ಪದ್ಯ ೧೪: ಕರ್ಣನು ಹೇಗೆ ಓಲಗಕ್ಕೆ ಆಗಮಿಸಿದನು?

ತೊಡರ ಝಣಝಣ ರವದ ಹೆಗಲಲಿ
ಜದಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮಿಗೆ ಹೊಳೆವ ಹೀರಾವಳಿಯ ಕೊರಳುಗಳ
ಕಡುಮನದ ಕಲಿ ರಾಜಪುತ್ರರ
ನಡುವೆ ಮೈಪರಿಮಳದಿ ದೆಸೆ ಕಂ
ಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ (ದ್ರೋಣ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕಾಲುಗಡಗಗಳು ಝಣ ಝಣ ಶಬ್ದಮಾಡುತ್ತಿರಲು, ಕೊಬ್ಬಿದ ಹೆಗಲ ಮೇಲೆ ಉಬ್ಬಣವನ್ನು ಹೊತ್ತು, ರತ್ನ ಹಾರಗಳು ಕೊರಳಲ್ಲಿರಲು, ವೀರರಾಜಪುತ್ರರನೇಕರ ಗುಂಪಿನ ನಡುವೆ ತನ್ನ ದೇಹಕ್ಕೆ ಹಚ್ಚಿದ ಸುಗಂಧವು ಎಲ್ಲೆಡೆ ಹರಡುತ್ತಿರಲು ಕರ್ಣನು ಓಲಗಕ್ಕೆ ಬಂದನು.

ಅರ್ಥ:
ತೊಡರು: ಆಭರಣ, ಬಿರುದಿನ ಸಂಕೇತವಾಗಿ ಧರಿಸುವ ಕಾಲ ಬಳೆ; ಝಣ: ಶಬ್ದವನ್ನು ಸೂಚಿಸುವ ಪದ; ರವ: ಶಬ್ದ; ಹೆಗಲು: ಭುಜ; ಜಡಿ: ಕೂಗು, ಧ್ವನಿಮಾಡು; ಹಿರಿ: ದೊಡ್ಡ; ಉಬ್ಬಣ: ಲಾಳವಿಂಡಿಗೆ, ಚೂಪಾದ ಆಯುಧ; ಹೆಚ್ಚು: ಅಧಿಕ; ಮುಡುಹು: ಹೆಗಲು, ಭುಜಾಗ್ರ; ಮಿಗೆ: ಅಧಿಕವಾಗಿ; ಹೊಳೆ: ಪ್ರಕಾಶ; ಹೀರಾವಳಿ: ವಜ್ರದ ಹಾರ; ಕೊರಳು: ಕಂಠ; ಮನ: ಮನಸ್ಸು; ಕಲಿ: ಶೂರ; ಪುತ್ರ: ಮಗ; ನದುವೆ: ಮಧ್ಯೆ; ಪರಿಮಳ: ಸುಗಂಧ; ದೆಸೆ: ದಿಕ್ಕು; ಕಂಪು: ಸುವಾಸನೆ; ಭಾರವಣೆ: ಗೌರವ; ಬಂದು: ಆಗಮಿಸು; ಓಲಗ: ದರ್ಬಾರು;

ಪದವಿಂಗಡಣೆ:
ತೊಡರ +ಝಣಝಣ +ರವದ +ಹೆಗಲಲಿ
ಜಡಿವ +ಹಿರಿ+ಉಬ್ಬಣದ +ಹೆಚ್ಚಿದ
ಮುಡುಹುಗಳ+ ಮಿಗೆ +ಹೊಳೆವ +ಹೀರಾವಳಿಯ +ಕೊರಳುಗಳ
ಕಡುಮನದ +ಕಲಿ +ರಾಜಪುತ್ರರ
ನಡುವೆ +ಮೈ+ಪರಿಮಳದಿ +ದೆಸೆ+ ಕಂ
ಪಿಡಲು +ಭಾರವಣೆಯಲಿ+ ಬಂದನು +ಕರ್ಣನ್+ಓಲಗಕೆ

ಅಚ್ಚರಿ:
(೧) ಕರ್ಣನು ಧರಿಸಿದ ಆಭರಣ – ತೊಡರು, ಹೀರಾವಳಿ;
(೨) ಕರ್ಣನು ಬಂದ ಪರಿ – ಕಡುಮನದ ಕಲಿ ರಾಜಪುತ್ರರ ನಡುವೆ ಮೈಪರಿಮಳದಿ ದೆಸೆ ಕಂಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ

ಪದ್ಯ ೧೩: ಓಲಗಕ್ಕೆ ಯಾವ ರಾಜರು ಬಂದರು?

ಗುರುತನುಜ ವೃಷಸೇನ ಮಾದ್ರೇ
ಶ್ವರ ಕಳಿಂಗ ವಿಕರ್ಣ ದುಸ್ಸಹ
ದುರುಳ ಶಕುನಿ ಸುಕೇತು ಭೂರಿಶ್ರವ ಜಯದ್ರಥರು
ವರ ಸುಲೋಚನ ವಿಂದ್ಯ ಯವನೇ
ಶ್ವರರು ಕೃಪ ಕೃತವರ್ಮ ಭಗದ
ತ್ತರು ಮಹಾಮಂತ್ರಿಗಳು ಬಂದರು ರಾಯನೋಲಗಕೆ (ದ್ರೋಣ ಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅಶ್ವತ್ಥಾಮ, ವೃಷಸೇನ, ಶಲ್ಯ, ಕಳಿಂಗರಾಜ, ವಿಕರ್ಣ, ದುಸ್ಸಹ, ಶಕುನಿ, ಸುಕೇತು, ಭೂರಿಶ್ರವ, ಜಯದ್ರಥ, ಸುಲೋಚನ, ಮಹಾಮಂತ್ರಿಗಳೂ ಓಲಗಕ್ಕೆ ಬಂದರು.

ಅರ್ಥ:
ಗುರು: ಆಚಾರ್ಯ; ತನುಜ: ಮಗ; ವರ: ಶ್ರೇಷ್ಠ; ಮಂತ್ರಿ: ಸಚಿವ; ಬಂದರು: ಆಗಮಿಸು; ರಾಯ: ರಾಜ; ಓಲಗ: ದರ್ಬಾರು; ದುರುಳ: ದುಷ್ಟ;

ಪದವಿಂಗಡಣೆ:
ಗುರು+ತನುಜ+ ವೃಷಸೇನ+ ಮಾದ್ರೇ
ಶ್ವರ +ಕಳಿಂಗ +ವಿಕರ್ಣ +ದುಸ್ಸಹ
ದುರುಳ +ಶಕುನಿ +ಸುಕೇತು +ಭೂರಿಶ್ರವ +ಜಯದ್ರಥರು
ವರ +ಸುಲೋಚನ +ವಿಂದ್ಯ +ಯವನೇ
ಶ್ವರರು +ಕೃಪ +ಕೃತವರ್ಮ +ಭಗದ
ತ್ತರು +ಮಹಾಮಂತ್ರಿಗಳು+ ಬಂದರು +ರಾಯನ್+ಓಲಗಕೆ

ಅಚ್ಚರಿ:
(೧) ಮಾದ್ರೇಶ್ವರ, ಯವನೇಶ್ವರ – ಪ್ರಾಸ ಪದಗಳು

ಪದ್ಯ ೧೨: ದುರ್ಯೋಧನನ ಸ್ಥಿತಿ ಹೇಗಿತ್ತು?

ಗಾಹು ಕೊಳ್ಳದ ಭೀಮ ಪಾರ್ಥರ
ಸಾಹಸವನೆಣಿಸುತ ಕಠಾರಿಯ
ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ
ಊಹೆದೆಗಹಿನ ಕಂಬನಿಯ ತನಿ
ಮೋಹರದ ಘನ ಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ (ದ್ರೋಣ ಪರ್ವ, ೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಶತ್ರುಗಳು ಎದುರಿಸಲಾಗದಂತಹ ಭೀಮಾರ್ಜುನರ ಪರಾಕ್ರಮವನ್ನು ನೆನೆಯುತ್ತಾ, ಕಠಾರಿಯ ಹಿಡಿಕೆಯ ಮೇಲೆ ಗಲ್ಲವನ್ನಿಟ್ಟು, ಕಿರೀಟವನ್ನು ತೂಗುತ್ತಾ, ಕಂಬನಿಗಲು ಅವಿರಳವಾಗಿ ದಲದಳನೆ ಸುರಿಯುತ್ತಿರಲು, ಶೋಕಾಗ್ನಿಯು ಸುಡುತ್ತಿರುವ ಮನಸ್ಸಿನಿಂದ ಕೌರವನು ಓಲಗನ್ನಿತ್ತನು.

ಅರ್ಥ:
ಗಾಹು: ಮೋಸ, ವಂಚನೆ; ಕೊಳ್ಳು: ತೆಗೆದುಕೋ; ಸಾಹಸ: ಪರಾಕ್ರಮ; ಎಣಿಸು: ಲೆಕ್ಕಮಾಡು; ಕಠಾರಿ: ಚೂರಿ, ಕತ್ತಿ; ಮೋಹ:ಭ್ರಾಂತಿ, ಭ್ರಮೆ; ಗಲ್ಲ: ಕೆನ್ನೆ; ಮಕುಟ: ಕಿರೀಟ; ಅಹುಗಳು: ಸರಿಯೆಂದು ತಲೆಯನ್ನು ತೂಗಾಡು; ಉಹೆ: ಎಣಿಕೆ, ಅಂದಾಜು; ತನಿ: ಹೆಚ್ಚಾಗು; ಮೋಹರ: ಯುದ್ಧ; ಘನ: ಶ್ರೇಷ್ಠ; ಶೋಕ: ದುಃಖ; ವಹ್ನಿ: ಬೆಂಕಿ; ಮೇಹುಗಾಡು: ಮೇಯುವ ಕಾಡು; ಮನ: ಮನಸ್ಸು; ಓಲಗ: ದರ್ಬಾರು;

ಪದವಿಂಗಡಣೆ:
ಗಾಹು +ಕೊಳ್ಳದ +ಭೀಮ +ಪಾರ್ಥರ
ಸಾಹಸವನ್+ಎಣಿಸುತ +ಕಠಾರಿಯ
ಮೋಹಳದ +ಮೇಲಿಟ್ಟ +ಗಲ್ಲದ +ಮಕುಟದ್+ಒಲಹುಗಳ
ಊಹೆದೆಗಹಿನ +ಕಂಬನಿಯ +ತನಿ
ಮೋಹರದ+ ಘನ +ಶೋಕ+ವಹ್ನಿಯ
ಮೇಹುಗಾಡಿನ+ ಮನದ+ ಕೌರವನಿತ್ತನ್+ಓಲಗವ

ಅಚ್ಚರಿ:
(೧) ದುರ್ಯೋಧನನ ಚಿತ್ರಣ – ಕಠಾರಿಯ ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ

ಪದ್ಯ ೧೧: ಕೌರವರು ಹೇಗೆ ತಮ್ಮ ಪಾಳೆಯವನ್ನು ಸೇರಿದರು?

ಚಿತ್ತವಿಸು ಧೃತರಾಷ್ಟ್ರ ಮಲಗಿದ
ಮುತ್ತಯನ ಬೀಳ್ಕೊಂಡು ಕೌರವ
ರಿತ್ತ ಸರಿದರು ಪಾಂಡುನಂದನರತ್ತ ತಿರುಗಿದರು
ಹೊತ್ತ ಮೋನದ ವಿವಿಧ ವಾದ್ಯದ
ಕೆತ್ತ ಬಾಯ್ಗಳ ಪಾಠಕರ ಕೈ
ಹತ್ತುಗೆಯ ಮೊರೆಯ ಮಹೀಪತಿ ಹೊಕ್ಕನರಮನೆಯ (ದ್ರೋಣ ಪರ್ವ, ೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಬಾಣದ ಪಲ್ಲಂಗದಲ್ಲಿ ಮಲಗಿದ ಭೀಷ್ಮನನ್ನು ಬೀಳ್ಕೊಂಡು ಪಾಂಡವರು ತಮ್ಮ ಪಾಳಯಕ್ಕೆ ಹೋದರು, ಇತ್ತ ಕೌರವರೂ ತಮ್ಮ ಪಾಳೆಯಕ್ಕೆ ಬಂದರು. ಅವರು ಬರುವಾಗ ಯಾವ ವಾದ್ಯಗಳೂ ಮೊಳಗಲಿಲ್ಲ. ಪಾಠಕರು ಬಿರುದುಗಳನ್ನು ಹೊಗಳಲಿಲ್ಲ.

ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ಮಲಗು: ಶಯನ; ಮುತ್ತಯ್ಯ: ತಾತ; ಬೀಳ್ಕೊಂಡು: ತೆರಳು; ಸರಿದರು: ಬಂದರು; ನಂದನ: ಮಕ್ಕಳು; ತಿರುಗು: ಸುತ್ತು; ಹೊತ್ತ: ಧರಿಸು; ಮೋನ: ಮಾತನಾಡದಿರುವಿಕೆ, ಮೌನ; ವಿವಿಧ: ಹಲವಾರು; ವಾದ್ಯ: ಸಂಗೀತದ ಸಾಧನ; ಕೆತ್ತು: ಅದಿರು, ನಡುಗು; ಪಾಠಕ: ಹೊಗಳುಭಟ್ಟ; ಹತ್ತುಗೆ: ಸೇರಿಕೊಂಡಿರುವಿಕೆ; ಮೋರೆ: ಮುಖ; ಮಹೀಪತಿ: ರಾಜ; ಹೊಕ್ಕು: ಸೇರು; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಚಿತ್ತವಿಸು +ಧೃತರಾಷ್ಟ್ರ +ಮಲಗಿದ
ಮುತ್ತಯನ +ಬೀಳ್ಕೊಂಡು +ಕೌರವರ್
ಇತ್ತ+ ಸರಿದರು+ ಪಾಂಡುನಂದನರ್+ಅತ್ತ +ತಿರುಗಿದರು
ಹೊತ್ತ +ಮೋನದ +ವಿವಿಧ +ವಾದ್ಯದ
ಕೆತ್ತ +ಬಾಯ್ಗಳ +ಪಾಠಕರ +ಕೈ
ಹತ್ತುಗೆಯ +ಮೊರೆಯ +ಮಹೀಪತಿ+ ಹೊಕ್ಕನ್+ಅರಮನೆಯ

ಅಚ್ಚರಿ:
(೧) ಇತ್ತ ಅತ್ತ – ಪ್ರಾಸ ಪದಗಳು
(೨) ನೀರವತೆಯನ್ನು ವಿವರಿಸುವ ಪರಿ – ಹೊತ್ತ ಮೋನದ ವಿವಿಧ ವಾದ್ಯದಕೆತ್ತ ಬಾಯ್ಗಳ ಪಾಠಕರ ಕೈ
ಹತ್ತುಗೆಯ ಮೊರೆಯ

ಪದ್ಯ ೧೦: ಧೃತರಾಷ್ಟ್ರನು ಸಂಜಯನಿಗೆ ಏನು ಹೇಳಿದ?

ಹೋಗಲಿನ್ನಾ ಮಾತು ಖೂಳರು
ತಾಗಿ ಬಾಗರು ಸುಕೃತ ದುಷ್ಕೃತ
ಭೋಗವದು ಮಾಡಿದರಿಗಪ್ಪುದು ಖೇದ ನಮಗೇಕೆ
ಈಗಲೀ ಕದನದಲಿ ವಜ್ರಕೆ
ಬೇಗಡೆಯ ಮಾಡಿದನದಾವನು
ತಾಗಿ ದ್ರೋಣನ ಮುರಿವ ಪರಿಯನು ರಚಿಸಿ ಹೇಳೆಂದ (ದ್ರೋಣ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಹೋಗಲಿ ದುಷ್ಟರಾದ ನನ್ನ ಮಕ್ಕಳು ಯುದ್ಧವನ್ನು ಆರಂಭಿಸಿದ್ದಾರೆ, ಅವರು ನಮ್ಮ ಮಾತನ್ನು ಒಪ್ಪುವುದಿಲ್ಲ. ಪುಣ್ಯಪಾಪಗಳನ್ನು ಮಾಡಿದವರಿಗೆ ಅದಕ್ಕನುಸಾರವಗಿ ಫಲವನ್ನುಣ್ಣುವುದು ತಪ್ಪುವುದಿಲ್ಲ. ಈ ಯುದ್ಧದಲ್ಲಿ ವಜ್ರದಲ್ಲಿ ರಂದ್ರವನ್ನು ಕೊರೆದು ದ್ರೋಣನನ್ನು ಹೇಗೆ ಸಂಹರಿಸಿದರು ಎನ್ನುವುದನ್ನು ಹೇಳು ಎಂದು ಧೃತರಾಷ್ಟ್ರನು ಸಂಜಯನಿಗೆ ಕೇಳಿದನು.

ಅರ್ಥ:
ಹೋಗಲಿ: ಬಿಡು; ಮಾತು: ನುಡಿ; ಖೂಳ: ದುಷ್ಟ; ತಾಗು: ಮುಟ್ಟು; ಬಾಗು: ಎರಗು; ಸುಕೃತ: ಒಳ್ಳೆಯ ಕೆಲಸ; ದುಷ್ಕೃತ: ಕೆಟ್ಟ ಕೆಲಸ; ಭೋಗ: ಸುಖವನ್ನು ಅನುಭವಿಸುವುದು, ಹೊಂದುವುದು; ಅಪ್ಪು: ಆಲಿಂಗಿಸು, ಸಂಭವಿಸು; ಖೇದ: ದುಃಖ; ಕದನ: ಯುದ್ಧ; ವಜ್ರ:ಗಟ್ಟಿಯಾದ; ಬೇಗಡೆ: ಕಾಗೆ ಬಂಗಾರ; ಮುರಿ: ಸೀಳು; ಪರಿ: ರೀತಿ; ರಚಿಸು: ನಿರ್ಮಿಸು; ಹೇಳು: ತಿಳಿಸು;

ಪದವಿಂಗಡಣೆ:
ಹೋಗಲಿನ್ನ್+ಆ+ ಮಾತು +ಖೂಳರು
ತಾಗಿ +ಬಾಗರು +ಸುಕೃತ +ದುಷ್ಕೃತ
ಭೋಗವದು +ಮಾಡಿದರಿಗ್+ಅಪ್ಪುದು +ಖೇದ +ನಮಗೇಕೆ
ಈಗಲೀ +ಕದನದಲಿ +ವಜ್ರಕೆ
ಬೇಗಡೆಯ +ಮಾಡಿದನ್+ಅದಾವನು
ತಾಗಿ +ದ್ರೋಣನ +ಮುರಿವ+ ಪರಿಯನು +ರಚಿಸಿ +ಹೇಳೆಂದ

ಅಚ್ಚರಿ:
(೧) ಸುಕೃತ, ದುಷ್ಕೃತ – ವಿರುದ್ಧ ಪದಗಳು;