ಪದ್ಯ ೩೨: ದ್ರೌಪದಿಯು ಯಾರ ಸಖಿಯಾದಳು?

ಎನಲು ಮೆಚ್ಚಿದಳಾ ವಿರಾಟನ
ವನಿತೆ ವೀರರ ವಧುವನಾ ಸಖಿ
ಜನದೊಳಗೆ ನೇಮಿಸಿದಳನಿಬರಿಗಾಯ್ತು ನಿರ್ವಾಹ
ಮನದ ಢಗೆಯಡಗಿದವು ಮತ್ಸ್ಯೇ
ಶನ ಪುರಾಂತರದೊಳಗೆ ಮೈಮರೆ
ಸನುಪಮಿತ ಭುಜ ಸತ್ವರಿದ್ದರು ಭೂಪ ಕೇಳೆಂದ (ವಿರಾಟ ಪರ್ವ, ೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿಗೆ ವಿರಾಟನರಾಣಿಯು ಮೆಚ್ಚಿ ತನ್ನ ಸಖಿಯನ್ನಾಗಿ ನೇಮಿಸಿಕೊಂಡಳು. ಪಾಂಡವರಿಗೂ ದ್ರೌಪದಿಗೂ ಅಜ್ಞಾತವಾಸದ ಸಮಯದಲ್ಲಿ ತಲೆಮರೆಸಿಕೊಂಡಿರಲು ಒಂದು ದಾರಿ ಸಿಕ್ಕಿತು. ಅವರೆಲ್ಲರ ತಾಪಗಳೂ ಅಡಗಿದವು. ಮಹಾ ಪರಾಕ್ರಮಶಾಲಿಗಳಾದ ಅವರು ಮತ್ಸ್ಯನಗರದಲ್ಲಿ ಯಾರಿಗೂ ತಿಳಿಯದಂತೆ ಅಡಗಿಕೊಂಡಿದ್ದರು.

ಅರ್ಥ:
ಮೆಚ್ಚು: ಪ್ರೀತಿ, ಇಷ್ಟ; ವನಿತೆ: ಹೆಣ್ಣು, ಸ್ತ್ರೀ; ವೀರ: ಪರಾಕ್ರಮ; ವಧು: ಹೆಣ್ಣು; ಸಖಿ: ಗೆಳತಿ; ನೇಮಿಸು: ಅಪ್ಪಣೆ ಮಾಡು; ಅನಿಬರು: ಅಷ್ಟು ಜನ; ನಿರ್ವಾಹ: ವ್ಯವಸ್ಥೆ; ಮನ: ಮನಸ್ಸು; ಢಗೆ: ಕಾವು, ಕಳವಳ; ಅಡಗು: ಮರೆಯಾಗು; ಈಶ: ಒಡೆಯ; ಪುರ: ಊರು; ಅನುಪಮಿತ: ಉಪಮಾತೀತ; ಭುಜ: ಬಾಹು; ಸತ್ವ: ಸಾರ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಎನಲು +ಮೆಚ್ಚಿದಳ್+ಆ+ ವಿರಾಟನ
ವನಿತೆ+ ವೀರರ+ ವಧುವನ್+ಆ+ ಸಖಿ
ಜನದೊಳಗೆ +ನೇಮಿಸಿದಳ್+ಅನಿಬರಿಗಾಯ್ತು +ನಿರ್ವಾಹ
ಮನದ +ಢಗೆ+ಅಡಗಿದವು +ಮತ್ಸ್ಯೇ
ಶನ +ಪುರಾಂತರದೊಳಗೆ+ ಮೈಮರೆಸ್
ಅನುಪಮಿತ +ಭುಜ+ ಸತ್ವರಿದ್ದರು +ಭೂಪ +ಕೇಳೆಂದ

ಅಚ್ಚರಿ:
(೧) ವಿರಾಟನ ರಾಣಿ ಸುದೇಷ್ಣೆಯನ್ನು ವಿರಾಟನ ವನಿತೆ ಎಂದು ಕರೆದಿರುವುದು
(೨) ದ್ರೌಪದಿಯನ್ನು ವೀರರ ವಧು ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ