ಏನು ನಿಮ್ಮಯ ಬರವು ನಗರದ
ಲೇನು ಕೆಲಸವು ನೃಪತಿ ದೇಶದ
ಜಾಣಿಕೆಯು ತಾನೇನು ದರ್ಪದ ಬರವೊ ಹೇಳೆನಲು
ಧ್ಯಾನಿಸಿಯೆ ನಾವ್ ಬಂದ ಕೆಲಸವ
ಕಾಣಿಸುವ ಭಾರವನೇ ನಿಮ್ಮದು
ಮಾನನಿಧಿ ಕೌರವನು ಕಳುಹಿದ ಮಲ್ಲಗಾಳಗಕೆ (ವಿರಾಟ ಪರ್ವ, ೪ ಸಂಧಿ, ೨೩ ಪದ್ಯ)
ತಾತ್ಪರ್ಯ:
ವಿರಾಟ ರಾಜನು ಮಲ್ಲರನ್ನು ಕಂಡು, ನಿಮ್ಮ ಆಗಮನದ ಕಾರಣವೇನು, ನಮ್ಮ ನಗರದಲ್ಲಿ ನಿಮಗೇನು ಕೆಲಸ, ನಿಮ್ಮ ದೇಶದಲ್ಲಿನ ವಿಶೇಷತೆಯೇನು, ನಿಮ್ಮ ದೇಹದ ದರ್ಪವನ್ನು ತೋರಲು ಸುಮ್ಮನೆ ಬಂದಿದ್ದೀರಾ ಎಂದು ಕೇಳಿದನು. ಆಗ ಮಲ್ಲರ ಗುಂಪಿನೊಡೆಯನಾದ ಜೀಮೂತನು ನಾವು ಯೋಚಿಸಿಯೇ ಇಲ್ಲಿಗೆ ಬಂದಿದ್ದೇವೆ, ನಾವು ಬಂದ ಕೆಲಸವನ್ನು ನಡೆಸಿಕೊಡುವುದು ನಿಮ್ಮ ಕೈಯಲ್ಲಿದೆ, ಕೌರವನು ಮಲ್ಲ ಕಾಳಗಕ್ಕೆ ನಮ್ಮನ್ನು ಇಲ್ಲಿಗೆ ಕಳಿಸಿದ್ದಾನೆ ಎಂದನು.
ಅರ್ಥ:
ಬರವು: ಆಗಮನ; ನಗರ: ಊರು; ಕೆಲಸ: ಕಾರ್ಯ; ನೃಪತಿ: ರಾಜ; ದೇಶ: ರಾಷ್ಟ್ರ; ಜಾಣ್: ಬುದ್ಧಿವಂತಿಕೆ; ದರ್ಪ: ಹೆಮ್ಮೆ, ಗರ್ವ; ಹೇಳು: ತಿಳಿಸು; ಧ್ಯಾನ: ಚಿಂತನೆ, ಮನನ; ಕೆಲಸ: ಕಾರ್ಯ; ಕಾನಿಸು: ತೋರು; ಭಾರವಣೆ: ಹೊರೆ; ಮಾನ: ಅಭಿಮಾನ, ಜಂಬ; ನಿಧಿ: ಐಶ್ವರ್ಯ; ಮಲ್ಲ: ಜಟ್ಟಿ; ಕಾಳಗ: ಯುದ್ಧ;
ಪದವಿಂಗಡಣೆ:
ಏನು+ ನಿಮ್ಮಯ +ಬರವು +ನಗರದಲ್
ಏನು +ಕೆಲಸವು+ ನೃಪತಿ +ದೇಶದ
ಜಾಣಿಕೆಯು +ತಾನೇನು +ದರ್ಪದ +ಬರವೊ +ಹೇಳೆನಲು
ಧ್ಯಾನಿಸಿಯೆ +ನಾವ್ +ಬಂದ +ಕೆಲಸವ
ಕಾಣಿಸುವ +ಭಾರವನೇ+ ನಿಮ್ಮದು
ಮಾನನಿಧಿ +ಕೌರವನು+ ಕಳುಹಿದ +ಮಲ್ಲ+ಕಾಳಗಕೆ
ಅಚ್ಚರಿ:
(೧) ಕೌರವನನ್ನು ಮಾನನಿಧಿ ಎಂದು ಕರೆದಿರುವುದು