ಸೋತ ಬಲ ಸಂವರಿಸಿಕೊಂಡುದು
ಪೂತುರೇ ರಣವೆಂಬುದೆಮ್ಮಯ
ಧಾತು ಕಲಿ ಮೂದಲಿಸಿ ಕರೆದರೆ ರಾಜ್ಯಸಿರಿಯೇಕೆ
ಭೀತಿ ಮನದಲಿ ಪೌರುಷಾಂಗದ
ಮಾತು ಮುಖದಲಿ ಮುರಿವು ಕಾಲಲಿ
ಬೂತುಗಳು ಕುರುವೀರರೆನುತಿದಿರಾದುದರಿಸೇನೆ (ದ್ರೋಣ ಪರ್ವ, ೧೫ ಸಂಧಿ, ೨೫ ಪದ್ಯ)
ತಾತ್ಪರ್ಯ:
ಪಾಂಡವ ಸೈನ್ಯದವರು ಅಬ್ಭಾ ಸೋತು ಹೋಗಿದ್ದ ಸೈನ್ಯ ಸುಧಾರಿಸಿಕೊಂಡು ಯುದ್ಧಕ್ಕೆ ಬಂದಿದೆ. ಯುದ್ಧವು ನಮ್ಮ ಸಹಜ ಶಕ್ತಿ. ಶತ್ರುವೀರರು ಮೂದಲಿಸಿದ ಮಾತ್ರಕ್ಕೆ ರಾಜ್ಯಶ್ರೀಯನ್ನು ಹೇಗೆ ಪಡೆಯಲು ಸಾಧ್ಯ? ಶತ್ರುಗಳ ಮನಸ್ಸಿನಲ್ಲಿ ಭಯ ತುಂಬಿದೆ. ಪೌರುಷ ಮಾತಿನಲ್ಲಿ ಉಕ್ಕುತ್ತಿದೆ. ಕಾಲುಗಳು ತಿರುಗಿ ಓಡುತ್ತಿವೆ. ಕೌರವ ವೀರರು ನಾಚಿಕೆಯಿಲ್ಲದ ಹೇಡಿಗಳು ಎಂದು ಧೃಷ್ಟದ್ಯುಮ್ನನು ಮೂದಲಿಸಿದನು.
ಅರ್ಥ:
ಸೋತು: ಪರಾಭವ; ಸಂವರಿಸು: ಸಮಾಧಾನಗೊಳಿಸು; ಪೂತು: ಭಲೇ; ರಣ: ಯುದ್ಧ; ಧಾತು: ತೇಜಸ್ಸು, ಮೂಲವಸ್ತು; ಕಲಿ: ಶೂರ; ಮೂದಲಿಸು: ಹಂಗಿಸು; ಕರೆ: ಬರೆಮಾಡು; ರಾಜ್ಯ: ರಾಷ್ಟ್ರ; ಸಿರಿ: ಸಂಪತ್ತು; ಭೀತಿ: ಭಯ; ಮನ: ಮನಸ್ಸು; ಪೌರುಷ: ಪರಾಕ್ರಮ; ಮಾತು: ನುಡಿ; ಮುಖ: ಆನನ; ಮುರಿ: ಸೀಳು; ಕಾಲು: ಪಾದ; ಬೂತು: ಕುಚೋದ್ಯ, ಕುಚೇಷ್ಟೆ; ಇದಿರು: ಎದುರು; ಅರಿ: ವೈರಿ; ಸೇನೆ: ಸೈನ್ಯ;
ಪದವಿಂಗಡಣೆ:
ಸೋತ +ಬಲ +ಸಂವರಿಸಿಕೊಂಡುದು
ಪೂತುರೇ +ರಣವೆಂಬುದ್+ಎಮ್ಮಯ
ಧಾತು +ಕಲಿ+ ಮೂದಲಿಸಿ +ಕರೆದರೆ+ ರಾಜ್ಯಸಿರಿಯೇಕೆ
ಭೀತಿ+ ಮನದಲಿ +ಪೌರುಷಾಂಗದ
ಮಾತು +ಮುಖದಲಿ+ ಮುರಿವು +ಕಾಲಲಿ
ಬೂತುಗಳು+ ಕುರುವೀರರೆನುತ್+ ಇದಿರಾದುದ್+ಅರಿಸೇನೆ
ಅಚ್ಚರಿ:
(೧) ಸೈನಿಕರನ್ನು ಹುರಿದುಂಬಿಸುವ ಪರಿ – ರಣವೆಂಬುದೆಮ್ಮಯ ಧಾತು ಕಲಿ ಮೂದಲಿಸಿ ಕರೆದರೆ ರಾಜ್ಯಸಿರಿಯೇಕೆ