ತೊಡರ ಝಣಝಣ ರವದ ಹೆಗಲಲಿ
ಜದಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮಿಗೆ ಹೊಳೆವ ಹೀರಾವಳಿಯ ಕೊರಳುಗಳ
ಕಡುಮನದ ಕಲಿ ರಾಜಪುತ್ರರ
ನಡುವೆ ಮೈಪರಿಮಳದಿ ದೆಸೆ ಕಂ
ಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ (ದ್ರೋಣ ಪರ್ವ, ೧ ಸಂಧಿ, ೧೪ ಪದ್ಯ)
ತಾತ್ಪರ್ಯ:
ಕಾಲುಗಡಗಗಳು ಝಣ ಝಣ ಶಬ್ದಮಾಡುತ್ತಿರಲು, ಕೊಬ್ಬಿದ ಹೆಗಲ ಮೇಲೆ ಉಬ್ಬಣವನ್ನು ಹೊತ್ತು, ರತ್ನ ಹಾರಗಳು ಕೊರಳಲ್ಲಿರಲು, ವೀರರಾಜಪುತ್ರರನೇಕರ ಗುಂಪಿನ ನಡುವೆ ತನ್ನ ದೇಹಕ್ಕೆ ಹಚ್ಚಿದ ಸುಗಂಧವು ಎಲ್ಲೆಡೆ ಹರಡುತ್ತಿರಲು ಕರ್ಣನು ಓಲಗಕ್ಕೆ ಬಂದನು.
ಅರ್ಥ:
ತೊಡರು: ಆಭರಣ, ಬಿರುದಿನ ಸಂಕೇತವಾಗಿ ಧರಿಸುವ ಕಾಲ ಬಳೆ; ಝಣ: ಶಬ್ದವನ್ನು ಸೂಚಿಸುವ ಪದ; ರವ: ಶಬ್ದ; ಹೆಗಲು: ಭುಜ; ಜಡಿ: ಕೂಗು, ಧ್ವನಿಮಾಡು; ಹಿರಿ: ದೊಡ್ಡ; ಉಬ್ಬಣ: ಲಾಳವಿಂಡಿಗೆ, ಚೂಪಾದ ಆಯುಧ; ಹೆಚ್ಚು: ಅಧಿಕ; ಮುಡುಹು: ಹೆಗಲು, ಭುಜಾಗ್ರ; ಮಿಗೆ: ಅಧಿಕವಾಗಿ; ಹೊಳೆ: ಪ್ರಕಾಶ; ಹೀರಾವಳಿ: ವಜ್ರದ ಹಾರ; ಕೊರಳು: ಕಂಠ; ಮನ: ಮನಸ್ಸು; ಕಲಿ: ಶೂರ; ಪುತ್ರ: ಮಗ; ನದುವೆ: ಮಧ್ಯೆ; ಪರಿಮಳ: ಸುಗಂಧ; ದೆಸೆ: ದಿಕ್ಕು; ಕಂಪು: ಸುವಾಸನೆ; ಭಾರವಣೆ: ಗೌರವ; ಬಂದು: ಆಗಮಿಸು; ಓಲಗ: ದರ್ಬಾರು;
ಪದವಿಂಗಡಣೆ:
ತೊಡರ +ಝಣಝಣ +ರವದ +ಹೆಗಲಲಿ
ಜಡಿವ +ಹಿರಿ+ಉಬ್ಬಣದ +ಹೆಚ್ಚಿದ
ಮುಡುಹುಗಳ+ ಮಿಗೆ +ಹೊಳೆವ +ಹೀರಾವಳಿಯ +ಕೊರಳುಗಳ
ಕಡುಮನದ +ಕಲಿ +ರಾಜಪುತ್ರರ
ನಡುವೆ +ಮೈ+ಪರಿಮಳದಿ +ದೆಸೆ+ ಕಂ
ಪಿಡಲು +ಭಾರವಣೆಯಲಿ+ ಬಂದನು +ಕರ್ಣನ್+ಓಲಗಕೆ
ಅಚ್ಚರಿ:
(೧) ಕರ್ಣನು ಧರಿಸಿದ ಆಭರಣ – ತೊಡರು, ಹೀರಾವಳಿ;
(೨) ಕರ್ಣನು ಬಂದ ಪರಿ – ಕಡುಮನದ ಕಲಿ ರಾಜಪುತ್ರರ ನಡುವೆ ಮೈಪರಿಮಳದಿ ದೆಸೆ ಕಂಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ