ನವನ್ನವನೊಳಗೆ ನಿ
ಸ್ಪೃಹರು ವಿದುರಪ್ರಮುಖ ಸುಜನರು
ವಿಹಿತವೆನಗಿನ್ನಾವುದದ ನೀವ್ ಬೆಸಸಿ ಸಾಕೆಂದ (ಗದಾ ಪರ್ವ, ೧೧ ಸಂಧಿ, ೬ ಪದ್ಯ)
ತಾತ್ಪರ್ಯ:
ಆಗ ಧೃತರಾಷ್ಟ್ರ, ಹೌದು ನಿಮ್ಮ ಯುಧಿಷ್ಠಿರನು ಗುಣಶಾಲಿ, ಭೀಮಾರ್ಜುನರು ಮಹಾ ಪರಾಕ್ರಮಿಗಳು. ಕೃಷ್ಣನ ಸ್ನೇಹ, ಶಿವನ ಪ್ರೀತಿ ಅವರ ಕಡೆಗೇ ಇದೆ. ನನ್ನ ಮಗನು ಕುಹಕಿ, ದುಷ್ಟ; ಅವನ ವಿಷಯದಲ್ಲಿ ವಿದುರನೇ ಮೊದಲಾದ ಸಜ್ಜನರು ನಿಸ್ಫೃಹರು. ಇದು ನಿಜ. ನಾನೀಗ ಮಾಡಬೇಕಾದುದೇನು? ನೀವು ಅಪ್ಪಣೆ ನೀಡಿ ಸಾಕು ಎಂದು ಹೇಳಿದನು.
ಅರ್ಥ:
ಗುಣಿ: ಗುಣಉಳ್ಳವ; ಬಲ್ಲಿದ: ಬಲಿಷ್ಠ; ಒಲವು: ಪ್ರೀತಿ; ಕುಹಕಿ: ದುಷ್ಟ; ನಿಸ್ಪೃಹ: ಆಸೆ ಇಲ್ಲದವ; ಪ್ರಮುಖ: ಮುಖ್ಯರಾದವರು; ಸುಜನ: ಒಳ್ಳೆಯವ; ವಿಹಿತ: ಯೋಗ್ಯ; ಬೆಸಸು: ಹೇಳು, ಆಜ್ಞಾಪಿಸು; ಸಾಕು: ನಿಲ್ಲು; ಕಪರ್ದಿ: ಶಿವ;
ಪದವಿಂಗಡಣೆ:
ಅಹುದು +ನಿಮ್ಮ +ಯುಧಿಷ್ಠಿರನು +ಗುಣಿ
ಯಹನು +ಭೀಮಾರ್ಜುನರು +ಬಲ್ಲಿದ
ರಹರು +ಕೃಷ್ಣನ+ ಕೂರ್ಮೆಯಲ್ಲಿ+ ಕಪರ್ದಿ+ಒಲವಿನಲಿ
ಕುಹಕಿ+ಎನ್ನವನ್ನ್+ಅವನೊಳಗೆ +ನಿ
ಸ್ಪೃಹರು +ವಿದುರ+ಪ್ರಮುಖ +ಸುಜನರು
ವಿಹಿತವೆನಗ್+ಇನ್ನಾವುದ್+ಅದ +ನೀವ್ +ಬೆಸಸಿ+ ಸಾಕೆಂದ
ಅಚ್ಚರಿ:
(೧) ದುರ್ಯೋಧನ ಬಗ್ಗೆ ಹೇಳಿದುದು – ಕುಹಕಿ
(೨) ಪಾಂಡವರ ಬಗ್ಗೆ ತಿಳಿಸಿದ ಪರಿ – ಯುಧಿಷ್ಠಿರನು ಗುಣಿಯಹನು, ಭೀಮಾರ್ಜುನರು ಬಲ್ಲಿದರಹರು