ಪದ್ಯ ೯: ದ್ರೋಣರಿಗೆ ಭೀಮನು ಹೇಗೆ ಉತ್ತರಿಸಿದನು?

ಗುರುವೆಮಗೆ ನೀವ್ ನಿಮಗೆ ನಾವ್ ಡಿಂ
ಗರಿಗರೆಮ್ಮಿತ್ತಂಡವಿದರಲಿ
ವರ ವಿನೀತರು ಕೆಲರು ಕೆಲಬರು ಧೂರ್ತರಾಗಿಹರು
ನರ ಯುಧಿಷ್ಠಿರ ನಕುಳ ಸಹದೇ
ವರವೊಲೆನಗಿಲ್ಲತಿ ಭಕುತಿ ಸಂ
ಗರದೊಳೆನ್ನಯ ದಂಡಿ ಹೊಸಪರಿ ಬೇಡ ಮರಳೆಂದ (ದ್ರೋಣ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಭೀಮನು ಉತ್ತರಿಸುತ್ತಾ, ನೀವು ನಮ್ಮ ಗುರುಗಳು, ನಾವು ನಿಮ್ಮ ಸೇವಕರು, ನಮ್ಮಲ್ಲಿ ಎರಡು ಪಂಗಡಗಳಿವೆ. ಕೆಲವರು ವಿನಯಪರರು, ಕೆಲವರು ಧೂರ್ತರು. ಧರ್ಮಜ, ಅರ್ಜುನ, ನಕುಲ ಸಹದೇವರಂತೆ ನನಗೆ ನಿಮ್ಮಲ್ಲಿ ಬಹಳ ಭಕ್ತಿಯಿಲ್ಲ. ಯುದ್ಧದಲ್ಲಿ ನನ್ನ ವರಸೆಯು ಹೊಸ ರೀತಿಯದ್ದು, ನೀವು ಹಿಂದಿರುಗಿ ಎಂದು ಹೇಳಿದನು.

ಅರ್ಥ:
ಗುರು: ಆಚಾರ್ಯ; ಡಿಂಗರಿಗ: ಭಕ್ತ; ತಂಡ: ಗುಂಪು; ವರ: ಶ್ರೇಷ್ಠ; ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ಧೂರ್ತ: ದುಷ್ಟ; ನರ: ಅರ್ಜುನ; ಭಕುತಿ: ಹಿರಿಯರಲ್ಲಿ ತೋರುವ ಆದರ; ಸಂಗರ: ಯುದ್ಧ; ದಂಡಿ: ಘನತೆ, ಹಿರಿಮೆ; ಹೊಸ: ನವೀನ; ಪರಿ: ರೀತಿ; ಬೇಡ: ತ್ಯಜಿಸು; ಮರಳು: ಹಿಂದಿರುಗು;

ಪದವಿಂಗಡಣೆ:
ಗುರುವೆಮಗೆ +ನೀವ್ +ನಿಮಗೆ+ ನಾವ್+ ಡಿಂ
ಗರಿಗರ್+ಎಮ್ಮಿತ್ತಂಡವ್+ಇದರಲಿ
ವರ+ ವಿನೀತರು +ಕೆಲರು +ಕೆಲಬರು +ಧೂರ್ತರಾಗಿಹರು
ನರ +ಯುಧಿಷ್ಠಿರ +ನಕುಳ +ಸಹದೇ
ವರವೊಲ್+ಎನಗಿಲ್ಲ್+ಅತಿ +ಭಕುತಿ +ಸಂ
ಗರದೊಳ್+ಎನ್ನಯ +ದಂಡಿ +ಹೊಸಪರಿ +ಬೇಡ +ಮರಳೆಂದ

ಅಚ್ಚರಿ:
(೧) ವಿನೀತ, ಧೂರ್ತ – ವಿರುದ್ಧಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ