ತುಡುಕಲಮ್ಮುವರಿಲ್ಲ ಬಲದಲಿ
ಮಿಡುಕಲಮ್ಮುವರಿಲ್ಲ ರಕುತದ
ಕಡಲೊಳಗೆ ಬೆಂಡೆದ್ದು ನೆಗೆದುದು ಕೋಟಿ ಪಾಯದಳ
ಸಿಡಿಲು ಜಂಗಮವಾಯ್ತೊ ಪ್ರಳಯದ
ಮೃಡನು ಬಾಲಕನಾದನೋ ಕೊಲೆ
ಗಡಿಕನಹುದೋ ಕಂದ ಎಂದನು ಕೌರವರ ರಾಯ (ದ್ರೋಣ ಪರ್ವ, ೬ ಸಂಧಿ, ೪೮ ಪದ್ಯ)
ತಾತ್ಪರ್ಯ:
ನಮ್ಮ ಸೈನ್ಯದಲ್ಲಿ ಇವನೆದುರು ನಿಂತು ಹೋರಾಡುವವರಿಲ್ಲ, ಇವನನ್ನು ಕಂಡು ಯಾರೂ ಅಲುಗಾಡುತ್ತಿಲ್ಲ. ರಕ್ತದ ಕಡಲಲ್ಲಿ ಅಸಂಖ್ಯಾತ ಕಾಲಾಳುಗಳು ಸೈನ್ಯವು ಬೆಂಡೆದ್ದು ನಗೆದುಹೋಯಿತು. ಸಿಡಿಲೇ ಇಲ್ಲಿ ಓಡಾಡುತ್ತಿದೆಯೋ, ಪ್ರಳಯ ರುದ್ರನೇನಾದರೂ ಬಾಲಕನಾದನೋ, ಮಗೂ ನೀನು ಕೊಲೆಗಡುಕನೇ ಹೌದು ಎಂದನು.
ಅರ್ಥ:
ತುಡುಕು: ಹೋರಾಡು; ಅಮ್ಮು: ಸಾಮರ್ಥ್ಯ; ಬಲ: ಶಕ್ತಿ; ಮಿಡುಕು: ಅಲುಗಾಟ, ಚಲನೆ; ರಕುತ: ನೆತ್ತರು; ಕಡಲು: ಸಾಗರ; ಬೆಂಡು: ತಿರುಳಿಲ್ಲದುದು; ನೆಗೆ: ಜಿಗಿ; ಕೋಟಿ: ಅಸಂಖ್ಯಾತ; ಪಾಯದಳ: ಸೈನಿಕ; ಸಿಡಿಲು: ಅಶನಿ; ಜಂಗಮ: ಚಲನೆಯುಳ್ಳದ್ದು; ಪ್ರಳಯ: ಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಮೃಡ: ಶಿವ; ಬಾಲಕ: ಹುಡುಗ; ಕೊಲೆ: ಸಾಯಿಸು; ಕೊಲೆಗಡಿಕ: ಸಾಯಿಸುವವ; ಕಂದ: ಮಗು; ರಾಯ: ರಾಜ;
ಪದವಿಂಗಡಣೆ:
ತುಡುಕಲ್+ಅಮ್ಮುವರಿಲ್ಲ +ಬಲದಲಿ
ಮಿಡುಕಲ್+ಅಮ್ಮುವರಿಲ್ಲ+ ರಕುತದ
ಕಡಲೊಳಗೆ+ ಬೆಂಡೆದ್ದು +ನೆಗೆದುದು +ಕೋಟಿ +ಪಾಯದಳ
ಸಿಡಿಲು +ಜಂಗಮವಾಯ್ತೊ +ಪ್ರಳಯದ
ಮೃಡನು +ಬಾಲಕನಾದನೋ +ಕೊಲೆ
ಗಡಿಕನಹುದೋ +ಕಂದ +ಎಂದನು+ ಕೌರವರ+ ರಾಯ
ಅಚ್ಚರಿ:
(೧) ತುಡುಕಲ್, ಮಿಡುಕಲ್ – ಪ್ರಾಸ ಪದ
(೨) ಉಪಮಾನದ ಪ್ರಯೋಗ – ರಕುತದ ಕಡಲೊಳಗೆ ಬೆಂಡೆದ್ದು ನೆಗೆದುದು ಕೋಟಿ ಪಾಯದಳ