ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವ ಭೂಮೀ
ಪಾಲರಿದ್ದರು ಗುಪಿತದಿಂದ ವಿರಾಟನಗರಿಯಲಿ
ಕಾಲಸ್ವಎದುದು ಹತ್ತುತಿಂಗಳ
ಮೇಲೆ ಮತ್ತೊಂದತಿಶಯೋಕ್ತಿಯ
ನಾಲಿಸೈ ವಿಸ್ತರದಲರಿಪುವೆನೆಂದನಾ ಮುನಿಪ (ವಿರಾಟ ಪರ್ವ, ೨ ಸಂಧಿ, ೧ ಪದ್ಯ)
ತಾತ್ಪರ್ಯ:
ರಾಜ ಜನಮೇಜಯ ಕೇಳು, ನಿನ್ನ ಪೂರ್ವಜರು ಗುಪ್ತವಾಗಿ ವಿರಾಟನಗರದಲ್ಲಿ ಹತ್ತು ತಿಂಗಳುಗಳನ್ನು ಕಳೆದರು. ನಂತರ ನಡೆದ ಒಂದು ಸಂಗತಿಯನ್ನು ವಿಸ್ತಾರವಾಗಿ ಹೇಳುತ್ತೇನೆ ಕೇಳು ಎಂದು ವೈಶಂಪಾಯನ ಮುನಿಗಳು ಹೇಳಿದರು.
ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಪಾಲ: ರಕ್ಷಿಸುವ; ಪೂರ್ವ: ಹಿಂದಿನ; ಭೂಮಿ: ಧರಿತ್ರಿ; ಭೂಮೀಪಾಲ: ರಾಜ; ಗುಪಿತ: ಗೌಪ್ಯ, ರಹಸ್ಯ; ನಗರ: ಊರು; ಕಾಲ: ಸಮಯ; ಸವೆದು: ಕಳೆದು; ತಿಂಗಳು: ಮಾಸ; ಅತಿಶಯ: ಹೆಚ್ಚು; ಉಕ್ತಿ: ಮಾತು; ಆಲಿಸು: ಕೇಳು; ವಿಸ್ತರ: ವಿವರ; ಅರಿಪು: ಮನಸ್ಸಿಗೆ ತಿಳಿಯುವಂತೆ ಹೇಳು; ಮುನಿಪ: ಋಷಿ;
ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ನಿಮ್ಮಯ +ಪೂರ್ವ +ಭೂಮೀ
ಪಾಲರಿದ್ದರು+ ಗುಪಿತದಿಂದ+ ವಿರಾಟ+ನಗರಿಯಲಿ
ಕಾಲ+ಸವೆದುದು +ಹತ್ತುತಿಂಗಳ
ಮೇಲೆ+ ಮತ್ತೊಂದ್+ಅತಿಶಯ+ಉಕ್ತಿಯನ್
ಆಲಿಸೈ +ವಿಸ್ತರದಲ್+ಅರಿಪುವೆನೆಂದನಾ +ಮುನಿಪ
ಅಚ್ಚರಿ:
(೧) ಧರಿತ್ರೀಪಾಲ, ಭೂಮೀಪಾಲ – ಸಮನಾರ್ಥಕ ಪದ