ಹದುಳಿಸಿನ್ನಂಜದಿರು ಬಾಣೌ
ಘದ ವಿದಾರಣವಿದು ವಿಚಾರಿಸ
ಲೆದೆ ಬಿರಿದು ತಾ ನೊಂದೆನಿದೆ ನೋಡೆನ್ನ ಗಾಯವನು
ಒದೆದುಕೊಳುತೈದಾನೆ ಸಿಂಧದ
ತುದಿಯ ಹನುಮನು ವಜ್ರಮಯ ದೇ
ಹದಲಿ ನಟ್ಟವು ಕೋಲು ಮುನಿದೊಡೆ ರುದ್ರನೀ ಭೀಷ್ಮ (ವಿರಾಟ ಪರ್ವ, ೯ ಸಂಧಿ, ೫೬ ಪದ್ಯ)
ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರೆಸುತ್ತಾ, ಉತ್ತರಕುಮಾರ, ಸಮಾಧಾನ ಮಾಡಿಕೋ, ನಿನಗೆ ಕೊಟ್ಟ ಕವಚವು ಬಾಣಗಳಿಂದ ನಿನ್ನನ್ನು ರಕ್ಷಿಸುತ್ತದೆ, ಹೆದರಬೇಡ, ಇದೋ ನನ್ನೆದೆಯ ಮೇಲಿರುವ ಈ ಗಾಯವನ್ನು ನೋಡು, ಧ್ವಜದ ಮುಂದಿರುವ ಹನುಮಂತನು ಕೈಕಾಲುಗಳನ್ನು ಕೊಡುವುತ್ತಿದ್ದಾನೆ, ಅವನು ವಜ್ರ ಶರೀರದಲ್ಲೂ ಭೀಷ್ಮನ ಬಾಣಗಳು ನಟ್ಟವು, ಕೋಪಗೊಂಡರೆ ಅವನು ಭೀಷ್ಮನಲ್ಲ, ರುದ್ರ ಎಂದು ಉತ್ತರನಿಗೆ ಹೇಳಿದನು.
ಅರ್ಥ:
ಹದುಳ: ಸೌಖ್ಯ, ಕ್ಷೇಮ; ಅಂಜು: ಹೆದರು; ಬಾಣ: ಸರಳ; ಔಘ: ಗುಂಪು, ಸಮೂಹ; ವಿದಾರಣ: ಸೀಳುವಿಕೆ, ಕೊಲ್ಲುವಿಕೆ; ವಿಚಾರಿಸು: ತಿಳಿಸು; ನೊಂದು: ನೋವು; ಗಾಯ: ಪೆಟ್ಟು; ಸಿಂಧ: ಬಾವುಟ; ತುದಿ: ಅಗ್ರಭಾಗ; ಹನುಮ: ಆಂಜನೇಯ; ವಜ್ರ: ಗಟ್ಟಿಯಾದ, ಬಲವಾದ; ದೇಹ: ತನು; ನಟ್ಟ: ನಡು; ಒಳಹೊಕು; ದೇಹ: ತನು; ಕೋಲು: ಬಾಣ; ಮುನಿ: ಕೋಪ; ರುದ್ರ: ಶಿವ;
ಪದವಿಂಗಡಣೆ:
ಹದುಳಿಸಿನ್+ಅಂಜದಿರು+ ಬಾಣೌ
ಘದ+ ವಿದಾರಣವಿದು +ವಿಚಾರಿಸಲ್
ಎದೆ+ ಬಿರಿದು+ ತಾ ನೊಂದೆನ್+ಇದೆ +ನೋಡೆನ್ನ +ಗಾಯವನು
ಒದೆದುಕೊಳುತ್+ಐದಾನೆ +ಸಿಂಧದ
ತುದಿಯ +ಹನುಮನು+ ವಜ್ರಮಯ +ದೇ
ಹದಲಿ +ನಟ್ಟವು +ಕೋಲು+ ಮುನಿದೊಡೆ +ರುದ್ರನೀ +ಭೀಷ್ಮ
ಅಚ್ಚರಿ:
(೧) ಭೀಷ್ಮನ ಪರಾಕ್ರಮವನ್ನು ಹೇಳುವ ಪರಿ – ಕೋಲು ಮುನಿದೊಡೆ ರುದ್ರನೀ ಭೀಷ್ಮ