ಪಾರಸಿಕ ನೇಪಾಳ ಸಿಂಹಳ
ವೀರ ಬಾಹ್ಲಿಕ ಯವನ ಕೌಸಲ
ಪಾರಿಯಾತ್ರರು ತುರುಕ ಬರ್ಬರ ವಂಗ ಮಾಗಧರು
ಕೌರವೇಂದ್ರನ ಮನ್ನಣೆಯ ಪರಿ
ವಾರವೀತನ ಕೆಣಕಿದರು ಸರ
ಳೋರಣವ ಸೈಗರೆದರದುಭುತವಾಯ್ತು ಸಂಗ್ರಾಮ (ದ್ರೋಣ ಪರ್ವ, ೧೧ ಸಂಧಿ, ೧೦ ಪದ್ಯ)
ತಾತ್ಪರ್ಯ:
ಪಾರಸಿಕರು, ನೇಪಾಳ, ಸಿಂಹಳ, ಬಾಹ್ಲಿಕ, ಯವನ, ಕೌಸಲ, ಪಾರಿಯಾತ್ರ, ತುರುಕ, ಬರ್ಬರ, ವಂಗ, ಮಗಧ ದೇಶದ ಕೌರವನ ಪರಿವಾರದವರು ಸಾತ್ಯಕಿಯ ಮೇಲೆ ಸರಳುಗಳ ಸುರಿಮಳೆಗರೆದರು. ಯುದ್ಧವು ಅದ್ಭುತವಾಯಿತು.
ಅರ್ಥ:
ಮನ್ನಣೆ: ಗೌರವ, ಮರ್ಯಾದೆ; ಪರಿವಾರ: ಪರಿಜನ; ಕೆಣಕು: ರೇಗಿಸು; ಸರಳು: ಬಾಣ; ಓರಣ: ಕ್ರಮ, ಸಾಲು; ಅದುಭುತ: ಆಶ್ಚರ್ಯ; ಸಂಗ್ರಾಮ: ಯುದ್ಧ;
ಪದವಿಂಗಡಣೆ:
ಪಾರಸಿಕ+ ನೇಪಾಳ +ಸಿಂಹಳ
ವೀರ+ ಬಾಹ್ಲಿಕ +ಯವನ +ಕೌಸಲ
ಪಾರಿಯಾತ್ರರು +ತುರುಕ +ಬರ್ಬರ +ವಂಗ +ಮಾಗಧರು
ಕೌರವೇಂದ್ರನ +ಮನ್ನಣೆಯ +ಪರಿ
ವಾರವ್+ಈತನ +ಕೆಣಕಿದರು +ಸರ
ಳೋರಣವ +ಸೈಗರೆದರ್+ಅದುಭುತವಾಯ್ತು +ಸಂಗ್ರಾಮ
ಅಚ್ಚರಿ:
(೧) ಬೇರೆ ದೇಶಗಳ ಹೆಸರು – ಪಾರಸಿಕ, ನೇಪಾಳ, ಸಿಂಹಳ, ಬಾಹ್ಲಿಕ, ಯವನ, ಕೌಸಲ, ಪಾರಿಯಾತ್ರ, ತುರುಕ, ಬರ್ಬರ, ವಂಗ, ಮಾಗಧ